(www.vknews.in) ; ಆಪ್ತರ ಮರಣ ನಮಗೆ ವೇದನೆ ತರುತ್ತದೆ, ನಿಜ. ಆದರೆ ಬೆಂಗಳೂರಿನ ಎಲ್ಲರ ನೆಚ್ಚಿನ “ಬಾಬು” ವಿನ ಈ ಅಕಾಲಿಕ, ಆಕಸ್ಮಿಕ , ನಂಬಲಸಾಧ್ಯವಾದ ಮರಣವಿದೆಯಲ್ಲಾ! ಖಂಡಿತ ತಾಳಿಕೊಳ್ಳಲಾಗುವುದಿಲ್ಲ. ನಾನು ಮಾತ್ರವಲ್ಲ, ನನ್ನ ಮನೆಯವರು ಕೂಡಾ ನಿನ್ನೆ ಆ ಘನಘೋರ ಸುದ್ಧಿ ಮುಟ್ಟಿದ ನಂತರ ವಿಷಣ್ಣರಾಗಿದ್ದೇವೆ. ತಲ್ಲಣಗೊಂಡಿದ್ದೇವೆ. ಆ ಸುದ್ಧಿ ಸುಳ್ಳಾಗಲಿ ಎಂದು ಮನಸಾರೆ ಆಸೆ ಪಟ್ಟು ಹಲವರಿಗೆ ಕಾಲ್ ಮಾಡಿದೆವು. “ಅದು ಸುಳ್ಳು ಸುದ್ಧಿ, ಬಾಬು ಜೀವಂತ ಇದ್ದಾರೆ” ಎಂಬ ಮಾತು ಕೇಳಿಬರಲಿ ಎಂಬ ಮನದಾಳದ ಆಸೆ ಬರಿಯಾಸೆ ಆಗಿ ಹೋಯಿತು. ಎಲ್ಲ ಕಡೆಯಿಂದಲೂ ಮರಣ ಕನ್ಫರ್ಮ್ ! ಯಾ ಅಲ್ಲಾಹ್ ! ಆ ಕೇಳಬಾರದ ವಾರ್ತೆಯಿಂದ ಮನಸ್ಸಿಗಾದ ತಲ್ಲಣ ಇನ್ನೂ ಕೊನೆಯಾಗಿಲ್ಲ.
ಬೆಂಗಳೂರು ಹೆಬ್ಬಾಳದ ನಿವಾಸಿ ದಾದಾ ಪೀರ್ ಎಂಬ ಮಧ್ಯವಯಸ್ಕ. ಪ್ರಾಯದಲ್ಲಿ ಮಾತ್ರ ಮಧ್ಯವಯಸ್ಸು. ಕ್ರೀಯಾಶೀಲತೆಯಲ್ಲಿ ಇಪ್ಪತ್ತೈದರ ಚುರುಚುರುಕಿನ ತರಣ. ಸಹೃದಯತೆಯಲ್ಲಿ ನಮ್ಮನ್ನು ಸಂಕೋಚಪಡಿಸುವಂತಹ ವೈಶಾಲ್ಯ. ನಿಸ್ವಾರ್ಥ ಸೇವಾ ವಾಂಛೆ. ನಾನು ಮತ್ತು ಫ್ಯಾಮಿಲಿ ಬೆಂಗಳೂರಿಗೆ ಹೋದಾಗೆಲ್ಲ ಅತ್ಯಾಪ್ತ ಬಂಧುವಿನ ಹಾಗೆ ಊಟೋಪಚಾರದಿಂದ ಹಿಡಿದು ಸ್ವಂತ ಕಾರು, ಬೈಕಿನಲ್ಲಿ ನಗರ ಸುತ್ತಾಡಿಸುವ ವ್ಯಕ್ತಿ. ಎಷ್ಟೇ ಉಪಕಾರ ಮಾಡಿದರೂ ಸಾಕೆನಿಸದೆ ಸದಾ ಉಪಕಾರಕ್ಕೆ ಸಿದ್ಧನಿದ್ದ ಸಹೃದಯಿ.
ಒಮ್ಮೆ ನಾನು ಮತ್ತು ಕೆಲವು ಉಸ್ತಾದ್ ಹಾಗೂ ಮಿತ್ರರ ಜೊತೆ ಅಜ್ಮೀರ್ ಶರೀಫಿಗೆ ಹೋಗಿ ಮರಳಿ ಬೆಂಗಳೂರು ದಾರಿಯಾಗಿ ಬರುತ್ತಿರುವ ವಿಷಯ ತಿಳಿದು ಎಲ್ಲರಿಗೂ ಮನೆಯಲ್ಲಿ ಊಟ ರೆಡಿ ಮಾಡಿಟ್ಟು ಸತ್ಕರಿಸಿದ್ದ ನೆನಪು ಮನದಿಂದ ಮಾಸುತ್ತಿಲ್ಲ. ಇದೆಲ್ಲ ಏನಾದರೂ ಲಾಭದ ಉದ್ದೇಶದಿಂದ ಮಾಡುತ್ತಿದ್ದುದಲ್ಲ. ಇದಕ್ಕಾಗಿ ನಮ್ಮಿಂದ ಒಂದು ರೂಪಾಯಿ ಕೂಡಾ ಬಯಸಿರಲಿಲ್ಲ, ಪಡಕೊಂಡಿರಲಿಲ್ಲ. ಆರ್ಥಿಕವಾಗಿ ಹೇಳತಕ್ಕ ಗಟ್ಟಿಗರಲ್ಲದಿದ್ದರೂ ಪರೋಪಕಾರಕ್ಕಾಗಿ ಖರ್ಚು ಮಾಡುತ್ತಿದ್ದ ಅವರ ವಿಶಾಲ ಹೃದಯಕ್ಕೆ ಬೆರಗಾಗಿದ್ದೆ.
ಬೆಂಗಳೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಆರ್. ಟಿ. ನಗರ ಬ್ಲಾಕ್ ನ ಅಧ್ಯಕ್ಷರಾಗಿದ್ದ ದಾದಾಪೀರ್ ಎಂಬ ಎಂಬ ಈ ಎಲ್ಲರ ಮುದ್ದಿನ ‘ ಬಾಬು’ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ರವರ ಆಪ್ತರಾಗಿದ್ದು ಈ ಸಲದ ಚುನಾವಣೆಯಲ್ಲೂ ಬೈರತಿ ಸುರೇಶ್ ಗಾಗಿ ಹಗಲಿರುಳು ದುಡಿದಿದ್ದರು. ಆದರೆ ಎಲ್ಲಾ ಮುಗಿದು ಮತ ಹಾಕಲು ಅವರಿಲ್ಲ ಅನ್ನುವುದು ಬೆಂಗಳೂರಿನ ಕಾಂಗ್ರೆಸ್ ವಲಯದಲ್ಲೂ ವಿಶೇಷತಃ ಬೈರತಿ ಸುರೇಶ್ ರವರಿಗೂ ತೀವ್ರ ಆಘಾತ ತಂದಿದೆ. “ಅವರು ನನ್ನ ಸಹೋದರನಂತಿದ್ದರು. ಅವರ ಅಗಲಿಕೆ ನನಗೂ ಕಾಂಗ್ರೆಸ್ ಪಕ್ಷಕ್ಕೂ ತುಂಬಲಾರದ ನಷ್ಟ” ಎಂದು ಶಾಸಕ ಬೈರತಿ ಸುರೇಶ್ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಔಲಿಯಾಗಳಲ್ಲಿ, ದರ್ಗಾಗಳಲ್ಲಿ ಅದಮ್ಯ ಪ್ರೀತಿ ವಿಶ್ವಾಸ ಹೊಂದಿದ್ದ ದಾದಾ ಪೀರ್ ಅವರು ದರ್ಗಾಗಳ ಝಿಯಾರತ್ ಮಾಡುತ್ತಾ ಇದ್ದರು. ಬೆಂಗಳೂರಿನ ಯಖೀನ್ ಬಾಬಾ ರವರ ( ರ) ದರ್ಗಾ ಶರೀಫ್ ಗೆ ಕರಕೊಂಡು ಹೋಗಿದ್ದರು. ಈಗಲೂ ನಾನು ದಿನಾಲೂ ಯಖೀನ್ ಬಾಬಾ ವಲಿಯವರಿಗೆ ಫಾತಿಹಾ ಓದುತ್ತಿರಲು ಕಾರಣ ಅವರು. ಅದೇ ಪ್ರಕಾರ ತವಕ್ಕಲ್ ಮಸ್ತಾನ್ ದರ್ಗಾ ಮುಂತಾದ ಮಹತ್ವದ ತಾಣಗಳಿಗೆ ಅನೇಕ ಬಾರಿ ನಾವು ಜೊತೆಯಾಗಿ ಹೋಗಿದ್ದೆವು.
ಎಲ್ಲರಿಗೂ ದಿಗ್ಭ್ರಮೆ ಅಂದರೆ ಎಲ್ಲರ ಮನಮೆಚ್ಚಿನ ಈ ‘ಬಾಬು’ ಆರೋಗ್ಯ ಪೂರ್ಣವಾಗಿದ್ದರು, ಯಾವುದೇ ರೋಗವಿಲ್ಲದೆ ಲವಲವಿಕೆಯಿಂದಿದ್ದರು ಅನ್ನುವುದು. ಇಂತಹ ವ್ಯಕ್ತಿ ಹಠಾತ್ತನೆ ಮರಣಕ್ಕೆ ಗುರಿಯಾಗಿರುವುದು ಎಲ್ಲರಿಗೂ ದಿಗ್ಭ್ರಮೆ ಹುಟ್ಟಿಸಿದೆ. ಯಜಮಾನನಾದ ಅಲ್ಲಾಹನ ವಿಧಿಗೆ ನಾವು ಶರಣಾಗಲೇ ಬೇಕಾಗುತ್ತದೆ. ಅವನ ತೀರ್ಮಾನದಲ್ಲಿ ತೃಪ್ತಿ ಪಡಲೇಬೇಕಾಗುತ್ತದೆ. ನಮಗೆ ಉಳಿದಿರುವ ದಾರಿಯೆಂದರೆ ಅದಮ್ಯ ಪ್ರಾರ್ಥನೆ ಮಾತ್ರ.
ಯಾ ಅಲ್ಲಾಹ್ ! ನಮ್ಮನ್ನೆಲ್ಲ ಪ್ರೀತಿ, ವಿಶ್ವಾಸ, ಆತ್ಮೀಯತೆ, ಆತಿಥ್ಯ, ಉಪಕಾರ ಗಳಿಂದ ತುಂಬಿ ತೋಯಿಸಿ ನಿನ್ನ ಬಳಿಗೆ ಹೊರಟು ಬಂದ ನಮ್ಮ ಮುದ್ದಿನ ‘ ಬಾಬು ‘ ಯಾನೆ ದಾದಾ ಪೀರ್ ರವರ ಪವಿತ್ರಾತ್ಮಕ್ಕೆ ಸದ್ಗತಿ ನೀಡಿ ಅನುಗ್ರಹಿಸು. ನಮ್ಮನ್ನು ಆತಿಥ್ಯ, ಉಪಕಾರ, ಪ್ರೀತಿಯಿಂದ ಮಣಭಾರದ ಖುಣಭಾರ ನಮಗೆ ಉಳಿಸಿ ಹೋದ ಅವರಿಗೆ ಕೃತಜ್ಞೆತೆಯಾಗಿ ಕೊಡಲು ನಮಗೆ ಏನೂ ಇಲ್ಲ, ಪ್ರಾರ್ಥನೆ ಮಾತ್ರ ನಮ್ಮಿಂದ ಸಾಧ್ಯ. ದಯವಿಟ್ಟು ಕರುಣೆ ತೋರು ಅಲ್ಲಾಹ್. ಅವರನ್ನೂ ನಮ್ಮನ್ನೂ ಸ್ವರ್ಗದಲ್ಲಿ ಒಟ್ಟು ಸೇರಿಸು. ಅವರ ಧರ್ಮಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಈ ಆಘಾತವನ್ನು ತಾಳಿಕೊಳ್ಳುವ ತಾಕತ್ತು ನೀಡು. ಅವರಿಗೆ ಬರಕತ್ ಕೊಡು. ಆಮೀನ್ ಯಾ ರಬ್ಬಲ್ ಆಲಮೀನ್ .
ನಾವು ನೆರವಾಗೋಣ ; ದಾದಾ ಪೀರ್ ರವರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಲೇ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು . ಹಿರಿಯ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ. ಕಿರಿಯ ಮಗ ಪಿ.ಯು. ಸಿ.ಯಲ್ಲಿದ್ದಾನೆ. ಇನ್ನು ಇವರ ಶಿಕ್ಷಣದ ಮುಂದುವರಿಕೆ ಮತ್ತು ವಿಧವೆ ಆಗಬಾರದಿದ್ದ ವಯಸ್ಸಲ್ಲಿ ವಿಧವೆಯಾದ ನಮ್ಮೆಲ್ಲರ ಆ ಸಹೋದರಿಯ ಮುಂದಿನ ಜೀವನಕ್ಕಾಗಿ ಒಂದು ದಾರಿ ತೋರುವುದು ನಮ್ಮೆಲ್ಲರ ಬಾಧ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ನಮ್ಮದಾಗಲಿ ಎಂದು ವಿನಂತಿಸುತ್ತಾ ನಮ್ಮೆಲ್ಲರ ಮುದ್ದಿನ ‘ ಬಾಬು’ ರವರ ಚಿರಶಾಂತಿ ದುಆ ಹಾಗೂ ಜನಾಝ ನಮಾಝ್ ರಾಜ್ಯದ ಎಲ್ಲಾ ಮಸ್ಜಿದ್ ಗಳಲ್ಲಿ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.
ನಮ್ಮೊಳಗಿನ ಸಂಬಂಧ ಹೇಗೆ? ಬೆಂಗಳೂರು ದಾದಾ ಪೀರ್ ಮತ್ತು ಮಂಗಳೂರಿನವನಾದ ನನ್ನ ನಡುವೆ ಸಂಬಂಧ ಬೆಳೆದುದು ನನ್ನ ” ಮದರಂಗಿ ” ಪತ್ರಿಕೆಯ ಮೂಲಕವಾಗಿತ್ತು. ಪತ್ರಿಕೆಯ ಖಾಯಂ ಓದುಗರು ಮಾತ್ರವಲ್ಲದೆ ಬೆಂಗಳೂರು ಕಡೆ ಅನೇಕ ಚಂದಾದಾರನ್ನು ಮಾಡಿಕೊಟ್ಟಿದ್ದರು. ಪತ್ರಿಕೆ ನಿಂತಾಗ ಅತ್ಯಂತ ಹೆಚ್ಚು ಬೇಸರಪಟ್ಟವರು ದಾದಾ ಪೀರ್ ಅವರಾಗಿದ್ದರು!
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.