ಆನೇಕಲ್ (www.vknews.in) : ಆನೇಕಲ್ ಉಪವಿಭಾಗದ ಬನ್ನೇರುಘಟ್ಟ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ಯುವಕರು, ಆಸ್ತಿಗಾಗಿ ಮಹಿಳೆಯನ್ನ ಕೊಲೆ ಮಾಡಿ ದೇಹವನ್ನ ಪೀಸ್ ಪೀಸ್ ಮಾಡಿ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ. ಆರೋಪಿಗಳ ಪೈಕಿ ಇಂದಲ್ ಕುಮಾರ್ (21) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮೃತ ಮಹಿಳೆಯನ್ನು ಗೀತಾ (54) ಎಂದು ಗುರುತಿಸಲಾಗಿದೆ.
ಮಹಿಳೆಯ ಮೃತದೇಹ ಜೂನ್ 1ರಂದು ಪತ್ತೆಯಾಗಿತ್ತು. ಬಳಿಕ ತನಿಖೆ ಕೈಗೊಂಡಿದ್ದ ಬನ್ನೇರುಘಟ್ಟ ಪೊಲೀಸರು ಹಂತಕರನ್ನ ಪತ್ತೆಹಚ್ಚಲು ವಿಶೇಷ ತಂಡ ರಚನೆ ಮಾಡಿತ್ತು. ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಓರ್ವನ ಬಂಧನವಾಗಿದೆ.
ಬಿಹಾರದಿಂದ ಬಂದಿದ್ದ ಯುವಕರು ಕೊಲೆಯಾದ ಮಹಿಳೆ ಗೀತಾ ಮನೆಯಲ್ಲೇ ಬಾಡಿಗೆಗೆ ಇದ್ದರು. ಕೊನೆಗೆ ಮನೆಯನ್ನು ತಮ್ಮ ಹೆಸರಿಗೇ ಮಾಡಿಕೊಡುವಂತೆ ಆಕೆಯನ್ನ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದೇ ಇದ್ದದ್ದಕ್ಕೆ ಕೊಲೆ ಮಾಡಿದ್ದಾರೆ. ಈ ವಿಚಾರ ಹೊರಗೆ ತಿಳಿಯದಂತೆ ನೋಡಿಕೊಳ್ಳಲು ದೇಹವನ್ನ ತುಂಡರಿಸಿದ್ದಾರೆ. ಮೃತದೇಹದ ಭಾಗಗಳನ್ನ ತುಂಡು ತುಂಡಾಗಿ ಕತ್ತರಿಸಿ ಅಲ್ಲಲ್ಲಿ ಎಸೆದಿದ್ದಾರೆ. ಪ್ಲಾಸ್ಟಿಕ್ ಕವರ್ನಲ್ಲಿ ಕತ್ತರಿಸಿದ ಭಾಗಗಳನ್ನ ತುಂಬಿ ಬೇರೆಡೆಗೆ ಸಾಗಿಸಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಿದ ನಂತರವೂ ಏನೂ ಆಗಿಲ್ಲವೆನ್ನುವಂತೆ ಆರೋಪಿಗಳು ಒಂದು ದಿನ ಕೆಲಸಕ್ಕೆ ತೆರಳಿದ್ದರು. ಅವರಲ್ಲಿಬ್ಬರು ಕಿರಾತಕರು ಶವದ ಮುಂದೆಯೇ ಕುಳಿತು ಊಟ ಮಾಡುತ್ತಿದ್ದರು. ಕೃತ್ಯ ನಡೆದ ಮೂರು ದಿನಗಳ ಬಳಿಕ ದುರ್ವಾಸನೆ ಬೀರುತ್ತಿದ್ದಂತೆ ಆತಂಕಗೊಂಡ ಆರೋಪಿಗಳು ಮನೆಯ ಹಿಂಭಾಗ ದೇಹದ ಭಾಗಗಳನ್ನ ಬಿಸಾಡಿ ಎಸ್ಕೇಪ್ ಆಗಿದ್ದಾರೆ. ಅದರಲ್ಲಿ ಮಹಿಳೆಯ ತಲೆ ಮತ್ತು ಒಂದು ಕೈ 1 ಕಿಮೀ ದೂರದಲ್ಲಿ ಪತ್ತೆಯಾದರೆ, ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಅರಣ್ಯ ಪ್ರದೇಶದಲ್ಲಿ ರುಂಡ ಪತ್ತೆಯಾಗಿದೆ.
ಕೃತ್ಯಕ್ಕೂ ಮುನ್ನ ಅತ್ಯಾಚಾರ ಆಗಿರುವ ಕುರಿತು ಪರಿಶೀಲನೆ ಸಹ ನಡೆಯುತ್ತಿದೆ. ಸದ್ಯದಲ್ಲೇ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಪರಿಶೀಲನೆ ಮಾಡಲಿದ್ದಾರೆ. ಒಟ್ಟಿನಲ್ಲಿ ಈ ಕೊಲೆ ಮೇಲ್ನೋಟಕ್ಕೆ ಆಸ್ತಿ ವಿಚಾರಕ್ಕಾಗಿಯೇ ನಡೆದಿರುವುದು ಕಂಡುಬಂದಿದೆ. ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್, ಸುಮೀತ್, ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.