ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಉದಯವಾಣಿ ದಿನಪತ್ರಿಕೆಯ ಆದಿತ್ಯವಾರದ ವಿಶೇಷ ಸಂಚಿಕೆಯಲ್ಲಿ ಸಭಾಕಂಪನ ಕುರಿತಾದ ಲೇಖನವೊಂದರ ಅಭಿಪ್ರಾಯಗಳ ಪೈಕಿ ಒಂದು ಬರಹ ಹೀಗಿತ್ತು ” ಈ ಲೇಖನವನ್ನು ಸಭೆಯೊಂದರಲ್ಲಿ ಓದುವ ಧೈರ್ಯ ತೋರಿಸಿದ್ದೆ ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ”
ಅನಿಲಕಟ್ಟೆ ಯವರ ಅಭಿಪ್ರಾಯದ ಕೆಳಗೆ ” ಭಾಷಣ ಮಾಡಲು ಸಾಧ್ಯವಿದ್ದೂ ಸಭಾಕಂಪನದಿಂದ ಭಾಷಣ ಮಾಡಲಾಗದವರಿಗೆ ಈ ಲೇಖನ ಉತ್ತಮ ಪಾಠದಂತಿತ್ತು” ಎಂಬ ನನ್ನ ಅಭಿಪ್ರಾಯವೂ ಪ್ರಕಟವಾಗಿತ್ತು. ಹಿಂದೆ ಹಲವಾರು ಪತ್ರಿಕೆಗಳಲ್ಲಿ ಹೆಸರು ನೋಡಿದ್ದರೂ ಅಬೂಬಕರ್ ಅನಿಲಕಟ್ಟೆ ಯವರ ಹೆಸರು ನನ್ನ ಮನದಲ್ಲಿ ಅಚ್ಚೊತ್ತಿದ್ದು ಈ ಬರಹದ ಬಳಿಕವಾಗಿತ್ತು.
ರಾಜ್ಯದ ಬಹುತೇಕ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಗಳಿಗೆ ವಿವಿಧ ಪ್ರಕಾರಗಳ ಬರಹಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿರುವ ಎ.ಅಬೂಬಕರ್ ಅನಿಲಕಟ್ಟೆ ಯವರು ದೇರಳಕಟ್ಟೆಯಿಂದ ಹೊರ ಬರುತ್ತಿದ್ದ “ಮೊಯ್ಲಾಂಜಿ ಮಾಸ ಪತ್ರಿಕೆಯ ಪ್ರಶ್ನೋತ್ತರ ವಿಭಾಗದಲ್ಲಿ ಒಂದು ಪ್ರಶ್ನೆ ಕೇಳಿದ್ದರು, ಅದು ಹೀಗಿತ್ತು ” ದೇರಳಕಟ್ಟೆ ಮತ್ತು ಅನಿಲಕಟ್ಟೆ ನಡುವೆ ಏನು ಸಂಬಂಧ? ಮೊಯ್ಲಾಂಜಿ ಪತ್ರಿಕೆ ಯವರು ಅದಕ್ಕೆ ನೀಡಿದ ಅರ್ಥಗರ್ಭಿತ ಉತ್ತರ ಹೀಗಿತ್ತು ” ದೇರಳಕಟ್ಟೆಯಿಂದ ಎಲ್ಲಾ ಕಡೆಗೂ ಒಂದು ಪತ್ರಿಕೆ, ಅನಿಲಕಟ್ಟೆ ಯಿಂದ ಎಲ್ಲಾ ಪತ್ರಿಕೆ ಗಳಿಗೆ ಒಂದು ಪತ್ರ!
ನಾವೆಲ್ಲರೂ ಬಹಳ ಪ್ರೀತಿಯಿಂದ ಕಾಣುವ ಎ.ಅಬೂಬಕರ್ ಅನಿಲಕಟ್ಟೆ ಯವರ ಬರಹದ ಹವ್ಯಾಸ ಬಗ್ಗೆ ಹೇಳುವುದಾದರೆ ಅದೊಂದು ಕೃತಿಯಾಗುವಷ್ಟು ಇರಬಹುದೇನೋ!? ನನ್ನ ಊರಿನಿಂದ ಹತ್ತು ಕಿಲೋ ಮೀಟರ್ ದೂರದಲ್ಲಿರುವ ವಿಟ್ಲ ನಮ್ಮ ಪಟ್ಟಣ ಕೂಡ ಆಗಿರುವ ಕಾರಣ ವಿಟ್ಲ ಪಟ್ಟಣಕ್ಕೆ ಬಂದಾಗ ಸಮಯ ಸಿಕ್ಕಾಗಲೆಲ್ಲ ಅಬೂಬಕರ್ ಅನಿಲಕಟ್ಟೆ ಯವರ ವಾಚ್ ಅಂಗಡಿಗೆ ಹೋಗಿ ಅವರೊಂದಿಗೆ ಸ್ವಲ್ಪ ಹೊತ್ತು ಮಾತನಾಡಿ ಬರುವುದು ಹಿಂದಿನಿಂದಲೂ ಇರುವ ನನ್ನ ಒಂದು ಹವ್ಯಾಸ!
ಸ್ಪಷ್ಟ ಕನ್ನಡ ಉಚ್ಚಾರಣೆ, ನಿಖರ ಮಾತು ಅನಿಲಕಟ್ಟೆ ಯವರ ವಿಶೇಷತೆ ಎನ್ನಬಹುದು. ತಾನು ಹೇಳುವ ಮಾತನ್ನು ನೇರವಾಗಿ ಹೇಳುತ್ತಾರೆ. ಅವರ ಬರಹದಲ್ಲಿ ಯಾವುದೇ ಒಂದು ಪದ ಅಥವಾ ವಾಕ್ಯ ಅಸಂಬದ್ಧ ಎನಿಸುವುದಿಲ್ಲ. ಹೆಚ್ಚಾಗಿ ಸಣ್ಣ ಬರಹಗಳನ್ನು ಬರೆಯುತ್ತಾರಾದರೂ ಆ ಬರಹಗಳು ಆಳ ಅರ್ಥವನ್ನು ಹೊಂದಿರುತ್ತದೆ.
ಹಲವಾರು ಸಾಹಿತ್ಯ ಕಾರ್ಯಕ್ರಮ ಗಳಿಗೆ ನಾವು ಒಟ್ಟಾಗಿ ಹೋಗಿದ್ದೇವೆ. ಆ ಸಮಯದಲ್ಲಿ ಮಾತನಾಡಲು ಅವರ ಬಳಿ ಏನಾದರೊಂದು ಸಕಾಲಿಕ ವಿಷಯವಿರುತ್ತದೆ. ಆ ಬಗ್ಗೆ ಆಳಕ್ಕಿಳಿದು ತನ್ನ ಅಭಿಪ್ರಾಯ ಹೇಳುತ್ತಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಮರ್ಶಾ ಬರಹಗಳೇ ಅವರನ್ನು ಒಬ್ಬ ಬರಹಗಾರನಾಗಿ ಬೆಳಕಿಗೆ ತಂದದ್ದು. ವಿವಿಧ ಕಡೆಗಳಿಗೆ ಹೋದಾಗ ಹಲವರು ನನ್ನೊಂದಿಗೆ ಮಾತನಾಡಿದ ಬಳಿಕ ” ನಿಮ್ಮ ಊರಿನ ಪಕ್ಕದಲ್ಲಿ ಅಬೂಬಕರ್ ಅನಿಲಕಟ್ಟೆ ಎಂಬ ಬರಹಗಾರರೊಬ್ಬರು ಇದ್ದಾರಲ್ಲ ಎಂದು ಕೇಳುತ್ತಾರೆ!!!
ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಬರಹ ರಂಗದಲ್ಲಿರುವ ಕಾರಣ ಯಾವುದೇ ಪ್ರದೇಶಗಳಿಗೆ ಹೋದರೂ ಮಾತನಾಡುವಾಗ ಅವರೇ ಗುರುತು ಹಿಡಿದು ಮಾತನಾಡಿಸುತ್ತಾರೆ. ನಾನಾಗಿ ನನ್ನ ಪರಿಚಯ ಹೇಳುವುದು ಕಡಿಮೆ. ಸಾಮಾನ್ಯವಾಗಿ ಮಾತನಾಡಿ ಹೆಸರು ಹೇಳಿದಾಗ ತಕ್ಷಣ ” ನಿಮ್ಮ ಬರಹ ಓದುತ್ತಿದ್ದೇನೆ ಎನ್ನುತ್ತಾರೆ. ನನ್ನ ಬರಹ ಕಾಣದಾದಾಗ ಯಾಕೆ ಈಗ ಬರೆಯುವುದು ಕಡಿಮೆ ಎಂದೂ ಕೇಳಿ ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡಲು ಅವರು ಮರೆಯುವುದಿಲ್ಲ. ಇದರಲ್ಲಿ ರಾಜಕಾರಣಿಗಳು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುವವರು ವಿವಿಧ ಇಲಾಖೆಗಳ ಅಧಿಕಾರಿಗಳು, ನಾಗರಿಕರು ಇದ್ದಾರೆ. ಅವರೆಲ್ಲ ಮಾತನಾಡುವ ಮಧ್ಯೆ ಅಬೂಬಕರ್ ಅನಿಲಕಟ್ಟೆ ಬಗ್ಗೆ ಪ್ರಸ್ತಾಪಿಸದೇ ಇದ್ದದ್ದು ಅಪರೂಪ ಎನ್ನಬಹುದು!!! ಜನರ ಮನಸ್ಸಿನಲ್ಲಿ ಅವರು ಆಳವಾಗಿ ಸ್ಥಾನ ಹಿಡಿದಿದ್ದಾರೆ ಎನ್ನುವುದಕ್ಕೆ ಇದೊಂದು ಜ್ವಲಂತ ನಿದರ್ಶನ ಎನ್ನಬಹುದು.
ಸಂಘಟನಾ ರಂಗದಲ್ಲೂ ಸಕ್ರಿಯರಾಗಿರುವ ಅಬೂಬಕರ್ ಅನಿಲಕಟ್ಟೆ ಯವರು ಒಂದು ಕಾರ್ಯಕ್ರಮ ಸಂಘಟಿಸಲು ಬೇಕಾದ ರೂಪುರೇಷೆಗಳನ್ನು ಕ್ಷಣ ಮಾತ್ರದಲ್ಲಿ ಹೇಳಿ ಮುಗಿಸುತ್ತಾರೆ! ಸ್ವಾಗತ, ನಿರೂಪಣೆ, ಭಾಷಣ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಇವರು ನಾನು ಭಾಷಣ ಮಾಡುವುದು ಕಡಿಮೆ ಎನ್ನುತ್ತಲೇ ಅರ್ಥಗರ್ಭಿತ ವಾಗಿ ಮಾತನಾಡಬಲ್ಲರು!!! ಮಂಗಳ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ,ಕರ್ನಾಟಕ ಭಾವೈಕ್ಯತಾ ಪರಿಷತ್ ಉಪಾಧ್ಯಕ್ಷ ಸಹಿತ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.
ಸಾಹಿತ್ಯ ಸೇವೆಗಾಗಿ “ಸಾಹಿತ್ಯ ರತ್ನ” ಪ್ರಶಸ್ತಿ,ಕರ್ನಾಟಕ ಬ್ಯಾರಿ ಅಕಾಡೆಮಿ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಪಡೆದು ಸಮಾಜದಲ್ಲಿ ಒಬ್ಬ ಉತ್ತಮ ಬರಹಗಾರನಾಗಿ ಗುರುತಿಸಿಕೊಂಡಿರುವ ಅಬೂಬಕರ್ ಅನಿಲಕಟ್ಟೆ ಯವರು ವಿಟ್ಲ ಪೋಲಿಸ್ ಠಾಣೆ ಮುಂಭಾಗದ ಅನಿಲಕಟ್ಟೆ ವಾಚ್ ವರ್ಕ್ಸ್ ನಲ್ಲಿ ಸದಾ ಕಾರ್ಯ ನಿರತರಾಗಿರುತ್ತಾರೆ. ಈ ನಡುವೆ ತನ್ನನ್ನು ಮಾತನಾಡಿಸಲು ಬರುವ ಹಿತೈಷಿಗಳು, ಅಭಿಮಾನಿಗಳು, ಸಾಹಿತಿಗಳು, ಲೇಖಕ, ಕವಿಗಳೊಂದಿಗೆ ತನ್ನ ವ್ಯವಹಾರದ ಮಧ್ಯೆಯೇ ಪ್ರೀತಿಯಿಂದ ಮಾತನಾಡಿಸುತ್ತಾರೆ.
ತನ್ನ ಬರಹದ ಮೂಲಕ ಶಾಸಕ ಹಾಗೂ ಈಗಿನ ಸ್ಪೀಕರ್ ಯು.ಟಿ.ಖಾದರ್,ಕೋಲಾರ ಲೋಕಾಯುಕ್ತ ಎಸ್.ಪಿ.ರವೀಶ್,ಪತ್ರಕರ್ತ ವಿ.ಮನೋಹರ್,ಬಿ..ಗಣಪತಿ,ಮಂಗಳ ಪತ್ರಿಕೆಯ ಎಂ.ಎಸ್.ನರಸಿಂಹ ಮೂರ್ತಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರೊಂದಿಗೆ ಆತ್ಮೀಯ ಸಂಬಂಧ ಸ್ಥಾಪಿಸಲು ಸಾಧ್ಯವಾದ ಬಗ್ಗೆ ಅವರು ಅಭಿಮಾನದಿಂದ ಹೇಳುತ್ತಾರೆ. ಉದಯವಾಣಿ ಬಳಗದ ತುಷಾರ, ರೂಪತಾರ,ತರಂಗ ಮೊದಲಾದ ಪತ್ರಿಕೆಗಳಿಂದ ಇವರ ವಿವಿಧ ಬರಹಗಳಿಗೆ ಟಿವಿ,ಕುಕ್ಕರ್, ವಾಚ್ ಸಹಿತ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ.
ವಿವಿಧ ಅರ್ಜಿಗಳು,ಇನ್ನಿತರ ಬರಹಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬರೆದು ಕೊಡುವ ಅಬೂಬಕರ್ ಅನಿಲಕಟ್ಟೆ ಯವರು ಮಂಗಳ ಪತ್ರಿಕೆ ಯಲ್ಲಿ ಬರೆಯಲು ಆರಂಭಿಸಿದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ನಿರಂತರ ಬರೆಯುತ್ತಲೇ ಇದ್ದಾರೆ. ಬರಹವನ್ನು ಹವ್ಯಾಸವಾಗಿಸಿ ಸಾಮಾಜಿಕ ಬದಲಾವಣೆಯನ್ನು ಬಯಸುವ ಉದಯೋನ್ಮುಖ ಬರಹಗಾರ ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ ಅವರು ತನ್ನ ಬರಹಗಳ ಮೂಲಕ ಜನರ ಸ್ನೇಹಿತರಾಗಿ ಮಾರ್ಪಟ್ಟಿದ್ದಾರೆ. ಅವರ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಹಾರೈಸೋಣ.
✍️ಕೆ.ಎ.ಅಬ್ದುಲ್ ಅಝೀಝ್ ಪುಣಚ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.