ವಿಶ್ವ ಕನ್ನಡಿಗ ನ್ಯೂಸ್ : ಆಗಸ್ಟ್ 15!.. ಭಾರತೀಯ ಇತಿಹಾಸದಲ್ಲಿ ಸ್ವರ್ಣಾಕ್ಷರ ಗಳಲ್ಲಿ ಬರೆದಿಟ್ಟ ದಿನ! ಭಾರತ ಆಂಗ್ಲರ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಿ ಸ್ವತಂತ್ರಗೊಂಡ ಅವಿಸ್ಮರಣೀಯ ಕ್ಷಣ ! ವ್ಯಾಪಾರದ ನೆಪವೊಡ್ಡಿ ಬಂದು ಶತಕಗಳ ಕಾಲ ನಮ್ಮನ್ನು ನಮ್ಮ ನಾಡಿನಲ್ಲೇ ದಾಸ್ಯ ಸಂಕೋಲೆಯಲ್ಲಿಟ್ಟು ನಮ್ಮ ದೇಶವನ್ನು ಲೂಟಿಗೆೈದು ಅಟ್ಟಹಾಸ ಮೆರೆದ ರಾಕ್ಷಸರ ವಿರುದ್ಧ ಸತ್ಯ, ಶಾಂತಿ ,ಅಹಿಂಸೆ ,ಸತ್ಯಾಗ್ರಹಗಳ ಮೂಲಕ ಹೋರಾಡಿ ಪ್ರಾಣತೆತ್ತ ನಮ್ಮ ಪೂರ್ವಜರನ್ನು ಸ್ಮರಿಸಬೇಕಾದ ದಿನ! ಹೌದು ! ಭಾರತೀಯ ಸ್ವಾತಂತ್ರ್ಯ ಹೋರಾಟವು ಭಾರತದ ಇತಿಹಾಸದ ಅತ್ಯಮೂಲ್ಯ ಅಧ್ಯಾಯವಾಗಿದೆ . ಅದು ಅಂತಿಂಥ ಹೋರಾಟವಲ್ಲ; ಅದು ಸಹನೆಯ ಹೋರಾಟ ,ಸಾಹಸದ ಹೋರಾಟ ,ನೀತಿಯ ಹೋರಾಟ ,ಅಸಮಾನತೆಯ ವಿರುದ್ಧದ ಹೋರಾಟ ,ಸತ್ಯದ ಹೋರಾಟ !ಸುಮಾರು ಒಂದು ಶತಮಾನಗಳಲ್ಲಿ ವ್ಯಾಪಿಸಿರುವ ಈ ಸಾಹಸ ಗಾಥೆಯು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಹೋರಾಡಿದ ಧೀರ ವ್ಯಕ್ತಿಗಳ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಬ್ರಿಟಿಷ್ ವಸಾಹತುಶಾಹಿಯ ಶೋಷಣೆ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆಗಳಿಂದ ರೋಸಿಹೋದ ಜನರು ಆಂಗ್ಲರ ವಿರುದ್ಧ ದಂಗೆ ಏಳಲು ತೊಡಗಿದರು .ಮಹಾತ್ಮಗಾಂಧಿ ,ಜವಾಹರ್ಲಾಲ್ ನೆಹರು , ಸರ್ದಾರ್ ಪಟೇಲ್ ರಂತಹ ಮಹಾನ್ ವ್ಯಕ್ತಿಗಳ ಅಹಿಂಸಾತ್ಮಕ ಪ್ರತಿಭಟನೆಗಳು , ಅಸಹಕಾರ ಚಳುವಳಿಗಳು ಯುವಸಮುದಾಯವನ್ನು ಸಂಘಟಿಸಿ ದೇಶಕ್ಕಾಗಿ ಹೋರಾಡಲು ಪ್ರೇರಣೆಯಾಯಿತು . ಸತ್ಯಾಗ್ರಹ ಹಾಗೂ ಸತ್ಯದ ಮೇಲೆ ಕೇಂದ್ರೀಕೃತವಾದ ಗಾಂಧೀಜಿಯವರ ಅಹಿಂಸಾತ್ಮಕ ತತ್ವಶಾಸ್ತ್ರವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ದಬ್ಬಾಳಿಕೆಯ ವಿರುದ್ಧ ಪ್ರಬಲ ಅಸ್ತ್ರವಾಯಿತು. ಗಾಂಧೀಜಿಯವರ ಅಸಹಕಾರ ಚಳುವಳಿಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಮೈಲಿಗಲ್ಲು . ಬ್ರಿಟಿಷ್ ದಬ್ಬಾಳಿಕೆಯ ರೌಲತ್ ಕಾಯಿದೆ ಹಾಗೂ ಜಲಿಯನ್ ವಾಲ್ಬಾಗ್ ಹತ್ಯಾಕಾಂಡಕ್ಕೆ ಸಿಡಿದೆದ್ದ ಜನರು ಅಸಹಕಾರ ಚಳುವಳಿಗೆ ಬೆಂಬಲವಿತ್ತು ಬ್ರಿಟಿಷ್ ಸರಕುಗಳು , ಶಿಕ್ಷಣ ಸಂಸ್ಥೆಗಳು , ನ್ಯಾಯಾಲಯಗಳು ಮತ್ತು ಸರ್ಕಾರಿ ನೌಕರಿಗಳನ್ನು ಬಹಿಷ್ಕರಿಸಿದರು . 1930 ಗಾಂಧೀಜಿಯವರ ದಂಡಿ ಮೆರವಣಿಗೆಯು ಆಂಗ್ಲರ ಅನ್ಯಾಯದ ಕಾನೂನುಗಳನ್ನು ಧಿಕ್ಕರಿಸಿತು. ಅರಬ್ಬಿ ಸಮುದ್ರದಂಡೆಗೆ 240 ಮೈಲಿಗಳಷ್ಟು ಕಾಲ್ನಡಿಗೆಯಲ್ಲಿ ಸಾಗಿ ಗಾಂಧಿ ಹಾಗೂ ಅವರ ಅನುಯಾಯಿಗಳು ಉಪ್ಪಿನ ತೆರಿಗೆಯನ್ನು ಪ್ರತಿಭಟಿಸಿದರು . ಈ ಘಟನೆಯು ಬ್ರಿಟಿಷ್ ಅಧಿಕಾರದ ಅಡಿಪಾಯವನ್ನು ಅಲುಗಾಡಿಸಿತು . 12942ರಲ್ಲಿ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ “ ಎಂದು ಕ್ವಿಟ್ ಇಂಡಿಯಾ ಚಳುವಳಿಯನ್ನು ಗಾಂಧೀಜಿಯವರು ಪ್ರಾರಂಭಿಸಿದರು . ಇದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ತಿರುವನ್ನು ನೀಡಿತು . ಜನರು ಮಾಡು ಇಲ್ಲವೇ ಮಡಿ ಎಂಬ ಧ್ಯೇಯ ವಾಕ್ಯದೊಂದಿಗೆ ಚಳುವಳಿಗೆ ಧುಮಕಿದರು. ಇದರ ಪರಿಣಾಮವಾಗಿ ಸಾಮೂಹಿಕ ಬಂಧನಗಳು ಮತ್ತು ಹಿಂಸಾತ್ಮಕ ಸಂಘರ್ಷಗಳು ಸಂಭವಿಸಿದವು. ಆದರೆ ಈ ಎಲ್ಲಾ ಸವಾಲುಗಳ ಹೊರತಾಗಿಯೂ ಜನರ ನಿರ್ಧಾರ ಅಚಲವಾಗಿತ್ತು -ಅದೇ ಸ್ವಾತಂತ್ರ್ಯ ಭಾರತ!
ಬ್ರಿಟಿಷ್ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳು , ಮುಷ್ಕರಗಳು ಹಾಗೂ ಬಹಿಷ್ಕಾರಗಳು ತೀವ್ರವಾಯಿತು . ಜನರು ಬ್ರಿಟಿಷ್ ಕಾನೂನುಗಳನ್ನು ಪಾಲಿಸಲು ನಿರಾಕರಿಸಿದರು. ಬ್ರಿಟಿಷರ ಒಡೆದು ಆಳುವ ನೀತಿಗೆ ವಿರುದ್ಧವಾಗಿ ಸರಕಾರಿ ನೌಕರಿಗಳನ್ನು , ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿದ ಜನರು ಆಂಗ್ಲರು ನೀಡಿದ್ದ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿ ಸ್ವಾಭಿಮಾನ ಮೆರೆದರು . ಹೋರಾಟ ತೀವ್ರ ರೂಪದಂತೆ ಇನ್ನು ನಮಗಿಲ್ಲಿ ಉಳಿಗಾಲವಿಲ್ಲವೆಂದರಿತ ಬ್ರಿಟಿಷರು ಆಗಸ್ಟ್ 15 , 1947 ರಂದು ದೇಶವನ್ನು ಇಭ್ಭಾಗಿಸಿ ಕಾಲ್ಕಿತ್ತರು .
ಭಾರತ ಸ್ವತಂತ್ರಗೊಂಡ ಇಂದಿಗೆ 77 ವರ್ಷಗಳು ಸಂದಿವೆ . ದೇಶಕ್ಕಾಗಿ ಪ್ರಾಣತೆತ್ತು ಅನ್ಯಾಯ ಅಸಮಾನತೆಗಳ ವಿರುದ್ಧ ಹೋರಾಡಿದ ಮಹಾತ್ಮರನ್ನು ಸ್ಮರಿಸಬೇಕಾದ ಸಮಯ ಮತ್ತೊಮ್ಮೆ ಬಂದಿದೆ. ಆದರೆ ಸ್ವತಂತ್ರ ಭಾರತದಲ್ಲಿ ಆ ಮಹಾತ್ಮರ ಆಶಯಗಳು ಇನ್ನೂ ಜೀವಂತವಾಗಿದೆಯೇ ಎಂಬುದನ್ನು ನಮಗೆ ನಾವೇ ಪ್ರಶ್ನಿಸ ಬೇಕಿದೆ . ಮಣಿಪುರದಲ್ಲಿ ಭಾರತಾಂಬೆಯ ಮಾನವನ್ನು ಜಗತ್ತಿನ ಎದುರು ಬೆತ್ತಲೆಗೊಳಿಸಿ ಸಹಸ್ರಾರು ಜನರು ಭರವಸೆಯ ಮಾತುಗಳಿಗೆ ಗೊಗರೆಯುತ್ತಿದ್ದರೂ, ತುಟಿಪಿಟಕ್ಕೆನ್ನದೆ ವಿದೇಶಗಳಲ್ಲಿ ಪುಂಗಿ ಊದಿ ಸನ್ಮಾನಗಳನ್ನು ಪಡೆಯುತ್ತಿರುವ ನಾಯಕರಿಗೆ ದೇಶಕ್ಕಾಗಿ ತಮ್ಮ ನೌಕರಿ ಪ್ರಶಸ್ತಿಗಳನ್ನು ತ್ಯಜಿಸಿ ಸತ್ಯಾಗ್ರಹ ಮಾಡಿದ ಗಾಂಧೀಜಿಯ ಆಶಯ ಮರೆತಂತಿದೆ . ಕೇರಳ ಸ್ಟೋರಿ ಅಂತಹ ಸುಳ್ಳು ಕಥೆಗಳನ್ನು ಪ್ರಚಾರ ಮಾಡಿ ತಮ್ಮ ಬೇಳೆ ಬೇಯಿಸುವುದಕ್ಕಾಗಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಈ ನಾಯಕರು. ಈ ದೇಶಕ್ಕಾಗಿ ಹೋರಾಡಿದ ಗಾಂಧೀಜಿ, ನೇತಾಜಿ, ಟಿಪ್ಪು ಸುಲ್ತಾನ್ ರಂತಹ ದೇಶ ಭಕ್ತರ ಪಾಠಗಳನ್ನು ಕೈ ಬಿಟ್ಟು ಸಾರ್ವರ್ಕರ್ , ಸೂಲಿಬೆಲೆ , ಗೋಡ್ಸೆಅಂತಹ ದುರುಳರ ಪಾಠಗಳನ್ನು ತುರುಕಿಸಿ ಜನತೆಯ ಮಧ್ಯೆ ವೈಶಮ್ಯದ ವಿಷ ಬೀಜ ಬಿತ್ತಲು ಹೇಸದ ನೀಚ ರಾಜಕಾರಣಿಗಳಿರುವಾಗ ಮುಗ್ಧ ಮನಸ್ಸುಗಳಿಗೆ ಮನೆಗಳಲ್ಲೇ ಸ್ವಾತಂತ್ರ್ಯ ಹೋರಾಟದ ನೈಜ ಚಿತ್ರಣವನ್ನು ಮುದ್ರಿಸುವ ಅವಶ್ಯಕತೆ ಇದೆ.
ಭಾರತೀಯ ಸ್ವಾತಂತ್ರ್ಯ ಚಳುವಳಿಯ ಇತಿಹಾಸವು ಸಮೃದ್ಧಿ ಮತ್ತು ಉತ್ಕೃಷ್ಟತೆಯ ಕಥೆಯಾಗಿದೆ. ಆ ಹೋರಾಟದ ಐತಿಹಾಸಿಕ ನೆನಪು ಮತ್ತು ಆದರ್ಶಗಳು ನಮ್ಮ ಭವಿಷ್ಯವನ್ನು ಬೆಳಗುತ್ತವೆ . ಅದು ನಮ್ಮ ಸಮರ್ಪಣಾ ಭಾವ ಹಾಗೂ ಆತ್ಮವಿಶ್ವಾಸದ ಸಂಕೇತವಾಗಿದೆ . ಹಿಂದೂ-ಮುಸಲ್ಮಾನ-ಕ್ರಿಶ್ಚಿಯನ್ನರೆನ್ನದೆ ಒಂದು ದೇಶವಾಗಿ ಏಕತೆಯನ್ನು ಬೆಳಗಬೇಕು . ಸ್ವತಂತ್ರ ಭಾರತದ ಯೋಜನೆಗಳನ್ನು ಅಭಿವೃದ್ಧಿ ಮಾಡಲು ಪರಸ್ಪರ ಕಚ್ಚಾಡುವ ಬದಲು ದೇಶದ ವಿವಿಧತೆಯಲ್ಲಿ ಏಕತೆಯ ಸಾರವನ್ನು ಅರಿಯಬೇಕಿದೆ . ಇದಕ್ಕಾಗಿ ಭವ್ಯ ಭಾರತದ ಇತಿಹಾಸವನ್ನು ಒಮ್ಮೆ ಅವಲೋಕಿಸಿ ನೋಡಬೇಕಿದೆ!
ಅಂದು ಭಾರತೀಯರನ್ನು ವಿಭಜಿಸಲು ಬ್ರಿಟೀಷರು ಹೂಡಿದ ತಂತ್ರವಾದ ಒಡೆದು ಆಳುವ ನೀತಿಯನ್ನು ದೇಶದಲ್ಲಿ ನಮ್ಮನ್ನಾಳುವವರು ತಮ್ಮ ಮತ ಬ್ಯಾಂಕ್ ಗಾಗಿ ಇಂದು ಉಪಯೋಗಿಸುತ್ತಿದ್ದಾರೆ. ಒಂದು ಧರ್ಮದ ಮೇಲೆ ಮತ್ತೊಂದು ಧರ್ಮವನ್ನು ಎತ್ತಿಕಟ್ಟಿ ತಮ್ಮ ಬೇಳೆً ಬೇಯಿಸಲು ಹವಣಿಸುತ್ತಿದ್ದಾರೆ ಇಂದಿನ ರಾಜಕಾರಣಿಗಳು. ಇಂದಿನ ರಾಜಕಾರಣಿಗಳ ಈ ಒಡೆದು ಆಳುವ ನೀತಿಯ ಪ್ರಯೋಗವು ಪ್ರಜಾಪ್ರಭುತ್ವಕ್ಕೆ ಬಹಳ ಅಪಾಯಕಾರಿಯಾಗಿದೆ.
ಲೇಖನ: ಇರ್ಷಾನಾ ಅಜ್ಮಲ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.