ಮಂಗಳೂರು (www.vknews.in) ; ಇಲ್ಲಿನ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಗೋಳ್ತಮಜಲು ಪರಿಸರದಲ್ಲಿರುವ ಪ್ರತಿಷ್ಠಿತ ಅನುಗ್ರಹ ಮಹಿಳಾ ಕಾಲೇಜಿನಲ್ಲಿ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾಲೇಜು ಆವರಣದಲ್ಲಿರುವ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವನ್ನು ಇಲ್ಲಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ನಿಹಾಲ ಹೈದರ್ ರವರ ಕಿರಾಅತ್ ಪಠಣದೊಂದಿಗೆ ಆರಂಭಿಸಲಾಯಿತು.
ಕಾರ್ಯಕ್ರಮದ ಆಹ್ವಾನಿತ ಮುಖ್ಯ ಅತಿಥಿಯಾಗಿ ಆಗಮಿಸಿದ, ಕಲ್ಲಡ್ಕ ವಸ್ತು ಸಂಗ್ರಹಾಲಯ (ಮಿನಿ ಮ್ಯೂಸಿಯಂ) ಇದರ ಸ್ಥಾಪಕರಾಗಿರುವ ಶ್ರೀಯುತ ಮುಹಮ್ಮದ್ ಯಾಸಿರ್ ಕಲ್ಲಡ್ಕರವರು ಗಿಡ ನೆಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಗೆ ಪ್ರಕೃತಿ ಕಾಳಜಿಯ ಸೊಬಗಿನ ಜತೆಗೆ ಚಾಲನೆ ನೀಡಿ, ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಮತ್ತು ಧ್ವಜಗೀತೆಯನ್ನು ಹಾಡಿದರು.
ಸಭಾ ಕಾರ್ಯಕ್ರಮವನ್ನು, ವಿದ್ಯಾರ್ಥಿನಿಯಾದ ಕುಲ್ಸ್ ನಿಹಾನ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ಸಾರುವ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದರು ಮತ್ತು ವಿದ್ಯಾರ್ಥಿನಿಯರು ರಾಷ್ಟ್ರಪ್ರೇಮದ ಸಂದೇಶವನ್ನು ಹೊಂದಿರುವ, ವಿವಿಧ ಗೀತೆಗಳನ್ನು ಹಾಡಿದರು. ಬೋರ್ಡ್ ಆಫ್ ಇಸ್ಲಾಮಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ, ಇದೇ ಸಂದರ್ಭದಲ್ಲಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ಇದರ ವಿತರಣಾ ಪಟ್ಟಿಯನ್ನು ಮೌಲ್ಯಧಾರಿತ ಶಿಕ್ಷಣ ವಿಭಾಗದ ಮುಖ್ಯಸ್ಥೆಯಾಗಿರುವ ಶ್ರೀಮತಿ ಸಲೀಮಾರವರು ನಿರ್ವಹಿಸಿದರು. ಇಂದಿನ ವಿದ್ಯಾರ್ಥಿಗಳು ನಮ್ಮ ದೇಶದ ಭವಿಷ್ಯದ ಆಸ್ತಿ. ಯಾವುದೇ ಉತ್ತಮ ಸಾಧನೆ ಮಾಡಿದವರನ್ನು ನಮ್ಮ ದೇಶವು ಸದಾ ಗುರುತಿಸುತ್ತದೆ. ಭಾರತ ದೇಶದ ಹಿರಿಮೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಜವಾಬ್ದಾರಿಯುತ ದೇಶಪ್ರೇಮವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ತಮ್ಮ ಅತಿಥಿ ಭಾಷಣದಲ್ಲಿ ಶ್ರೀಯುತ ಮುಹಮ್ಮದ್ ಯಾಸಿರ್ ರವರು ತಿಳಿಸಿದರು.
ತರುವಾಯ, ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಯುತ ಅಮಾನುಲ್ಲಾ ಖಾನ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಸೇನಾನಿಗಳನ್ನು ಸ್ಮರಿಸಿ ಭಾರತವನ್ನು ಸದೃಢ ಗೊಳಿಸಲು ಹಿಂದೂ ಮುಸ್ಲಿಂ ಐಕ್ಯತೆ ಅತೀ ಅಗತ್ಯ ಎಂದು ತಿಳಿಸಿದರಲ್ಲದೆ ವಿದ್ಯಾರ್ಥಿನಿಯರಿಗೆ ಆದರ್ಶನಾರಿ, ಆದರ್ಶ ವಿದ್ಯಾರ್ಥಿ, ಆದರ್ಶ ಭಾರತೀಯ ಪ್ರಜೆ ಆಗಬೇಕೆಂಬ ಕಿವಿಮಾತನ್ನು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಯಾಸೀನ್ ಬೇಗ್, ಉಪಾಧ್ಯಕ್ಷರಾದ ಶ್ರೀಯುತ ಇಮಾರತ್ ಅಲಿ ಕಲ್ಲಡ್ಕ, ಕೋಶಾಧಿಕಾರಿಯಾಗಿರುವ ಹೈದರ್ ಅಲಿ, ಕಾಲೇಜಿನ ಪ್ರಾಂಶುಪಾಲರಾದ ಹೇಮಲತ ಬಿ. ಡಿ., ಕಾಲೇಜಿನ ಸಲಹಾ ಸಮಿತಿಯ ಕಾರ್ಯದರ್ಶಿ ಯಾದ ಶ್ರೀಮತಿ ಮಮಿತಾ ಎಸ್. ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಅಲ್ಲದೆ, ಬೋಧಕ -ಬೋಧಕೇತರ ವೃಂದದವರು, ವಿದ್ಯಾರ್ಥಿನಿಯರು ಮತ್ತು ಕೆಲವಾರು ಪೋಷಕರು ಈ ಸಂಭ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ನಿರೂಪಿಸಿದ, ಗಣಿತಶಾಸ್ತ್ರದ ಉಪನ್ಯಾಸಕಿಯಾದ ಕುಮಾರಿ ಸುಶ್ಮಿತಾರವರು ಆರಂಭದಲ್ಲಿ ಸಭಿಕರೆಲ್ಲರನ್ನು ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.