(www.vknews.in) : ಜ್ಞಾನದಿಂದ ಪ್ರಬುದ್ಧತೆ, ಪ್ರಯೋಗದಿಂದ ಮಾಗುವಿಕೆ ಎಂಬುದು ಬೇಕಲ್ ಉಸ್ತಾದರ ಜೀವ ದ್ರವ್ಯ ಹಾಗೂ ಸಮಗ್ರ ವ್ಯಕ್ತಿತ್ವದ ಸೂಕ್ಷ್ಮ ಸ್ವರೂಪ. ಉಸ್ತಾದರು ನಮ್ಮ ಕಾಯಾರ್ ಫ್ಯಾಮಿಲಿಯ ಒಬ್ಬರಾಗಿದ್ದರಿಂದ ಕುಟುಂಬ ಸಂಬಂಧ ಕೂಡಾ ನಮ್ಮ ಆತ್ಮೀಯತೆಗೆ ಒಂದು ಕಾರಣವಾಗಿದ್ದರೆ ಹೆಚ್ಚು ಬಾಂಧವ್ಯವಿದ್ದುದು ಧಾರ್ಮಿಕ ಪತ್ರಿಕಾ ರಂಗದಲ್ಲಿ. ಹೃದಯ ವೈಶಾಲ್ಯತೆ ಆ ದೊಡ್ಡ ವ್ಯಕ್ತಿತ್ವದ ಹಿರಿಮೆಯ ಒಂದು ಗರಿಮೆಯಾಗಿತ್ತು. ನಾನು ‘ಮದರಂಗಿ’ ಪತ್ರಿಕೆ ಪ್ರಾರಂಭಿಸಿದಾಗ ಅದರಲ್ಲಿ ಅಬೂಸುಫ್ಯಾನ್ ಮತ್ತು ಅಬ್ದು ರ್ರಶೀದ್ ಝೈನಿ ಉಸ್ತಾದರನ್ನು ಸೇರಿಸಿಕೊಂಡಿದ್ದೆ.
ಆದರೆ ಬೇಕಲ್ ಉಸ್ತಾದರ ನೇತೃತ್ವದಲ್ಲಿ ಅಲ್ ಅನ್ಸಾರ್ ಪತ್ರಿಕೆ ಇರುವಾಗ ಮದರಂಗಿ ಪತ್ರಿಕೆಯಲ್ಲಿ ನಾವು ಸೇರಿಕೊಂಡರೆ ಉಸ್ತಾದರಿಗೆ ನಾವು ಪ್ರತಿಸ್ಪರ್ಧಿ ಎನಿಸುವೆವೇನೋ ಎಂಬ ಒಂದು ಆತಂಕದಿಂದ ಅವರಿಬ್ಬರೂ ಬೇಕಲ್ ಉಸ್ತಾದರನ್ನು ಭೇಟಿಯಾಗಿ ಸಲಹೆ ಕೇಳಿದ್ದರು. “_ಡಿ. ಐ. ಅಬೂಬಕರ್ ರವರು ಮದರಂಗಿ ಪತ್ರಿಕೆ ಸ್ಥಾಪಿಸುತ್ತಿದ್ದಾರೆ, ನಮ್ಮನ್ನು ಅದಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ, ನಾವು ಏನು ಮಾಡಬೇಕು?” ಎಂದು ಕೇಳಿದ್ದರು. ಅದಕ್ಕೆ ಉಸ್ತಾದರು ಹೇಳಿದ್ದು; ” ಡಿ. ಐ. ಕೂಡಾ ಬರೆಯುವುದು ಸುನ್ನತ್ ಜಮಾಅತ್ ತಾನೇ? ಸುನ್ನಿ ಪತ್ರಿಕೆ ಹೆಚ್ಚಾದಷ್ಟು ಒಳ್ಳೆಯಲ್ಲವಾ. ನೀವು ಅದರಲ್ಲಿ ಸೇರಿಕೊಂಡು ಪ್ರೋತ್ಸಾಹಿಸಿ ” ಎಂದಾಗಿತ್ತು. ಇದು ಉಸ್ತಾದರ ವಿಶಾಲ ಮನಸ್ಸಿನ ದ್ಯೋತಕವಾಗಿತ್ತು.
ಇಬ್ರಾಹೀಮ್ ನಬಿಯವರು ( ಅ) ಅನ್ನದಾನ,ಅತಿಥಿ ಸತ್ಕಾರ ಪ್ರಿಯರಾಗಿದ್ದರು. ಅದರ ಒಂದಂಶ ಈ ಬೇಕಲ್ ಇಬ್ರಾಹೀಮ್ ಉಸ್ತಾದರಲ್ಲೂ ಇತ್ತು. ಅವರ ಮನೆಗೆ ಅಥವಾ ಬೇಕಲದ ದರ್ಸಿಗೆ ಯಾರೇ ಹೋಗಲಿ ಅವರಿಗೆ ಯಥೇಚ್ಛ ಊಟೋಪಹಾರ ಕೊಡಿಸುತ್ತಿದ್ದರು. ಮುಲಾಜಿನಿಂದ ಕಡಿಮೆ ತಿನ್ನುವುದನ್ನು ಗಮನಿಸಿ ಪಕ್ಕದಲ್ಲೇ ಕೂತು ಚೆನ್ನಾಗಿ ಉಣ್ಣಿಸುತ್ತಿದ್ದರು. ಅಲ್ ಅನ್ಸಾರಿನ ” ಕೇಳಿ ನೋಡಿ” ವಿಭಾಗವನ್ನು ಸರಿಪಡಿಸಲು ಪ್ರತಿವಾರ ಉಸ್ತಾದರ ಬಳಿಗೆ ಕೊಂಡೊಯ್ಯಲಾಗುತ್ತಿತ್ತು. ಅದಕ್ಕೆ ನಮ್ಮ ಓರ್ವ ಸಿಬ್ಬಂಧಿ ಉಸ್ತಾದರ ಬಳಿ ಅದನ್ನು ಕೊಂಡು ಹೋಗಿ ನೋಡಿಸಿ ತರುವ ಕೆಲಸವನ್ನು ನಾನೇ ಮಾಡುತ್ತೇನೆ ಎಂದು ಹಠ ಹಿಡಿಯುತ್ತಿದ್ದರು. ಇದಕ್ಕೆ ಒಂದು ಕಾರಣ ಉಸ್ತಾದರ ಸಾನ್ನಿಧ್ಯದ ಆಕರ್ಷಣೆಯಾಗಿದ್ದರೆ ಇನ್ನೊಂದು ಕಾರಣ ಉಸ್ತಾದರ ಬಳಿ ದೊರೆಯುತ್ತಿದ್ದ ಉತ್ತಮ ಊಟೋಪಹಾರ!
ತಾಜುಲ್ ಫುಕಹಾ ಎಂಬ ಅರ್ಹ ಪದವಿ ಪಡೆದಿದ್ದ ಫಿಕ್ಹ್ ಜ್ಞಾನದ ಅತಿರಥರೆನಿಸಿ ಸರ್ವ ಉಲಮಾಗಳೆಡೆಯಲ್ಲೂ ಗಣ್ಯ ಸ್ಥಾನ ಹೊಂದಿ ಮೇರು ಮಟ್ಟಕ್ಕೇರಿದ್ದರೂ ಅವರ ವಿನಯ, ಸಾಮಾನ್ಯರೊಡನೆಯೂ ಸಹಜವಾಗಿ ಸರಳವಾಗಿ ಒಡನಾಡುವ ಮಧುರ ವ್ಯಕ್ತಿತ್ವ ಅವರ್ಣನೀಯವಾಗಿತ್ತು. ಸಾಲೆತ್ತೂರು ಫೈಝಿ ಉಸ್ತಾದರು ಸಲಫಿಗಳ ಜನ್ಮ ಜಾಲಾಡಿ ಬರೆಯುತ್ತಿದ್ದರೂ ಸಲಫಿಗಳು ಮಾನನಷ್ಟ ಕೇಸು ಕೊಡದ ಹಾಗೆ ನೋಡಿಕೊಳ್ಳುವ ಜಾಣ್ಮೆ ವಹಿಸುತ್ತಿದ್ದರು. ಆದರೆ ಇಂಜಿನಿಯರ್ ಎಸ್ ಅಬ್ದುರ್ರಹ್ಮಾನ್ ಬರೆದ ಒಂದು ಲೇಖನವನ್ನು ಆಧರಿಸಿ ಸಲಫಿಗಳು ಅಲ್ ಅನ್ಸಾರ್ ಮತ್ತು ಅದರ ಸಂಪಾದಕ ಸ್ಥಾನದಲ್ಲಿರುವ ಬೇಕಲ್ ಉಸ್ತಾದರ ವಿರುದ್ಧ ಮಾನನಷ್ಟ ಕೇಸು ಕೊಟ್ಟಿದ್ದರು. ಈ ಕೇಸಿನಲ್ಲಿ ಅನೇಕ ಬಾರಿ ಉಸ್ತಾದರು ಕೋರ್ಟಿಗೆ ಹೋಗಬೇಕಾಯಿತು. ಉದ್ದೇಶಪೂರ್ವಕವಾಗಿಯೇನೋ ಎಂಬಂತೆ ಶುಕ್ರವಾರ ಜುಮುಆ ಸಮಯದಲ್ಲೇ ಹಾಜರಾಗುವಂತಹ ಪರಿಸ್ಥಿತಿ ಯನ್ನು ನಿರ್ಮಾಣ ಮಾಡಲಾಗುತ್ತಿತ್ತು. ತನ್ನದ್ದಲ್ಲದ ತಪ್ಪಿಗೆ ಉಸ್ತಾದರು ಪಡುತ್ತಿದ್ದ ಈ ಕಷ್ಟ , ಮುಜುಗರ ಕಂಡು ನನಗೆ ವ್ಯಥೆಯಾಗುತ್ತಿತ್ತು.
ಅಲ್ಲಾಹನ ಅನುಗ್ರಹದಿಂದ ಆ ಕೇಸು ಖಲಾಶೆಯಾದಾಗ ಉಸ್ತಾದರಿಗೆ ಈ ಅನಗತ್ಯ ಕ್ಲೀಶೆಯಿಂದ ಮುಕ್ತಿ ದೊರೆಯಿತಲ್ಲ ಎಂದಾಗಿತ್ತು ನನ್ನ ಹೆಚ್ಚಿನ ಸಂತೋಷ. ಐದು ದಶಕಗಳ ಕಾಲ ಅಲ್ಲಾಹನ ದೀನಿನ ಜ್ಞಾನ ಸೇವೆಯಲ್ಲಿ ನಿರತರಾಗಿದ್ದ ಉಸ್ತಾದರ ಉದಾತ್ತ ಸೇವೆಯನ್ನು ಅಲ್ಲಾಹು ಸ್ವೀಕರಿಸಿದ್ದಾನೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಮಲಕ್ ಗಳಿಗೆ ಸಲಾಮ್ ಹೇಳುತ್ತಾ ಲಾಇಲಾಹ ಇಲ್ಲಲ್ಲಾಹ್ ಉಚ್ಛರಿಸಿ ಮರಣ ಹೊಂದಿದ್ದ ಆ ಪವಿತ್ರ ಮರಣವೇ ಅದಕ್ಕೊಂದು ಸಾಕ್ಷಿ.
ಉಸ್ತಾದರು ಯಾರನ್ನೂ ಮನ ನೋಯಿಸಿರಲಿಲ್ಲ. ಆದರೆ ವೃಥಾ ಅವರ ಮನನೋಯಿಸಿದರೆ ಪ್ರತೀಕಾರ ತೀರಿಸುವ ಯೋಚನೆ ಇಲ್ಲದಿದ್ದರೂ ತುಂಬಾ ಬೇಸರ ಪಟ್ಟುಕೊಳ್ಳುತ್ತಿದ್ದರು. ಅವರ ಆ ಬೇಸರದ ಫಲವನ್ನು ಬೇಸರ ಪಡಿಸಿದವರು ಉಣ್ಣುತ್ತಲೂ ಇದ್ದರು. ಒಮ್ಮೆ ಅವರು ರೋಗ ಶಯ್ಯೆಯಲ್ಲಿದ್ದಾಗ ಕಾಣಲು ಹೋಗಿದ್ದ ಇಬ್ರಾಹಿಮ್ ಬಾವ ಹಾಜಿಯವರ ಒಂದು ಕಟು ಮಾತಿನಿಂದ ತುಂಬಾ ನೊಂದುಕೊಂಡಿದ್ದರು. ಇಬ್ರಾಹಿಮ್ ಬಾವ ಹಾಜಿ ಕಟುನುಡಿಯಾಡಲು ಕಾರಣ ಉಸ್ತಾದರ ಬಗ್ಗೆ ಅವರಲ್ಲಿ ಒಬ್ಬ ಹೇಳಿದ್ದ ಒಂದು ಚಾಡಿಯಾಗಿತ್ತು. ” ನಿಮ್ಮಲ್ಲಿ ಯಾರೋ ಹೇಳಿ ತಪ್ಪು ಕಲ್ಪನೆ ಮೂಡಿಸಿದ್ದಾರೆ” ಎಂದಷ್ಟೇ ಉಸ್ತಾದರು ಹೇಳಿ ಸುಮ್ಮನಾಗಿದ್ದರು. ಬಾವ ಹಾಜಿ ಹೋದ ನಂತರ ಉಸ್ತಾದರು ತನ್ನ ಬೇಸರವನ್ನು ಹೇಳುತ್ತಾ ಯಾರೋ ಅವರಿಗೆ ಚಾಡಿ ಹೇಳಿದ್ದಾರೆ, ಚಾಡಿ ಹೇಳಿದವನಿಗೆ ಅದರ ಫಲ ಸಿಗಲಿದೆ ಎಂದಿದ್ದರು.
ವಾಸ್ತವ ಹಾಗೇ ಆಗಿತ್ತು. ಬಾವ ಹಾಜಿಯವರ ಆಪ್ತರೊಬ್ಬರು ಉಸ್ತಾದರ ಬಗ್ಗೆ ಚಾಡಿ ಹೇಳಿದ್ದೆಂದು ಗೊತ್ತಾಯಿತು. ಒಂದೇ ವಾರದೊಳಗೆ ಆ ವ್ಯಕ್ತಿ ಬಾವಿಗೆ ಬಿದ್ದು ಕಾಲು ಮುರಿದುಕೊಂಡ ಸುದ್ದಿಯೂ ಬಂದಿತ್ತು. ಉಸ್ತಾದರ ಪ್ರಾರ್ಥನೆಗೆ ಉತ್ತರ ದೊರೆತಿದ್ದ ಅನೇಕ ಘಟನೆಗಳಿವೆ. ತುಂಬಾ ಕಾಲ ಸೀಮಿತ ಆರ್ಥಿಕ ಅವಲಂಬನೆಯಲ್ಲಿ ಒಂದು ಸಾಮಾನ್ಯ ಮನೆಯಲ್ಲಿ ಬಡತನದಿಂದ ಕುಟುಂಬ ಸಲಹುತ್ತಿದ್ದರೂ ಐಹಿಕ ಸಂಪಾದನೆಯ ಚಿಂತೆಯೇ ಅವರಿಗೆ ಇದ್ದಿರಲಿಲ್ಲ. ಯಾರ ಕೈಯಿಂದಲೂ ಏನನ್ನೂ ಬಯಸಿದವರಲ್ಲ. ಕೊನೆಗೆ ಪದವಿ, ಸ್ಥಾನ, ಜನಾದರಣೆ ಹೆಚ್ಚುತ್ತಾ ಬರುತ್ತಿದ್ದಂತೆ ಸಹಜವಾಗಿ ಆರ್ಥಿಕ ಶಕ್ತಿ ಅವರ ಕಾಲ ಬುಡಕ್ಕೆ ಬಂದು ಬೀಳತೊಡಗಿದ್ದರೂ ಅದರಲ್ಲಿ ಆಸೆ ಇಟ್ಟಿರಲಿಲ್ಲ.
ಓರ್ವ ಉದಾತ್ತ ಧಾರ್ಮಿಕ ವಿದ್ವಾಂಸ ಹೇಗಿರಬೇಕು ಎಂಬುದಕ್ಕೆ ಉತ್ತಮ ಮಾದರಿಯಾಗಿದ್ದರು ಬೇಕಲ್ ಉಸ್ತಾದ್. ಅವರ ಆತ್ಮಕ್ಕೆ ಅಲ್ಲಾಹು ಚಿರಶಾಂತಿ ನೀಡಲಿ, ಪಾರತ್ರಿಕ ಪದೋನ್ನತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ನಾಳೆ ನಡೆಯಲಿರುವ ಅವರ ಆಂಡ್ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶ ಗೊಳಿಸಬೇಕೆಂದು ಬೇಡಿಕೊಳ್ಳುತ್ತಿದ್ದೇನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.