ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್ ): ಕರಾವಳಿ ಜಿಲ್ಲೆಯ ಅತಿ ದೊಡ್ಡ ಜಾತ್ರೆ ಎಂದೆ ಬಿಂಬಿಸಲ್ಪಟ್ಟಿರುವ ಧ್ವಜಪುರ ಖ್ಯಾತಿಯ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮನ್ಮಹಾರಥೋತ್ಸವ(ಕೊಡಿಹಬ್ಬ) ಸೋಮವಾರ ಸಂಭ್ರಮದಿಂದ ಜರುಗಿತು. ಮುಂಜಾನೆ ಧಾರ್ಮಿಕ ವಿಧಿ-ವಿಧಾನದ೦ತೆ ಶ್ರೀದೇವರ ರಥೋತ್ಸವ ನೆರವೇರಿತು.ಎಂದಿನಂತೆ ಭಕ್ತ ಜನಸಾಗರದಲ್ಲಿ ದೇವಳ ಮುಳುಗಿ ಹೋಗಿತ್ತು.ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. ಸಂಪ್ರದಾಯದಂತೆ ನವ ವಿವಾಹಿತ ದಂಪತಿ ಬಂದು ಕೊಡಿ ಪಡೆದು, ಸುತ್ತಕ್ಕಿ ಹಾಕಿ ಸೇವೆ ಸಲ್ಲಿಸಿದರು. ಕೊಡಿ ಹಬ್ಬದ ಬಗ್ಗೆ : ಸಪ್ತಕ್ಷೇತ್ರಗಳಲ್ಲೊಂದಾದ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೊತ್ಸವವು ರಾಜ್ಯದಲ್ಲಿನ ಅಂತ್ಯಂತ ದೊಡ್ಡ ರಥಗಳ ಪೈಕಿ ಕೋಟೇಶ್ವರದ ಬ್ರಹ್ಮರಥ ಅಗ್ರಗಣ್ಯ ಸ್ಥಾನ ಪಡೆದಿದೆ. ವೈಶ್ಷಿಕ ಮಾಸದಂದು ಜರುಗುವ ಬ್ರಹ್ಮರಥೋತ್ಸವ ಕೊಡಿಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ಏಳು ದಿವಸಗಳ ಕಾಲ ನಡೆಯುವ ಉತ್ಸಕ್ಕೆ 60 ಅಡಿ ಎತ್ತರದ ಧ್ವಜಸ್ತಂಬದಲ್ಲಿ ಗರ್ನಪಠಾರೋಹಣ ಮಾಡುವುದರ ಮೂಲಕ ಚಾಲನೆ ನಿಡಲಾಗುತ್ತದೆ. ಈ ಸಂದಂರ್ಭದಲ್ಲಿ ಜರುಗುವ ಧಾರ್ಮಿಕ ಕಾರ್ಯಗಳು, ಕಟ್ಟೆಪೂಜೆ, ವಿಶೇಷವಾಗಿರುತ್ತದೆ. ಕೊಡಿ ಹಬ್ಬವು ಕರಾವಳಿಯ ಅತ್ಯಂತ ದೊಡ್ಡ ಜಾತ್ರೆ ಎಂದೇ ಪರಿಗಣಿಸಲ್ಪಟ್ಟಿದೆ.ಕೊಡಿ ಹಬ್ಬದ ವಿಶೇಷತೆಗಳಲ್ಲಿ ಹಲವಾರು ನಂಬಿಕೆ, ನಡಾವಳಿಗಳು ಸೇರಿಕೊಂಡಿವೆ.ಕೊಡಿ ಹಬ್ಬದಂದು ನವದಂಪತಿಗಳು ದೇವರಿಗೆ ಕಬ್ಬಿನ ಕೊಡಿ ಅರ್ಪಿಸಿ ಮನೆಗೆ ಕೊಂಡೊಯ್ದರೆ ಶ್ರೇಯಸ್ಸು ಎಂಬ ವಾಡಿಕೆ ಇದೆ.`ಸುತ್ತಕ್ಕಿ ಸೇವೆ`:-ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಸುಮಾರು ನಾಲ್ಕು ಎಕ್ರೆ ವಿಸ್ತೀರ್ಣದ `ಕೋಟಿ ತೀರ್ಥ` ಪುಷ್ಕರಣಿಯ ಸುತ್ತ ಅಪೇಕ್ಷಿತರು ಬಿಳಿಯ ಬಟ್ಟೆಯನ್ನು ಹಾಕಿ ಕುಳಿತುಕೊಳ್ಳುತ್ತಾರೆ. ಭಕ್ತಾಧಿಗಳು ಪುಷ್ಕರಣಿಯಲ್ಲಿ ಮುಳುಗೆದ್ದು ಬಿಳಿ ಬಟ್ಟೆಹಾಸಿನ ಮೇಲೆ ಅಕ್ಕಿಯನ್ನು ಚೆಲ್ಲುತ್ತಾರೆ. ಇದನ್ನೇ `ಸುತ್ತಕ್ಕಿ ಸೇವೆ` ಎನ್ನಲಾಗುತ್ತದೆ.ಕೊಡಿ ಹಬ್ಬದ ಸಂದರ್ಭದಲ್ಲಿ ಇಡಿ ಊರೇ ಸಿಂಗಾರಗೊಂಡಿರುತ್ತದೆ. ಹಲವೆಡೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗುತ್ತವೆ.ಇದನ್ನು ವೀಕ್ಷಿಸಲು ಸಾವಿರಾರು ಜನ ಸೇರುತ್ತಾರೆ,ಕೊಡಿ ಹಬ್ಬ ಭಾವೈಕ್ಯತೆಯ ಸಂಗಮ.ಇಲ್ಲಿನ ಬ್ರಹ್ಮರಥವನ್ನು ನಿರ್ಮಿಸುವಲ್ಲಿ ಮುಸ್ಲಿಂ ಬಾಂಧವರ ಕೊಡುಗೆಯೂ ಇದೆ. ಪಾರಂಪರಿಕವಾದ ಧಾರ್ಮಿಕ ಕಾರ್ಯವನ್ನು ಸ್ಥಳೀಯ ಮುಸ್ಲಿಂ ಬಂಧುಗಳು ಅತ್ಯಂತ ಭಯ ಭಕ್ತಿಯಿಂದ ನೆರವೇರಿಸುತ್ತಾರೆ. ಮೈಸೂರು ರಾಜ್ಯದ ದೊರೆ ಟಿಪ್ಪು ಸುಲ್ತಾನ್ ಕಾಲದಿಂದ ನಡೆದು ಬಂದಿರುವ `ದೀವಿಟಿಗೆ ಸಲಾಮ್` ಎನ್ನುವ ವಿಶಿಷ್ಠ ಧಾರ್ಮಿಕ ಸೇವೆ ಇಂದಿಗೂ ಮುಂದುವರೆಯುತ್ತಿದೆ.ಬ್ರಹ್ಮ ರಥೋತ್ಸವದ ಮರುದಿನ ರಾತ್ರಿ ನಡೆಯುವ ಚೂರ್ಣೋತ್ಸವ, ಶ್ರೀ ದೇವರ ಓಕುಳಿಯಾಟ ಹಾಗೂ ಅವಭೃತ ಸ್ನಾನ ಇದರೊಂದಿಗೆ ಏಳು ದಿವಸಗಳ ಕಾಲ ನಡೆಯುವ ಧಾರ್ಮಿಕ ಉತ್ಸಕ್ಕೆ ತೆರೆ ಬೀಳುವ ಮೂಲಕ ಸಂಭ್ರಮದ ಕೊಡಿಹಬ್ಬ ಮುಕ್ತಾಯವಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.