ಬಂಟ್ವಾಳ (www.vknews.in) : ಯುವ ಸಮುದಾಯ ಸಂಪೂರ್ಣವಾಗಿ ಪ್ರಧಾನಿ ಮೋದಿಯವರ ಪರವಾಗಿದ್ದು, ಗೆಲುವು ನಿಶ್ವಿತವಾಗಿದೆ, ಗೆಲುವಿನ ಅಂತರವನ್ನು ಹೆಚ್ಚು ಮಾಡಲು ಬಂಟ್ವಾಳದ ಕಾರ್ಯಕರ್ತರು ಶಕ್ತಿ ನೀಡುತ್ತಾರೆ ಎಂಬ ನಂಬಿಕೆಯಿದ್ದು, ಮುಂದಿನ ದಿನಗಳು ಬಿಜೆಪಿಯ ದಿನಗಳಾಗುತ್ತದೆ, ಈ ಬಗ್ಗೆ ಯಾವುದೇ ಸಂಶಯಬೇಡ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಅವರು ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಮಂಡಲದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಪ್ರತಿಯೊಂದು ಮತವನ್ನು ಬಿಜೆಪಿಯ ಮತವಾಗಿ ಮಾರ್ಪಾಡು ಮಾಡುವುದರ ಜೊತೆಗೆ ಊರು ಮತ್ತು ಪರ ಊರಿನಲ್ಲಿ ಕೆಲಸ ಮಾಡುವ ಮತವನ್ನು ಪಡೆಯುವಲ್ಲಿ ಪೇಜ್ ಪ್ರಮುಖರು ಹಾಗೂ ಕಾರ್ಯಕರ್ತರು ಮಾಡಬೇಕಾಗಿದೆ, ಇಂತಹ ಒಗ್ಗಟ್ಟಿನ ಕೆಲಸ ಮಾಡಿದರೆ ಬಂಟ್ವಾಳ ಕ್ಷೇತ್ರದಿಂದ ಅತ್ಯಧಿಕ ಮತಗಳನ್ನು ಪಡೆಯುವಲ್ಲಿ ಸಹಕಾರಿಯಾಗಬಹುದು ಎಂದು ತಿಳಿಸಿದರು.
ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಅಭೂತಪೂರ್ವ ಸಾಧನೆಗೆ ನಮ್ಮ ಮತವನ್ನು ನೀಡುವ ಮೂಲಕ ಮೋದಿಯವರ ಹಸ್ತವನ್ನು ಬಲಪಡಿಸೋಣ ಎಂದು ತಿಳಿಸಿದರು. ಜನರ ಅಭಿಪ್ರಾಯ,ವಿಶ್ವಾಸವನ್ನು ಪಡೆದು ಮತ್ತೆ ಬಿಜೆಪಿ ಪಕ್ಷವನ್ನು ಸದೃಡಗೊಳಿಸಲು ಜನರ ಬಳಿಗೆ ಹೋಗಬೇಕು. ಬಿಜೆಪಿ ನೀಡಿದ ಎಲ್ಲಾ ಭರವಸೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದೇವೆ, ಹಾಗಾಗಿ ಮತದಾರರ ಉತ್ಸಾಹ ಹಾಗೂ ಕಾರ್ಯಕರ್ತರ ಹುಮ್ಮಸ್ಸು ನೋಡಿದಾಗ 400 ಕ್ಕೂ ಅಧಿಕ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತ ಹಾಗೂ ಸೈನಿಕನ ಮಾನಸಿಕತೆ ಎರಡು ಒಂದೇ ಆಗಿದ್ದು, ಅ ಕಾರಣಕ್ಕಾಗಿ ದ.ಕ.ಜಿಲ್ಲೆಯಲ್ಲಿ ಬಿಜೆಪಿ ಇತರ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ದ.ಕ.ಜಿಲ್ಲೆ ಹಿಂದುತ್ವದ ಭದ್ರಕೋಟೆಯಾಗಿತ್ತು, ಮುಂದೆಯೂ ಹಿಂದುತ್ವದ ಭದ್ರಕೋಟೆಯಾಗಿ ಉಳಿಯಲಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಪಾಸಿಟಿವ್ ವಿಚಾರಗಳ ಜೊತೆ ಕಾಂಗ್ರೆಸ್ ನ ದುರಾಡಳಿದ ಅವಸ್ಥೆಯನ್ನು ಕಾರ್ಯಕರ್ತರು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಭಿವೃದ್ಧಿಗೆ ಒಂದು ರೂಪಾಯಿಯನ್ನು ನೀಡಿಲ್ಲ ಎಂಬ ವಿಚಾರವನ್ನು ತಿಳಿಸುವ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ , ಬಂಟ್ವಾಳ ಕ್ಷೇತ್ರ ಬಿಜೆಪಿಯ ಶಕ್ತಿಯಾಗಿದೆ, ಇಲ್ಲಿಂದಲೇ ಹೆಚ್ಚಿನ ಅಂತರದ ಗೆಲುವನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಾಣ ಮಾಡುವಲ್ಲಿ ಸಹಕಾರ ನೀಡಿ ಎಂದು ವಿನಂತಿ ಮಾಡಿದರು.
ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ನಾಗರಾಜ ಶೆಟ್ಟಿ, ಚುನಾವಣಾ ಜಿಲ್ಲಾ ಸಂಚಾಲಕ ನಿತಿನ್ ಕುಮಾರ್ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಜಗದೀಶ್ ಶೇಣವ, ಕಿಯೋನಿಕ್ಸ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೂಡ ಮಾಜಿ ಅಧ್ಯಕ್ಷ. ದೇವದಾಸ್ ಶೆಟ್ಟಿ, ನಗರ ನೀರು ಮತ್ತು ನೈರ್ಮಲ್ಯ, ಒಳಚರಂಡಿ ನಿಗಮದ ಮಾಜಿ ನಿರ್ದೇಶಕಿ ಸುಲೋಚನ ಜಿ.ಭಟ್, ಬಿಜೆಪಿ ಪ್ರದಾನ ಕಾರ್ಯದರ್ಶಿ ಪ್ರೇಮಾನಂದ , ಯತೀಶ್ , ಬಂಟ್ವಾಳ ಮಂಡಲದ ಮಾಜಿ ಅಧ್ಯಕ್ಷ ದೇವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಬಂಟ್ಚಾಳ ಮಂಡಲದ ಅಧ್ಯಕ್ಷ ಚೆನ್ನಪ ಕೋಟ್ಯಾನ್ ಸ್ವಾಗತಿಸಿ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.