(www.vknews.in) ; ಹಝ್ರತ್ ಇದ್ರೀಸರನ್ನು ಅಲ್ಲಾಹನು ಬಹಳ ಉನ್ನತ ಪದವಿಗೆ ತಲುಪಿಸಿ ಸ್ವರ್ಗದ ಖಾಯಂ ಸದಸ್ಯನನ್ನಾಗಿ ಮಾಡುವ ಮೊದಲೇ ತನ್ನ ಜವಾಬ್ದಾರಿಯನ್ನು ಅವರು ತನ್ನ ಮಗನಾದ *متوشلح* ಎಂಬವರಿಗೆ ಕೊಟ್ಟಿದ್ದರು. ಬಳಿಕ ಆ ಮಗನಿಗೆ ಮದುವೆಯಾಗಿ ಒಂದು ಮಗು ಹುಟ್ಟಿತು. ಅದಕ್ಕೆ ತಂದೆ *ಲಮಕ್* ಎಂದು ನಾಮಕರಣ ಮಾಡಿದರು.
*ಈ* ಲಮಕ್ ರವರು ಬಹಳ ದೃಡಕಾಯ ಮತ್ತು ಶಕ್ತಿಶಾಲಿಯಾದ ಒಬ್ಬ ವ್ಯಕ್ತಿಯಾಗಿದ್ದರು. ದೊಡ್ಡ ದೊಡ್ಡ ಮರಗಳನ್ನು ಸಾಮಾನ್ಯ ಪುಟ್ಟ ಸಸಿಗಳನ್ನು ಕಿತ್ತು ತೆಗೆಯುವಂತೆ ಬರೀ ಕೈಯಿಂದ ಬೇರು ಸಮೇತ ಕಿತ್ತು ತೆಗೆಯುತ್ತಿದ್ದರು. ಆ ಕಾರಣದಿಂದ ಅವರು ಜನರೆಡೆಯಲ್ಲಿ ಬಹಳ ಪ್ರಸಿದ್ದಿ ಪಡೆದಿದ್ದರು. *ಒಂದು ದಿನ* ಅವರು ತನ್ನ ಮನೆಯ ಹತ್ತಿರದ ಬಯಲು ಪ್ರದೇಶಕ್ಕೆ ವಿಶ್ರಾಂತಿಗೆ ಹೋದಾಗ ಅಲ್ಲಿ ಬಹಳ ಸುಂದರಿಯಾದ ಹೆಣ್ಣೊಬ್ಬಳು ಆಡು ಮೇಯಿಸುವುದು ಇವರ ದೃಷ್ಟಿಗೆ ಬಿತ್ತು.
*ಹೆಣ್ಣಿನ* ಸೌಂದರ್ಯ ನೋಡಿ ಮರುಳಾದ ಅವರು ಅವಳಲ್ಲಿ ಕೇಳಿದರು. *“ನೀನು ಯಾರು? ಬಹಳ ಸುಂದರಿಯಾಗಿರುವಿ. ನಿನ್ನ ಹೆಸರೇನು?”* ಅದಕ್ಕೆ ಆ ಮಹಿಳೆ ಹೇಳಿದಳು. *“ನಾನು ಖಾಬೀಲನ ಸಂತತಿಯಲ್ಲಿ ಜನಿಸಿದವಳು. ನನ್ನ ಹೆಸರು ಖಯ್ನೂಷ್ ಅಂತ”* ನಂತರದ ಅವರ ಸಂಭಾಷಣೆ ಈ ಕೆಳಗಿನ ರೀತಿಯಾಲ್ಲಾಗಿತ್ತು
ಲಮಕ್: *“ನಿನಗೆ ಮದುವೆ ಆಗಿದೆಯಾ?”*
ಖಯ್ನೂಷ್: *“ಇಲ್ಲ… ಆಗಿಲ್ಲ”*
ಲಮಕ್: *“ಹಾಗಾದರೆ ನಿನಗೆ ವಯಸ್ಸೆಷ್ಟಾಯಿತು?”*
ಖಯ್ನೂಷ್: *“ನೂರ ಎಂಬತ್ತು”*
ಲಮಕ್: *“ನಿನಗೆ ಪ್ರಾಯಪೂರ್ತಿ ಆಗಿದ್ದರೆ ನಾನು ನಿನ್ನನ್ನು ಮದುವೆ ಆಗುತ್ತಿದ್ದೆ”*
ಖಯ್ನೂಷ್: *“ನೀವೇನು ನನ್ನನ್ನು ತಮಾಷೆ ಮಾಡುತ್ತೀರಾ? ನೂರೆಂಬತ್ತು ವರ್ಷವಾಗಿಯೂ ಪ್ರಾಯ ಪೂರ್ತಿ ಆಗದೆ ಇರುವುದಾ? ನಿಮಗೆ ಬೇಕೆಂದಿದ್ದರೆ ಹೇಳಿ. ಹಿರಿಯರಲ್ಲಿ ಮಾತನಾಡಿ ನಂತರ ನೋಡುವ”* (ಆ ಕಾಲದಲ್ಲಿ ನೂರು ವರ್ಷವಾಗುವಾಗ ಪ್ರಾಯ ಪೂರ್ತಿಯಾಗುತ್ತಿತ್ತು)
*ಬಳಿಕ* ಹಿರಿಯರ ಸಮ್ಮುಖದಲ್ಲಿ ಮದುವೆಯಾಯಿತು. ತಿಂಗಳುಗಳು ಕಳೆಯುವಾಗ ಆ ಮಹಿಳೆ ಗರ್ಭಿಣಿಯಾದರು. ಗಮನಾರ್ಹ ಸಂಗತಿಯೆಂದರೆ ಈ ಮಹಿಳೆಯ ವಿವಾಹವು ತನ್ನ ಕುಟುಂಬದವರಲ್ಲದ (ಖಾಬೀಲ್ ಫ್ಯಾಮಿಲಿ) ಆದಮರ ಇತರ ಮಕ್ಕಳಾಗಿ ಆದ ಕಾರಣ ಅಂದಿನ ಖಾಬೀಲ್ ಕುಟುಂಬದ ಜನರು ವಾಸಿಸುವ ಪ್ರಾಂತ್ಯದ ಆಡಳಿತ ಅಧಿಕಾರಿಯ ಕಡೆಯಿಂದ ತೊಂದರೆ ಬರಬಹುದೆಂದು ಭಾವಿಸಿ ಈಕೆ ಯಾರೂ ತಿಳಿಯದಂತೆ ತನ್ನ ಮನೆ ಸಮೀಪದ ಒಂದು ಗುಹೆಗೆ ಹೋಗಿ ಅಲ್ಲಿ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟಳು. ಬಳಿಕ ಅಲ್ಲಾಹನನ್ನು ತವಕ್ಕುಲ್ ಮಾಡಿ ಅಲ್ಲಿಂದ ಹಿಂತಿರುಗಿದಳು.
*ಪುಟ್ಟ* ಕಂದ ಸುಮಾರು ನಲವತ್ತು ದಿನಗಳು ಹಾಗೆಯೇ ಗುಹೆಯಲ್ಲಿ ಉಳಿಯಿತು. ಆ ವೇಳೆಯಲ್ಲಿ ಆ ಮಗುವಿನ ಜವಾಬ್ದಾರಿಯನ್ನು ಅಲ್ಲಾಹನ ಮಲಕುಗಳು ವಹಿಸಿದ್ದರು. ನಲವತ್ತು ದಿನಗಳ ಬಳಿಕ ಮಲಕುಗಳು ಮಗುವನ್ನು ಸ್ನಾನ ಮಾಡಿಸಿ, ಸುರ್ಮ ಹಾಕಿಸಿ, ಒಳ್ಳೆಯ ಬಟ್ಟೆ ಉಡಿಸಿ ತಾಯಿಯ ಬಳಿ ತಂದು ಕೊಟ್ಟರು. ಆ ಮಗು ಬಳಿಕ ಇಡೀ ಜಗತ್ತಿನ ದಿಶೆ ಬದಲಾಯಿಸಿದ ಒಂದು ಮಹಾ ಪ್ರವಾದಿಯಾಯಿತು. ಅದುವೇ ಹಝ್ರತ್ ನೂಹ್ (ಅ).
*ಬಳಿಕ* ಮಗು ತಾಯಿಯ ಉಸ್ತುವಾರಿ ಮತ್ತು ಪೂರ್ಣ ಜವಾಬ್ದಾರಿಯಲ್ಲಿ ಪ್ರಾಯ ಪೂರ್ತಿಯಾಗುವ ತನಕ ಬೆಳೆಯಿತು. ಬಹಳ ಬುದ್ದಿವಂತನಾಗಿದ್ದ ಈ ಬಾಲಕ ಬಹಳ ಸುಂದರನೂ ಅಗಿದ್ದರು. ಹಗಲು ಸಮಯದಲ್ಲಿ ಇತರರ ಆಡು ಮೇಯಿಸಿ ಕಸಬು ಮಾಡುತ್ತಿದ್ದರು. ಸಣ್ಣಪುಟ್ಟ ವ್ಯಾಪಾರ ಕೂಡ ಮಾಡಿ ಜೀವನ ಸಾಗಿಸುತ್ತಿದ್ದರು.
*ಈ ವೇಳೆಯಲ್ಲಿ* ದುಷ್ಟನಾದ *ದರ್ಮಶೀಲ್* ಎಂಬ ಒಬ್ಬ ಅರಸನು ಆಡಳಿತ ಮಾಡುತ್ತಿದ್ದನು. ಈತ ಜಗತ್ತಿನಲ್ಲಿ ಪ್ರಪ್ರಥಮವಾಗಿ ಶರಾಬು ತಯಾರಿಮಾಡಿ ಕುಡಿದ ವ್ಯಕ್ತಿ. ಬಳಿಕ ಅದು ಸಾರ್ವತ್ರಿಕವಾಗಿ ಜಗತ್ತಿನಾದ್ಯಂತ ಪ್ರಚಾರ ಪಡೆಯಿತು. ಅಲ್ಲದೆ ಜೂಜಾಟ (ಜಿಗಾರಿ) ಮೊದಲಾಗಿ ಜಗತ್ತಿನಲ್ಲಿ ಆರಂಭಿಸಿದವನು. ಅಂತೆಯೇ ಮೊಟ್ಟ ಮೊದಲಾಗಿ ಜಗತ್ತಿನಲ್ಲಿ ಮರದಿಂದ ಮಂಚ ಮಾಡಿ ಮಲಗಿದ ವ್ಯಕ್ತಿ ಕೂಡ ಈತ. ಈತನು ಖಾಬೀಲನ ಸಂತತಿಯಾಗಿದ್ದನು. ಉಡುಪುಗಳಿಗೆ ಬಂಗಾರದ ನೂಲಿನಿಂದ ಸಿಂಗಾರ ಮಾಡಿ ಹೊಲಿಯಲು ಪ್ರಾರಂಭಿಸಿದ ಕುಖ್ಯಾತಿಯೂ ಕೂಡ ಈತನಿಗೆ ಸಲ್ಲುತ್ತದೆ. ಇವನ ಮೊದಲ ಒಂದು ತಲೆಮಾರು ತಮ್ಮ ಮನೆಯಲ್ಲಿ ಮಾಡಿಟ್ಟಿದ್ದ ಅವರ ಮಾರ್ಗದರ್ಶಕರಾಗಿದ್ದ ಐದು ಹಿರಿಯರ ಮೂರ್ತಿಗಳಿಗೆ ಈತನು ಬಳಿಕ ಆರಾಧನೆ ಮಾಡಲು ಆರಂಭಿಸಿದನು. (ಅವುಗಳ ಬಗ್ಗೆ ಕಳೆದ ಲೇಖನದಲ್ಲಿ ತಿಳಿಸಲಾಗಿದೆ) ಅದಲ್ಲದೆ ತನ್ನ ಊಹಾಪೂಹಗಳಿಗೆ ಬಂದಂತೆ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ವಿಗ್ರಹಗಳನ್ನು ಮಾಡಿ ಒಂದು ಆರಾಧಾನಾಲಯದಲ್ಲಿ ಆರಾಧಕರಿಗೆ ಬೇಕಾಗಿ ಪ್ರದರ್ಶನಕ್ಕೆ ಇಟ್ಟನು. ಅಲ್ಲದೆ ಅವುಗಳು ಎಲ್ಲಕ್ಕೂ ಕುಳಿತುಕೊಳ್ಳಲು ಬೇಕಾಗಿ ಬಂಗಾರದ ಮತ್ತು ಬೆಳ್ಳಿಯ ಕುರ್ಚಿಗಳನ್ನು ಕೂಡ ಮಾಡಿದ್ದನು. ಸಾಲದ್ದಕ್ಕೆ ಇಪ್ಪತ್ತನಾಲ್ಕು ಗಂಟೆಯೂ ಇದರ ಶುಶ್ರೂಷೆಗೆ ಬೇಕಾಗಿ ಸೇವಕರನ್ನು ಮತ್ತು ಕಾವಲುಗಾರರನ್ನು ಕೂಡ ಇಟ್ಟನು.
*ಈ ವೇಳೆಯಲ್ಲಿ* ಹಝ್ರತ್ ನೂಹ್ (ಅ) ರವರನ್ನು ಇವರ ಈ ಕೆಟ್ಟ ಕೃತ್ಯದಿಂದ ಇವರನ್ನು ಬಚಾವು ಮಾಡಲು ಮತ್ತು ಜನರಿಗೆ ಸನ್ಮಾರ್ಗ ತೋರಿಸಿಕೊಡಲು ಅಲ್ಲಾಹನು ಪ್ರವಾದಿಯನ್ನಾಗಿ ನೇಮಕ ಮಾಡಿದನು. ಪ್ರವಾದಿ *ವಹ್ಯ್* ಲಭಿಸಿದ ಹಝ್ರತ್ ನೂಹ್ (ಅ) ರವರಲ್ಲಿ ಅಲ್ಲಾಹನು ಹೇಳಿದನು. *“ನೀವು ಈಗಲೇ ದರ್ಮಶೀಲ್ ಅರಸನನ್ನು ಮತ್ತು ಆತನ ಸಮುದಾಯವನ್ನು ಸತ್ಯ ದಾರಿಯತ್ತ ಕರೆಯಬೇಕು.”* ಪ್ರವಾದಿಯವರು ಕೂಡಲೇ ಅವರ ಬಳಿ ಹೋದರು. ಅದೊಂದು ಅವರ ಉತ್ಸವದ (ಹಬ್ಬ) ದಿನವಾಗಿತ್ತು. ಜನರೆಲ್ಲರೂ ಒಂದು ಮೈದಾನದಲ್ಲಿ ಒಗ್ಗೂಡಿ ಅವರವರ ಆರಾಧನಾ ವಸ್ತುಗಳನ್ನು ಕುರ್ಚಿ, ಮಂಚಗಳಲ್ಲಿ ಕುಳ್ಳಿರಿಸಿ ಅವುಗಳಿಗೆ ಸಾಷ್ಟಾಂಗ ಮಾಡುತ್ತಿದ್ದರು. ಇನ್ನು ಕೆಲವರು ಅಲ್ಲಿ ಶರಾಬು ಕುಡಿದು ಪಾನಮತ್ತರಾಗಿದ್ದರೆ, ಕೆಲವರು ತಾಳ ಮದ್ದಳೆ ಬಾರಿಸಿ ಕುಣಿಯುತ್ತಿದ್ದರು. ಕೆಲವರು ಅವರವರ ಪತ್ನಿಗಳೊಂದಿಗೆ ಯಾವುದೇ ಪರದೆ ಇಲ್ಲದೆ ಲೈಂಗಿಕ ಸಂಪರ್ಕದಲ್ಲಿ ಏರ್ಪಟ್ಟಿದ್ದರು. ಒಟ್ಟು ಎಪ್ಪತ್ತಕ್ಕಿಂತಲೂ ಹೆಚ್ಚು ಪಂಗಡಗಳಾಗಿ ಲಕ್ಷೋಪಲಕ್ಷ ಜನರು ಜಮಾಯಿಸಿದ್ದ ಮೇಳದ ಮಧ್ಯೆ ಹಝ್ರತ್ ನೂಹ್ರವರು ಯಾವುದೇ ಭಯವಿಲ್ಲದೆ ನುಗ್ಗಿ ಅವರ ಸಭಾಮಂಟಪಕ್ಕೆ ಹತ್ತಿ ಹೇಳಿದರು. *“ಓ ಜನತೆಯೇ, ನಾನೀಗ ಅಲ್ಲಾಹನ ಪ್ರವಾದಿಯಾಗಿ ಬಂದಿದ್ದೇನೆ. ಅಲ್ಲಾಹನು ಹೇಳಿದಂತೆ ಮುಂದಕ್ಕೆ ನೀವು ಈ ವಿಗ್ರಹಗಳಿಗೆ ಆರಾಧನೆ ಮಾಡಬಾರದು. ಸತ್ಯದಾರಿಗೆ ಬರಬೇಕು”* ಎಂದು.
*ಈ* ಘೋಷಣೆ ಮಾಡಿದ ಕೂಡಲೇ ವಿಗ್ರಹಗಳೆಲ್ಲವೂ ತಲೆಕೆಳಗಾಗಿ ಬಿತ್ತು. ಅರಸನು ಮೂರ್ಛೆತಪ್ಪಿ ಹೋದನು. ಸಭೆಯು ಮೌನವಾಯಿತು. ಸ್ವಲ್ಪ ಕಳೆದಾಗ ಅರಸನಿಗೆ ಎಚ್ಚರವಾದಾಗ ಕೇಳಿದ. *“ಓ ಖಾಬೀಲನ ಸಂತತಿಗಳೇ, ಈ ತನಕ ಕೇಳದ ಈಗ ಕೇಳಿದ ಆ ಶಬ್ದ ಯಾರದ್ದು?”* ಆಗ ಅವರು ಹೇಳಿದರು. *“ಮಹಾರಾಜರೇ, ಅದು ಈತನಕ ನಮ್ಮೊಂದಿಗೆ ನಮ್ಮ ಯಾವುದೇ ಉತ್ಸವ ಸಮಾರಂಭಗಳಲ್ಲಿ ಭಾಗವಹಿಸದ ನಮ್ಮೊಂದಿಗೆ ಬೆರೆತು ಬಾಳದ ಹುಚ್ಚ ಹುಡುಗ ನೂಹ್. ಈಗ ಹುಚ್ಚು ಸ್ವಲ್ಪ ಜಾಸ್ತಿಯಾಗಿದೆ ಅಷ್ಟೆ.”*
*ಇದನ್ನು* ಕೇಳಿದಾಕ್ಷಣ ಅರಸನ ಕೋಪ ನೆತ್ತಿಗೇರಿತು. ಕೂಡಲೇ ಹಝ್ರತ್ ನೂಹ್ (ಅ) ರವರನ್ನು ದಸ್ತಗಿರಿ ಮಾಡಲು ಆಜ್ಞೆ ಮಾಡಿದನು. ನಿಮಿಷದಲ್ಲೇ ಅವರ ಕೈಕಾಲುಗಳಿಗೆ ಬೇಡಿ ತೊಟ್ಟು ಅರಸನ ಎದುರಲ್ಲಿ ಹಾಜರುಪಡಿಸಲಾಯಿತು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.