(www.vknews.in) ; ಅಲ್ಲಾಹನ* ಸಂದೇಶ ಪ್ರಕಾರ ಹಝ್ರತ್ ನೂಹ್ (ಅ) ರವರು ಹಡಗು ತಯಾರಿಸಲು ಸಿದ್ಧರಾದರು. ಸಾವಿರ ಅಡಿ ಉದ್ದ, ಐನೂರು ಅಡಿ ಅಗಲ ಮತ್ತು ಮುನ್ನೂರು ಅಡಿ ಎತ್ತರವಿರುವ ಹಾಗೂ ಏಳು ಅಂತಸ್ತುಗಳಿರುವ ಈ ಬೃಹತ್ ಹಡಗನ್ನು ಆ ಕೆಟ್ಟ ಸಮುದಾಯದ ಮನೆ ವಠಾರದಲ್ಲೇ ಬಹಿರಂಗವಾಗಿ ಮಾಡಲು ಅಲ್ಲಾಹನು ಆಜ್ಞಾಪಿಸಿದನು. ಸಹಾಯಕರಾಗಿ ಅವರ ಮಕ್ಕಳು ಮತ್ತು ವಿಶ್ವಾಸಿಗಳಾದ ಕೆಲವು ಮುಅ್ಮಿನುಗಳು ಅವರೊಂದಿಗೆ ಕೈಜೋಡಿಸಿದರು. ಈ ವೇಳೆಯಲ್ಲಿ ಶತ್ರುಗಳು ಅವರನ್ನು *”ನೀನೀಗ ಪ್ರವಾದಿ ಕೆಲಸ ಬಿಟ್ಟು ಆಚಾರಿ ಕೆಲಸ ಶುರುಮಾಡಿದೆಯಾ? ಊರಿಡೀ ಮಳೆಯಿಲ್ಲದೆ ಬರಗಾಲದಲ್ಲಿ ಮುಳುಗಿದೆ. ನೀನು ಮುಳುಗಿ ಸಾಯಲಿಕ್ಕೆ ಹಡಗು ಮಾಡುತ್ತಿಯಾ?”* ಎಂದು ಹೇಳಿ ಗೇಲಿ ಮಾಡುತ್ತಿದ್ದರು. ಅಲ್ಲದೆ ರಾತ್ರಿ ವೇಳೆ ಅವರು ನಿರ್ಮಾಣದಲ್ಲಿರುವ ಹಡಗಿಗೆ ಬೆಂಕಿ ಹಚ್ಚಲು ಶ್ರಮಿಸುತ್ತಿದ್ದರು. ಆದರೆ ಬೆಂಕಿ ಹಿಡಿಯುತ್ತಿರಲಿಲ್ಲ. ಆಗ ಅವರು ಹೇಳುತ್ತಿದ್ದರು. *”*ಓ ನೂಹ್.. ಇದರಲ್ಲೂ ನಿನ್ನ ಇಂದ್ರಜಾಲ ಇದೆ”* ಎಂದು.
*ಅಲ್ಲಾಹನ* ಮಲಕುಗಳ ಉಸ್ತುವಾರಿಯಲ್ಲಿ ಹಡಗಿನ ನಿರ್ಮಾಣ ಸಂಪೂರ್ಣವಾಗಿ ಪೂರ್ತಿಯಾಯಿತು. ಬಳಿಕ ಅದಕ್ಕೆ ಎಣ್ಣೆ, ಟಾರು ಕೊಟ್ಟು ಗಟ್ಟಿ ಮಾಡಲಾಯಿತು. ಒಟ್ಟಿನಲ್ಲಿ ಕೆಲಸ ಸಂಪೂರ್ಣವಾಗಿ ಮುಗಿದಾಗ ಆ ಹಡಗು ಅಲ್ಲಾಹನ ಇರಾದೆಯಂತೆ *”ಲಾ ಇಲಾಹ ಇಲ್ಲಲ್ಲಾಹ್. ನಾನು ಅಲ್ಲಾಹನ ಹಡಗು. ನನ್ನನ್ನು ಹತ್ತಿದವರು ಬಚಾವಾಗುವರು. ಹತ್ತದವರು ನೀರಿನಲ್ಲಿ ಮುಳುಗಿ ಸಾಯುವರು. ಈಮಾನ್ ಇರುವವನಿಗೆ ಮಾತ್ರ ನನ್ನನ್ನು ಹತ್ತಲು ಸಾಧ್ಯವಿದೆ”* ಎಂದು ಘೋಷಣೆ ಕೂಗಿತು.
*ಹಡಗಿನ* ಘೋಷಣೆಯ ಬಳಿಕ ಹಝ್ರತ್ ನೂಹ್ರವರು ಅವರಲ್ಲಿ ಹೇಳಿದರು. *”ನಿಮಗಿದು ಕೊನೆಯ ಅವಕಾಶ. ಈಗಾದರೂ ಸರಿದಾರಿಗೆ ಬನ್ನಿ”* ಆಗ ಅವರು ಹೇಳಿದರು. *”ನಿನ್ನ ಇದಕ್ಕಿಂತ ದೊಡ್ಡ ಇಂದ್ರಜಾಲ ನಾವು ಮೊದಲು ಕಂಡಿದ್ದೇವೆ. ಮತ್ತೆ ಇದನ್ನು ತೋರಿಸುವುದಾ?”* ಎಂದು.
*ಈ* ಸಂದರ್ಭದಲ್ಲಿ ಅಲ್ಲಾಹನು ಹಝ್ರತ್ ನೂಹ್ರವರಲ್ಲಿ ಪವಿತ್ರ ಮಕ್ಕಾಕ್ಕೆ ಹೋಗಿ ಹಜ್ಜ್ ಮಾಡಿ ಬರಲು ನಿರ್ದೇಶಿಸಿದನು. ಅವನ ನಿರ್ದೇಶದಂತೆ ಅವರು ಹಜ್ಜಿಗೆ ತೆರಳಿದರು. ಇತ್ತ ನಿರ್ಮಾಣವಾದ ಹಡಗನ್ನು ಆ ವೇಳೆಯಲ್ಲಿ ಶತ್ರುಗಳು ಹಾನಿ ಮಾಡಲು ನೋಡಿದರು. ಅಲ್ಲಾಹನು ಅವನ ಮಲಕುಗಳಲ್ಲಿ ಅದನ್ನು ಎತ್ತಿಕೊಂಡು ಹೋಗಿ ಅಂತರೀಕ್ಷದಲ್ಲಿ (ಗಾಳಿಯಲ್ಲಿ) ಇಡಲು ಹೇಳಿದನು. ಹಜ್ಜ್ನ ವೇಳೆ ಹಝ್ರತ್ ನೂಹ್ರವರು ಕಅಬಾದ ಬಲ ಭಾಗದಲ್ಲಿ ಹಝ್ರತ್ ಆದಮರ ಪೆಟ್ಟಿಗೆಯನ್ನು ಕಂಡರು. ಆಗ ಅದರ ಬಗ್ಗೆ ಅಲ್ಲಾಹನಲ್ಲಿ ಕೇಳಿದಾಗ ಅಲ್ಲಾಹನು ಅವನ ಮಲಕುಗಳಲ್ಲಿ ಅದನ್ನು ಪ್ರವಾದಿ ನೂಹ್ ರವರ ಮನೆಗೆ ಮುಟ್ಟಿಸಲು ಆದೇಶ ಮಾಡಿದನು. ಅವರು ಅದನ್ನು ಅಲ್ಲಿಗೆ ಮುಟ್ಟಿಸಿದರು. ಹಜ್ಜ್ ಮುಗಿದು ಬಂದಾಗ ಅದು ಮೇಲಿನಿಂದ ಕೆಳಗೆ ಬಂದು ನೆಲದಲ್ಲಿ ನಿಂತಿತು.
*ಬಳಿಕ* ಅಲ್ಲಾಹನ ನಿರ್ದೇಶದಂತೆ ಹಝ್ರತ್ ನೂಹ್ರವರು ತನ್ನ ಮನೆಯ ಪಕ್ಕದ ಎತ್ತರದ ಜಾಗದಲ್ಲಿ ನಿಂತು *”ರಕ್ಷಣೆ ಬೇಕಾದರೆ ಹಡಗು ಹತ್ತಿರಿ”* ಎಂದು ಏರುದನಿಯಲ್ಲಿ ಘೋಷಣೆ ಕೂಗಿದರು. ಅವರ ಆ ಘೋಷಣೆಯ ಶಬ್ದ ಇಡೀ ಜಗತ್ತಿಗೆ ಕೇಳಿಸಿತು. ತಡವಾಗದೆ ನಾನಾ ಭಾಗಗಳಿಂದ ಜನರ ಮತ್ತು ಇತರ ಜೀವಿಗಳ ಗುಂಪು ಹಡಗಿನತ್ತ ಹರಿದು ಬಂತು. ಗಮನಾರ್ಹ ಸಂಗತಿಯೆಂದರೆ, ಹಝ್ರತ್ ನೂಹ್ರವರು ಇಷ್ಟು ದೀರ್ಘ ಕಾಲ ಅಂದರೆ ಸುಮಾರು ಒಂದು ಸಾವಿರ ವರ್ಷಗಳ ತನಕ ದಅ್ವತ್ ಮಾಡಿ ಹಡಗು ಹತ್ತುವಾಗ ಅವರೊಂದಿಗೆ ಇದ್ದ ಮುಅ್ಮಿನುಗಳ ಸಂಖ್ಯೆ ಬರೀ ಎಂಬತ್ತಾಗಿತ್ತು. ನೂರು ಕೂಡ ತಲುಪಿರಲಿಲ್ಲ. ಅವರೆಲ್ಲರೂ ಹಡಗು ಹತ್ತಿದರು. ಬಳಿಕ ಎಲ್ಲಾ ಜೀವರಾಶಿಗಳಿಂದ ಒಂದು ಗಂಡು ಮತ್ತು ಒಂದು ಹೆಣ್ಣನ್ನು ಹತ್ತಿಸಲಾಯಿತು. (ಉದಾ: ಒಂದು ಗಂಡು ಆನೆ ಮತ್ತು ಒಂದು ಹೆಣ್ಣಾನೆ, ಒಂದು ಗಂಡು ಇಲಿ ಹಾಗೂ ಒಂದು ಹೆಣ್ಣು ಇಲಿ) ಅದು ಕೂಡ ಹೆಸರುಗಳನ್ನು ಡ್ರಾ ಮಾಡಿ ತೆಗೆದ ನಂತರವಾಗಿತ್ತು. ಅಂದರೆ ನೂರು ಆನೆಗಳು ಅಲ್ಲಿ ಹಾಜರಾಗಿದ್ದಲ್ಲಿ ಅದರಲ್ಲಿ ಡ್ರಾದಲ್ಲಿ ಹೆಸರು ಬಂದ ಒಂದು ಗಂಡಿಗೆ ಮತ್ತು ಒಂದು ಹೆಣ್ಣಿಗೆ ಮಾತ್ರ ಅವಕಾಶ.
*ನಂತರ* ಸುಮಾರು ಆರು ತಿಂಗಳುಗಳಿಗೆ ಬೇಕಾದ ಆಹಾರ ವಸ್ತುಗಳನ್ನು ಕೂಡ ಜಮೆಮಾಡಿ ಹಡಗಿನಲ್ಲಿ ಶೇಖರಿಸಿಡಲಾಯಿತು. ಅದರೊಂದಿಗೆ ಹಝ್ರತ್ ಆದಮರ ಭಾರತದಲ್ಲಿ ದಫನ ಮಾಡಿದ ಜನಾಝವನ್ನು ಅಲ್ಲಿಂದ ಅಗೆದು ತೆಗೆದು ಅದರಲ್ಲಿ ಇಡಲಾಗಿತ್ತು. ಅಲ್ಲದೆ ಮಲಕುಗಳು ಮನೆಗೆ ತಲುಪಿಸಿದ ಅವರ ಪೆಟ್ಟಿಗೆಯನ್ನು ಕೂಡ ಅದರಲ್ಲಿ ಇಡಲಾಯಿತು.
*ಬೇರೊಂದು* ರಸಕರವಾದ ಸಂಗತಿಯೆಂದರೆ, ಕತ್ತೆಯು ಹಡಗು ಹತ್ತುವಾಗ ಬಹಳ ವಿಳಂಬವಾಗಿತ್ತು. ಯಾಕೆಂದರೆ ಅದು ಹತ್ತಲು ನೋಡುವಾಗಲೆಲ್ಲ ಹಿಂದಿನಿಂದ ಇಬ್ಲೀಸನು ಅದರ ಬಾಲದಿಂದ ಎಳೆಯುತ್ತಿದ್ದನು. ಹತ್ತಲು ಕಷ್ಟ ಪಡುತ್ತಿರುವುದನ್ನು ಕಂಡಾಗ ಹಝ್ರತ್ ನೂಹ್ ರವರು ಹೇಳಿದರು. *”ಓ ಶೈತಾನ್ ಬೇಗ ಹತ್ತು ಒಮ್ಮೆ”* ಎಂದು. ಸ್ವಲ್ಪ ಕಳೆದು ನೋಡುವಾಗ ಹಡಗಿನಲ್ಲಿ ಇಬ್ಲೀಸನು ಒಂದು ಕಡೆ ಕುಳಿತಿದ್ದನು. ಹಝ್ರತ್ ನೂಹ್ರವರು ಅವನಲ್ಲಿ ಕೇಳಿದರು. *”ನಿನ್ನನ್ನು ಯಾರು ಹತ್ತಿಸಿದ್ದು?”* ಎಂದು. ಆಗ ಆತ ಹೇಳಿದ. *”ನೀವಲ್ವಾ ಹೇಳಿದ್ದು. ಓ ಶೈತಾನ್ ಬೇಗ ಹತ್ತು”* ಎಂದು. ನಿಜವಾಗಿ ಅವರು ಸಿಟ್ಟಿನಲ್ಲಿ ಕತ್ತೆಯಲ್ಲಿ ಹೇಳಿದ್ದಾಗಿತ್ತು. ಅವನಲ್ಲಿ ಅಲ್ಲ. ಬಳಿಕ ಆತನಲ್ಲಿ ಹಝ್ರತ್ ನೂಹ್ರವರು ಹಡಗು ದಡ ಸೇರುವ ತನಕ ಯಾರನ್ನೂ ದಾರಿ ತಪ್ಪಿಸಬಾರದೆಂದು ತಾಕೀ ಮಾಡಿದರು. ಅವನು ಅದಕ್ಕೆ ಒಪ್ಪಿದನು.
*ಬಳಿಕ* ಅಲ್ಲಾಹನ ಘೋರವಾದ ಮಳೆ ಬರಲು ತೊಡಗಿತು. ಎಡೆಬಿಡದ ಮಳೆ. ಇಡೀ ಜಗತ್ತೇ ನೀರಿನಲ್ಲಿ ಮುಳುಗಿತು. ನೀರು ಮೇಲೆ ಹೋದಂತೆಯೇ ಹಡಗೂ ಮೇಲೆ ಹೋಯಿತು. ಅದಕ್ಕೆ ಮೊದಲೇ ಅಲ್ಲಾಹನು ಅವನ ಕಅಬಾ ಮಂದಿರವನ್ನು ಆಕಾಶಕ್ಕೆ ಎತ್ತಿದನು. ಆ ತನಕ ಮಂಜುಗಡ್ಡೆಯಂತೆ ಬಿಳುಪಾಗಿದ್ದ *ಹಜರುಲ್ ಅಸ್ವದ್* ತೂಫಾನ್ ಬರುವ ಭಯದಿಂದ ಅದರ ಬಣ್ಣ ಕೂಡ ಕಪ್ಪಾಯಿ ಹೋಯಿತು.
*ಹಡಗು* ಸಂಚರಿಸ ತೊಡಗಿತು. ಪೂರ್ವದಿಂದ ಪಶ್ಚಿಮಕ್ಕೂ, ದಕ್ಷಿಣದಿಂದ ಉತ್ತರಕ್ಕೂ. ಸುಮಾರು ಆರು ತಿಂಗಳುಗಳ ಸಂಚಾರ. ಈ ವೇಳೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿತ್ತು. ಸಂಚರಿಸುತ್ತಾ ಹಡಗು ಕಅಬಾದ ಮೇಲ್ಭಾಗಕ್ಕೆ ಬಂತು. ಆಗ ಅದು ಏಳು ತ್ವವಾಫ್ ಮಾಡಿತು. *ತಲ್ಬಿಯತ್* ಹೇಳಿತು. ಅಲ್ಲದೆ ಒಂದೊಂದು ಮಹತ್ವದ ಊರು ಅಥವಾ ಜಾಗ ತಲುಪುವಾಗ ಆ ಜಾಗದ ಹೆಸರನ್ನು ಹಡಗು ತಾನೆ ಏರುದನಿಯಲ್ಲಿ ಹೇಳಿ ಘೋಷಣೆ ಮಾಡುತ್ತಿತ್ತು.
*ಹಝ್ರತ್* ನೂಹ್ರವರು ಹಡಗು ಸಂಚಾರ ಶುರುಮಾಡಿದ್ದು ಒಂದು ರಜಬ್ ತಿಂಗಳ ಹತ್ತನೆಯ ದಿನವಾದರೆ ಅದು ದಡ ಸೇರಿದ್ದು ಆರು ತಿಂಗಳು ಕಳೆದು ಅಂದರೆ ಮುಹರ್ರಮ್ ತಿಂಗಳ ಹತ್ತರಂದಾಗಿತ್ತು. ಅಂದಿಗೆ ಮನುಷ್ಯ ಮಹಾಪಿತ ಹಝ್ರತ್ ಆದಮರು ಭೂಲೋಕ ತಲುಪಿ ಎರಡು ಸಾವಿರದ ಐನೂರು ವರ್ಷಗಳಾಗಿತ್ತು. ಇರಾಕ್ ಮತ್ತು ತುರ್ಕಿ ಗಡಿಯಲ್ಲಿರುವ *ಜೂದಿ* ಪರ್ವತದ ತುದಿಯಲ್ಲಾಗಿತ್ತು ಹಡಗು ದಡ ಸೇರಿದ್ದು. (Landing)
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಬಹಳ ರೋಮಾಂಚಕಾರಿ ವಿಷಯಗಳೊಂದಿಗೆ ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.