(www.vknews.in) : ಹಝ್ರತ್ ನೂಹ್ರವರ ಮೊದಲ ಮಗ ಸಾಮ್ ರವರಿಗೆ ಅರ್ಫಖಶ್ದ್, ಲಾವಝ್, ಆಶ್ವರ್, ಅಯ್ಲಮ್ ಮತ್ತು ಇರಮ್ ಎಂಬ ಐದು ಗಂಡು ಮಕ್ಕಳಿದ್ದರು. ಇದರಲ್ಲಿ ಅರ್ಫಖಷ್ದ್ ಮತ್ತು ಇರಮ್ ಎಂಬ ಇಬ್ಬರ ಬೀಜದಲ್ಲಿ ಪವಿತ್ರ ಕುರ್ಆನಿನಲ್ಲಿ ಉಲ್ಲೇಖಿಸಲ್ಪಟ್ಟ ಹೂದ್, ಸ್ವಾಲಿಹ್, ಲೂತ್, ಇಬ್ರಾಹೀಮ್, ಇಸ್ಮಾಯೀಲ್, ಇಸ್ಹಾಖ್, ಶುಅಯ್ಬ್, ಯಅ್ಖೂಬ್, ಯೂಸುಫ್, ಅಯ್ಯೂಬ್, ಝುಲ್ಕಿಫ್ಲ್, ಯೂನುಸ್, ಮೂಸಾ, ಹಾರೂನ್, ಯೂಶಅ್,ದಾವೂದ್, ಸುಲೈಮಾನ್, ಇಲ್ಯಾಸ್, ಝಕರಿಯಾ, ಯಹ್ಯಾ, ಈಸಾ (ಅ) ಮತ್ತು ಪ್ರವಾದಿ ಮುಹಮ್ಮದ್ ﷺ ಅಂತೆಯೇ ಇತರ ಲಕ್ಷೋಪಲಕ್ಷ ಪ್ರವಾದಿಗಳು ಜನಿಸಿದರು. ಅದು ಹಝ್ರತ್ ನೂಹ್ರವರ ಅವುರತ್ ತೆರೆಯಲ್ಪಟ್ಟಾಗ ಮುಚ್ಚಿದ ಕಾರಣಕ್ಕೆ ತಂದೆಯವರು ಮಾಡಿದ ದುಆದ ಫಲವಾಗಿದೆ. ಇಂದಿನ ಅರಬಿಗಳು ಕೂಡ ಇವರ ಸಂತತಿಗಳಾಗಿದ್ದಾರೆ. ಮಗ ಯಾಫಿಸ್ನಿಗೂ ಐದು ಮಕ್ಕಳಿದ್ದವು. ಅವರ ಸಂತಿಗಳಾಗಿ ಕ್ರಮೇಣ ರಶ್ಯನರು, ಯಹೂದಿಗಳು, ಅರ್ಮೇನಿಗಳು, ರೋಮರು, ತುರ್ಕಿಗಳು, ಮೊರಿತಾನಿಯರು, ಯಅ್ಜೂಜ್ ಮಅ್ಜೂಜ್ ಸಂತತಿಗಳು ಹುಟ್ಟಿದವು.
ಕಾಲ ಚಕ್ರ ಉರುಳಿದಂತೆ ಸಾಮ್ ರವರ ಮಗ ಇರಮಿನ ಮಗನ (ಅವ್ಸ್) ಮಗನ (ಆದ್) ಮಗ ಖಲಜಾನ್ ಎಂಬಾತ ಅಂದಿನ ಅರಸನಾಗಿ ಅಧಿಕಾರಕ್ಕೆ ಬಂದನು. ಈ ವೇಳೆಯಲ್ಲಿ ಹಝ್ರತ್ ನೂಹ್ರವರ ತೂಫಾನಿನ ಬಳಿಕ ಮತ್ತೊಮ್ಮೆ ಜಗತ್ತಿನಲ್ಲಿ ಶಿರ್ಕ್ ಆರಂಭವಾಗಿತ್ತು. ಸ್ವದಾ, ಹಬಾ, ಸ್ವಮೂ ಎಂಬ ಮೂರು ಮೂರ್ತಿಗಳು ಆತನ ಆರಾಧನಾ ದೇವರುಗಳಾಗಿತ್ತು. ಅವುಗಳಿಗೆ ಆತ ಬೆಲೆ ಬಾಳುವ ಆಭರಣ ತೊಡಿಸಿ ಸುಗಂಧ ಹಾಕಿ ಯಾವಾಗಲೂ ಶುಶ್ರೂಷೆ ಮಾಡುತ್ತಿದ್ದನು. ಅಲ್ಲದೆ ಅದರ ಸೇವಕರಾಗಿ ನೂರಾರು ಸೇವಕರನ್ನೂ ಇಟ್ಟನು. ಮಾತ್ರವಲ್ಲ, ಅವನೊಂದಿಗೆ ಅವನ ಪ್ರಜೆಗಳೂ ಕೂಡಿದ್ದರು. ಒಟ್ಟಿನಲ್ಲಿ ಅವನಿಗೂ ಅವನ ಪ್ರಜೆಗಳಿಗೂ ಅದೊಂದು ಜೋಕೇ ಆಗಿ ಬಿಟ್ಟಿತ್ತು. ಹಝ್ರತ್ ಆದಮ್, ಹಝ್ರತ್ ಶೀಶ್, ಹಝ್ರತ್ ನೂಹ್ (ಅ) ರವರ ಕಾಲ ಮುಗಿದು ಅಂಬಿಯಾಗಳಿಲ್ಲದ ಫತ್ರತಿನ ಕಾಲವಾಗಿತ್ತು ಇದು.
ಈ ವೇಳೆ ಮೇಲೆ ಹೇಳಿದ ಆದ್ ರವರ ಮಗನ ಮಗ ಖಲೂದ್ ಎಂಬವರು ಜನರೆಡೆಯಲ್ಲಿ ಬಹಳ ಮನ್ನಣೆ ಪಡೆದ ಒಬ್ಬ ವ್ಯಕ್ತಿ ಆಗಿದ್ದರು. ಬಹಳ ಪ್ರಾಮಾಣಿಕ ವ್ಯಕ್ತಿಯಾದ ಇವರನ್ನು ಊರಿನವರೆಲ್ಲರೂ ಬಹಳ ಮೆಚ್ಚುತ್ತಿದ್ದರು. ಖಲೂದ್ ಎಂಬವರಿಗೆ ಮದುವೆಯಾಗಿ ಒಂದು ಗಂಡು ಮಗು ಹುಟ್ಟಿತು. ಅದೊಂದು ಶುಕ್ರವಾರ ದಿನವಾಗಿತ್ತು. ಅದಕ್ಕೆ ತಂದೆ ಹೂದ್ ಎಂದು ನಾಮಕರಣ ಮಾಡಿದರು. ಹುಟ್ಟಿದಾಗ ಮಗುವಿನ ಮುಖವಾದರೆ ಸೂರ್ಯನಂತೆ ಪ್ರಕಾಶಿಸುತ್ತಿತ್ತು. ಊರಿನಲ್ಲಿ ಎಲ್ಲೂ ಇಷ್ಟೊಂದು ಸುಂದರನಾದ ಒಂದು ಮಗು ಬೇರೆ ಇರಲಿಲ್ಲ. ಈ ಸಂದರ್ಭದಲ್ಲಿ ಊರವರು ಮಗುವನ್ನು ನೋಡಿ, “ಇದೊಂದು ಅದ್ಭುತ ಮಗು. ಈತ ಬಹುಶಃ ನಮ್ಮ ಆರಾಧನಾ ದೇವರುಗಳಿಗೆ ತಿರುಗೇಟು ಆಗುತ್ತಾನಾ ಗೊತ್ತಿಲ್ಲ. ಏನಿದ್ದರೂ ಈತನಿಂದ ಒಂದು ದೊಡ್ಡ ಕ್ರಾಂತಿ ಈ ಊರಲ್ಲಿ ಆಗುವುದರಲ್ಲಿ ಸಂಶಯವಿಲ್ಲ.” ಎಂದು ಪರಸ್ಪರ ಹೇಳತೊಡಗಿದರು.
ಮಗು ಕೆಲವೊಮ್ಮೆ ನಮಾಝ್ ಮಾಡುವುದನ್ನು ಕೂಡ ತಾಯಿ ಕಾಣುತ್ತಿದ್ದರು. ಇದರ ಬಗ್ಗೆ ಮಗುವಿನಲ್ಲಿ ತಾಯಿ “ಕಂದಾ, ನೀನು ಯಾರಿಗೆ ಆರಾಧನೆ ಮಾಡುವುದು?” ಎಂದು ಕೇಳಿದಾಗ ಆಗ ಬಾಲಕ ಹೂದ್ ರವರು ಹೇಳಿದರು. “ನಾನು ಜಗದೊಡೆಯನಾದ ಅಲ್ಲಾಹನಿಗೆ ಆರಾಧನೆ ಮಾಡುತ್ತೇನೆ.” ಆಗ ತಾಯಿ ಕೇಳಿದರು. “ಹಾಗಾದರೆ ನಮ್ಮ ವಿಗ್ರಹಗಳು?” ಆಗ ಬಾಲಕ ಹೂದ್ರವರು ಹೇಳಿದರು. “ಅದೆಲ್ಲಾ ಬರೇ ಜಡ ವಸ್ತುಗಳು. ಅದರಿಂದ ಏನೂ ಮಾಡಲು ಸಾಧ್ಯವಿಲ್ಲ. ಅದೆಲ್ಲಾ ಶೈತಾನನ ಪ್ರೇರಣೆಗಳಾಗಿವೆ” ಆಗ ತಾಯಿ ಹೇಳಿದರು. “ಹೌದು ನನಗೆ ಮೊದಲೇ ಗೊತ್ತಾಗಿದೆ. ನಿನ್ನನ್ನು ಗರ್ಭಿಣಿ ಆದ ಸಂದರ್ಭದಲ್ಲೂ ನಾನು ಹಲವಾರು ಅದ್ಭುತ ಪವಾಡಗಳನ್ನು ನಿನ್ನಿಂದ ಕಂಡಿದ್ದೇನೆ.” ಎಂದು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಗಮನಿಸಿ:
ಪ್ರವಾದಿ ಆದಮ್ (ಅ) ರ ಕಾಲದಿಂದ ಇಂದಿಗೆ ಎಷ್ಟೋ ಲಕ್ಷ ವರ್ಷಗಳಾಗಿದೆ ಎಂಬ ತಪ್ಪುಧಾರಣೆ ಕೆಲವರಿಗೆ ಇದೆ. ಅದು ಸರಿಯಲ್ಲ. ಬರೀ ಹತ್ತು ಸಾವಿರ ವರ್ಷಗಳು ಕೂಡ ಆಗಿಲ್ಲ ಎಂಬುದು ನಿಜ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.