(www.vknews.in) : ಹೌದು… ನೇಹಾ ಹಿರೇಮಠ್ ಸಾವಿಗೆ ನ್ಯಾಯ ಸಿಗಲೇಬೇಕು. ಯಾಕೆಂದರೆ ಶಿಕ್ಷಣ ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಸಂಸ್ಥೆಯ ಆವರಣದಲ್ಲೇ ನಡೆದಿರುವ ಈ ಅಮಾನುಷ ಕೃತ್ಯ ಖಂಡನೀಯ. ಇಲ್ಲಿ ನೇಹಾ ಒಬ್ಬ ಕಾಂಗ್ರೆಸ್ ಕಾರ್ಪೋರೇಟರ್ ಪುತ್ರಿ ಅಥವಾ ಆರೋಪಿ ಫಯಾಜ್ ಅನ್ನೋ ಮತಾಂಧ ಎನ್ನುವ ಕಾರಣಕ್ಕೆ ಉಗ್ರ ಹೋರಾಟಕ್ಕಿಳಿದರೆ ಸಾಲದು. ಅದರ ಬದಲು ಭವಿಷ್ಯದಲ್ಲಿ ಇಂತ ಅಮಾನವೀಯ ಕೃತ್ಯ ನಡೆಯದಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡುವ ಕುರಿತು ಯೋಚಿಸುವುದೊಳಿತು.
ಯಾವುದೇ ಒಂದು ಕ್ರೈಂ ನಡೆದಾಗ ಅಲ್ಲಿ ಮುಖ್ಯ ಪಾತ್ರ ವಹಿಸುವುದು ಕ್ರೈಂ ನಡೆದಾಗಿನ ಐ ವಿಟ್ನೆಸ್, ವಿಟ್ನೆಸ್, ಟೆಕ್ನಿಕಲ್ ಎವಿಡೆನ್ಸ್, ಎಫ್ ಐ ಆರ್ ದಾಖಲಿಸಲ್ಪಟ್ಟ ಸ್ಥಳ ಇತ್ಯಾದಿ. ಇವೆಲ್ಲ ಸರಿಯಿಲ್ಲದಿದ್ದರೆ ಪ್ರಕರಣ ಹಳ್ಳ ಹಿಡಿಯುತ್ತದೆ ಅನ್ನೋ ಕನಿಷ್ಠ ಪ್ರಜ್ಞೆಯೂ ನಮ್ಮಲ್ಲಿಲ್ಲ.
ನೇಹಾ ಹಿರೇಮಠ್ ಸಾವಿಗೆ ನ್ಯಾಯ ಸಿಗಲೇಬೇಕು, ಇನ್ನೆಂದು ಕೂಡ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂತಹ ಘಟನೆ ಮರುಕಳಿಸಬಾರದು. ಆದರೆ ಅದಕ್ಕೂ ಮೊದಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಇಂತಹದ್ದೇ ಘಟನೆಗಳನ್ನು ನೋಡೋಣ.
1997ರ ಆಗಸ್ಟ್ 5ರ ಸಂಜೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಮನೆಗೆ ಮರಳುತ್ತಿದ್ದಳು. ಈ ವೇಳೆ ತನಗೂ ತನ್ನ ತಂದೆಗೂ ಪರಿಚಯದವನೇ ಆಗಿದ್ದ ನೆರೆಹೊರೆಯ ನಿವಾಸಿ ಅಶ್ರಫ್ ಅನ್ನೋ ಮಿಲಿಟ್ರಿಯಿಂದ ಅರ್ಧಕ್ಕೇ ಓಡಿಬಂದಿದ್ದ ಕಾಮುಕ ದಾರಿಯಲ್ಲಿ ಅಡ್ಡ ಸಿಕ್ಕಿದ್ದ. ಪ್ರೀತಿಸುವಂತೆ ಕಾಮಿಸುವಂತೆ ಪೀಡಿಸಿದ್ದ ಅಶ್ರಫ್ ಮಾತಿಗೆ ವಿರೋಧ ವ್ಯಕ್ತಪಡಿಸಿದ ಸೌಮ್ಯಾಳನ್ನು ತಾನು ತಂದಿದ್ದ ಚೂರಿಯಿಂದ 20 ಬಾರಿ ಇರಿದು ಸಾಯಿಸಿದ್ದ ಅಶ್ರಫ್ ಎಸ್ಕೇಪ್ ಆಗಿದ್ದ. ಈ ಘಟನೆಯ ಬೆನ್ನಿಗೆ ಪುತ್ತೂರು ಹೊತ್ತಿ ಉರಿದಿತ್ತು. ಆರೋಪಿ ಅಶ್ರಫ್ ನನ್ನು ಪಾಣೆಮಂಗಳೂರು ಬಳಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದಾಗಿ ಎರಡೇ ವರ್ಷದಲ್ಲಿ ಜೈಲಿಂದ ಎಸ್ಕೇಪ್ ಆಗಿದ್ದ ಅಶ್ರಫ್ 27 ವರ್ಷಗಳಿಂದ ಇನ್ನೂ ಸಿಕ್ಕಿಲ್ಲ. ಅಥವಾ ಆ ಬಳಿಕ ಬಂದ ಯಾವ ಸರಕಾರಗಳಿಗೂ ಸೌಮ್ಯಾ ಭಟ್ ನೆನಪಾಗಲಿಲ್ಲ ಅಶ್ರಫ್ ನನ್ನು ಬಂಧಿಸುವಂತೆ ಯಾವ ಸಂಘಟನೆಗಳೂ ದೊಡ್ಡಮಟ್ಟದ ಪ್ರತಿಭಟನೆ ಮಾಡಿಲ್ಲ, ಪೊಲೀಸರಿಗೆ ಸರಕಾರ ಆದೇಶ ಕೂಡ ನೀಡಲಿಲ್ಲ.
2018ರ ಫೆ.20ರಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜ್ ನಲ್ಲಿ ಬಿಎಸ್ಸಿ ಓದ್ತಾ ಇದ್ದ ಕಾಸರಗೋಡು ಮುಳ್ಳೇರಿಯ ನಿವಾಸಿ ಅಕ್ಷತಾ ತರಗತಿ ಮುಗಿಸಿ ಹೊರಬಂದಿದ್ದಳಷ್ಟೇ, ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಕಾರ್ತಿಕ್ ಅನ್ನೋ ವಿದ್ಯಾರ್ಥಿ ಹತ್ತಾರು ಬಾರಿ ಇರಿದು ವಿದ್ಯಾರ್ಥಿಗಳ ಎದುರಲ್ಲೇ ಅಕ್ಷತಾಳನ್ನು ಕೊಂದು ಪೊಲೀಸ್ ವಶವಾಗಿದ್ದ. ಇಲ್ಲಿ ಆರೋಪಿಗೆ ಶಿಕ್ಷೆ ನೀಡುವಂತೆ ಯಾವೊಂದು ಪ್ರತಿಭಟನೆ ಕೂಡಾ ನಡೆಯಲಿಲ್ಲ.
2022ರ ಜೂನ್ 27ರಂದು ಹಾಡಹಗಲೇ ಅನಂತಾಡಿ ನಿವಾಸಿ ಶಕುಂತಲಾ ಎಂಬಾಕೆಯನ್ನು ಶ್ರೀಧರ್ ಎಂಬ ರಿಕ್ಷಾ ಡ್ರೈವರ್ ರಸ್ತೆ ಮಧ್ಯೆ ಸ್ಕೂಟರ್ ತಡೆದು ಕೊಂದು ಎಸ್ಕೇಪ್ ಆಗಿದ್ದ. 2023ರ ಜನವರಿ 18ರಂದು ಪುತ್ತೂರು ತಾಲೂಕಿನ ಕಂಪನಮಜಲು ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ್ದ ಉಮೇಶ್ ಎಂಬಾತ ಜಯಶ್ರೀ ಎಂಬ ಯುವತಿಯ ಕತ್ತು ಕೊಯ್ದು ಎಸ್ಕೇಪ್ ಆಗಿದ್ದ. 2023ರ ಆಗಸ್ಟ್ 24ರಂದು ಪುತ್ತೂರಿನ ಮಹಿಳಾ ಠಾಣೆಯ ಮುಂಭಾಗದಲ್ಲೇ ಗೌರಿ ಅನ್ನೋ ಯುವತಿಯನ್ನು ಪದ್ಮರಾಜ್ ಎಂಬಾತ ಚೂರಿಯಿಂದ ಚುಚ್ಚಿ ಸಾಯಿಸಿದ್ದ. ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಯಾರೂ ಪ್ರತಿಭಟನೆ ಮಾಡಲಿಲ್ಲ.
ಇನ್ನು ಉಡುಪಿ ಸಮೀಪದ ಸಂತೆಕಟ್ಟೆಯಲ್ಲಿ 2023ರ ನವೆಂಬರ್ 12ರ ಬೆಳಗ್ಗೆ ಪ್ರವೀಣ್ ಚೌಗಳೆ ಎಂಬಾತ ಅಯ್ನಾಜ್ ಮೇಲಿನ ಒನ್ ವೇ ಲವ್ ಕಾರಣಕ್ಕೆ ಆಕೆಯ ತಾಯಿ ತಮ್ಮ, ತಂಗಿ ಸೇರಿ ನಾಲ್ವರನ್ನು ಕೊಂದು ಹಾಕಿ ಎಸ್ಕೇಪ್ ಆಗಿದ್ದ. ಇನ್ನು ಧರ್ಮಸ್ಥಳದ ಸೌಜನ್ಯ, ಹೆಬ್ರಿಯ ಸುಚೇತಾ, ಬಂಟ್ವಾಳ ಜಕ್ರಿಬೆಟ್ಟುವಿನ ಭಾರತಿ… ಹೀಗೇ ಹಿಂದೆ ನಡೆದಿರುವ ಸಾಲು ಸಾಲು ಹೆಣ್ಮಕ್ಕಳ ಸಾವಿಗೆ ನ್ಯಾಯವಂತೂ ಸಿಕ್ಕಿಲ್ಲ. ನಿಮಗೆ ವಿವರಣೆ ನೀಡಲು ಗೂಗಲ್ ನಲ್ಲಿ ಈ ಕುರಿತು ಸರಿಯಾದ ಮಾಹಿತಿ ಕೂಡ ಸಿಗುತ್ತಿಲ್ಲ. ನಿಮ್ಮ ಮನೆಯ ಹಿರಿಯರಿಗೆ ಕೇಳಿದರೆ ಸಿಗಬಹುದು.
ಇಷ್ಟೆಲ್ಲ ಉದಾಹರಣೆ ಕೊಟ್ಟ ಉದ್ದೇಶ ಇಷ್ಟೇ, ಈ ಎಲ್ಲ ಅಮಾನುಷ ಕೃತ್ಯಗಳಿಗೆ ಕಾರಣವಾಗಿದ್ದು ಒನ್ ವೇ ಲವ್, ಅದೇ ರಿಲೇಷನ್ ಶಿಪ್ ಇತ್ಯಾದಿ. ಇಲ್ಲಿ ಯಾವ ಪ್ರಕರಣಗಳಲ್ಲೂ ಆರೋಪಿ ಯಾರೇ ಆಗಿರಲಿ ಆತನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹೋರಾಟ ನಡೆದಿಲ್ಲ. ಬದಲಿಗೆ ಹಿಂದೂ ಯುವತಿಯನ್ನು ಮುಸ್ಲಿಂ ಕೊಂದರೆ, ಮುಸ್ಲಿಂ ಯುವತಿಯನ್ನು ಹಿಂದೂ ಕೊಂದರಷ್ಟೇ ಪ್ರತಿಭಟನೆ ನಡೆದಿದೆ. ಕೊಲೆ ಎನ್ನುವುದು ಕೇವಲ ಎರಡು ಕುಟುಂಬಕ್ಕೆ ಹಾನಿ ಉಂಟುಮಾಡುವುದಲ್ಲ ಬದಲಿಗೆ ಇಡೀ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತೆ. ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡು ಫೇಸ್ಬುಕ್, ವಾಟ್ಸ್ ಅಪ್ ನಲ್ಲಿ ಸಿಕ್ಕ ಸಿಕ್ಕ ಪೋಸ್ಟ್ ಗಳಿಗೆ ಗೀಚುವ ಬದಲು ಯಾವ ಸರಕಾರ ಇರುವಾಗ ಎಷ್ಟು ಹೆಣ್ಮಕ್ಕಳ ಹತ್ಯೆಯಾಗಿದೆ, ಯಾರಿಗೆಷ್ಟು ಶಿಕ್ಷೆಯಾಗಿದೆ, ಹೋರಾಟಗಳು ನಡೆದಿದೆ ಅನ್ನೋದನ್ನು ತಿಳಿಯೋದು ಒಳ್ಳೇದಲ್ವಾ… ಹೌದು ನೇಹಾ ಹಿರೇಮಠ್ ಗೆ ನ್ಯಾಯ ಸಿಗಲೇಬೇಕು ಹಾಗೇ ನ್ಯಾಯದ ನಿರೀಕ್ಷೆಯಲ್ಲಿರುವ ಇನ್ನಿತರ ಸೋದರಿಯರಿಗೂ ಕೂಡಾ…
📝ಶಶಿ ಬೆಳ್ಳಾಯರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.