(www.vknews.in) : ಹಝ್ರತ್ ಹೂದ್ (ಅ) ರವರ ದಿಕ್ಕಾರಿಗಳಾದ ಆದ್ ಜನಾಂಗವನ್ನು ಅಲ್ಲಾಹನು ಬರೀ ಬಿಸಿ ಗಾಳಿಯನ್ನು ಕಳುಹಿಸಿ ಸರ್ವನಾಶ ಮಾಡಿದನು. ಯಾವ ಅನಾಹುತ ಬಂದರೂ ಅದನ್ನು ಎದುರಿಸುವ ದೇಹಸಾಮರ್ಥ್ಯ ನಮಗುಂಟೆಂದು ಹೇಳಿಕೊಳ್ಳುತ್ತಿದ್ದ ಆ ಜನಾಂಗ ಅಲ್ಲಾಹನ ಶಿಕ್ಷೆ ಬಂದಾಗ ಧೂಳೀಪಟವಾಯಿತು.
ಪ್ರವಾದಿ ಹೂದ್ರವರು ವಫಾತಾದ ಬಳಿಕ ಕಾಲಕ್ರಮೇಣ ಪುನಃ ವಿಗ್ರಹಾರಾಧನೆ ಆರಂಭವಾಯಿತು. ಹಝ್ರತ್ ನೂಹ್ (ಅ) ರವರ ಮೊಮ್ಮಗನಾದ (ಪುಳ್ಳಿ) ಸಮೂದ್ ಎಂಬವನ ಹೆಸರಲ್ಲಿ ಪ್ರಸಿದ್ಧಿಯಾದ ಸಮೂದ್ ಜನಾಂಗಲ್ಲಿ ಹುಟ್ಟಿದ ಜುಂದಅ್ ಎಂಬವನು ಅಧಿಕಾರಕ್ಕೆ ಬಂದನು. ಆದ್ ಗೋತ್ರದವರಿಗಿಂತಲೂ ಬಲಿಷ್ಠರಾದ ಇವರು ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನು ಕೊರೆದು ತಮಗೆ ಬೇಕಾದ ಮನೆ ಮತ್ತು ಇತರ ಕಟ್ಟಡಗಳನ್ನು ಮಾಡುತ್ತಿದ್ದರು. ಮನೆಯ ಬಾಗಿಲು, ನೆಲ, ಗೋಡೆ ಎಲ್ಲವೂ ಬಂಡೆಕಲ್ಲು ಮತ್ತು ಕಬ್ಬಿಣದಿಂದಾಗಿತ್ತು. ಆಧುನಿಕ ಜಗತ್ತಿನ ಕ್ರೇನ್ಗಳಿಂದಲೂ ಎತ್ತಲಾಗದ ಬೃಹದಾಕಾರಾದ ಕಬ್ಬಿಣದ ಅದಿರಿನಿಂದ ಹಲಗೆ ಮಾಡಿ ಮನೆಗೆ ಬಾಗಿಲು ಮಾಡುತ್ತಿದ್ದರು. ಅದ್ಯಾವುದೂ ಅವರಿಗೆ ಕಷ್ಟವಾಗಿರಲಿಲ್ಲ. ಬಹಳ ಸುಲಭವಾಗಿತ್ತು. ಯಾಕೆಂದರೆ, ಅವರು ಅಷ್ಟಕ್ಕೂ ಬಲಿಷ್ಠರಾಗಿದ್ದರು. ನೂರು ಅಡಿ ಉದ್ದ ಮತ್ತು ಅಗಲದ ಮನೆಯನ್ನು ಬರೀ ಬಂಡೆಕಲ್ಲನ್ನು ಮತ್ತು ದೊಡ್ಡ ದೊಡ್ಡ ಕಲ್ಲಿನ ಪರ್ವತಗಳನ್ನು ಕೊರೆದು ನಿರ್ಮಾಣ ಮಾಡಲು ನೂರಾರು ಕಾರ್ಮಿಕರು ಬೇಕಾಗುತ್ತಿರಲಿಲ್ಲ. ಬರೀ ಒಬ್ಬ ಬಲಿಷ್ಠನಿಂದ ಮಾತ್ರ ಮಾಡಲು ಸಾಧ್ಯವಾಗುತ್ತಿತ್ತು. ಇವರ ಈ ಶಕ್ತಿ ಮತ್ತು ಬಲಿಷ್ಠತೆಯ ಬಗ್ಗೆ ಪವಿತ್ರ ಕುರ್ಆನಿನಲ್ಲಿ ಅಲ್ಲಾಹನು ಹಲವಾರು ಕಡೆ ಉಲ್ಲೇಖಿಸಿದ್ದಾನೆ.
ಜಗತ್ತಿನಲ್ಲಿ ಇವರಷ್ಟು ಬಲಿಷ್ಠರು ಬೇರೆ ಯಾರೂ ಇಲ್ಲ ಎಂದು ತಿಳಿದಾಗ ಇವರಿಗೆ ಅಹಂಕಾರ ಬಂತು. ಒಂದು ದಿನ ಈ ಜನಾಂಗದ ಕೆಲವು ಹಿರಿಯರು ತಮ್ಮ ಆಡಳಿತ ಅರಸನನ್ನು ಸಂಪರ್ಕಿಸಿ ಹೇಳಿದರು. “ಪ್ರಭುವೇ.., ನಮಗೆ ಆರಾಧನೆ ಮಾಡಲು ಒಂದು ವಿಗ್ರಹ ಬೇಕು. ಈ ತನಕ ಪ್ರವಾದಿ ನೂಹ್ರವರ ಜನಾಂಗವೋ ಹೂದ್ರವರ ಜನಾಂಗವೋ ಅರಾಧಿಸದ ಹೆಚ್ಚೇಕೆ ಜಗತ್ತಿನಲ್ಲಿ ಈ ತನಕ ಯಾರೂ ಆರಾಧಿಸದ ಒಂದು ಅದ್ಭುತವಾದ ವಿಗ್ರಹವಾಗಬೇಕು. ಯಾವ ಸುಂಟರಗಾಳಿ ಅಥವಾ ಬಿರುಗಾಳಿ ಬಂದರೂ ಅದನ್ನು ಅಲುಗಾಡಿಸಲು ಸಾಧ್ಯವಾಗದಂತಾಗಿರಬೇಕು. ಆದ್ ಜನಾಂಗವು ಗಾಳಿ ಬಂದಾಗ ಹಾರಿಹೋದಂತೆ ಹೋಗುವವರಲ್ಲ ನಾವು. ಅವರ ಮನೆ ಬಿಡಾರಗಳು ಮರಳಿನಿಂದ ಮಾಡಿದ್ದಾದರೆ ನಮ್ಮ ಬಿಡಾರಗಳು ಕಲ್ಲು ಕೊರೆದು ಮಾಡಿದ್ದಾಗಿದೆ. ಅದ್ದರಿಂದ ನಾವು ಆರಾಧಿಸುವ ವಿಗ್ರಹ ಕೂಡ ಅಷ್ಟೇ ಬಲಿಷ್ಠ ಆಗಿರಬೇಕು. ಯಾವುದೇ ನೈಸರ್ಗಿಕ ಅನಾಹುತವನ್ನು ಸದೆಬಡಿಯುವ ಶಕ್ತಿ ಅದಕ್ಕೆ ಇರಬೇಕು” ಎಂದು.
ಅರಸನು ಅದಕ್ಕೆ ಅನುಮತಿ ಕೊಟ್ಟನು. ಕೆಲವೇ ದಿನಗಳಲ್ಲಿ ನುರಿತ ವಾಸ್ತುಶಿಲ್ಪಿಗಳಿಂದ ಕೆಲಸ ಆರಂಭವಾಯಿತು. ಒಂದು ಪರ್ವತದಲ್ಲಿರುವ ಒಂದು ದೊಡ್ಡ ಬಂಡೆಕಲ್ಲಿನಿಂದಾಗಿತ್ತು ಅದರ ನಿರ್ಮಾಣ. ವಿಗ್ರಹದ ಮುಖವು ಮನುಷ್ಯ ರೂಪವಾಗಿದ್ದರೆ ಅದರ ಕತ್ತು ಮತ್ತು ಎದೆ ಹಸುವಿನ ಕತ್ತು ಮತ್ತು ಎದೆಯ ರೂಪದಲ್ಲಾಗಿತ್ತು. ಕೈಕಾಲುಗಳು ಕುದುರೆಯ ಕೈಕಾಲುಗಳನ್ನು ಹೋಲುತ್ತಿತ್ತು. ನಿರ್ಮಾಣ ಪೂರ್ತಿಯಾದ ಬಳಿಕ ಅದರ ತಲೆಗೆ ಬಂಗಾರದ ಕಿರೀಟ ಇಟ್ಟರು. ನಂತರ ಬೆಲೆಬಾಳುವ ಮುತ್ತು, ರತ್ನ, ವಜ್ರ, ಬಂಗಾರದಿಂದ ಅದನ್ನು ಅಲಂಕಾರ ಮಾಡಿದರು. ಸಂಪೂರ್ಣವಾಗಿ ಕೆಲಸ ಮುಗಿದ ಬಳಿಕ ಅರಸ, ಮಂತ್ರಿಗಳು, ಪ್ರಜೆಗಳು ಅಂತೆಯೇ ಇತರ ಎಲ್ಲಾ ಕೆಲಸಗಾರರು ಅದಕ್ಕೆ ಸಾಷ್ಟಾಂಗ ಮಾಡಿ ಖುರ್ಬಾನಿ ಕೊಟ್ಟರು.
ಬಳಿಕ ಅರಸನ ನಿರ್ದೇಶದಂತೆ ಅದನ್ನು ಇಡಲು ಒಂದು ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಕಟ್ಟಡ ಬಾಗಿಲುಗಳನ್ನು ಬಂಗಾರದಿಂದ ಮಾಡಲಾಯಿತು. ನೆಲಕ್ಕೆ ರೇಷ್ಮೆಯ ಕಾರ್ಪೆಟ್ ಹಾಕಿ ವಜ್ರ, ರತ್ನ, ಮಾಣಿಕ್ಯದಿಂದ ಒಳಗಿನ ವಿನ್ಯಾಸ (Interior Design) ಮಾಡಲಾಯಿತು. ವಿಗ್ರಹವನ್ನು ಬ್ರಹದಾಕಾರದ ಬಂಗಾರದ ಮಂಚದಲ್ಲಿ ಕುಳ್ಳಿರಿಸಲಾಯಿತು. ಅಲ್ಲಿನ ಪೀಠೋಪಕರಣಗಳೆಲ್ಲವೂ ಆನೆ ದಂತದಿಂದ ಮಾಡಿದ್ದಾಗಿತ್ತು. ಇದರ ಇಪ್ಪತ್ತನಾಲ್ಕು ಗಂಟೆ ಶುಶ್ರೂಷೆಗೆ ಸಮೂದ್ ಜನಾಂಗದಲ್ಲಿ ಬಹಳ ಪ್ರಸಿದ್ದಿಯಾದ ಜನರೆಡೆಯಲ್ಲಿ ಬಹಳ ಗೌರವವಿರುವ ಇಬ್ಬರನ್ನು ನೇಮಕ ಮಾಡಲಾಯಿತು. ಅವರ ಹೆಸರು ಕಾನೂಹ್ ಸುಬ್ಹಾನಲ್ಲಾಹ್! ಅಲ್ಲಾಹನ ತೀರ್ಮಾನ ಬೇರೊಂದಾಗಿತ್ತು. ಈ ಕಾನೂಹ್ರವರ ಮಗನೊಬ್ಬನು ಒಂದು ಪ್ರವಾದಿಯಾಗಿ ಹುಟ್ಟಲಿದ್ದಾರೆ ಎಂದು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.