ವಿಶ್ವಕನ್ನಡಿಗ ನ್ಯೂಸ್: ಕ್ರಿ.ಶ.571 ಏಪ್ರಿಲ್, ಅರೇಬಿಯಾದ ಮಣ್ಣಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಜನರ ಮದ್ಯೆ ಕದನ ನಡೆಯುತ್ತಿದ್ದು, ಕೊಲೆ ಸುಲಿಗೆ ಅತ್ಯಾಚಾರ ಅನಾಚಾರಗಳು ವ್ಯಾಪಕವಾಗಿದ್ದ ಕಾಲವದು.ವಿಗ್ರಹರಾಧನೆ ಸಾಮಾನ್ಯವಾಗಿದ್ದ ಕಾಲವದು.ಹೆಣ್ಣು ಮಗು ಹುಟ್ಟಿತೆಂದರೆ ಅಪಶಕುನ ಎಂದು ತಿಳಿಯುತ್ತಿದ್ದ ಕಾಲ ಮಾತ್ರವಲ್ಲ ಜನರು ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ನೋಡುತ್ತಿದ್ದ ಕಾಲವದು. ಅಂಧವಿಶ್ವಾಸ ತಾಂಡವವಾಡುತ್ತಿದ್ದ ದಿನಗಳದು. ಇಂತಹ ಸಂದರ್ಭದಲ್ಲಿ ಪವಿತ್ರ ಮಕ್ಕಾದ ಮಣ್ಣಲ್ಲಿ ಅಬ್ದುಲ್ಲಾ ಹಾಗು ಆಮಿನಾ ದಂಪತಿಗಳ ಸುಪುತ್ರನಾಗಿ ಜನಿಸಿದ ಆ ದಿವ್ಯಚೇತನವೇ ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ(ಸ.ಅ). ಇಡೀ ವಿಶ್ವಕ್ಕೆ ಅನುಗ್ರಹವಾಗಿ,ಶಾಂತಿಯ ದೂತನಾಗಿ, ಮಾದರಿಯಾಗಿ ಹಾಗು ಮಾರ್ಗದರ್ಶಕರಾಗಿ ಅಲ್ಲಾಹನಿಂದ ಸ್ರಷ್ಟಿಸಲ್ಪಟ್ಟಿದ್ದಾರೆ ಪ್ರವಾದಿಯವರು. ಹುಟ್ಟಿನಿಂದಲೇ ತಂದೆಯನ್ನು ಕಳಕೊಂಡಿದ್ದ ಪ್ರವಾದಿಯವರಿಗೆ ಆರು ವರ್ಷ ಪ್ರಾಯವಾದಾಗ ತಾಯಿ ಆಮಿನಾ ಇಹಲೋಕ ತ್ಯಜಿಸಿದರು. ನಂತರ ಮುಹಮ್ಮದ್(ಸ.ಅ) ಪಾಲನೆಯ ಜವಾಬ್ಧಾರಿ ಅಜ್ಜ ಅಬ್ದುಲ್ ಮುತ್ತಲಿಬ್ ವಹಿಸಿಕೊಂಡರು.ಎರಡು ವರ್ಷ ಕಳೆಯುವಷ್ಟರಲ್ಲಿ ತನ್ನ ಮೊಮ್ಮಗ ಮುಹಮ್ಮದ್(ಸ.ಅ) ರವರನ್ನು ಬಹಳ ಪ್ರೀತಿಯಿಂದ ಸಾಕಿದ ಅಬ್ದುಲ್ ಮುತ್ತಲಿಬ್ ಕೂಡ ಮರಣ ಹೊಂದಿದರು. ಒಟ್ಟಾರೆಯಾಗಿ ತಾನು ಎಂಟು ವರ್ಷ ಪ್ರಾಯದವನಾಗಿರುವ ಬಾಲ್ಯವಸ್ಥೆಯಲ್ಲೇ ಪ್ರವಾದಿಯವರು ತನ್ನ ಪೋಷಕರೆಲ್ಲರನ್ನು ಕಳೆದುಕೊಂಡರು. ಇದರಿಂದಾಗಿಯೇ ಪ್ರವಾದಿಯವರಿಗೆ ಅನಾಥವಸ್ಥೆ, ನೋವು, ಸಂಕಷ್ಟಗಳನ್ನು ಜೀವನದಲ್ಲಿ ಎದುರಿಸಬೇಕಾಯಿತು.
ಯವ್ವನಾವಸ್ಥೆಗೆ ಬಂದಾಗ ಪ್ರವಾದಿಯವರು ಕೆಲಕಾಲ ಕುರಿ ಮೇಯಿಸುವ ಕೆಲಸದ ನಂತರ ವ್ಯಾಪಾರದಲ್ಲಿ ತೊಡಗಿಕೊಂಡರು. ವ್ಯಾಪಾರದಲ್ಲಿ ಅವರು ತೋರುತ್ತಿದ್ದ ಸತ್ಯಸಂದತೆ ಹಾಗು ಪ್ರಾಮಾಣಿಕತೆಯಿಂದಾಗಿ ಇಡೀ ಅರಬ್ ಪ್ರದೇಶಗಳಲ್ಲಿ ಪ್ರಖ್ಯಾತರಾದರು. ಪ್ರವಾದಿಯವರು ಸರಳಜೀವಿ ಆಗಿದ್ದರು. ದುರಾಭಿಮಾನ ಹಾಗು ಒಣಪ್ರತಿಷ್ಠೆಯಿಂದ ದೂರವಿದ್ದರು. ಸಮಾಜದ ದುರ್ಬಲರು ವಿಧವೆಯರು ನಿರ್ಗತಿಕರು ಹಾಗು ಅನಾಥರಿಗೆ ಅನುಕಂಪದೊಂದಿಗೆ ಸಹಾಯಹಸ್ತ ಚಾಚುತ್ತಿದ್ದರು.ಹಿರಿಯರಿಗೆ ಪ್ರತ್ಯೇಕವಾದ ಗೌರವ ಕೊಡುವುದರೊಂದಿಗೆ ಕಿರಿಯರ ಮೇಲೆ ವಿಶಿಷ್ಟ ಮಮತೆಯನ್ನು ತೋರುತ್ತಿದ್ದರು. ಪ್ರವಾದಿತ್ವಕ್ಕಿಂತ ಮುಂಚೆಯೂ ಅನೇಕ ಕಷ್ಟಗಳನ್ನು ಎದುರಿಸಿದ ಪ್ರವಾದಿಯವರಿಗೆ ಪ್ರವಾದಿತ್ವದ ನಂತರ ಕೂಡ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು.
ಇಸ್ಲಾಂ ಧರ್ಮದ ಸಾರವನ್ನು ಜನರಿಗೆ ತಿಳಿಸಲು ಮುಂದಾಗ ಬಹಳ ವಿರೋಧಾಬಾಸ ಎದುರಾಯಿತು. ತಾಯಿಫ್ ಜನರಿಂದ ಕಲ್ಲಿನೇಟು ತಿನ್ನಬೇಕಾಯಿತು. ಮಕ್ಕಾದ ಕೆಲವರು ಪ್ರವಾದಿಯವರನ್ನು ಕೊಲ್ಲಲು ಹೊಂಚುಹಾಕುತ್ತಿದ್ದರು.ಇಷ್ಟು ಸಂಕಷ್ಟಗಳನ್ನು ಎದುರಿಸಿದರು ಯಾರಿಗೂ ಕೇಡು ಬಗೆದು ಪ್ರಾರ್ಥಿಸಿದವರಲ್ಲ ಪ್ರವಾದಿಯವರು. ತನಗೆ ಕಲ್ಲೆಸೆದವರಿಗೆ ಹಾಗು ಕೇಡು ಬಗೆದವರಿಗೆ ಕ್ಷಮಾಪಣೆಗಾಗಿ ಸರ್ವಶಕ್ತನಾದ ಅಲ್ಲಾಹನಲ್ಲಿ ಸದಾ ಪ್ರಾರ್ಥಿಸುತ್ತಿದ್ದರು. ಲೋಕಾನುಗ್ರಹಿತನಾಗಿ ಸ್ರಷ್ಟಿಸಲ್ಪಟ್ಟ “ರಹ್ಮತುಲ್ ಲಿಲ್ ಆಲಮೀನ್” ಆಗಿದ್ದಾರೆ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ) ರವರು.ಇಂತಹ ಜಗತ್ತು ಕಂಡ ಶ್ರೇಷ್ಠನಾಯಕ, ಸಹ್ರದಯಿ ಸಜ್ಜನಿಕೆಯ ವ್ಯಕ್ತಿತ್ವದ ಪ್ರವಾದಿ ಮುಹಮ್ಮದ್(ಸ.ಅ) ರವರ ಜನ್ಮದಿನದ ರಬಿವುಲ್ ಅವ್ವಲ್ ತಿಂಗಳು ನಮ್ಮ ಮುಂದೆ ಆಗಮಿಸಿದೆ.
ಪ್ರವಾದಿ (ಸ.ಅ) ರವರು ಲೋಕಕ್ಕೆ ಅನುಗ್ರಹವಾಗಿ ಬಂದ ಈ ದಿವಸವನ್ನು ಕೊಂಡಾಡುವುದು ಆಧರಿಸುವುದು, ಪ್ರವಾದಿ ಮೇಲಿರುವ ಪ್ರೀತಿಯನ್ನು ಪ್ರಕಟಿಸುವುದು ಪ್ರವಾದಿಯವರ ಮೇಲೆ ಸ್ವಲಾತ್ ವರ್ಧಿಸುವುದು ನಮ್ಮ ಖರ್ತವ್ಯವಾಗಿದೆ. ಆದರೆ ಈ ನಮ್ಮ ಪ್ರವಾದಿಪ್ರೇಮವು ಕೇವಲ ಅವರ ಜನ್ಮದಿನ ಆಚರಿಸುವುದಕ್ಕೆ ಮಾತ್ರ ಸೀಮಿತವಾಗಿರಲಿ.ಆ ದಿನದಂದು ಕೈಯಲ್ಲಿ ಪತಾಕೆ ಹಿಡಿದು ನಾಲ್ಕು ಸ್ವಲಾತ್ ಹೇಳಿದ ತಕ್ಷಣ ನಾವು ಪ್ರವಾದಿ ಪ್ರೇಮಿಗಳಾಗಳು ಸಾದ್ಯವಿಲ್ಲ. ಪ್ರವಾದಿಯವರ ನೈಜ ಅನುಯಾಯಿಗಳಾಗಬೇಕಾದರೆ ನಾವು ಅವರನ್ನು ಜೀವನದ ಪ್ರತಿಯೊಂದು ಹಂತದಲ್ಲಿಯೂ ಅನುಸರಿಸಬೇಕಾಗುತ್ತದೆ. ಸದಾ ಅವರ ಮೇಲೆ ಸ್ವಲಾತ್ ವರ್ಧಿಸುವುದು, ಸರ್ವಧರ್ಮದವರನ್ನು ಸಹೋದರರಾಗಿ ಕಾಣುವುದು, ದುರ್ಬಲರಿಗೆ ನೆರವು ನೀಡುವುದು, ನಿರ್ಗತಿಕರಿಗೆ ಸಹಾಯ ಮಾಡುವುದು, ಹಿರಿಯರನ್ನು ಗೌರವಿಸುವುದು ಕಿರಿಯರನ್ನು ಪ್ರೀತಿಯಿಂದ ಕಾಣುವುದು ಪ್ರವಾದಿಯವರ ಚರ್ಯೆಯಲ್ಲಿ ಸೇರಿರುತ್ತದೆ. ಸರ್ವಶಕ್ತನಾದ ಅಲ್ಲಾಹು ನಮೆಗೆಲ್ಲರಿಗೂ ನೆಬಿಯವರ ಚರ್ಯೆಯನ್ನು ನಮ್ಮ ಜೀವನದಲ್ಲಿ ಅಳವಡಿಸಲು ಹಾಗು ನಮ್ಮ ಜೀವನದುದ್ದಕ್ಕೂ ನೈಜ ಪ್ರವಾದಿಪ್ರೇಮಿಗಳಾಗಿ ಜೀವಿಸಲು ತೌಫೀಕ್ ನೀಡಲಿ. ಆಮೀನ್
ಬರಹ: ಎಸ್.ಎ.ರಹಿಮಾನ್ ಮಿತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.