ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಛೇರಿಯಲ್ಲಿ ಫಿಲಾಟೆಲಿಕ್ ಬ್ಯೂರೋ ಕಾರ್ಯನಿರ್ವಹಿಸುತ್ತಿದ್ದು, ಇದು ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ಮಕ್ಕಳಲ್ಲಿ ಮತ್ತು ಹಿರಿಯರಲ್ಲಿ ಬೆಳೆಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಎಲ್ಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿ ಅಂಚೆ ಚೀಟಿ ಸಂಗ್ರಹಣಾ ಖಾತೆಯನ್ನು ತೆರೆದು ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವನ್ನು ಪ್ರಾರಂಭಿಸಬಹುದು. ಅಲ್ಲದೇ ಇಲ್ಲಿಗೆ ಭೇಟಿ ನೀಡಿ ವೈವಿಧ್ಯಮಯ ಅಂಚೆ ಚೀಟಿಗಳನ್ನು ವೀಕ್ಷಿಸಬಹುದು, ಕೊಂಡುಕೊಳ್ಳಬಹುದು. ಇದೀಗ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್.ಕೆ.ಜಿ ಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಎಲ್.ಕೆ.ಜಿ ಯಿಂದ ಯು.ಕೆಜಿ., ಒಂದನೇ ತರಗತಿವರೆಗೆ ಕ್ರೇಯಾನ್ ಮೂಲಕ ‘ನನ್ನ ಅಂಚೆ ಕಚೇರಿ’ ಎಂಬ ವಿಷಯದಲ್ಲಿ, 2 ರಿಂದ 4 ತರಗತಿಯವರೆಗೆ ಕ್ರೇಯಾನ್ ಮೂಲಕ ‘ಭವಿಷ್ಯದ ಅಂಚೆ ಕಚೇರಿ’ ಎಂಬ ವಿಷಯದಲ್ಲಿ, 5 ರಿಂದ 7 ನೇ ತರಗತಿವರೆಗೆ ಕ್ರೇಯಾನ್ ಅಥವಾ ಜಲವರ್ಣದ ಮೂಲಕ ‘ಭವಿಷ್ಯದ ಅಂಚೆ ಡಬ್ಬ’ ಎಂಬ ವಿಷಯದಲ್ಲಿ ಹಾಗೂ 8 ರಿಂದ 10 ನೇ ತರಗತಿವರೆಗೆ ಜಲವರ್ಣದ ಮೂಲಕ ‘ಕೋವಿಡ್ ಸಂಧರ್ಭದಲ್ಲಿ ಅಂಚೆ ಕಚೇರಿ ಸೇವೆ’ ಎಂಬ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಚಿತ್ರ ಎ4 ಅಳತೆಯಲ್ಲಿ ಇರಬೇಕು ಹಾಗೂ ಎ4 ಹಿಂದುಗಡೆಯಲ್ಲಿ ಹೆಸರು, ತರಗತಿ, ಶಾಲೆ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ ಸ್ಪೀಡ್ ಪೆÇೀಸ್ಟ್ ಮೂಲಕ “ಹಿರಿಯ ಅಂಚೆ ಪಾಲಕರು, ಚಿತ್ರಕಲಾ ಸ್ಪರ್ಧೆ, ಫಿಲಾಟೆಲಿಕ್ ಬ್ಯೂರೋ, ಮಂಗಳೂರು-575001” ಕಳುಹಿಸಲು ಕೋರಲಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0824-2441447 ಅಥವಾ 2411653 ಕ್ಕೆ ಸಂಪರ್ಕಿಸಬಹುದು. ಚಿತ್ರಕಲೆ ತಲುಪಲು ಕೊನೆಯ ದಿನಾಂಕ ನವೆಂಬರ್ 20, 2020 ಆಗಿದ್ದು, ಸ್ಪರ್ಧಾ ಫಲಿತಾಂಶವನ್ನು ಮಂಗಳೂರು ಪೋಸ್ಟಲ್ ಡಿವಿಶನ್ ಇದರ ಫೇಸ್ ಬುಕ್ ಪೇಜಿನಲ್ಲಿ ನ. 25 ರಂದು ಪ್ರಕಟಿಸಲಾಗುವುದು. ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಒಂದು ಅಂಚೆ ಚೀಟಿ ಖಾತೆಯನ್ನು ಇಲಾಖೆಯ ವತಿಯಿಂದ ಮಾಡಿಕೊಡಲಾಗುವುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.