ಉಡುಪಿ (www.vknews.com) : ಹಿರಿಯ ಪತ್ರಕರ್ತ, ಉದಯವಾಣಿಯಲ್ಲಿ 44 ವರ್ಷ ಸೇವೆ ಸಲ್ಲಿಸಿ ವಿಶ್ರಾಂತರಾಗಿರುವ ಎನ್.ಗುರುರಾಜ್ ಅವರಿಗೆ ಪತ್ರಕರ್ತರ ವೇದಿಕೆ (ರಿ) ಬೆಂಗಳೂರು ನೀಡುವ ಪತ್ರಿಕಾದಿನದ ಗೌರವ (2021)ವನ್ನು ಶುಕ್ರವಾರ ಅವರ ನಿವಾಸದಲ್ಲಿ ಹರಿಕೃಷ್ಣ ಪುನರೂರು ಅವರು ಪ್ರದಾನಿಸಲಿರುವರು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.
ಒಂದೇ ಪತ್ರಿಕೆಯಲ್ಲಿ 44 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರ ಮಾಧ್ಯಮ ಸೇವೆಯನ್ನು ಗುರುತಿಸಿ ಅವರನ್ನು ಜುಲೈ 23 ರಂದು ಗೌರವಿಸಲಾಗುತ್ತಿದೆ. ಕಳೆದ ಹದಿಮೂರು ವರ್ಷಗಳಿಂದ ಹಿರಿಯ ಪತ್ರಕರ್ತರನ್ನು ಕನ್ನಡ ಪತ್ರಿಕಾ ದಿನಾಚರಣೆಯ ಮುನ್ನಾ ದಿನ ಜೂನ್ 30 ರಂದು ಗೌರವಿಸುತ್ತಾ ಬರಲಾಗಿದ್ದು, ಸತೀಶ್.ಪೈ, ಎಂ.ವಿ.ಕಾಮತ್, ಉಡುಪಿ ವಾಸುದೇವ ಭಟ್, ದಾಮೋದರ ಐತಾಳ್, ಬಿ.ಎ.ಸನದಿ, ಕು.ಗೊ, ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ.ಚಂದ್ರಯ್ಯ, ಉಮೇಶ ರಾವ್ ಎಕ್ಕಾರು, ಬಿ.ಸಿ.ರಾವ್ ಶಿವಪುರ ಸಹಿತ ಗಣ್ಯರು ವೇದಿಕೆಯ ಈ ಹಿರಿಯರೆಡೆಗೆ ನಮ್ಮ ಯೋಜನೆಯಡಿ ಗೌರವ ಸ್ವೀಕರಿಸಿದ್ದಾರೆ.
ದಾವಣಗೆರೆ ಜಗಳೂರಿನ ಅಸಗೋಡಿನಲ್ಲಿ 1944ರಲ್ಲಿ ಜನಿಸಿದ ಎನ್.ಗುರುರಾಜ್ ಇಂಜಿನಿಯರ್ ಪದವಿಧರರು. ಉತ್ತಮ ಕಥೆಗಾರರಾಗಿರುವ ಅವರು ಪದವಿಯ ತಕ್ಷಣ ಆಗ ತಾನೆ ಪ್ರಕಟಣೆ ಆರಂಭಿಸಲಿದ್ದ ಉದಯವಾಣಿಗೆ ಅನುವಾದಕರಾಗಿ ಸೇರಿದರು. ಮುಂದೆ ಅವರ ತಮ್ಮ ಕಾರ್ಯದಕ್ಷತೆಯಿಂದ ಸಹಾಯಕ ಸುದ್ದಿ ಸಂಪಾದಕರಾಗಿ, ಸುದ್ದಿ ಸಂಪಾದಕರಾಗಿ, ಸಂಪಾದಕರಾಗಿ 2014 ರಲ್ಲಿ ಸೇವಾ ನಿವೃತ್ತಿ ಪಡೆದಿದ್ದಾರೆ.
ಅವರ ತಂದೆ ಎ.ಎಸ್.ನರಸಿಂಹ ಅವರು ದಿ ಹಿಂದು ಸಹಿತ ವಿವಿಧ ಪತ್ರಿಕೆಗಳ ಜಿಲ್ಲಾ ವರದಿಗಾರರಾಗಿದ್ದರು. ಬಾಲ್ಯದಲ್ಲಿ ತಮದೆಯವರ ಮೂಲಕ ಹಿರಿಯ ಸಾಹಿತಿಗಳ ಸಂಪರ್ಕ ಪಡೆದಿದ್ದರು ಉತ್ತಮ ಓದುವ ಹವ್ಯಾಸ ಹೊಂದಿದ್ದಾರೆ. ಪತ್ರಿಕೆಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಹೊಸತನದ ಪಯಣದಲ್ಲಿ ಪತ್ರಿಕೆಯ ಜೊತೆಗೆ ಸೈ ಎಣಿಸಿಕೊಂಡಿದ್ದಾರೆ. ಉದಯವಾಣಿ ಆರಂಭಕ್ಕಿಂತಲೂ ಮೊದಲೇ ಬಳಗವನ್ನು ಸೇರಿ ಅಲ್ಲಿಯೇ ಹಂತ ಹಂತವಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅವರಿಗೆ 2006 ರ ಕರ್ನಾಟಕ ಮಾಧ್ಯಮ ಅಕಾಡೆಮಿಯ ಗೌರವ ಸಂದಿದೆ. ಪತ್ನಿ ನಿರ್ಮಲಾ ಮತ್ತು ಮಗಳು ಶಿಲ್ಪ ಸಾಹಿತ್ಯಾಸಕ್ತರಾಗಿದ್ದರೆ, ಮಗ ಪ್ರದೀಪ್ ಸಿಂಹ ಹೊರರಾಜ್ಯದಿಂದ ಬರುವ ಕನ್ನಡತೇರರಿಗೆ ಕನ್ನಡ ಕಲಿಸುವ ಕಾಯಕದ ಮೂಲಕ ಕನ್ನಡ ಸೇವೆಯಲ್ಲಿ ನಿರತರಾಗಿದ್ದಾರೆ. ಪರ್ಕಳ ಮಾರುತಿ ನಗರದಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಅವರ ಆಯ್ದ ಕಥಾ ಸಂಕಲನ ಶೀಘ್ರದಲ್ಲಿಯೇ ಬೆಳಕು ಕಾಣಲಿದೆ.
ಕಾರ್ಯಕ್ರಮ ಸೀಮಿತ ಆಹ್ವಾನಿತರಿಗೆ ಮಾತ್ರವಾಗಿದ್ದು ಅವರನ್ನು 9845 208 341 ಮೂಲಕ ಸಂಪರ್ಕಿಸ ಬಹುದಾಗಿದೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.