(www.vknews.com) : ಭಾರತದ ಸ್ವಾತಂತ್ರ್ಯೋತ್ಸವ ಎಂದೊಡನೆ ಅದೆಷ್ಟೋ ವೀರರ ತ್ಯಾಗ, ಬಲಿದಾನ, ಸಂಘರ್ಷಗಳ ಸಿಂಹಾವಲೋಕನವಾಗುತ್ತದೆ. ದೇಶಭಕ್ತಿಯ ರಸ ಮತ್ತೊಮ್ಮೆ ನರನಾಡಿಗಳಲ್ಲಿ ಮಿಡಿಯುತ್ತದೆ. ಇಂತಹ ವೀರರ ಮೈಯಿಂದ ಚಿಮ್ಮಿದ ರಕ್ತದ ಮಳೆಗೆ ಯಾವ ಕಾಣಿಕೆ ಕೊಟ್ಟರೂ ಕಡಿಮೆಯೇ. ಇಂತಹ ಸಮಯದಲ್ಲಿ “ಭಾರತೀಯ ಸಾಂಸ್ಕ್ರತಿಕ ಕೇಂದ್ರ (ಐ ಸಿ ಸಿ) ಕತಾರ್” ರಕ್ತ ದಾನ ಶಿಬಿರವನ್ನು ಸಮಯೋಚಿತವಾಗಿ ಹಮ್ಮಿ ಮತ್ತೊಮ್ಮೆ ದೇಶಭಕ್ತಿಯ ಪತಾಕೆಯನ್ನು ಎತ್ತಿಹಿಡಿಯಿತು.
75 ನೇ ವರ್ಷದ ಭಾರತ ಸ್ವಾತಂತ್ರ್ಯೋತ್ಸವದ (ಅಜಾದ್ ಕಾ ಅಮೃತ್ ಮಹೋತ್ಸವ) ಅಂಗವಾಗಿ ದಿನಾಂಕ 13 ನೇ ಆಗಸ್ಟ್ 2021 ರಂದು ಬೆಳಿಗ್ಗೆ 7.30 ರಿಂದ ಸಂಜೆ 6 ರವರೆಗೆ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ್ ಹಾಲ್ ನಲ್ಲಿ ಹಮಾದ್ ವೈದ್ಯಕೀಯ ನಿಗಮದ ಬೆಂಬಲದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. 590 ಕ್ಕೂ ಹೆಚ್ಚು ದಾನಿಗಳ ಭಾಗವಹಿಸುವಿಕೆ ಮತ್ತು ಆರೋಗ್ಯ ತಪಾಸಣೆಯ ನಂತರ, 496 ದಾನಿಗಳಿಂದ ರಕ್ತವನ್ನು ಪಡೆಯಲಾಯಿತು. ಆರಂಭದ ನೋಂದಣಿಯು ಸರಿಸುಮಾರು 780ಕ್ಕೂ ಮೀರಿತ್ತು. ಅನೇಕ ತತ್ ಕ್ಷಣ ನೋಂದಣಿ ಸೇರಿದಂತೆ, ಸಂಪೂರ್ಣ ಶಿಬಿರವನ್ನು ನೋಂದಣಿ ಹಂತದಿಂದ, ಆರೋಗ್ಯ ತಪಾಸಣೆ, ರಕ್ತ ಸಂಗ್ರಹಣೆ, ರಕ್ತದಾನಿಗಳಿಗೆ ಮೆಚ್ಚುಗೆ ಪ್ರಮಾಣಪತ್ರ ಮತ್ತು ಪದಕ ವಿತರಣೆಯವರೆಗೆ ತಡೆರಹಿತ ಪ್ರಕ್ರಿಯೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಲಾಯಿತು.
ರಕ್ತದಾನ ಶಿಬಿರವನ್ನು ಭಾರತದ ರಾಯಭಾರಿ ಘನವೆತ್ತ ಡಾ.ದೀಪಕ್ ಮಿತ್ತಲ್ ಉದ್ಘಾಟಿಸಿದರು. ಉದ್ಘಾಟನೆಯಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಘನವೆತ್ತ ಶೇಖ್ ಮೊಹಮ್ಮದ್ ಬಿನ್ ಹಮಾದ್ ಅಲ್ಥಾನಿ ಕೂಡ ಭಾಗವಹಿಸಿದ್ದರು. ಭಾರತದ ರಾಯಭಾರ ಕಚೇರಿಯಿಂದ ಶ್ರೀ ಝೇವಿಯರ್ ಧನರಾಜ್ ಪ್ರಧಾನ ಕಾರ್ಯದರ್ಶಿ ಮತ್ತು ಐಸಿಸಿಯ ಸಮನ್ವಯ ಅಧಿಕಾರಿ ಶುಭ ಹಾರೈಸಿದರು. ಹಮಾದ್ ರಕ್ತದಾನ ಕೇಂದ್ರದಿಂದ ಡಾ.ಶರಣ್ ಜೇಕಬ್, ನಸೀಮ್ ವೈದ್ಯಕೀಯ ಕೇಂದ್ರದಿಂದ ಶ್ರೀ ಇಕ್ಬಾಲ್ ಅಬ್ದುಲ್ಲಾ ಅವರು ಪ್ರಾಯೋಜಕರಾಗಿದ್ದು ಹಾಜರಿದ್ದರು. ಹಲವಾರು ಸ್ವಯಂಸೇವಕರು ಮತ್ತು 40 ಕ್ಕೂ ಹೆಚ್ಚು ಸದಸ್ಯರ ತಂಡವು ರಕ್ತ ಸಂಗ್ರಹವನ್ನು ಬಹಳಷ್ಟು ಶ್ರದ್ಧೆಯಿಂದ ನಿರ್ವಹಿಸಿತು.
ಐಸಿಸಿ ಹಮಾದ್ ರಕ್ತದಾನ ಕೇಂದ್ರ ಮೆಚ್ಚುಗೆಯ ಸಂಕೇತವಾಗಿ ಐ ಸಿ ಸಿ ಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿತು. ಶ್ರೀ ಕೃಷ್ಣ ಕುಮಾರ್ ಪ್ರಧಾನ ಕಾರ್ಯದರ್ಶಿ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿದ್ದರು ಮತ್ತು ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಐಸಿ ಸಿ ಉಪಾಧ್ಯಕ್ಷರು ವಂದನಾರ್ಪಣೆಗೈದರು. ಶ್ರೀ ಪಿ.ಎನ್ ಬಾಬು ರಾಜನ್ ಐ ಸಿ ಸಿ ಅಧ್ಯಕ್ಷರ ನೇತೃತ್ವದಲ್ಲಿ ಐಸಿಸಿ ನಿರ್ವಹಣಾ ಸಮಿತಿ ಸಂಪೂರ್ಣ ರಕ್ತದಾನ ಶಿಬಿರದ ಪರಿಕಲ್ಪನೆಯನ್ನು ಮಾಡಿಕೊಂಡು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.
ಈ ಎಲ್ಲಾ ಕಾರ್ಯಕ್ರಮದ ರೂವಾರಿ ನಮ್ಮ ನೆಚ್ಚಿನ ಕನ್ನಡಿಗ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಅವಿಶ್ರಾಂತ ದುಡಿಮೆ ಇಂತಹ ಜನಸ್ತೋಮವನ್ನು ಶಕ್ತಿ ಸಂಚಾರಗೊಳಿಸಿ ತನ್ನಡೆಗೆ ಆಕರ್ಷಿಸುವಂತಾಗಿದ್ದು ನಮ್ಮೆಲ್ಲ ಕನ್ನಡಿಗರಿಗೆ ಮೆಚ್ಚುಗೆಯ ವಿಷಯ.
ಇನ್ನಷ್ಟು ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.