(www.vknews.in) : ನಾಲ್ಕನೇ ತರಗತಿಯಲ್ಲಿ ಓದುವಾಗ ಪರೀಕ್ಷಾ ಪತ್ರಿಕೆಯಲ್ಲಿ ಒಂದು ವಾಕ್ಯ ಕೊಟ್ಟು, ಇದನ್ನು ಯಾರು ಯಾರಿಗೆ ಯಾವಾಗ ಹೇಳಿದರು ಎಂದು ಕೇಳಲಾಗುತ್ತಿತ್ತು. ಉದಾಹರಣೆಗೆ – “ಸಾವಿಗೆ ಹೆದರದೆ, ಭಯವನ್ನು ತೊರೆದು ಯೋಧನಂತೆ ಹೋರಾಡು”. ವಿದ್ಯಾರ್ಥಿ ಪಾಠವನ್ನು ಸಂಪೂರ್ಣವಾಗಿ ಓದಿದ್ದರೆ, ಈ ವಾಕ್ಯವನ್ನು ಇಂಥವರು ಇಂಥವರಿಗೆ ಇಂತಹ ಸಂದರ್ಭದಲ್ಲಿ ಹೇಳಿದರು ಎಂದು ಸರಿಯಾದ ಉತ್ತರವನ್ನು ತಕ್ಷಣವಾಗಿ ಕೊಡಬಲ್ಲನು. ಏನೂ ಆ ಪಾಠದ ಬಗ್ಗೆ ಓದಿಲ್ಲದವರು ತಪ್ಪು ಉತ್ತರ ಕೊಡಬಲ್ಲರು. ಶಾಲೆಯ ಮುಖವೇ ನೋಡಿರದ ಒಬ್ಬ ಸಾಮಾನ್ಯ ಮನುಷ್ಯನಿಗೆ ಮೇಲಿನ ವಾಕ್ಯವನ್ನು ಶ್ರೀ ಕೃಷ್ಣ ಹೇಳಿದ್ದಾನೆ, ನಾವು ಸಾವಿಗೆ ಹೆದರಬಾರದು, ನೀನು ಕೈಯಲ್ಲಿ ಕತ್ತಿ ಹಿಡಿ, ಅವರನ್ನು ಹೋಗಿ ಹೊಡಿ ಎಂದಾಗ ಆತ ಆ ವಾಕ್ಯವನ್ನು ನಿಜವಾಗಲೂ ಶ್ರೀ ಕೃಷ್ಣನೇ ಹೇಳಿದ್ದಾನೆಯೇ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ.
ಏಕೆಂದರೆ ಆತ ಅವಿದ್ಯಾವಂತ ನಿರುದ್ಯೋಗಿ. ಧರ್ಮದ ಲೇಪನ ಇರುವುದರಿಂದ ಸುಮ್ಮನೆ ಒಪ್ಪಿಕೊಳ್ಳುತ್ತಾನೆ. ಸ್ವಲ್ಪ ಭುದ್ಧಿವಂತನಾಗಿದ್ದರೆ, ವಿದ್ಯಾವಂತ ನಂಬಿಕಸ್ಥರ ಬಳಿ ಹೋಗಿ ಕೇಳುತ್ತಾನೆ. ಒಳ್ಳೆಯ ವ್ಯಕ್ತಿಗಳ ಬಳಿ ಹೋದರೆ ಸರಿ, ಅರೆಬರೆ ಜ್ಞಾನವುಳ್ಳವರ ಬಳಿ ಹೋದರೆ, ಅದರ ಪರಿಣಾಮ ಇನ್ನೇನೋ ಆಗಬಹುದು. ಟೈಲರಿಗೆ ಹೋಗಿ ನನ್ನ ಸ್ಕೂಟರ್ ಕೆಟ್ಟುಹೋಗಿದೆ ಸರಿ ಮಾಡು ಎಂದ ಹಾಗೆ ಆಗುತ್ತದೆ. ಯಾವ ಖಾಯಿಲೆಗಳಿಗೆ ಯಾವ ವೈದ್ಯರ ಬಳಿ ಹೋಗಬೇಕೆಂಬುದು ಬಹಳ ಮುಖ್ಯ. ಧಾರ್ಮಿಕ ಗ್ರಂಥಗಳನ್ನು ರಾಜಕೀಯ ವ್ಯಕ್ತಿಗಳಿಂದ ತಿಳಿದುಕೊಳ್ಳಲು ಹೊರಟರೆ ಗೊಂದಲಗಳು ಸೃಷ್ಟಿಯಾಗುವುದು ಸಹಜ. ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಿರುವ ಓರ್ವ ರಾಜಕೀಯ ವ್ಯಕ್ತಿ ಕೇವಲ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಸವಣ್ಣನವರ ಅನುಭವ ಮಂಟಪ ಬಗ್ಗೆ ಮಾತನಾಡಿದ್ದನ್ನು ಕೇಳಿ ಆಶ್ಚರ್ಯವಾಯಿತು.
ಅರೆಬರೆ ಜ್ಞಾನವುಳ್ಳ ಕೆಲವರು ಕುರಾನ್ ನ ಯಾವುದೋ ಒಂದು ಮಧ್ಯದ ವಚನವನ್ನು ತೆಗೆದುಕೊಂಡು ಮಾತನಾಡುತ್ತಾರೆ. ಕುರಾನ್ ನಲ್ಲಿ ಸಾವಿರಾರು ವಿಷಯಗಳಿವೆ. ಪ್ರತಿ ವಿಷಯದ ಹಿಂದೆ ಅದರ ಹಿನ್ನೆಲೆ ಮತ್ತು ಸಂದರ್ಭಗಳಿರುವುದುಂಟು. ಉದಾಹರಣೆಗೆ – “ದೇವರು ಸರ್ವಶಕ್ತನು” ಕುರಾನ್ ನಲ್ಲಿ ಇರುವ ಒಂದು ವಚನ. ಈ ವಚನ ಯಾವಾಗ, ಏಕೆ ಹೇಳಲಾಯಿತು , ಅದರ, ಸನ್ನಿವೇಶ ಏನು, ಸಂದರ್ಭ ಏನು, ಹಿನ್ನಲೆ ಏನು? ಸಂಪೂರ್ಣವಾಗಿ ಸೂಕ್ಷ್ಮತೆಯಿಂದ ಮಾಹಿತಿಯನ್ನು ಕಲೆ ಹಾಕಬೇಕಾಗುತ್ತದೆ. ಕುರಾನ್ ಬಗ್ಗೆ ಹತ್ತಾರು ವರ್ಷ ಸಂಶೋಧನೆ ನಡೆಸಿರುವವರ ಜೊತೆ ಕುಳಿತು ಚರ್ಚೆ ನಡೆಸಬೇಕಾಗುತ್ತದೆ. ಏಕೆಂದರೆ ಕುರಾನ್ ತರ್ಜುಮೆ ಎಲ್ಲರು ಓದಿ ಹೇಳಬಹುದು. ಅದರ ಹಿನ್ನೆಲೆ ತಿಳಿದುಕೊಳ್ಳಬೇಕಾದರೆ ಸಂಶೋಧನೆ ಮಾಡಬೇಕು. 4ನೇ ತರಗತಿಯ ಜ್ಞಾನವೇ ಬೇರೆ, PhD ಘಟ್ಟದ ಜ್ಞಾನವೇ ಬೇರೆ. ಅಲ್ಲವೇ? ಧರ್ಮ ಯಾವುದೇ ಇರಲಿ, ಗ್ರಂಥ ಯಾವುದೇ ಇರಲಿ, ಅದರ ಅನುವಾದದ ಜೊತೆ, ತಫ್ ಸೀರ್ ಓದಬೇಕು. ಅದರ ಪರಿಪೂರ್ಣ ಜ್ಞಾನವುಳ್ಳವರಿಂದ ತಿಳಿದುಕೊಳ್ಳುವುದು ಒಳಿತು. ಆಗಲೇ ನಮ್ಮ ಪೂರ್ವಗ್ರಹಿಕ ಅಂಧಕಾರ ಹೋಗಲು ಸಾಧ್ಯ. ಅರ್ಧ ಜ್ಞಾನ ಬಹಳ ಅಪಾಯಕಾರಿ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.