(www.vknews.in) : ಆಗಸ್ಟ್ ೧೫,೧೯೪೭ ಭಾರತೀಯರ ಪಾಲಿಗೆ ಚಿರಸ್ಮರಣೀಯ ದಿನ. ಭಾರತ ಬೇರೆಲ್ಲಾ ರಾಷ್ಟ್ರಗಳಿಗಿಂತಲೂ ವಿಭಿನ್ನವಾದ ಭಾಷೆ, ಸಂಸ್ಕೃತಿ, ಸಂಪ್ರದಾಯ, ಆಚರಣೆ, ಸರ್ವಧರ್ಮಗಳುಳ್ಳ ಇಡೀ ವಿಶ್ವಕ್ಕೆ ತನ್ನ ಸನಾತನ ಸಂಸ್ಕೃತಿಯಿಂದಲೇ “ವಿಶ್ವ ಗುರು” ಎಂದೆನಿಸಿಕೊಳ್ಳಬಲ್ಲ ಏಕೈಕ ರಾಷ್ಟ್ರ. ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕಾಗಿರುವುದು ಈ ದೇಶದ ಧರ್ಮ ವೈವಿಧ್ಯಮಯ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳುಳ್ಳ ರಾಷ್ಟ್ರ. ಆಯುರ್ವೇದದ ಮೂಲಕ ಇಡೀ ಲೋಕಕ್ಕೆ ಚಿಕಿತ್ಸಕ ಔಷಧಿಗಳನ್ನು ಆವಿಷ್ಕರಿಸಿ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ನಮ್ಮ ಭಾರತ ದೇಶಕ್ಕೆ ಸಲ್ಲುತ್ತದೆ. ವೇದಗಳು, ಪುರಾಣಗಳು ರಾಮಾಯಣ, ಮಹಾಭಾರತ, ಗಾದೆಗಳು, ಕೀರ್ತನೆಗಳು, ವಚನಗಳು, ಒಗಟುಗಳು, ಧಾರ್ಮಿಕ ವಿಧಿ ವಿಧಾನಗಳನ್ನು ಒಳಗೊಂಡಿರುವ ಈ ದೇಶದ ಸಾರವೊಂದೆ ಭ್ರಾತೃತ್ವ ಭಾವನೆಯಿಂದ, ಸಹಬಾಳ್ವೆಯಿಂದ ಬಾಳುವುದು ಈ ದೇಶದ ಮಣ್ಣಿನ ಸಂಸ್ಕೃತಿ.
ಆದರೆ ಇತ್ತೀಚೀಗೆ ರಾಜಕೀಯದ ಕೆಸರೆಚಾಟದಲ್ಲಿ ಒಂದಷ್ಟು ವ್ಯತ್ಯಾಸಗಳಾಗಿರುವುದು ವಿಷಾದನೀಯ.!, ಸರಿ ಸುಮಾರು ಎರಡು ನೂರು ವರ್ಷಗಳ ಕಾಲ ಈ ದೇಶವನ್ನು ಬ್ರಿಟಿಷರು ಆಳ್ವಿಕೆ ನಡೆಸಿದರು, ಅದೆಷ್ಟೋ ರಾಷ್ಟ್ರಗಳು ಪ್ರಭುತ್ವ ಸ್ಥಾಪಿಸಲು ಹವಣಿಸಿದವು. ಬೇರೆ ಬೇರೆ ರಾಷ್ಟ್ರಗಳಲ್ಲಿ ‘ರೊಟ್ಟಿಗಾಗಿ ಕ್ರಾಂತಿ’, ‘ರಾಜಕೀಯ ಕ್ರಾಂತಿ’ ಗಳು ಗತಿಸಿ ಹೋಗಿವೆ. ಆದರೆ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿಗಳು ಒಂದಾ ಎರಡಾ!, ತ್ಯಾಗ ಬಲಿದಾನಗಳು ಸತ್ಯಾಗ್ರಹಗಳು ಒಂದಾ ಎರಡಾ?, ಚಳುವಳಿಗಳು ಒಂದಾ ಎರಡಾ,! ಕ್ರಾಂತಿಕಾರಿಗಳು ನಡೆಸಿ ಮಡಿದವರ ನೆತ್ತರು, ಸತ್ಯಾಗ್ರಹದಲ್ಲಿ ಕೊನೆಯುಸಿರೆಳೆದವರ ಉಸಿರು, “ಸ್ವಾತಂತ್ರ್ಯ ನನ್ನ ಅಜನ್ಮ ಸಿದ್ದ ಹಕ್ಕು ನಾನದನ್ನು ಪಡೆದೇ ತಿರುತ್ತೇನೆಂಬ” ದೃಢಸಂಕಲ್ಪ ಮಾಡಿ ಮಡಿದವರ ಅದೆಷ್ಟೋ ಕೂಗು, ಈ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದಾಖಲಾಗಿದೆ.
ಅದನ್ನು ರಕ್ತ ಚರಿತ್ರೆಯೆಂದರೂ ಬಹಶ: ತಪ್ಪಾಗಲಾರದು, ಸಾಮಾಜಿಕ ಕ್ರಾಂತಿಯ ಮೂಲಕ ಸಾಮಾಜಿಕ ಸುಧಾರಣೆಯಾಗುವ ಕಾಲಘಟ್ಟದಲ್ಲಿಯೇ ಬ್ರಿಟಿಷರು ಈ ದೇಶವನ್ನು ಆಕ್ರಮಿಸಿ ಲೂಟಿಯೆಸಗಿ ಕೊನೆಗೂ ಗಂಟು ಮೂಟೆ ಕಟ್ಟಿಕೊಂಡು ಹೋಗಲು ಇನ್ನೂರು ವರ್ಷಗಳೇ ಕಳೆಯಬೇಕಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ತುಂಬಾ ಧೀರ್ಘವಾದುದು. ಈವರೆಗೂ ಒಟ್ಟು 26 ನಾಗರೀಕತೆಗಳು ಗತಿಸಿ ಹೋಗಿವೆ, ಆದರೆ ಇಂದಿಗೂ ಅಸ್ಮಿತೆ ಕಾಪಾಡಿಕೊಂಡು ಬಂದಿರುವುದು ನಮ್ಮ ನಾಗರೀಕತೆ ಮಾತ್ರ ಸ್ವಾತಂತ್ರ್ಯ ಬಂದ ಏಳು ಬೀಳಿನ ಇತಿಹಾಸವನ್ನು ನಾವು ನೀವೆಲ್ಲರೂ ಓದಿಕೊಂಡೇ ಬಂದಿದ್ದೇವೆ. ಆದರೆ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಮೌಲ್ಯವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾದ ಕಾಲಘಟ್ಟದಲ್ಲಿದ್ದೇ ಅರಿತುಕೊಳ್ಳಬೇಕಾಗಿರುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯೂ ಹೌದು.
ಇಂದು ನಾವೆಲ್ಲರೂ ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದೇವೆ, ಇದು ಬರಿ ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವಲ್ಲ ಭಾರತೀಯರ ಪಾಲಿನ ಅಭಿಮಾನದ ಮಹಾ ಉತ್ಸವ. ಈ ಅಮೃತ ಮಹೋತ್ಸವದ ಎಲ್ಲಾ ಗೌರವಗಳು ಈ ಅಮೃತ ಘಳಿಗೆ ಸಾಕ್ಷಿಯಾದ ಸ್ವಾತಂತ್ರ್ಯ ಹೋರಾಟಗಾರರಿಗೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಮಡಿದವರ ಎದೆಯ ಗುಂಡಿಗೆಗೆ ಅರ್ಪಿತವಾಗಬೇಕು. ದೇಶಕ್ಕೇನೋ ಸ್ವಾತಂತ್ರ್ಯ ದೊರೆತಿದೆ ಆದರೆ ಈ ಕೊಳಕು ರಾಜಕಾರಣದಿಂದಲೂ ನಮಗೆ ಸ್ವಾತಂತ್ರ್ಯ ದೊರೆಯಬೇಕಾಗಿದೆ. ಎಪ್ಪತ್ತೈದು ವರ್ಷಗಳ ಹಿಂದೆ ಮಹಾನ್ ದೇಶಪ್ರೇಮಿಗಳು ಭಾರತಾಂಬೆಯನ್ನು ಸ್ವಾತಂತ್ರ್ಯಗೊಳಿಸಲೆಂದೆ ತಮ್ಮ ನೆತ್ತರ ಹರಿಸಿ, ಉಸಿರು ಬಿಟ್ಟು ನಮ್ಮನ್ನು ಸ್ವತಂತ್ರ್ಯವಾಗಿ ಬದುಕಲು ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ.
ವೀರ ಯೋಧರು ಹಗಲು ರಾತ್ರಿ ಎನ್ನದೆ ಮದ್ದು ಗುಂಡಿನ ದಾಳಿಗೆ ಎದೆಗುಂಡಿಗೆ ಕೊಟ್ಟು ತ್ರಿವರ್ಣ ಧ್ವಜವಿಡಿದು ನಮ್ಮೆಲ್ಲರನ್ನೂ ಕಾಯುತ್ತಿದ್ದಾರೆ. ವಿಪರ್ಯಾಸವೆಂದರೆ! ರಾಜಕಾರಣದಿಂದ ಮಾತ್ರ ನಮಗಿನ್ನೂ ಸ್ವಾತಂತ್ರ್ಯ ದೊರೆತಂತೆ ಕಾಣುತ್ತಿಲ್ಲ, ಸಮಾಜ ಸೇವೆಯ ನೆಪದಲ್ಲಿ ರಾಜಕಾರಣಕ್ಕೆ ಬಂದವರು ದೊಡ್ಡ ದೊಡ್ಡ ರೆಸಾರ್ಟ್ಗಳು, ಕಾರ್ಖಾನೆಗಳು, ನೂರಾರು ಎಕರೆ ಜಮೀನು, ಇನ್ನಿತರ ಲಾಭದಾಯಕ ಉದ್ಯಮದಲ್ಲಿ ತೊಡಗಿ ರಾಜಕಾರಣದ ಅಮಲಿನಲ್ಲಿ ನಮ್ಮೆಲ್ಲರನ್ನೂ ತೇಲಿಸುತ್ತಾ ಒಂದು ರೀತಿಯ ದಾಸ್ಯತ್ವಕ್ಕೆ ನಮ್ಮನ್ನೊಳಪಡಿಸಿದ್ದಾರೆ. ಈ ದಾಸ್ಯತ್ವದಿಂದ ಜಾತಿ ವ್ಯವಸ್ಥೆಯಿಂದ ನಾವು ವಿಮುಕ್ತರಾದ ದಿನವೇ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ.
ಅದೇನೆ ಇರಲಿ, ತಾಯಿ ಭಾರತಾಂಬೆಯು ಸ್ವಾತಂತ್ರ್ಯ ಹೊಂದಿ ಇಂದಿಗೂ ಭಾರತ ‘ವಿಶ್ವ ಗುರು’ ವಾಗಿ ರಾರಾಜಿಸುತ್ತಿದೆ. ಇದು ನಮ್ಮೆಲ್ಲರ ಅಭಿಮಾನದ ಮಹಾ ಉತ್ಸವ. “ಎಲ್ಲರಿಗೂ ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು.
ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.