(www.vknews.com) : ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ನಿಷ್ಪಕ್ಷಪಾತ ಉದ್ದೇಶದಿಂದ ರೆಡ್ ಕ್ರಾಸ್ ಸಂಸ್ಥೆ ಸಮಾಜ ಸೇವೆ ಮಾಡಲು ಹುಟ್ಟಿಕೊಂಡಿತು. ಆದರೆ ಇಂದಿನ ದಿನಗಳಲ್ಲಿ ಶಾಂತಿಯನ್ನು ಕದಡಲು ಕೆಲ ರಾಜಕಾರಣಿಗಳು, ಬಂಡವಾಳಶಾಹಿಗಳು ಮತ್ತು ಕೆಲ ಸಂಘನೆಗಳು ಐಟಿ ಸೆಲ್ ಗಳನ್ನು ಹುಟ್ಟು ಹಾಕಿದ್ದಾರೆ. ಅವರ ಕೆಲಸ ಇಷ್ಟೇ, ಕಾನೂನಿನ ಕಣ್ಣು ತಪ್ಪಿಸಿ ಸಮಾಜದ ಶಾಂತಿ ಕದಡಿ ತಮಗೆ ಬೇಕಾದಂತಹ ಲಾಭ ಪಡೆಯುಕೊಳ್ಳುವುದು. ಮುಗ್ಧ ಜನರೇ ಅಲ್ಲ ಬುದ್ಧಿ ಜೀವಿಗಳು ಸಹ ಅವರ ಪೇಚಿಗೆ ಸಿಲುಕಿಕೊಳ್ಳುವುದುಂಟು. ಬಹಳ ಕ್ರಮಬದ್ಧವಾಗಿ ಚಾಣಾಕ್ಷತನದಿಂದ ಐಟಿ ಸೆಲ್ ಗಳು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ. ಅವರಿಗೆ ಐಟಿ ಸೈನಿಕರು ಎಂಬ ಬಿರುದು ಸಹ ಕೆಲವರು ಕೊಟ್ಟಿದ್ದಾರೆ. ಒಂದು ಸಂದೇಶವನ್ನು ವೈರಲ್ಲಿ ಮಾಡುವುದರಲ್ಲಿ , ಟ್ರೋಲ್ ಮಾಡುವುದರಲ್ಲಿ ಅವರು ನಿಪುಣರಾಗಿರುತ್ತಾರೆ. ಸೋಷಿಯಲ್ ಮೀಡಿಯಾ ಅವರ ಅರಮನೆ. ಇಡೀ ಐಟಿ ಪ್ರಪಂಚವೇ ಅವರ ಸಾಮ್ರಾಜ್ಯ. ಅವರು ಆಡಿದ್ದೇ ಆಟ. ಮಾಡಿದ್ದೆ ದರ್ಬಾರು. ಬೆಸಿಯೋ ಬಯಸದೆಯೋ ಪ್ರಪಂಚದಾದ್ಯಂತ ಜನರು ಅವರಿಗೆ ಉಚಿತವಾಗಿ ಸಿಕ್ಕಿರುವ ಬಲೀಕ ಬಕ್ರಾ ಗಳಾಗಿ ಹೋಗಿದ್ದಾರೆ. ಈ ಜಾಲದಿಂದ ಹೊರಬರುವುದು ಬಹಳ ಕಷ್ಟ. ಮೊಬೈಲ್ ಇಲ್ಲದೆ , ವಾಟ್ಸ್ ಆಪ್ ಇಲ್ಲದೆ, ಫೇಸ್ ಬುಕ್ , ಟ್ವಿಟ್ಟರ್ ಇತ್ಯಾದಿಗಳಿಲ್ಲದೆ ಬದುಕುವುದುಂಟೆ …! ಅವುಗಳ ಚಟ ನಶೆಯಾಗಿ ನೆತ್ತಿಗೇರಿಬಿಟ್ಟಿದೆ. ಇಳಿಯುವುದು ಬಹಳ ಕಷ್ಟ . ಅಂದರೆ ಇದಕ್ಕೆ ಅಂತ್ಯ ಇಲ್ಲವೇ ? ಇದೆ . ಹಿರಿಯರು ಹೇಳುತ್ತಾರೆ : ರೋಗವನ್ನು ದ್ವೇಷಿಸು ರೋಗಿಯನ್ನಲ್ಲ. ಅಂದರೆ ಸರಿಯಾದ ಔಷಧಿ ಕೊಟ್ಟರೆ ರೋಗವನ್ನು ಗುಣ ಪಡಿಸಬಹುದು. ಅದಕ್ಕೆ ಬಹಳ ಮುಖ್ಯವಾಗಿ ರೋಗದ ಗುಣಲಕ್ಷಣಗಳನ್ನು ಮತ್ತು ಅದರ ಮೂಲವನ್ನು ಹುಡುಕುವುದು.
ಉದಾಹರಣೆಗೆ ಕೆಲ ದಿನಗಳ ಹಿಂದೆ ವಾಟ್ಸ್ ಆಪ್ ಗ್ರೂಪ್ ನಲ್ಲಿ ಒಂದು ಸಮುದಾಯದ ಬಗ್ಗೆ ದ್ವೇಷಭರಿತ ಮೆಸೇಜು ಬಂತು . ಸುಮಾರು ೧೨೦ ಜನರು ಆ ವಾಟ್ಸ್ ಆಪ್ ಗ್ರೂಪ್ ನಲ್ಲಿದ್ದರು. ಕೆಲವರು ಮೆಸೇಜನ್ನು ಸಮರ್ಥಿಸಿಕೊಂಡರು. ಒಬ್ಬರು ಮಾತ್ರ ಅದರ ವಿಶ್ಲೇಷಣೆಗೆ ಇಳಿದರು. ಆ ಮೆಸೇಜಿನ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಿದರು. ಕುಲಂಕುಷವಾಗಿ ಆ ಮೆಸೇಜಿನ ಬಗ್ಗೆ ಮಾಹಿತಿ ಸಂಗ್ರಹಿಸಿದರು. ದಯವಿಟ್ಟು ಇಂತಹ ಸುಳ್ಳು ” ಟೈಲರ್ ಮೇಡ್ ” ಮೆಸೇಜುಗಳನ್ನು ಗ್ರೂಪುಗಳಲ್ಲಿ ಫಾರ್ವಾರ್ಡ್ ಮಾಡಿ ಸಮಾಜದ ಶಾಂತಿ ಕಡದ ಬೇಡಿ ಎಂದು ವಿನಂತಿಸಿದರು. ಆದರೆ ರೋಗ ಬಹಳ ಹಳೆಯದಾಗಿತ್ತು. ರೋಗಿ ನಾನೇ ಸರಿ ಎನ್ನುವ ಥಾಟಿಯಲ್ಲಿ ಒಂದು ಮುಖ್ಯ ವಾಹಿನಿಯಲ್ಲಿ ಇದನ್ನು ಬಿತ್ತರಿಸಲಾಗಿದೆ, ನಾನು ಹಾಕಿರುವ ಮೆಸೇಜು ಸತ್ಯ ಎಂದರು.
ವಾದವಿವಾದಗಳು ನಡೆದವು. ವಿಶ್ಲೇಷಣೆಗಿಳಿದ ವೈದ್ಯರು ಆ ಮೆಸೇಜು ಸುಳ್ಳು ಅದರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಹೇಳಿ ಒಂದು ಫ್ ಐ ಆರ್ ಪ್ರತಿಯನ್ನು ತೋರಿಸಿದರು. ಬೆಳಿಗ್ಗೆ ಪ್ರಾರಂಭವಾದ ಯುದ್ಧ ಸಂಜೆಯಾದರೂ ನಿಲ್ಲಲಿಲ್ಲ. ಮುಂದುವರೆಯಿತು. ನಿಮ್ಮ ಮೇಲೆ ಕೇಸ್ ಬುಕ್ ಮಾಡುತ್ತೇನೆ ಎಂದು ವೈದ್ಯರು ಹೇಳಿದರು. ಗ್ರೂಪಿನಲ್ಲಿ ಮಾತಿನ ಚಕಮಕಿ ನಡೆಯಿತು. ನ್ಯಾಯಾಧೀಶರಾದ ಗ್ರೂಪ್ ಅಡ್ಮಿನ್ ಮಧ್ಯಸ್ಥಿಕೆ ವಹಿಸಿ, ಕುಲಂಕುಷವಾಗಿ ವಿಷಯವನ್ನು ತಿಳಿದು, ಅದು ಸುಳ್ಳು ಮೆಸೇಜು ಎಂದು ಖಾತರಿಯಾದನಂತರ ಮಾನ್ಯ ರೋಗಿಯವರಿಗೆ ಕ್ಷಮೆಯಾಚಿಸಲು ಸಮಯ ಕೊಟ್ಟರು. ಬೇರೆಯವರು ಗ್ರೂಪ್ ನಲ್ಲಿ ಮೆಸೇಜುಗಳನ್ನು ಪೋಸ್ಟ್ ಮಾಡುವ ಹಾಗಿಲ್ಲ, ಅಡ್ಮಿನ್ ಮಾತ್ರ ಎಂದು ಘೋಷಿಸಿ ವಾಟ್ಸ್ ಆಪ್ ಸೆಟ್ಟಿಂಗ್ ಬದಲಾಯಿಸಿದರು. ಪರದೆಯ ಹಿಂದೆ ಏನು ನಡೆಯಿತೋ ಗೊತ್ತಿಲ್ಲ. ತಿಳಿದ ಮಾಹಿತಿಗಳ ಪ್ರಕಾರ ರೋಗಿಗೆ ರೋಗದ ತೀಕ್ಷ್ಣತೆಯ ಬಗ್ಗೆ ತಿಳಿ ಮಾತುಗಳನ್ನು ಹೇಳಿ ಒಪ್ಪಿಸಿದರಂತೆ. ಮಾರನೆ ದಿನ ಬೆಳಿಗ್ಗೆ ಪುಣ್ಯಾತ್ಮ ರೋಗಿ ಕ್ಷಮೆ ಯಾಚಿಸಿದರು. ಕೆಲವು ದಿನಗಳ ನಂತರ ಮತ್ತೆ ನಿಷ್ಕ್ರಿಯವಾಗಿದ್ದ ಗ್ರೂಪ್ ಒಳ್ಳೆಯ ಮೆಸೇಜುಗಳಿಗೆ ಸಕ್ರಿಯವಾಯಿತು .
ನೀತಿ ಪಾಠ: ಊರಿನ ಉಸಾಬರಿ ನಮಗೆ ಏಕೆ ಎಂದು ಅವರು ಸುಮ್ಮನೆ ಇರುತ್ತಿದ್ದರೆ, ಎಲ್ಲರು ಆ ಮೆಸೇಜನ್ನು ಸತ್ಯ ಎಂದು ತಿಳಿಯುತ್ತಿದ್ದರು. ಆದರೆ ಅವರಲ್ಲಿ ನಮಗೆ ಸರ್ಕಾರ ಕೊಟ್ಟಿರುವ ಸಂವಿಧಾನದ ಹಕ್ಕನ್ನು ಎತ್ತಿ ಹಿಡಿದರು. ಆ ದ್ವೇಷದ ಕಿಡಿ, ಬೆಂಕಿಯಾಗುವ ಮುಂಚೆ ಅಲ್ಲೇ ಶಮನವಾಗಿ ಹೋಯಿತು.
ಸಮಾಜದಲ್ಲಿ ಕಾನೂನು ಬಾಹಿರವಾಗಿ ಸಮಾಜದ ಶಾಂತಿಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕದಡಲು ಪ್ರಯತ್ನಿಸುತ್ತಾರೋ ಅವರ ವಿರುದ್ಧ ಕಾನೂನು ಭದ್ಧವಾಗಿ ಹೊರಡುವ ಹಕ್ಕು ಸಂವಿಧಾನ ಎಲ್ಲರಿಗೂ ಕೊಟ್ಟಿದೆ. ಅಹಿತಕರ ಚಟುವಟಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ದೃಷ್ಟಿಯಿಂದ ಹಾದು ಹೋದರೆ ಸುಮ್ಮನೆ ಕಣ್ಮುಚ್ಚಿ ಕುಳಿತುಕೊಳ್ಳಬೇಡಿ. ಅದು ನೀವು ನಿಮಗೆ ಮತ್ತು ಸಮಾಜಕ್ಕೆ ಪರೋಕ್ಷವಾಗಿ ದ್ರೋಹ ಬಗೆದಂತಾಗುತ್ತದೆ. ಶಾಂತಿ ಕದಡುವವರು ಯಾರೇ ಆಗಿರಲಿ ಅವರಿಗೆ ಕಾನೂನಿನ ಕಟಕಟೆಗೆ ಎಳೆದು ತಂದು ನಿಲ್ಲಿಸಿ.
ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಫ್ ಐ ಆರ್ ಬುಕ್ ಮಾಡಿ. ಆನ್ ಲೈನ್ ನಲ್ಲು ಸಹ ಮಾಡಬಹುದು. ವಕೀಲರೊಂದಿಗೆ ಸಮಾಲೋಚನೆ ನಡೆಸಿ. ಕಾನೂನು ಕ್ರಮ ತೆಗೆದು ಕೊಳ್ಳಿ. ಹೋರಾಡಿ. ಶಾಂತಿಪ್ರಿಯ ಎನ್ ಜಿ ಓ ಗಳಿಗೆ ಮಾಹಿತಿ ತಿಳಿಸಿ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಿ ಮತ್ತು ಸರ್ಕಾರೇತರರ ಅನೇಕ ವೆಬ್ ಸೈಟ್ ಗಳಿವೆ. ಅವರುಗಳಿಗೆ ದೂರು ಸಲ್ಲಿಸಿ. ದೇಶದ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ.
ಅವರು ನೆಗೆಟಿವ್ ಐಟಿ ಸೆಲ್ ಗಳನ್ನು ನಡೆಸುತ್ತಿದ್ದರೆ ಅವರ ತದ್ವಿರುದ್ಧ ಪಾಸಿಟಿವ್ ಐಟಿ ಸೆಲ್ ಗಳನ್ನು ಪ್ರಾರಂಭಿಸಿ. ಇಡೀ ಪ್ರಪಂಚಕ್ಕೆ ಸತ್ಯ ಏನು ಅನ್ನುವುದು ಗೊತ್ತಾಗಲಿ. ಸತ್ಯವಾದಿ ಯೂಟ್ಯೂಬರ್ ಗಳ ಸಾಥ್ ಕೊಡಿ. ನೀವು ಸಹ ಸತ್ಯವಾದಿ ಯೂಟ್ಯೂಬರ್ ಆಗಬಹುದು. ರಾಜ್ಯವನ್ನು, ದೇಶವನ್ನು ಮತ್ತು ಪ್ರಪಂಚವನ್ನು ರಣಹದ್ದುಗಳಿಂದ ಕಾಪಾಡಬಹುದು. ಧಮ್ ಇದೀಯಾ ?
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.