ಲೇಖನ (www.vknews.com) : ಲಾಕ್ ಡೌನ್ ಆದ ದಿನ ೪ ಸಾವಿರ ರೂಗಳನ್ನು ತೆಗೆದುಕೊಂಡು ಮನೆಗೆ ಹೊರಟೆ. ಬಹುಶಃ ೮ ದಿನಗಳಲ್ಲಿ ಮತ್ತೆ ಅಂಗಡಿಗಳನ್ನು ಪ್ರಾರಂಭ ಮಾಡಬಹುದೆಂಬ ನಿರೀಕ್ಷೆ ಮನದಲ್ಲಿತ್ತು. ಆದರೆ ಹಾಗೆ ಆಗಲಿಲ್ಲ. ಪುನಃ ೩ ಸಲ ಬಂದು ಒಟ್ಟು ೧೫ ಸಾವಿರ ರೂಗಳನ್ನು ತೆಗೆದುಕೊಂಡು ಹೋದೆ. ಅಂಗಡಿಯ ಮಾಲೀಕನಿಗೆ ಈ ತಿಂಗಳ ಬಾಡಿಗೆ ಪಾವತಿ ಮಾಡಲು ಆಗುವುದಿಲ್ಲ ಎಂದು ಹೇಳಿ ಹೊರಟೆ. ಈ ಒಂದುವರೆ ತಿಂಗಳಲ್ಲಿ ೧೯ ಸಾವಿರ ರೂಗಳು ಖರ್ಚು ಆಗಿ ಹೋಯಿತು. ಒಂದು ನಯಾ ಪೈಸೆಯ ಸಂಪಾದನೆ ಇಲ್ಲ.
ಮಕ್ಕಳಿಗೆ ಆನ್ ಲೈನ್ ಕ್ಲಾಸುಗಳು ಪ್ರಾರಂಭವಾಗಿವೆ. ೩ ಮಕ್ಕಳಿಗೆ ಸುಮಾರು ೨ ಲಕ್ಷ ರೂಗಳನ್ನು ಶಾಲಾ ಮತ್ತು ಕಾಲೇಜು ಫೀಸು ಕಟ್ಟಬೇಕಾಗಿದೆ. ಅಂಗಡಿ ನಡೆಯುತ್ತಿದ್ದಾಗ ಪ್ರತಿ ದಿನ ಪಿಗ್ಮಿ ಉಳಿತಾಯ ಖಾತೆಯಲ್ಲಿ ಅಷ್ಟೋ ಇಷ್ಟೋ ಹಣ ಸೇರಿಸಿ ಇಡುತ್ತಿದ್ದೆ. ಅದು ೬೦ ಸಾವಿರ ಮೊತ್ತವಾಗಿದೆ. ಫೀಸ್ ಕಟ್ಟಲು ಇನ್ನೂ ಒಂದು ಲಕ್ಷ ನಲವತ್ತು ಸಾವಿರ ಹಣ ಬೇಕು. ಏನು ಮಾಡಲಿ.
ರಸ್ತೆಗಳಲ್ಲಿ ಸುಮಾರು ಶೇ ೪೦ ರಷ್ಟು ಮಾತ್ರ ಜನರು ಓಡಾಡುತ್ತಿದ್ದಾರೆ. ಯೋಚನೆ ಮಾಡಿದೆ. ಎಲ್ಲೋ ಓದಿದ್ದ ಒಂದು ಕಥೆ ಅರಿವಿಗೆ ಬಂತು. ಒಬ್ಬ ವ್ಯಾಪಾರಿ ಹೊಟ್ಟೆಪಾಡಿಗೆ ದುಡಿಯಲು ದೂರದ ಊರಿಗೆ ಹೊರಡುತ್ತಾನೆ. ಹೆಂಡತಿ ಬಸುರಿ. ಹೊರಡುವಾಗ ಈ ಮಗುವನ್ನು ದೇವರು ಕಾಪಾಡಲಿ ಎಂದು ನಿಟ್ಟುಸಿರೆಳೆದು ಆಶೀರ್ವದಿಸಿ ನಡೆದ. ಕೆಲವು ದಿನಗಳು ಕಳೆದವು. ಆತ ಮನೆಗೆ ಹಿಂತಿರುಗಿದ. ಹೆಂಡತಿ ತೀರಿಕೊಂಡಿರುವ ವಿಷಯ ತಿಳಿಯಿತು. ಬೇಸರಗೊಂಡ. ಊರಿನವರು ನಿನಗೆ ವಿಷಯ ತಲುಪಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಅಳುತ್ತಾ ಹೆಂಡತಿಯ ಸಮಾದಿ ಬಳಿ ಬಂದು ದುಃಖದಲ್ಲಿ ಮುಳುಗಿ ಕುಳಿತಿದ್ದ. ಸಮಾಧಿಯಿಂದ ಮಗುವಿನ ಅಳುವ ಶಬ್ದ ಕೇಳಿಸಿತು. ಆಶ್ಚರ್ಯಗೊಂಡು ಸಮಾಧಿ ಅಗೆಯಲಾರಂಭಿಸಿದ. ಮಗು ಜೀವಂತವಾಗಿತ್ತು. ಹಿಂಬದಿಯಿಂದ ವಾಣಿ ಕೇಳಿಸಿದಂತಾಯಿತು – ನೀನು ಆಶೀರ್ವಾದ ಮಾಡುವಾಗ ದೇವರು ಈ ಮಗುವನ್ನು ಕಾಪಾಡಲಿ ಎಂದು ಹೇಳಿದ್ದೆ. ಮಡದಿಯನ್ನು ಸಹ ಸೇರಿಸಿ ಆಶೀರ್ವದಿಸಿದಿದ್ದರೆ ಬಹುಶಃ ಅವಳು ಸಹ ಜೀವಂತವಾಗಿರುತ್ತಿದ್ದಳೇನೋ …!
ಕರೋನದ ಭಯ ಇನ್ನೂ ಎಲ್ಲರಿಗು ಕಾಡುತ್ತಿದೆ. ಆದರೆ ಜೀವನ ಸಾಗಬೇಕಲ್ಲ. ಕಥೆಯ ನೀತಿ ಪಾಠವನ್ನು ಮನದಲ್ಲೇ ನೆನೆದು, ದೇವರೇ ನನ್ನನ್ನು ನನ್ನ ಸಂಸಾರವನ್ನು ಕಾಪಾಡು ಎಂದು ಪಾರ್ಥನೆ ಸಲ್ಲಿಸುತ್ತಾ , ಆ ಪರಮಾತ್ಮನನ್ನು ನಂಬಿ ಅಂಗಡಿಗೆ ಬಂದು ಕುಳಿತಿದ್ದೇನೆ. ಸಂಪಾದನೆ ಮತ್ತು ಸಾವು ನಮ್ಮ ಹತೋಟಿಯಲ್ಲಿದೆಯೇ ? ದೇವರೇ ನಮ್ಮ ದೇಶವನ್ನು ರಕ್ಷಿಸು, ವಿಶೇಷವಾಗಿ ದುಃಖದಲ್ಲಿರುವವರಿಗೆ ಬಡವರಿಗೆ ಕಾಪಾಡು.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.