ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ನಾನೀಗ ಭಾರವಾದ ಹೃದಯದೊಂದಿಗೆ ಮೊಬೈಲ್ ಎತ್ತಿಕೊಂಡು ಟೈಪ್ ಮಾಡುತ್ತಿದ್ದೇನೆ. ಇಂದು ಬೆಳಿಗ್ಗೆ ಕೆಲವು ಕೆಸಿಎಫ್ ಮಿತ್ರರೊಂದಿಗೆ ವಾಟ್ಸಪ್ ಮೂಲಕ ನಮ್ಮ ನಾಯಕರ, ಕಾರ್ಯಕರ್ತರ ಬಗ್ಗೆ ವಿಚಾರಿಸಿದೆ. ಅವರ ಮಾತು ಕೇಳಿ ಒಂದೆಡೆ ಮನಸ್ಸು ನೋಯುತ್ತಿದೆ ಮತ್ತೊಂದೆಡೆ ಅಭಿಮಾನದಿಂದ ಬೀಗುತ್ತಿದೆ. ಅಲ್ಲಾಹ್….
ಹೇಗೆ ಬರೆಯಲಿ ನಾನು!!? ನಾನು ಕೇಳಿದ್ದನ್ನೆಲ್ಲಾ ಬರೆಯಲು ನನ್ನಿಂದ ಸಾಧ್ಯವೇ ಇಲ್ಲ! ಆದರೂ ಇಂದಿನ ಲೈಲತುಲ್ ಖದ್ರಿನ ರಾತ್ರಿ ಆ ನಮ್ಮ ಮಿತ್ರರಿಗಾಗಿ ಮನಮಿಡಿದು ದುಆ ಮಾಡಲು ಬೇಕಾಗಿ ಬರೆಯುತ್ತಿದ್ದೇನೆ ಅಷ್ಟೇ…
ನಿನ್ನೆ ರಾತ್ರಿ ವೇಳೆ ದುಬೈನಿಂದ ಸುಮಾರು 177 ಜನರನ್ನು ಹೊತ್ತುಕೊಂಡು ಎರಡನೇ ತಂಡ ಬಂದಿಳಿಯಿತು. ಈ ತಂಡದಲ್ಲಿ ಬಂದ DK ಅಹ್ಮದ್ ಹಾಜಿಯವರ ಅನುಭವಗಳನ್ನು ಹಾಗೂ ನಮ್ಮ ಕೆಸಿಎಫ್ ಮಿತ್ರರಿಗಾಗಿ ಮನತುಂಬಿ ದುಆ ಮಾಡುವುದನ್ನು ನಾವು ವಾಟ್ಸಪ್ ಮೂಲಕ ಕೇಳಿದೆವು. ಊರಿನಲ್ಲಿರುವ ಕುಟುಂಬದ ಭಾರವನ್ನು ಹೊತ್ತು ತನ್ನೂರನ್ನೂ ತನ್ನವರನ್ನೂ ಬಿಟ್ಟು ದೂರದ ಗಲ್ಫ್ ರಾಷ್ಟ್ರಗಳಿಗೆ ತೆರಳಿ ರಾತ್ರಿ ಹಗಲೆನ್ನದೆ ಮೈಮುರಿದು ದುಡಿಯುವ ಅನಿವಾಸಿಗಳು, ಊರಿನಲ್ಲಿರುವ ಮಸೀದಿ ಮದ್ರಸಾಗಳಿಗೆ, ಸಂಸ್ಥೆ ಸಮುಚ್ಚಯಗಳಿಗೆ, ಸಂಘಟನಾ ಚಟುವಟಿಕೆಗಳಿಗೆ, ದಅವಾ ಕಾರ್ಯಾಚರಣೆಗಳಿಗೆ, ರಿಲೀಫ್ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವವರು! ತಾವು ದುಡಿದ ಹಣದಿಂದ ದೊಡ್ಡ ಒಂದು ಪಾಲನ್ನು ನಮ್ಮ ನಾಡಿನ ನಿರ್ಮಾಣಕ್ಕಾಗಿ ವ್ಯಯಿಸುವ ಅನಿವಾಸಿಗಳ ತ್ಯಾಗ ನಿಜಕ್ಕೂ ಮರೆಯಲು ಸಾಧ್ಯವೇ ಇಲ್ಲ.
ಆದರೆ ನಾಡಿನ ಆಧಾರಸ್ತಂಭವಾಗಿದ್ದ ಅನಿವಾಸಿಗಳ ಇಂದಿನ ಸ್ಥಿತಿ ಬರ್ಬರವಾಗಿದೆ!! ಹಲವರಿಗೆ ಕೆಲಸವಿಲ್ಲ, ಕೆಲವರಿಗೆ ಕೆಲಸವಿದ್ದರೂ ಸಂಬಳವಿಲ್ಲ, ಇನ್ನೂ ಹಲವರು ಕೆಲಸವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ! ಇಡೀ ಪ್ರಪಂಚಕ್ಕೇ ವಕ್ಕರಿಸಿರುವ ಕೊರೋನಾ ಅಟ್ಟಹಾಸ ಗಲ್ಫ್ ರಾಷ್ಟ್ರಗಳನ್ನೂ ಬಿಟ್ಟಿಲ್ಲ!! ನಮ್ಮೂರಿನ ಹಲವು ಮಿತ್ರರು, ಕಾರ್ಯಕರ್ತರು, ನಾಯಕರು ಕೂಡ ವೈರಸ್ ಸೋಂಕಿತರಾಗಿ ಭೀತಿಯಿಂದ ದಿನ ದೂಡುತ್ತಿದ್ದಾರೆ!! ಕೆಲವರು ಆಸ್ಪತ್ರೆಯಲ್ಲಿದ್ದರೆ ಇನ್ನೂ ಕೆಲವರು ಚೇತರಿಸಿಕೊಂಡಿದ್ದಾರೆ! ಈ ದುರಂತಗಳ ಮಧ್ಯೆಯೂ ನಮ್ಮ ಕೆಸಿಎಫ್ ಮಿತ್ರರು ಮುಖಕ್ಕೊಂದು ಮಾಸ್ಕ್ , ಕೈಗೆ ಗ್ಲೌಸ್ ಹಾಕಿಕೊಂಡು ನಗರದಾದ್ಯಂತ ಗಲ್ಲಿಗಲ್ಲಿಗಳಲ್ಲಿ ಜನಸೇವೆಯಲ್ಲಿ ಸಕ್ರೀಯರಾಗಿದ್ದಾರೆ.
ಜನರು ತಂತಮ್ಮ ರೂಂಗಳಿಂದ ಹೊರಬರಲು ಕೂಡ ಹೆದರುತ್ತಿರುವಾಗ ರಾತ್ರಿ ಹಗಲೆನ್ನದೆ ಜೀವದ ಹಂಗು ತೊರೆದು ಫ್ಲಾಟ್ಗಳಲ್ಲಿ ಹಸಿದು ಕುಳಿತವರು, ಶೀಘ್ರ ಸಹಾಯ ಬೇಕಾದವರು, ಕ್ವಾರಂಟೈನ್ನಲ್ಲಿರುವವರಿಗಾಗಿ ಆಹಾರದ ಪೊಟ್ಟಣಗಳೊಂದಿಗೆ ಬೀದಿಗಿಳಿದಿರುವ ಕೆಸಿಎಫ್ ಮಿತ್ರರು ಮಾಡುತ್ತಿರುವ ಸೇವೆ ನಿಜಕ್ಕೂ ವರ್ಣಿಸಲಸಾಧ್ಯ! ಮೊನ್ನೆ ಬರ್ ದುಬೈಯಲ್ಲಿರುವ ಆಸಿಫ್ ಹಾಗೂ ಅಹ್ಸನಿ ಉಸ್ತಾದರಿಗೆ ವೀಡಿಯೋ ಕಾಲ್ ಮಾಡಿದಾಗ ಅವರು ರೂಮುಗಳಲ್ಲಿ ಬಾಕಿಯಾಗಿರುವ ಅನಿವಾಸಿ ಮಿತ್ರರಿಗಾಗಿ ಇಫ್ತಾರ್ಗೆ ಬೇಕಾಗಿರುವ ಆಹಾರ ಪೊಟ್ಟಣಗಳನ್ನು ಹೊತ್ತು ಕಾರಿನಲ್ಲಿ ಹೋಗುತ್ತಿದ್ದರು! ಇನ್ನೂ ಕೆಲವರು ಆಹಾರ ಪೊಟ್ಟಣಗಳನ್ನು ತಯಾರಿಸುವ ಬ್ಯುಸಿಯಲ್ಲಿದ್ದರು. ಕೇವಲ ಮುಸ್ಲಿಮರಿಗೆ ಮಾತ್ರವಲ್ಲ ಅನಿವಾಸಿಗಳಾದ ಇತರ ಧರ್ಮೀಯರಿಗೆ, ಹಸಿದು ಕಂಗಾಲಾಗಿದ್ದ ಫಿಲಿಪ್ಪೀನ್ಸ್ಗಳಿಗೂ ನಮ್ಮ ಕೆಸಿಎಫ್ ಮಿತ್ರರು ಆಹಾರ ಪೊಟ್ಟಣಗಳನ್ನು ತಲುಪಿಸಿದ್ದಾರೆ, ಆಸ್ಪತ್ರೆಯಲ್ಲೇ ಡ್ಯೂಟಿಯಲ್ಲಿರುವ ನಮ್ಮ ಅಬುಧಾಬಿ ಕೆಸಿಎಫ್ನ ಚುರುಕಿನ ನಾಯಕ ಅಹ್ಮದ್ ಕಬೀರ್ ಕೊರೋನಾ ಪೊಸೆಟಿವ್ ಆಗಿದ್ದ ಐವತ್ತಕ್ಕೂ ಮಿಕ್ಕ ಜನರನ್ನು ಕೆಸಿಎಫ್ ವಾಹನಗಳ ಮೂಲಕ ಆಸ್ಪತ್ರೆಗೆ ತಲುಪಿಸಿದ ಘಟನೆ ಸಹಿತ ಕೆಸಿಎಫ್ ನಡೆಸಿದ ಕಾರ್ಯಾಚರಣೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದಾಗ ನಿಜಕ್ಕೂ ನಾನು ಹೌಹಾರಿಬಿಟ್ಟೆ!! ಮೊನ್ನೆ ಮರಣಹೊಂದಿದ ಕೆಸಿಎಫ್ ಕಾರ್ಯಕರ್ತ ಅಬ್ಬಾಸ್ ಉಚ್ಚಿಲ ರವರ ಜನಾಝ ನಮಾಝ್ ಹಾಗೂ ದಫನ ಕಾರ್ಯವೂ ಅಬುಧಾಬಿ ಕೆಸಿಎಫ್ ನೇತೃತ್ವದಲ್ಲೇ ನಡೆದ ಬಗ್ಗೆ ಅಬುಧಾಬಿಯ ಅಮಾನಿ ಉಸ್ತಾದ್ ತುಂಬಾ ನೋವಿನೊಂದಿಗೆ ವಿವರಿಸಿದರು! ದುಬೈಯಲ್ಲೂ ಕೊರೋನದಿಂದ ಮೃತಪಟ್ಟ ಇಬ್ಬರ ಜನಾಝ ನಮಾಝ್ ಹಾಗೂ ದಫನ ಅಲ್ಲಿನ ಕೆಸಿಎಫ್ ನಾಯಕರ ನೇತೃತ್ವದಲ್ಲೇ ನಡೆದಿತ್ತು! ಸೌದಿ ಅರೇಬಿಯಾ, ಬಹ್ರೈನ್ ಸಹಿತ ಗಲ್ಫ್ ರಾಷ್ಟ್ರಗಳ ಬಹುತೇಕ ಎಲ್ಲಾ ಕಡೆಯಲ್ಲೂ ಕೆಸಿಎಫ್ ನಾಯಕರು ಕಾರ್ಯಕರ್ತರು ರಾಷ್ಟ್ರದಾದ್ಯಂತ ಇರುವ ತಮ್ಮ ಕಾರ್ಯಕರ್ತರಿಗೆ ವೈಯಕ್ತಿಕವಾಗಿ ಕರೆಮಾಡಿ ಅವರ ಸ್ಥಿತಿಗತಿಗಳನ್ನು ಅನ್ವೇಷಣೆ ಮಾಡಿ ಅವರ ಮನೆಯ ಪರಿಸ್ಥಿತಿಯನ್ನು ಅರಿತುಕೊಂಡು ರಹಸ್ಯವಾಗಿ ಸಹಾಯ ಹಸ್ತವನ್ನು ಚಾಚಿದ್ದು ಕೂಡ ಕೆಲವು ನಾಯಕರು ವಿವರಿಸಿದಾಗ ಮನಸ್ಸು ತುಂಬಿ ಬಂತು!! ಅಲ್ಲದೆ ಹಲವು ಸಾದಾತ್ಗಳನ್ನು ಉಲಮಾ ಗಳನ್ನು ಸಂಪರ್ಕಿಸಿ ಆನ್ಲೈನ್ ಮೂಲಕ ದುಆ ಮಜ್ಲಿಸ್ಗಳನ್ನು ನಡೆಸಿದ್ದಾರೆ. ಕುಟುಂಬವಿಲ್ಲದೆ ಏಕಾಂಗಿಯಾಗಿರುವ ಅನಿವಾಸಿಗಳಿಗೆ ಧೈರ್ಯ ತುಂಬಿದ್ದಾರೆ.
ಹೀಗೆ ಮುಂದುವರಿಯುತ್ತದೆ ಆ ಸೇವೆಗಳು. ಅವರ ಸೇವೆಯನ್ನು ಸಂಪೂರ್ಣವಾಗಿ ಬರೆಯಲು ನನಗೆ ಸಾಧ್ಯವಿಲ್ಲ. ಅದ್ಹೇಗೆ ವಿವರಿಸಬೇಕೆಂದು ಅರ್ಥವಾಗುತ್ತಿಲ್ಲ! ಕೆಸಿಎಫ್ ಎಂದು ಕೇಳುವಾಗಲೇ ಅಭಿಮಾನ ಪಡುವಂತೆ ಮಾಡಿಬಿಟ್ಟಿದ್ದಾರೆ ನಮ್ಮ ಮಿತ್ರರು!!! ಅಲ್ಲಾಹ್, ನಾಡಿಡೀ ವೈರಸ್ ಹರಡಿ ನಿಂತಿರುವಾಗ ಹಸಿದು ಕುಳಿತಿರುವವರ ಬಳಿಗೆ ಹೋಗಿ ಸೇವೆ ಮಾಡುತ್ತಿರುವ ನಮ್ಮ ಮಿತ್ರರು ನಿಜಕ್ಕೂ ಗ್ರೇಟ್!! ನೀನು ಕಾಪಾಡಬೇಕು ಅಲ್ಲಾಹ್….
ಅವರ ಸೇವೆಗಳು ಕೇವಲ ಅಲ್ಲಿಗೆ ಮಾತ್ರ ಸೀಮಿತಗೊಂಡಿಲ್ಲ. ನಮ್ಮ ಊರಿನಲ್ಲಿ ಜಮಾಅತ್ ಸಮಿತಿಗಳು, ಸಂಘಟನೆಗಳು, ಸಂಸ್ಥೆಗಳು ಕೊಡುತ್ತಿರುವ ಕಿಟ್ಗಳಲ್ಲೂ ಸೌದಿ,ಯುಎಇ, ಕತಾರ್, ಒಮಾನ್, ಬಹ್ರೈನ್, ಕುವೈತ್ಗಳಲ್ಲಿ ದುಡಿಯುವ ಅನಿವಾಸಿ ಮಿತ್ರರ ಪಾಲು ದೊಡ್ಡದಿದೆ!! ತಮ್ಮ ಅವಸ್ಥೆಯೇ ಶೋಚನೀಯವಾಗಿರುವಾಗ ಇನ್ನೊಬ್ಬರ ಸೇವೆಗಾಗಿ ಮನಮಿಡಿಯುವ ನಮ್ಮ ಮಿತ್ರರು ಅಭಿನಂದನಾರ್ಹರು. ಅಲ್ಲಾಹು ಎಲ್ಲವನ್ನೂ ಖಬೂಲ್ ಮಾಡಲಿ-ಆಮೀನ್ ನಿನ್ನೆ ದುಬೈನಿಂದ ಮಂಗಳೂರಿನತ್ತ ವಿಮಾನ ಮೂಲಕ ಆತಂಕದೊಂದಿಗೆ ಮರಳುತ್ತಿದ್ದ ಜನರಿಗೆ ನಮ್ಮ ಕೆಸಿಎಫ್ ಮಿತ್ರರು ದುಬೈ ಏರ್ಪೋರ್ಟಿಗೆ ತೆರಳಿ ಧೈರ್ಯ ತುಂಬಿ, ಆಹಾರ ಪೊಟ್ಟಣಗಳನ್ನು ವಿತರಿಸಿ, ಮುನ್ನೆಚ್ಚರಿಕೆಗಳನ್ನು ನೀಡಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ನಿಝಾಮಿ ಉಸ್ತಾದ್ ಸಹಿತವಿರುವ ನಾಯಕರು ಕಾರ್ಯಕರ್ತರು ಒಟ್ಟು ಸೇರಿ ಬೀಳ್ಕೊಟ್ಟಿದ್ದಾರೆ. ಅಲ್ ಹಂದುಲಿಲ್ಲಾಹ್! ಇದರ ತಯಾರಿಗಳ ಬಗ್ಗೆ ಮೊನ್ನೆ ದುಬೈ ಕೆಸಿಎಫ್ ನಾಯಕ ಇಕ್ಬಾಲ್ ಕಾಜೂರು ರವರು ವಿಶಾಲವಾಗಿ ವಿವರಿಸಿದ್ದರು. ಬೈತಾರ್ ಉಸ್ತಾದ್, ರಹೀಂ ಸಅದಿ, ಜಮಾಲಾಕ ಹಾಗೂ ಅಯ್ಯೂಬಾಕ ರವರ ನೇತೃತ್ವದಲ್ಲಿ ಸೌದಿ, ಕತಾರ್, ಬಹ್ರೈನ್ ಹಾಗೂ ಒಮಾನ್ನಲ್ಲೂ ಕೆಸಿಎಫ್ ಮಿತ್ರರು ರಾತ್ರಿ ಹಗಲೆನ್ನದೆ ಜನಸೇವೆಯಲ್ಲಿ ಸಕ್ರೀಯವಾಗಿ ಇಳಿದಿದ್ದಾರೆ. ಅಲ್ ಹಂದುಲಿಲ್ಲಾಹ್…
ಇಂದು ಲೈಲತುಲ್ ಖದ್ರ್ ನಿರೀಕ್ಷೆ ಇರುವ ಪುಣ್ಯ ರಾತ್ರಿ! ಈ ಮಧ್ಯೆ ನಮ್ಮ ಹಲವು ಅನಿವಾಸಿ ಕಾರ್ಯಕರ್ತರು, ನಾಯಕರು COVID-19 ಪೊಸೆಟಿವ್ ಆಗಿ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಹಲವು ಅನಿವಾಸಿಗಳ ಕುಟುಂಬಗಳು ಆತಂಕದಲ್ಲಿದೆ. ಹಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ, ನಮಗೆ ಯಾವತ್ತೂ ಅಭಿಮಾನವಾಗಿರುವ ಈ ಮಿತ್ರರಿಗಾಗಿ ನಮಗೆ ಕೊಡಲು ಸಾಧ್ಯವಿರುವುದು ದುಆ ಮಾತ್ರವಾಗಿದೆ. ಅವರಿಗಾಗಿ ದುಆ ಮಾಡಲು ಇದಕ್ಕಿಂತ ಉತ್ತಮ ರಾತ್ರಿ ಇನ್ನೊಂದಿಲ್ಲ. ಇಂದಿನ ಈ ಪುಣ್ಯ ರಾತ್ರಿಯಲ್ಲಿ ನಮಗಾಗಿ ನಮ್ಮವರಿಗಾಗಿ ದುಆ ಮಾಡುವಾಗ ನಮ್ಮ ಕೆಸಿಎಫ್ ಮಿತ್ರರನ್ನು, ಅನಿವಾಸಿ ಸ್ನೇಹಿತರನ್ನು ನಾವು ಮರೆಯಲೇಬಾರದು. ಅಲ್ಲಾಹು ನಮ್ಮೆಲ್ಲಾ ಮಿತ್ರರಿಗೆ ಸಲಾಮತ್ ನೀಡಲಿ, ಎಲ್ಲಾ ದುರಂತಗಳಿಂದ ಕಾಪಾಡಲಿ – ಆಮೀನ್ ಈ ಧನ್ಯ ರಾತ್ರಿ ನಮ್ಮ ಸಂಘ ಕುಟುಂಬದ ಎಲ್ಲಾ ಉಲಮಾ ಸಾದಾತ್ಗಳಿಗೆ, ಕಾರ್ಯಕರ್ತರಿಗೆ ಹಾಗೂ ಜಾಗತಿಕ ಮನುಕುಲದ ರಕ್ಷೆಗಾಗಿ ಪ್ರತ್ಯೇಕವಾಗಿ ದುಆ ಮಾಡಲು ಮರೆಯದಿರಿ..
✍️ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ (ಉಪಾಧ್ಯಕ್ಷರು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.