(www.vknews.com) : ಅಕ್ಟೋಬರ್ 29, ಬೆಳಗಿನ ಜಾವ 3.26ರ ಸಮಯ. ಎಲ್ಲರೂ ಸಕ್ಕರೆಯ ಸವಿ ನಿದ್ರೆಯಲ್ಲಿ ಇರುವ ಹೊತ್ತು. ಆದರೆ ಭಾರತೀಯ ತಾಂತ್ರಿಕ ವಿದ್ಯಾಲಯ (ಐಐಟಿ) ಹೈದರಾಬಾದ್ ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿ, ಚಿಗುರು ಮೀಸೆಯ ಕುರುಚಲು ಗಡ್ಡದ ಸುರದ್ರೂಪಿ ಯುವಕ ಪಿಚಿಕಾಲ ಸಿದ್ಧಾರ್ಥ ತನ್ನ ಹಾಸ್ಟೆಲ್ನ ಮೂರನೇ ಮಹಡಿಯಿಂದ ಜೀವನದಲ್ಲಿ ವೈರಾಗ್ಯ ಎಂದು ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಕ್ಷಣಾರ್ಧದಲ್ಲಿ ನೂರು ಕಾಲ ಬಾಳಿ ಭಾರತದ ಏಳಿಗೆಗೆ ಪೂರಕವಾಗಬೇಕಿದ್ದ ಯುವಶಕ್ತಿಯೊಂದರ ದೀಪ ನಂದಿ ಹೋಗಿತ್ತು. ಆತನ ಆತ್ಮಹತ್ಯಾ ಚೀಟಿಯಲ್ಲಿ “ಬದುಕಿನಲ್ಲಿ ಆಸೆಯಿಲ್ಲ. ಜೀವನದಲ್ಲಿ ವೈರಾಗ್ಯ ಮೂಡಿದೆ. ನನ್ನ ಜೀವನದಲ್ಲಿ ಬರೀ ಕೆಟ್ಟ ಘಳಿಗೆಗಳೇ ವಿಜೃಂಭಿಸುತ್ತಿದೆ. ಪದೇ ಪದೇ ಅದೃಷ್ಟವೂ ಕೈಕೊಡುತ್ತಿದೆ. ನನ್ನ ಭವಿಷ್ಯ ಏನಾಗುತ್ತದೆ ಎಂಬುದರ ಬಗ್ಗೆ ನನಗೆ ತೋಚುತ್ತಿಲ್ಲ. ಕಳೆದ ಎರಡು ತಿಂಗಳುಗಳಿಂದ ಮಾನಸಿಕ ಹಿಂಸೆಯಿಂದ ಬಳಲಿ ಬೆಂಡಾಗಿದ್ದೇನೆ. ಶೈಕ್ಷಣಿಕವಾಗಿ ಬದ್ದತೆ ಮತ್ತು ಏಕಾಗ್ರತೆ ಬರಲು ಸಾಧ್ಯವಾಗುತ್ತಿಲ್ಲ.
ನನ್ನ ಆತ್ಮವೇ ನನ್ನನ್ನು ಪ್ರತಿ ಬಾರಿಯೂ ಪ್ರಶ್ನಿಸುತ್ತಿದೆ. ನಾನು ಬದುಕಿರುವುದೇ ವ್ಯರ್ಥ. ನಾನು ನನ್ನನ್ನು ಪ್ರೀತಿಸುವ ವೈಭವೀಕರಿಸುವ ವ್ಯಕ್ತಿಯಾಗಿದ್ದೇನೆ. ನಾನು ಬದುಕಿರುವ ಯೋಗ್ಯತೆ ಹೊಂದಿಲ್ಲ. ನಾನು ವಿದ್ಯಾರ್ಥಿ ಜೀವನದುದ್ದಕ್ಕೂ ನನ್ನ ಸಹಪಾಠಿಗಳ ಜೊತೆ ಹೋಲಿಕೆ ಮಾಡಿಕೊಳ್ಳುತ್ತಲೇ ಇದ್ದೇನೆ. ನನಗಿನ್ನೂ ಒತ್ತಡ ತಾಳಲು ಸಾಧ್ಯವಿಲ್ಲ. ನನಗೆ ಬದುಕುವ ಯೋಗ್ಯತೆ ಇಲ್ಲ. ನನ್ನ ಸಾವಿಗೆ ನಾನೇ ಹೊಣೆ.” ಇದು 2019ನೇ ವರ್ಷದಲ್ಲಿ ಐಐಟಿ ಹೈದರಾಬಾದ್ನ ಕ್ಯಾಂಪಸ್ನಲ್ಲಿ ನಡೆದ ಮೂರನೇ ಆತ್ಮಹತ್ಯೆ. 2019ರ ಫೆಬ್ರವರಿ ತಿಂಗಳ ಮೊದಲವಾರ ಐಐಟಿ ಹೈದರಾಬಾದ್ ಇದರ ಮೂರನೇ ವರ್ಷದ ವಿದ್ಯಾರ್ಥಿ ಅನಿರುದ್ಧ ಮುಮ್ಮನೇನಿ ಸಾವಿಗೆ ಶರಣಾಗಿದ್ದ. ಕನಸು ಕಂಗಳ ಸುರದ್ರೂಪಿ ಯುವಕ. ಇನ್ನೂ 20 ವರ್ಷ ದಾಟಿರದ ಸುಂದರಾಂಗ. ತನ್ನ ಹಾಸ್ಟೆಲಿನ 7ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ, ಮಾಡಿಕೊಂಡಿದ್ದ. ಆತನೂ ಆತ್ಮಹತ್ಯೆ ಮಾಡುವ ಮೊದಲು ಚೀಟಿ ಬರೆದಿಟ್ಟಿದ್ದ.
“ನನಗೂ ಕನಸುಗಳಿವೆ ಎಲ್ಲರಂತೆ ಆಗಸದಲ್ಲಿ ಹಾರಾಡಬೇಕು. ಜೀವನದಲ್ಲಿ ಸಾಧಿಸಬೇಕು. ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ ವಿಧಿ ಅದಕ್ಕೆ ಆಸ್ಪದ ನೀಡುತ್ತಿಲ್ಲ. ನನ್ನ ಕನಸುಗಳು ನುಚ್ಚುನೂರಾಗಿದೆ, ಮನಸ್ಸು ಮುರಿದಿದೆ, ಕನಸು ಕಮರಿದೆ, ಬದುಕು ಬರಡಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನ ಒತ್ತಡದಲ್ಲಿ ನಾನು ಗೆಲ್ಲಲಾರೆ. ನಾನು ಸೋಲುತ್ತಿದ್ದೇನೆ. ನಾನು ಕುಸಿದು ಹೋಗುತ್ತಿದ್ದೇನೆ. ನನ್ನ ಹೆತ್ತವರ ಆಶೋತ್ತರಗಳಿಗೆ ನಾನು ಪೂರಕವಾಗಿ ಬಾಳಲು ಸಾಧಿಸಲು ಸಾಧ್ಯವಾಗುತ್ತಿಲ್ಲ. ಆದರೂ ನಾನು ಚೆನ್ನಾಗಿದ್ದೇನೆ. ನಾನು ಎಲ್ಲರಂತೆಯೇ OK ಎಂದು ನಾಟಕವಾಡಲು ನನ್ನಿಂದ ಸಾಧ್ಯವಿಲ್ಲ. ಈ ನಾಟಕವಾಡುವ ಜಗತ್ತಿನಿಂದ ದೂರ ಬಹುದೂರ ಹೋಗುತ್ತಿದ್ದೇನೆ. ನನ್ನನ್ನು ಸಾಧ್ಯವಾದರೆ ಕ್ಷಮಿಸಿ ಎಂದು ತನ್ನ ಹೆತ್ತವರಿಗೆ ಮನಕಲುಕುವ ಪತ್ರ ಬರೆದಿದ್ದ. ಸ್ನೇಹಿತರಿಗೆ ಬರೆದ ಪತ್ರದಲ್ಲಿ “ನಾನು ನಿಷ್ಪ್ರಯೋಜಕ, ನಾನೊಬ್ಬ ಕನಸುಗಳನ್ನು ನನಸುಗೊಳಿಸಲಾರದ ಹುಡುಗ. ನನ್ನಿಂದ ಯಾರಿಗೂ ಉಪಯೋಗವಿಲ್ಲ. ನಾನು ನನ್ನ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹೊರೆಯಾಗಬಾರದು. ದಯವಿಟ್ಟು ನನ್ನ ಹೆಣವನ್ನು ಸುಡಬೇಡಿ, ಹೂತು ಹಾಕಬೇಡಿ. ನನ್ನ ಹೆಣವನ್ನು ಯಾವುದಾದರೂ ಮೆಡಿಕಲ್ ಕಾಲೇಜಿಗೆ ದಾನ ಮಾಡಿ ಕಡೇ ಪಕ್ಷ ನನ್ನ ಹೆಣವಾದರೂ ಉಪಯೋಗಕ್ಕೆ ಬರಲಿ. ನನ್ನ ಹೆಣ ಭವ್ಯ ಭಾರತದ ಭಾವೀ ವೈದ್ಯರುಗಳಿಗಾದರೂ ಉತ್ತಮ ಕಲಿಕೆಯ ವಸ್ತುವಾಗಲಿ. ಬದುಕಿದ್ದಾಗ ಯಾರಿಗೂ ಉಪಯೋಗವಾಗಲಿಲ್ಲ. ಸತ್ತಾಗಲಾದರೂ ನನ್ನ ಹೆಣವನ್ನಾದರೂ ಯಾರಾದರೂ ಬಳಸಲಿ ಎಂಬ ಮನಕಲುಕುವ ಪತ್ರ ಬರೆದಿದ್ದ.
2019ರ ಜುಲೈ ತಿಂಗಳ ಕೊನೆ ವಾರ. ಅದೇ ಐಐಟಿ ಹೈದರಾಬಾದ್ನ ಎರಡನೇ ವರ್ಷದ ಸ್ನಾತಕೋತ್ತರ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ ಮಾರ್ಕ್ ಅಂಡ್ರ್ಯೂ ಚಾಲ್ರ್ಸ್ ಎಂಬ 25 ರ ಹರೆಯದ ಯುವಕ ತನ್ನ ಹಾಸ್ಟೆಲಿನ ಫ್ಯಾನ್ಗೆ ನೇಣು ಹಾಕಿ ಜೀವ ತೆತ್ತಿದ್ದ. ವಾರಾಣಾಸಿಯ ಮಧ್ಯಮ ವರ್ಗದ ಕುಟುಂಬದ ಅತ್ಯಂತ ಪ್ರತಿಭಾ ಸಂಪನ್ನ ವಿದ್ಯಾರ್ಥಿ, ಬಹಳಷ್ಟು ನಿರೀಕ್ಷೆಗಳೊಂದಿಗೆ ಐಐಟಿ ಸೇರಿದ್ದ. ತಂದೆ ಸರಕಾರಿ ಸಂಸ್ಥೆಯಲ್ಲಿ ಗುಮಾಸ್ತ, ತಾಯಿ ಶಿಕ್ಷಕಿ ಎಲ್ಲ ಮಧ್ಯಮ ವರ್ಗದ ಮಕ್ಕಳಲ್ಲಿ ಇರುವ ಆಸೆ, ಆಕಾಂಕ್ಷೆ ಮತ್ತು ಸಾಧಿಸಬೇಕು ಎಂಬ ಛಲ ಮತ್ತು ಕನಸನ್ನು ಹೊತ್ತುಕೊಂಡು ಐಐಟಿ ಸೇರಿದ್ದ.
ಆದರೆ ಕಾಲ ಕಳೆದಂತೆ ಆತನಿಗೆ ವಾಸ್ತವದ ಕಟುಸತ್ಯಗಳು ಒಂದೊಂದಾಗಿ ಅರಿವಾಗತೊಡಗಿತ್ತು. ಅತಿಯಾದ ನಿರೀಕ್ಷೆ ತೀವ್ರ ಪೈಪೋಟಿಯ ವಿದ್ಯಾರ್ಥಿಗಳ ಎದುರು ಆತನಿಗೆ ನಿರೀಕ್ಷಿತ ಫಲಿತಾಂಶ ದೊರಕದಾಗ ಹತಾಶೆ ಮಡುಗಟ್ಟಿತ್ತು. ತಾನಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗದೇ ಇದ್ದಾಗ ಜೀವನವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದ. ತನ್ನ ಎಲ್ಲಾ ಸಮಸ್ಯೆಗಳಿಗೆ ಒಂದೇ ಉತ್ತರ ಸಾವು ಎಂದು ದೃಢ ನಿರ್ಧಾರ ಮಾಡಿ ಇಹಲೋಕ ತ್ಯಜಿಸಿದ್ದ. ತನ್ನ ಸಾವಿನ ಚೀಟಿಯಲ್ಲಿ ಹೀಗೆ ಬರೆದಿತ್ತು. “ನನಗೆ ಕೆಲಸವಿಲ್ಲ. ನನಗೆ ಕೆಲಸ ಸಿಗುವುದೂ ಇಲ್ಲ. ಯಾಕೆಂದರೆ ಯಾರಿಗೂ ಸೋಲುವ ಕುದುರೆ ಬೇಕಿಲ್ಲ. ಎಲ್ಲರೂ ಗೆಲ್ಲುವ ಕುದುರೆಗೆ ಮಾತ್ರ ಬಾಜಿ ಕಟ್ಟುತ್ತಾರೆ. ನಾನೊಬ್ಬ ಸೋತ ವ್ಯಕ್ತಿ. ನಾನು ಗೆಲ್ಲುವುದು ಸಾಧ್ಯವೂ ಇಲ್ಲ. ಆತ ಎಂಟು ಪುಟಗಳ ದೀರ್ಘವಾದ ಆತ್ಮಹತ್ಯಾ ಚೀಟಿ ಬರೆದಿದ್ದ. “ಏಕ್ ಹೀ ಜಿಂದಗೀ ಹೈ, ಹರ್ ಫಲ್ ಜಿಯೋ” ಅಂದರೆ ಜೀವನ ಇರುವುದು ಒಂದೇ ಪ್ರತಿಕ್ಷಣವನ್ನು ಜೀವಿಸಿ, ಆನಂದಿಸಿ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ನಿಮ್ಮ ಜೀವನವನ್ನು ಮರೆತು ಬಿಡಬೇಡಿ. ಪ್ರತಿ ದಿನವನ್ನು ಜೀವಿಸಿ. ಪ್ರತಿಕ್ಷಣವನ್ನು ಅನುಭವಿಸಿ. ಐಟಿ ಮೇ ಕಾಮ್ ಕರ್ತೇ, ಕರ್ತೇ ಅಪ್ನಾ ಲೈಫ್ ಮತ್ಬೂಲ್ನ ಜಾನಾ” ಎಂಬ ಮನಕಲುಕುವ ಪತ್ರವನ್ನು ಬರೆದು ಇಹಲೋಕದ ಪಯಣವನ್ನು ಮುಗಿಸಿದ್ದ.
ಇದು ಇವತ್ತಿನ ಭಾರತದ ಪ್ರತಿಭಾವಂತ ಮಕ್ಕಳ ವಾಸ್ತವ ಸ್ಥಿತಿ. ಯಾಕಾಗಿ ನಮ್ಮ ಮಕ್ಕಳು ಸೋಲುತ್ತಿದ್ದಾರೆ. ಜೀವನದ ಪರೀಕ್ಷೆಯಲ್ಲಿ ಸೋಲುತ್ತಿದ್ದಾರೆ ಎಂಬುದಕ್ಕೆ ನಾವು ಉತ್ತರ ಪಡೆಯಲೇ ಬೇಕು. ಇಲ್ಲವಾದಲ್ಲಿ ಪ್ರತಿಭಾವಂತ ಯುವಶಕ್ತಿ ಈ ರೀತಿ ಜೀವ ತೆತ್ತಲ್ಲಿ, ಭವ್ಯ ಭಾರತದ ಭವಿಷ್ಯಕ್ಕೆ ಮುನ್ನುಡಿ ಬರೆಯುವರ್ಯಾರು? ನಾವು ನಮ್ಮ ಮಕ್ಕಳಿಗೆ ಗೆದ್ದಾಗ ಸಂಭ್ರಮಿಸುವುದನ್ನು ಬಹಳ ಸುಲಭವಾಗಿ ಕಲಿಸಿಕೊಡುತ್ತೇವೆ. ಆದರೆ ಬಿದ್ದಾಗ ಸೋಲನ್ನು ಸವಾಲಾಗಿ ಸ್ವೀಕರಿಸಿ ಮಗದೊಮ್ಮೆ ಎದ್ದು ನಿಲ್ಲುವ ಮನೋಧರ್ಮವನ್ನು ಕಲಿಸಿಕೊಡುವುದು ಮರೆತಿದ್ದೇವೆ. ಅದುವೇ ಇಂದಿನ ಈ ಎಲ್ಲಾ ದುರಂತಗಳು ಕಾರಣವಾಗುತ್ತಿದೆ.
ವಾಸ್ತವ ಸ್ಥಿತಿ:
ಕಳೆದ ಮೂರು ವರ್ಷಗಳಲ್ಲಿ ಸುಮಾರು 70 ವಿದ್ಯಾರ್ಥಿಗಳು ಭಾರತದ ಪ್ರತಿಷ್ಠಿತ ಕಾಲೇಜುಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2008 ರಿಂದ 2011 ರ ಅವಧಿಯಲ್ಲಿ 26 ಮಂದಿ ಆತ್ಮಹತ್ಯೆ ಮಾಡಿರುತ್ತಾರೆ. ಅದರಲ್ಲಿ 16 ಮಂದಿ ಐಐಟಿಗಳಲ್ಲಿ 7 ಮಂದಿ ಯನ್ಐಟಿಗಳಲ್ಲಿ ಮತ್ತು ಮೂರು ಮಂದಿ ಐಐಎಂಗಳಲ್ಲಿ ಜೀವತೆತ್ತಿದ್ದಾರೆ. ಭಾರತದ ದೇಶದಲ್ಲಿ ಪ್ರತಿ ಘಂಟೆಗೆ ಒಬ್ಬ ವಿದ್ಯಾರ್ಥಿ ಜೀವ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾಭ್ಯಾಸ ಎನ್ನುವುದು, ಸಮಾಜದ ಅತ್ಯಂತ ಪ್ರಾಮುಖ್ಯವಾದ ಹೊಣೆಗಾರಿಕೆ ಆಗಿರುತ್ತದೆ. ವಿದ್ಯಾಸಂಸ್ಥೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಆತನ ದೈಹಿಕ ಬೆಳವಣಿಗೆ ಮತ್ತು ಮಾನಸಿಕವಾದ ಆರೋಗ್ಯ, ಬುದ್ಧಿಮತ್ತೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು.
ಆದರೆ ದೌರ್ಭಾಗ್ಯವೆಂದರೆ ನಮ್ಮ ಹೆಚ್ಚಿನ ಎಲ್ಲಾ ವಿದ್ಯಾಸಂಸ್ಥೆಗಳ ಡಾಕ್ಟರುಗಳು, ಇಂಜಿನಿಯರ್ಗಳು, ವಕೀಲರು ಅಥವಾ ಇನ್ನಾವುದೇ ವೃತ್ತಿಯ ವ್ಯಕ್ತಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಿ ಪರಿವರ್ತನೆಯಾಗಿದೆ. ಮಗು ಹುಟ್ಟುವ ಮೊದಲೇ ಹೆತ್ತವರು ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಸೀಟ್ ಬುಕ್ ಮಾಡಿ ತಮ್ಮ ಪ್ರತಿಷ್ಠೆ ಮೆರೆಯುತ್ತಾರೆ. ಒಟ್ಟಿನಲ್ಲಿ ನನ್ನ ಮಗನಿಗೆ ಪ್ರತಿóಷ್ಠಿತ ಕಾಲೇಜಿನಲ್ಲಿ ಮೆಡಿಕಲ್ ಸೀಟು ಅಥವಾ ಐಐಟಿಗಳಲ್ಲಿ ಸೀಟು ದಕ್ಕಬೇಕು ಎಂಬ ಅತಿಯಾದ ಪ್ರತಿಷ್ಠೆ ಮತ್ತು ಸಾಮಾಜಿಕವಾದ ಬೂಟಾಟಿಕೆಗೆ ಜೋತು ಬಿದ್ದ ಹೆತ್ತವರೇ ಇದಕ್ಕೆ ಪರೋಕ್ಷ ಕಾರಣ. ಹೆತ್ತವರು ನಮ್ಮ ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸಮಾಜ ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಹೆತ್ತವರು ತನ್ನ ಮಕ್ಕಳನ್ನು ಗ್ರಾಹಕನಾಗಿ ನೋಡಬಾರದು. ತನ್ನ ಮಕ್ಕಳನ್ನು ಸಂಬಳ ಪಡೆಯುವ ಸರಕಾಗಿ ನೋಡಬಾರದು. ನನ್ನ ಮಗ ಅಥವಾ ಮಗಳಿಗೆ ಆರಂಭಿಕ ಸಂಬಳ ವರ್ಷಕ್ಕೆ ಒಂದು ಕೋಟಿ ಎಂದು ಹೇಳುವ ಹೆತ್ತವರ ಮನಸ್ಸು ಬದಲಾಗಬೇಕು. ಇಲ್ಲವಾದಲ್ಲಿ ಈ ದುರಂತಕ್ಕೆ ಕೊನೆಯೇ ಇಲ್ಲ.
ಎಲ್ಲಿ ಎಡವುತ್ತಿದ್ದೇವೆ?
1) ಒಬ್ಬ ಮಗುವಿಗೆ ಮಾನಸಿಕ ಒತ್ತಡ ಬರದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಹೆತ್ತವರಲ್ಲಿ ಇದೆ. ಮಗುವಿನ ಸಾಮಥ್ರ್ಯ, ಕಲಿಕಾ ಚತುರತೆ ಮತ್ತು ವಿವೇಚನಾ ಶಕ್ತಿಯ ಬಗೆಗಿನ ದೌರ್ಬಲ್ಯ ಮತ್ತು ಸಾಮಥ್ರ್ಯದ ಅರಿವು ಹೆತ್ತವರು ತಿಳಿದಿರಬೇಕು. ತನ್ನ ಮಕ್ಕಳನ್ನು ಅದಕ್ಕೆ ಪೂರಕವಾದ ವಿದ್ಯಾಭ್ಯಾಸ ಮತ್ತು ಪ್ರೋತ್ಸಾಹ ನೀಡಬೇಕು. ಹುಟ್ಟಿದ ಎಲ್ಲ ಮಕ್ಕಳು ಐಐಟಿ ಸೇರಲು ಸಾಧ್ಯವೇ ಇಲ್ಲ. ಐಐಟಿ ಸೀಟಿಗಾಗಿ ಹತ್ತು ಲಕ್ಷ ಮಂದಿ ದೇಶಾದ್ಯಂತ ಪರೀಕ್ಷೆ ಬರೆಯುತ್ತಾರೆ. ಆದರೆ ಸಿಗುವುದು ಕೇವಲ ಹತ್ತು ಸಾವಿರ ಮಕ್ಕಳಿಗೆ ಮಾತ್ರ. ಐಐಟಿ ಬಾಂಬೆಯಲ್ಲಿ ಸೀಟು ಸಿಗಬೇಕಾದಲ್ಲಿ ನೂರರ ಒಳಗೆ ರ್ಯಾಂಕ್ ಪಡೆಯಬೇಕು ಎಂಬ ವಾಸ್ತವದ ಅರಿವು ಹೆತ್ತವರಿಗೆ ಇರಬೇಕು. ಅನಗತ್ಯವಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು. ನನ್ನ ಮಗ ಬಹಳ ಪ್ರತಿಭಾವಂತ, ಆತನಿಗೆ ಐಐಟಿ ಸೀಟು ಸಿಕ್ಕೇ ಸಿಗುತ್ತದೆ ಎಂದು ಮಗನ ಎದುರು ಎಲ್ಲರಲ್ಲಿ ಹೇಳಿದಾಗ ಮಗನ ಮೇಲೆ ತಾನು ಸೀಟು ಪಡೆಯದಿದ್ದಲ್ಲಿ ತನ್ನ ಹೆತ್ತವರ ಪ್ರತಿಷ್ಠೆ ಮಣ್ಣು ಪಾಲಾಗುತ್ತದೆ ಎಂಬ ಜಿಜ್ಞಾಸೆ ಮೂಡುತ್ತದೆ. ಅದು ಆತನ ಮೇಲೆ ದುಷ್ಪರಿಣಾಮ ಬೀರುತ್ತದೆ. ನನ್ನ ಮಗನಿಗೆ ಎಲ್ಲಿಯಾದರೂ ಸಿಗಲಿ ಪರವಾಗಿಲ್ಲ ಎಂದು ಮಗನಿಗೆ ಆತ್ಮವಿಶ್ವಾಸ, ಧೈರ್ಯ ನೀಡುವ ಕೆಲಸ ಹೆತ್ತವರು ಮಾಡಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಪ್ರೋತ್ಸಾಹ, ಉತ್ತೇಜನ ಮತ್ತು ಸಹಕಾರ ನೀಡಬೇಕು. ಆದರೆ ಒತ್ತಡ ಹಾಕಬಾರದು. ತಮ್ಮ ಪ್ರತಿಷ್ಠೆಗಾಗಿ ಮಕ್ಕಳ ಹಿತಾಸಕ್ತಿ ಬಲಿ ಕೊಡಬಾರದು.
2) ಇನ್ನು ಪ್ರಾಥಮಿಕ ಮತ್ತು ಪದವಿಪೂರ್ವ ಹಂತದಲ್ಲಿ ಶಿಕ್ಷಕರು ಮಕ್ಕಳ ಸಾಮಥ್ರ್ಯದ ಅರಿವನ್ನು ಮಕ್ಕಳಿಗೆ ಮೂಡಿಸಬೇಕು. ಆ ಮಕ್ಕಳ ದೌರ್ಬಲ್ಯ ಮತ್ತು ಅಭಿರುಚಿಯನ್ನು ಪತ್ತೆಹಚ್ಚಬೇಕು. ಮಕ್ಕಳ ಸಾಮಥ್ರ್ಯ ಮತ್ತು ಅಭಿರುಚಿಗೆ ಪೂರಕವಾದ ಕಲಿಕೆಯನ್ನೇ ಮುಂದುವರಿಸುವಂತೆ ಹೆತ್ತವರಿಗೆ ಮನವರಿಕೆ ಮಾಡಬೇಕು. ಹುಟ್ಟಿದ ಎಲ್ಲಾ ಮಕ್ಕಳು ವೈದ್ಯರಾಗಲು ಸಾಧ್ಯವಿಲ್ಲ, ಇಂಜಿನಿಯರ್ ಆಗಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಹೆತ್ತವರಿಗೆ ಮನವರಿಕೆ ಮಾಡಿಸಬೇಕು.
3) ವಿದ್ಯಾರ್ಥಿ ಯಾವತ್ತೂ ತನ್ನನ್ನು ತನ್ನ ಸಹಪಾಠಿಗಳ ಜೊತೆ ಹೋಲಿಕೆ ಮಾಡಿಕೊಳ್ಳಬಾರದು. ಪ್ರತಿಯೊಬ್ಬ ವ್ಯಕ್ತಿಗೂ, ವಿದ್ಯಾರ್ಥಿಗೂ ಅವರದ್ದೇ ಆದ ಕಲಿಕಾ ಶಕ್ತಿ ಬುದ್ಧಿಮತ್ತೆ ಮತ್ತು ಕೌಶಲ್ಯ ಇದೆ. ಪ್ರತಿ ವಿದ್ಯಾರ್ಥಿಯೂ ಭಿನ್ನ, ಪ್ರತಿ ವಿದ್ಯಾರ್ಥಿಯೂ ಸಮಾಜಕ್ಕೆ ಆಸ್ತಿಯಾಗಬಹುದು ಎಂಬ ಸತ್ಯವನ್ನು ಹೆತ್ತವರು ಮತ್ತು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಯಾವತ್ತೂ ಆರೋಗ್ಯಕರವಾದ ಸ್ಪರ್ಧೆ ಇರಬೇಕು. ಅನಾರೋಗ್ಯಕರವಾದ ಹೋಲಿಕೆ ಮತ್ತು ಸ್ಪರ್ಧೆ ಒಳ್ಳೆಯದಲ್ಲ.
ಏನು ಮಾಡಬೇಕು?
1) ಬಾಲ್ಯದಿಂದಲೂ ಮಕ್ಕಳಿಗೆ ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸಲು ಪೂರಕವಾದ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಬೇಕು. ಸೋಲೇ ಗೆಲುವಿನ ಮೂಲ ಎಂಬುದನ್ನು ಮನವರಿಕೆ ಮಾಡಬೇಕು. ಗೆಲುವನ್ನು ಸಂಭ್ರಮಿಸುವುದನ್ನು ಹೇಳಿ ಕೊಡುವುದರ ಜೊತೆಗೆ ಸೋಲನ್ನು ಎದುರಿಸುವ ತಂತ್ರವನ್ನು ಮತ್ತು ದಾರಿಗಳ ಬಗ್ಗೆ ಮಾರ್ಗದರ್ಶನ ನೀಡಬೇಕು. ಶೈಕ್ಷಣಿಕ ಪರೀಕ್ಷೆಗಿಂತ ಜೀವನದ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಸೋಲುಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಧರ್ಮವನ್ನು ಹೇಳಿಕೊಡಬೇಕು. ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಹೇರಿ ಅವರ ಮೇಲೆ ಒತ್ತಡ ಬರುವಂತೆ ಮಾಡಬಾರದು. ಅದವರ ಸಾಮಥ್ರ್ಯಕ್ಕೆ ತಕ್ಕಂತೆ ಫಲಿತಾಂಶವನ್ನು ಸ್ವೀಕರಿಸಬೇಕು.
2) ಮಕ್ಕಳನ್ನು ಯಾವತ್ತೂ ಆದಾಯದ ಮೂಲ ಅಥವಾ ಗ್ರಾಹರಂತೆ ನೋಡಬಾರದು. ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವನ್ನು ನೀಡಬೇಕು. ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಕಲಿಕೆಗೂ ಆದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ವಿಚಾರವನ್ನು ಮಕ್ಕಳಿಗೆ ತಿಳಿಹೇಳಬೇಕು, ಕಲಿಯುವುದೇ ಆದಾಯಕ್ಕೆ ಎಂಬ ತಪ್ಪು ಕಲ್ಪನೆ ಮಕ್ಕಳಲ್ಲಿ ಬರದಂತೆ ನೋಡಿಕೊಳ್ಳಬೇಕು. ಮಾಧ್ಯಮಗಳು ಕೂಡಾ ಸಾಮಾಜಿಕ ಹೊಣೆಗಾರಿಕೆ ಹೊಂದಿದೆ. ಐಐಟಿಗಳನ್ನು ವೈಭವೀಕರಿಸುವುದನ್ನು ನಿಲ್ಲಿಸಬೇಕು. ವಿದ್ಯಾಭ್ಯಾಸ ಎಲ್ಲಿ ಮಾಡಿದ್ದು ಎನ್ನುವುದಕ್ಕಿಂತ, ಮಗು ಎಷ್ಟು ಸಂಸ್ಕಾರ ಮತ್ತು ಜ್ಞಾನ ಪಡೆದಿದ್ದಾನೆ ಎಂಬುದನ್ನು ತುಲನೆ ಮಾಡಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಂತರ್ಜಾಲದ ಮಹಿಮೆಯಿಂದಾಗಿ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲವೂ ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ದೊರಕುತ್ತಿದೆ. ನೈತಿಕತೆಯ ಮಟ್ಟವೂ ಕುಸಿಯುತ್ತಿದೆ. ಇಂತಹಾ ಸಂದಿಗ್ಧ ಕಾಲಘಟ್ಟದಲ್ಲಿ ಹೆತ್ತವರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಮಾಧ್ಯಮಗಳು ಒಟ್ಟು ಸೇರಿ ತಮ್ಮ ಜವಾಬ್ದಾರಿ ಮತ್ತು ಕೆಲಸವನ್ನು ಸರಿಯಾಗಿ ಅರಿತು ನಿಭಾಯಿಸಿದ್ದಲ್ಲಿ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗುವ ಸಾಧ್ಯವಿದೆ.
ಕೊನೆಮಾತು:
ಆತ್ಮಹತ್ಯೆ ಎನ್ನುವುದು ನಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಲ್ಲ ಎನ್ನುವ ಸತ್ಯದ ಅರಿವು ಎಲ್ಲರಿಗೂ ಇದೆ. ಆತ್ಮಹತ್ಯೆ ಮಾಡುವವರೆಲ್ಲ ಪಲಾಯನವಾದಿಗಳು ಅಥವಾ ಹೇಡಿಗಳು ಎಂದು ಹಣೆಪಟ್ಟಿ ನೀಡುವುದು ತಪ್ಪಾಗುತ್ತದೆ. ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ನಿರಂತರವಾಗಿ ಸೋಲಿನ ಸುಳಿಗೆ ಸಿಕ್ಕಿ ಹತಾಶನಾದಾಗ ಆತ್ಮಹತ್ಯೆಯ ಆಲೋಚನೆ ಮಾಡುತ್ತಾರೆ. ಆದರೆ ಆತನ ವಿವೇಚನಾ ಶಕ್ತಿ ಮತ್ತು ಚಿಂತನಾ ಸಾಮಥ್ರ್ಯದಿಂದ ನೋವಿನಿಂದ ಹೊರಬರುತ್ತಾನೆ. ಆದರೆ ಒಂದೆರಡು ಶೇಕಡಾ ಮಂದಿ ಈ ನೋವಿನಿಂದ ಹೊರಬರಲಾಗದೆ ಶಾಶ್ವತ ಪರಿಹಾರಕ್ಕೆಂದು ಕ್ಷಣಿಕವಾದ ದುಡುಕು ನಿರ್ಧಾರದಿಂದ ಆತ್ಮಹತ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಮಕ್ಕಳಲ್ಲಿ ಹೆಚ್ಚಾಗಿ ಹೆತ್ತವರ ಅತಿಯಾದ ನಿರೀಕ್ಷೆಗಳು, ಸಮಾಜ ತನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂಬ ಆತಂಕ ಮತ್ತು ನಿರಂತರ ಸೋಲಿನ ಹತಾಶೆ ಇವೆಲ್ಲವೂ ಆತ್ಮಹತ್ಯೆಯಲ್ಲಿ ಪರ್ಯವಸಾನವಾಗುತ್ತದೆ. ಹೆತ್ತವರು ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು. ಸಮಾಜ ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು.
– ಡಾ|| ಮುರಲೀ ಮೋಹನ್ ಚೂಂತಾರು
ಮಾಧ್ಯಮಗಳು ಕೆಲವೊಂದು ವಿಚಾರಗಳನ್ನು ಅತಿಯಾಗಿ ವೈಭವೀಕರಿಸುವುದನ್ನೂ ಬಿಡಬೇಕು. ವಾಸ್ತವದ ಅರಿವನ್ನು ಎಲ್ಲರಿಗೂ ಮುಕ್ತವಾಗಿ ತೆರೆದಿಡಬೇಕು. ಐಐಟಿಗೆ ಸೇರಿದ ಎಲ್ಲರಿಗೂ ಕೋಟಿಗಟ್ಟಲೆ ಸಂಬಳ ಬರುತ್ತದೆ ಎಂಬ ಮಿಥ್ಯವನ್ನು ತೊಡೆದುಹಾಕಬೇಕು. ಮಕ್ಕಳಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ಗಳಿಕೆಯ ಬಗ್ಗೆ ಚಕಾರವೆತ್ತಬಾರದು. ಮಕ್ಕಳಿಗೆ ಮುಕ್ತವಾದ, ಒತ್ತಡರಹಿತವಾದ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಅನಿರ್ದಿಷ್ಟವಾದ ಕಲಿಕೆ ಮತ್ತು ಅವರ ಕೌಶಲ್ಯಕ್ಕೆ ಪೂರಕವಾದ ವಿದ್ಯಾಭ್ಯಾಸ ನೀಡಬೇಕು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು. ಅವರಿಗಿಷ್ಟವಾದ ಸೋಲುಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಬೇಕು. ಹಾಗಾದಲ್ಲಿ ಮಾತ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮೇಲೆ ನಿರೀಕ್ಷೆ ಮತ್ತು ಒತ್ತಡ ಕಡಿಮೆಯಾಗಿ ಆತ್ಮಹತ್ಯೆಯ ಪ್ರಮಾಣ ಇಳಿಮುಖವಾಗಬಹುದು ಮತ್ತು ಪ್ರತಿಭಾನ್ವಿತ ಯುವಶಕ್ತಿಯ ಅಕಾಲಿಕ ನಾಶವನ್ನು ತಡೆಯಬಹುದು. ಅದರಲ್ಲಿಯೇ ನಮ್ಮ ದೇಶದ ಹಿತ ಅಡಗಿದೆ.
– ಡಾ|| ಮುರಲೀ ಮೋಹನ ಚೂಂತಾರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.