(www.vknews.com) : ಕೊರೋನ ಮಹಾಮಾರಿ ನಮ್ಮ ಮಕ್ಕಳ ಶಿಕ್ಷಣದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಶಾಲೆಗಳು ಇನ್ನೂ ಪ್ರಾರಂಭಗೊಂಡಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಬೇಕೇ, ಬೇಡವೇ ಎಂಬ ಗೊಂದಲ ಹೆತ್ತವರಲ್ಲಿದೆ. ಮಕ್ಕಳಂತೂ ಶಾಲೆಯನ್ನೇ ಮರೆತಂತಿದೆ. ಪುಸ್ತಕ ತೆರೆಯದೇ ಅದೆಷ್ಟೋ ತಿಂಗಳಾಯಿತು. ಅಕ್ಷರಗಳು ಮರೆತು ಹೋಗುತ್ತಿವೆ. ಬರೆಯುವುದು, ಓದುವುದು ನಿಂತು ತಿಂಗಳುಗಳೇ ಆಯಿತು.
ನಮ್ಮ ಮಕ್ಕಳು ಕಲಿಕೆಯ ಟ್ರ್ಯಾಕ್ ನಿಂದ ಹೊರಗಿದ್ದಾರೆ. online ಶಿಕ್ಷಣ ಅಷ್ಟೊಂದು ಸಮರ್ಪಕವಾಗಿ ಇರಲ್ಲ. ಮಕ್ಕಳನ್ನು ಹೀಗೆ ಬಿಟ್ಟರೆ ಅವರು ಕಲಿತದ್ದೆಲ್ಲ ಮರೆಯುವ ಸಾಧ್ಯತೆಯಿದೆ. ಅವರನ್ನು ಕಲಿಕೆಯ ಪ್ರಕ್ರಿಯೆಗೆ ನಾವು ತರಬೇಕಾಗಿದೆ . ಮತ್ತೆ ಪುಸ್ತಕ ಹಿಡಿಯುವ ಹಾಗೆ ಮಾಡಬೇಕಾಗಿದೆ. ಓದುವುದು, ಬರೆಯುವುದು ಎಲ್ಲವನ್ನೂ ಮೊದಲಿನಂತೆ ಮಾಡಬೇಕಾಗಿದೆ. ಸದ್ಯಕ್ಕಂತೂ ಶಾಲೆಗೆ ಹೋಗುವ ಸ್ಥಿತಿಯಲ್ಲಿಲ್ಲ. ಮಕ್ಕಳನ್ನು ಹಾಗೆಯೇ ಬಿಡುವಂತಿಲ್ಲ. ಹಾಗಾದರೆ ಇದಕ್ಕೆ ಪರ್ಯಾಯ ಮಾರ್ಗವೇನು?
ಉನ್ನತ ಶಿಕ್ಷಣ , ಸಮಯ ಮತ್ತು ತಾಳ್ಮೆ ಇರತಕ್ಕಂತಹ ಹೆತ್ತವರು ತಮ್ಮ ಮಕ್ಕಳ ಜೊತೆ ದಿನಕ್ಕೆ ಕನಿಷ್ಠ ಒಂದೆರಡು ಗಂಟೆ ಕೂತು ಅವರನ್ನು ಸ್ವಲ್ಪ ಮಟ್ಟಿಗೆ ತಯಾರು ಮಾಡಬಹುದು. ಆದರೆ ಇದು ಎಲ್ಲಾ ಹೆತ್ತವರಿಂದ ಸಾಧ್ಯವೇ. ಹೆಚ್ಚು ಕಲಿಯದ ಮತ್ತು ಅನಕ್ಷರಸ್ಥ ಹೆತ್ತವರ ಮಕ್ಕಳು ಏನು ಮಾಡಬೇಕು. ಆ ಮಕ್ಕಳನ್ನು ಶಾಲೆ ಪ್ರಾರಂಭವಾಗುವವರೆಗೆ ಸುಮ್ಮನೆ ಹೀಗೆ ಬಿಡುವುದಾ?
ನಾವು ಮನಸ್ಸು ಮಾಡಿದರೆ ಒಂದು ಸುಲಭ ದಾರಿಯಿದೆ .
ನಮ್ಮ ಪ್ರತಿ ಜಮಾತಿನಲ್ಲಿ ಕಾಲೇಜು ಓದುತ್ತಿರುವ ಅದೆಷ್ಟೋ ಮಕ್ಕಳು ಇದ್ದಾರೆ. ಅವರು ಈಗ ಮನೆಯಲ್ಲೇ ಇದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಮನೆಯ ಸುತ್ತಮುತ್ತಲಿನ ಕನಿಷ್ಠ ಐದರಿಂದ ಹತ್ತು ಮಕ್ಕಳಿಗೆ ಪ್ರತಿದಿನ ಒಂದರಿಂದ ಎರಡು ಗಂಟೆ ಟ್ಯೂಷನ್ ಕೊಟ್ಟು ಕಲಿಕೆಯ ಪ್ರಕ್ರಿಯೆಗೆ ತರಬಹುದು. ಈ ಹಿಂದಿನ ತರಗತಿಗಳಲ್ಲಿ ಅವರು ಕಲಿತ ಪಾಠಗಳನ್ನು ನೆನಪಿಸುವ ಕೆಲಸವನ್ನು ಮಾಡಬಹುದು. ಅವರಿಗೆ ಲೆಕ್ಕ ಮಾಡಿಸುವುದು, ಓದಿಸುವುದು, ಬರೆಸುವುದು ಮೊದಲಾದ ಸರಳ ಕೆಲಸಗಳನ್ನು ಮಾಡಿಸಬಹುದು. ಒಟ್ಟಿನಲ್ಲಿ ಮಗು ಏನಾದರೂ ಕಲಿಯುವಂತೆ ಮಾಡಬಹುದು ಮತ್ತು ಈ ಹಿಂದೆ ಕಲಿತದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ನೋಡಿಕೊಳ್ಳಬಹುದು. ಅದೇ ರೀತಿ ಶರಿಯತ್ ಕಾಲೇಜಿನ ಹೆಣ್ಣು ಮಕ್ಕಳಿಗೆ ದೀನಿ ಕ್ಲಾಸನ್ನು ತೆಗೆಯಬಹುದು. ಇಲ್ಲಿ ಸಾಮಾಜಿಕ ಅಂತರ (social distance) ಕಾಯ್ದುಕೊಳ್ಳುವುದು. ಕೊರೋನಾ ರೋಗದ ಎಲ್ಲಾ ಮುಂಜಾಗ್ರತೆಗಳಾದ ಹ್ಯಾಂಡ್ ವಾಶ್ ಮಾಡಿಸುವುದು, ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಅನ್ನು ಕಡ್ಡಾಯವಾಗಿ ಬಳಸುವುದು.
ಇದೊಂದು ತಾತ್ಕಾಲಿಕ ಪರ್ಯಾಯ ವ್ಯವಸ್ಥೆಗೆ ಒಂದು ಸಲಹೆ ಮಾತ್ರ.
ಉನ್ನತ ಶಿಕ್ಷಣವನ್ನು ಪಡೆದ ನನ್ನೆಲ್ಲಾ ಸಹೋದರ ಸಹೋದರಿಯರು ಈ ಒಂದು ವ್ಯವಸ್ಥೆಯಲ್ಲಿ ಸ್ವಯಂಸೇವಕರಾಗಿ ಸೇವೆಯನ್ನು ಸಲ್ಲಿಸಬಹುದು . ಜಮಾತ್ ಕಮಿಟಿ ಮತ್ತು ಸಂಘ ಸಂಸ್ಥೆಗಳು ಈ ವಿಚಾರದಲ್ಲಿ ಒಂದು ಯೋಜನೆ ಹಾಕಬಹುದು. ಈ ಮೂಲಕ ಶಾಲೆ ಪ್ರಾರಂಭವಾಗುವ ಮುಂಚಿತವಾಗಿ ನಮ್ಮ ಮಕ್ಕಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು. ಇದು ನಮ್ಮ ಮಕ್ಕಳಿಗೆ ನಾವು ಕೊಡುವ ದೊಡ್ಡ ಕೊಡುಗೆಯಾಗಲಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಗರದಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ಒಂಬತ್ತು ವರ್ಷದ ಹುಡುಗ ಬಾಬರ್ ಅಲಿ. ತಾನು ಚೀಲ ಹಾಕಿಕೊಂಡು ಶಾಲೆಗೆ ಹೋಗುತ್ತಿರುವಾಗ ತನ್ನ ಪ್ರಾಯದ ಮಕ್ಕಳು ಗುಜರಿ ಹೆಕ್ಕುವುದು, ಟಯರ್ ಪಂಕ್ಚರ್ ಹಾಕುವುದು,ಹೋಟೆಲ್ನಲ್ಲಿ ಗ್ಲಾಸ್ ತೊಳೆಯುವುದು, ಭಿಕ್ಷಾಟನೆ ಮಾಡುವುದು ಕಂಡಾಗ ಅವನು ತನ್ನೊಳಗೆ ಒಂದು ಪ್ರಶ್ನೆ ಹಾಕುತ್ತಾನೆ. ನಾನು ಮಾತ್ರ ಕಲಿತರೆ ಸಾಕಾ? ಇವರು ಕಲಿಯ ಬೇಡವೇ?. ಅದಕ್ಕೆ ಉತ್ತರವಾಗಿ ಅವತ್ತೇ ತನ್ನ ಮನೆಯಲ್ಲಿ ರಾತ್ರಿ ಶಾಲೆಯನ್ನು ಎಂಟು ಮಕ್ಕಳೊಂದಿಗೆ ಪ್ರಾರಂಭಿಸುತ್ತಾನೆ. ಒಂಬತ್ತು ವರ್ಷದ ಬಾಬರ್ ಅಲಿ ಆ ಮಕ್ಕಳಿಗೆ ಶಿಕ್ಷಕನಾಗುತ್ತಾನೆ. ಅಕ್ಷರಾಭ್ಯಾಸ ಮಾಡಿಸುತ್ತಾನೆ . ಲೆಕ್ಕಗಳನ್ನು ಹೇಳಿಕೊಡುತ್ತಾನೆ. ಅಲ್ಲಾಹನ ಅಪಾರವಾದ ಅನುಗ್ರಹದಿಂದ ಇವತ್ತು ಅವನ ಶಾಲೆಯಲ್ಲಿ ಎಂಟು ನೂರು ಮಕ್ಕಳು ಇದ್ದಾರೆ. ಹದಿನಾರು ವರ್ಷಕ್ಕೆ ಬಾಬರ್ ಅಲಿ ಜಗತ್ತಿನ ಅತ್ಯಂತ ಕಿರಿಯ ಪ್ರಾಂಶುಪಾಲ ಆಗ್ತಾನೆ.
ಬಾಬರ್ ಅಲಿಯ ಬಗ್ಗೆ ನಮ್ಮ ಪಿಯುಸಿಯ ಇಂಗ್ಲಿಷ್ ಟೆಕ್ಸ್ಟ್ ಬುಕ್ಕಿನಲ್ಲಿ ಪಾಠ ಇದೆ . ಒಂಬತ್ತು ವರ್ಷದ ಹುಡುಗನಿಗೆ ಒಂದು ಶಾಲೆಯನ್ನು ತೆರೆದು ಶಿಕ್ಷಣ ಕೊಡಲು ಸಾಧ್ಯವಾಗುವುದಾದರೆ ನಮ್ಮಿಂದ ಯಾಕೆ ಸಾಧ್ಯವಿಲ್ಲ?
ಡಾಕ್ಟರ್ಸ್ ಮತ್ತು ನರ್ಸುಗಳು ಇವತ್ತು ಕೊರೋನ ವಾರಿಯರ್ಸ್ ಆದರೆ ನಾವು ಯಾಕೆ ಅಕ್ಷರದ ವಾರಿಯರ್ಸ್ ಆಗಬಾರದು?
ದಯವಿಟ್ಟು ಆಲೋಚಿಸಿ ಒಂದು ನಿರ್ಧಾರಕ್ಕೆ ಬನ್ನಿ. ಶಾಲೆ ಪ್ರಾರಂಭವಾಗುವವರೆಗೆ ನಮ್ಮ ಮಕ್ಕಳನ್ನು ಹಾಗೆ ಬಿಡುವುದಕ್ಕಿಂತ ಅವರಿಗೂ ಕಲಿತ ನಾಲ್ಕು ಅಕ್ಷರ ನೆನಪಿಸಿ ನಾವು ಅಕ್ಷರ ದಾನಿಗಳಾಗೋಣ. ಇದೊಂದು ಸಲಹೆ ಮತ್ತು ಮನವಿ ಮಾತ್ರ. ನಾಲ್ಕು ಮಕ್ಕಳಿಗೆ ಉಪಕಾರವಾದರೂ ನನ್ನ ಪ್ರಯತ್ನ ಸಾರ್ಥಕವಾಗುತ್ತದೆ.
ಮನದ ಮಾತು
ರಫೀಕ್ ಮಾಸ್ಟರ್ ಸಮಾಜ ಸೇವಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.