ಪ್ರತಿಯೊಬ್ಬ ಪ್ರವಾಸಿ ಮಿತ್ರರಿಗೂ ತಲುಪಬೇಕಾದ ಲೇಖನ
(www.vknews.com) : ಹೌದು ಕೊರೋನಾ ಮುಕ್ತ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಯು. ಎ. ಇ ಸರಕಾರ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ನಿನ್ನೆ ರಾತ್ರಿ 8 ಗಂಟೆಯಿಂದ ಮುಂದಿನ 5 ದಿನಗಳವರೆಗೆ ಯಾವುದೇ ಹೊರ ಸಂಪರ್ಕವನ್ನು ಪಡೆಯದಂತೆ, ಮಿಲಿಟರಿ ಮತ್ತುಪೊಲೀಸ್ ಸಶಸ್ತ್ರ ಪಡೆ ಕಾವಲಿನೊಂದಿಗೆ ಸೀಲ್ ಡೌನ್ ಮಾಡಲಾಗಿದೆ.
ನಿನ್ನೆ ರಾತ್ರಿ 10 ಗಂಟೆಗೆ ಕೆಲಸ ಮುಗಿಸಿಕೊಂಡು ಬರುವಾಗ ಪೋಲಿಸರೊಬ್ಬರು ನನ್ನನ್ನು ನಿಲ್ಲಿಸಿ ಬೇಗ ಬೇಗ ಹೋಗಿ ಎಂದು ಎಚ್ಚರಿಕೆಕೊಟ್ಟರು. ಮೊದಲೇ ನಾನಿರುವ ವಾಸಸ್ಥಳದಲ್ಲಿ ಬಿಳಿ-ವಸ್ತ್ರದಾರಿಗಳು ಜನರನ್ನು COVID 19 ತಪಾಸಣೆಗೆ ಕರೆದೊಯ್ಯಲು ಸಜ್ಜಾಗಿ ನಿಂತಿದ್ದರು ನಂತರ ನಮ್ಮ ಬಳಿಯೂ ಬಂದು ರೂಮಿನಲ್ಲಿರುವ ಇತರ ಮಿತ್ರರನ್ನು ಕರೆದುಕೊಂಡು ಕಟ್ಟಡದ ಹೊರಭಾಗಕ್ಕೆ ಕರೆದುಕೊಂಡು ಹೋದರು.(ಅಂದರೆ ರಸ್ತೆ ಬದಿಗೆ) ಆದರೆ ಅಲ್ಲಿ ನೋಡುವಾಗ ಮೊದಲೇ ಸಾವಿರಾರು ಮಂದಿ ಇದ್ದರು.
ನಂತರ ಎಲ್ಲರನ್ನು ಅಲ್ಲಿಯೇ ನೆಲದ ಮೇಲೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕುಳಿತುಕೊಳ್ಳಲು ಹೇಳಿ ಪ್ರತಿಯೊಬ್ಬನ ಎದೆಯಮೇಲೆ M-26 B-81 ಎಂಬ ಅಂಕೆಗಳನ್ನು ಹೊಂದಿರುವ ಸ್ಟಿಕ್ಕರನ್ನು ಅಂಟಿಸಿದರು. ಹಾಗೆ ಮುಂದುವರಿಯುತ್ತಿದ್ದಂತೆಯೇ ನೂರಾರು ಹವಾನಿಯಂತ್ರಿತ ಬಸ್ಗಳು ಸಾಲಾಗಿ ಬಂದು ನಿಂತವು. ನಂತರ ಒಬ್ಬೊಬ್ಬರನ್ನಾಗಿ ಬಸ್ ಗೆ ಹತ್ತಿಸಿ ಪ್ರಯಾಣ ಶುರುವಾಯಿತು ಸುಮಾರು ದೂರ ಹೋದಂತೆ ದೂರದಲ್ಲಿ WELCOME SCREENING CENTER ಎಂಬ ಬೋರ್ಡ್ ಕಾಣಿಸಿತು.
ನಂತರ ಆ ಸ್ಥಳದಲ್ಲಿ ಎಲ್ಲರನ್ನು ಇಳಿಸಿ ಸಾಲಾಗಿ ನಿಲ್ಲುವಂತೆ ಸೂಚಿಸಿದರು. ಪೋಲಿಸ್ ಅಧಿಕಾರಿಯೊಬ್ಬರು ಎಲ್ಲರು ನಿಮ್ಮ ನಿಮ್ಮ ಗುರುತಿನ ಚೀಟಿ (EMIRATES ID) ತೆಗೆಯಿರಿ ಎಂದು ಹೇಳಿ ಮುಂದಕ್ಕೆ ನಡೆಯಲು ಹೇಳಿದರು. ಮುಂದೆ ನಡೆದಂತೆ SANITIZING TUNNELS ಎಂಬ ಕೋಣೆಯೊಳಗೆ ನುಗ್ಗಿ ಮುಂದುವರಿಯಬೇಕಿತ್ತು.ಹಾಗೇ ಮುಂದೆ ನಡೆದಾಗ ಒಂದೂವರೆ ಕಿಲೋಮೀಟರ್ ದೂರದಿಂದ ಜನರು ಸಾಲಾಗಿ ಸಾಮಾಜಿಕ ಅಂತರದೊಂದಿಗೆ ನಿಂತಿದ್ದರು. ಹಾಗೆಯೇ ನಾನು ಅವರೊಂದಿಗೆ ಸೇರಿಕೊಂಡು ಒಂದು ಘಂಟೆಗಳ ಕಾಲ ಮುಂದುವರಿಯುತ್ತಾ ತಪಾಸಣೆ ನಡೆಸುವ ಜಾಗಕ್ಕೆ ತಲುಪಿದೆ. ಸಣ್ಣ ಕೋಣೆಯೊಳಗೆ ಮಹಿಳೆಯೊಬ್ಬರು ಕಂಪ್ಯೂಟರ್ ನೊಂದಿಗೆ ಕುಳಿತಿದ್ದರು. ಹೊರಗಡೆಯಿಂದ ನನ್ನ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಏನಾದರು ಸಮಸ್ಯೆ ಕೆಮ್ಮು,ಶೀತ ಜ್ವರ, ತಲೆನೋವು ಏನಾದರು ಇದೆಯೇ ಎಂದು ಬಹಳ ಸಮ್ಯತೆಯಿಂದ ಮಾತಾಡಿ ಇನ್ನು ಹೋಗಬಹುದು ಎಂದರು.
ನಾನು ಧನ್ಯವಾದ ತಿಳಿಸಿ ಹೊರಬರುತ್ತಿದ್ದಂತೆಯೇ ಸ್ವಯಂಸೇವಾ ಸಿಬ್ಬಂದಿಗಳು LACNOR COOL DRINK ಮತ್ತು AL BAYAN WATER ಬಾಟಲ್ ನ್ನು ಕೈಗಿಟ್ಟರು. ಅವರಿಗೂ ಧನ್ಯವಾದ ತಿಳಿಸಿ ಮುಂದುವರಿದಾಗ ನಮ್ಮನ್ನು ಮತ್ತೆ ವಾಸಸ್ಥಳಕ್ಕೆ ಕರೆದೊಯ್ಯಲು ಬಸ್ ಬಂದು ಕಾಯುತ್ತಿತ್ತು. ಹಾಗೆಯೇ ಪ್ರಯಾಣ ಮುಂದುವರಿದಂತೆಯೇ ಬಸ್ ಒಮ್ಮೆಲೇ ನಿಂತಿತ್ತು. ಎಲ್ಲರನ್ನೂ ಬಸ್ಸಿನಿಂದ ಇಳಿಯುವಂತೆ ಬಸ್ ಚಾಲಕ ಸೂಚಿಸಿದ. ಹೊರಬಂದಾಗ ಇಲ್ಲಿ ನಮ್ಮನ್ನು ಯಾಕೆ ಇಳಿಸಿಬಿಟ್ಟ ಎಂದು ಕೇಳುವಷ್ಟರಲ್ಲಿ ಬಸ್ ಮುಂದೆ ಚಲಿಸಿಯಾಗಿತ್ತು. ಒಮ್ಮೆಗೆ ದಿಕ್ಕೆ ತೋಚದಂತಾಯಿತು. ಮುಂದಕ್ಕೆ ಏನು ಮಾಡುವುದು ಎಂದು ಆಲೋಚಿಸುವಾಗ ಮೆನೇಜರ್ ಕರೆ ಮಾಡಿ ನೀವೆಲ್ಲಿದ್ದೀರ ಎಂದು ನಾವು ಇರುವ ವಿಷಯವನ್ನು ತಿಳಿಸಿದಾಗ ನಮ್ಮ ರೂಮಿಗೆ ಹೋಗುವ ದಾರಿಯನ್ನು ಹೇಳಿದರು. ಅವಾಗಲೇ ಪೋಲಿಸ್ ಅಧಿಕಾರಿಯೊಬ್ಬರು ಕಾರಿನಲ್ಲಿ ಬಂದು ನೇರ ಬಲಕ್ಕೆ ತಿರುಗಿದರೆ ನೀವು ಬಂದಿರುವ ಸ್ಥಳವನ್ನು ತಲುಪಬಹುದು ಅಂದರು. ಹಾಗೆಯೆ ಒಂದರ್ಧ ಕಿಲೋಮೀಟರ್ ನಡೆದಾಗ ನಾವಿರುವ ವಾಸಸ್ಥಳಕ್ಕೆ ತಲುಪಿದೆವು.
ಮಧ್ಯರಾತ್ರಿ 1. 00 ಗಂಟೆಯಾಗಿತ್ತು. ಇದೀಗ 4 ದಿನಗಳ ಕಾಲ ಹೊರಹೋಗುವ ಯಾವುದೇ ಅವಕಾಶವಿಲ್ಲ, ಅಲ್-ಹಂದುಲಿಲ್ಲಾ ಆಹಾರಕ್ಕೆ ಯಾವುದೇ ಕೊರತೆಯಿಲ್ಲ ನಮ್ಮ ಕಂಪೆನಿಗೆ ಆಹಾರವನ್ನು ಪೂರೈಸುವ ವ್ಯವಸ್ಥೆಯನ್ನು ಮಾಡಲು ಅವಕಾಶ ಕಲ್ಪಿಸಿದ್ದಾರೆ. ಕೊರೋನಾ ತಪಾಸಣೆ ಮಾಡದೆ ಕೇವಲ ಗುರುತಿನಚೀಟಿ ದಾಖಲೆ ಮಾತ್ರ ಯಾಕೆ ಪಡೆದುಕೊಂಡರು ಎಂಬ ಪ್ರಶ್ನೆ ಮೂಡಬಹುದು. ಹೌದು ಯಾವುದಾದರೂ ಅನಾರೋಗ್ಯವಿದ್ದರೆ ಮಾತ್ರ ನಮ್ಮನ್ನು ತಪಾಸಣೆಗೆ ಒಳಪಡಿಸುತ್ತಾರೆ.ನಿಮಗೆ ಏನಾದರು ತೊಂದರೆ ಇದ್ದಲ್ಲಿ ಮುಕ್ತವಾಗಿ ತಿಳಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ. ಹೇದರಬೇಕಾಗಿಲ್ಲ ಧೈರ್ಯದಿಂದ ಇರಿ.
ಮತ್ತೆ ದಾರಿಮಧ್ಯೆ ಯಾಕೆ ಬಿಟ್ಟುಹೋದರು ಎಂಬ ಪ್ರಶ್ನೆಯೂ ಮೂಡಬಹುದು.ಈ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ನನ್ನದು ಇಷ್ಟೇ, ಆದಷ್ಟೂ ನಿಮ್ಮನ್ನು ತಪಾಸಣೆಗೆ ಕರೆದೊಯ್ಯುವಾಗ ನಿಮ್ಮ ನಿಮ್ಮ ಜೊತೆಗಾರರೊಂದಿಗೆ ತೆರಳಿ ಅವರನ್ನೇ ಹಿಂಬಾಲಿಸಿ ಯಾವುದೇ ಸಮಸ್ಯೆ ಎದುರಾದರೂ ನಿಮ್ಮ ಜೊತೆಗಾರರು ನಿಮ್ಮೊಂದಿಗೆ ಇದ್ದಾರೆ ಎಂಬ ಧೈರ್ಯ ಇರಬಹುದು.
ಅಲ್ಲಾಹು ನಮ್ಮೆಲ್ಲರನ್ನು ಕೊರೋನಾದಂತಹ ಮಾರಕ ರೋಗಗಳಿಂದ ಕಾಪಾಡಲಿ ಅಮೀನ್ ಯಾರಬ್ಬಲ್ ಆಲಾಮೀನ್
– ಸಫ್ವಾನ್ ಕೂರತ್ (ಚಿಗುರೆಲೆ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.