(www.vknews.com) : ಇಸ್ಲಾಮಿನಲ್ಲಿ ಮದುವೆಯನ್ನು ಹೇಗೆ ನಡೆಸಬೇಕು ಎಂದು ಯಾರೂ ಕೂಡ ಆಲಿಮಿಗಳಲ್ಲಿ ಕೇಳಲಿಲ್ಲ. ಆದರೆ ಇವರು ನಡೆಸಿದ ಅನಾಚಾರದ ಮದುವೆಯ ಮೂಲಕ ದಾಂಪತ್ಯ ಬಿರುಕು ಕಾಣಿಸಿದಾಗ, ಅಥವಾ ತಲಾಖ್ ಕೊಡಲು ಈ ಕೌಂ ಆಲಿಮಿಗಳನ್ನು ಸಂಪರ್ಕಿಸುತ್ತದೆ. ಇಸ್ಲಾಮಿನಲ್ಲಿ ಮದುವೆ – ಝಾಕಾತ್ – ದಾನ – ಹಜ್ಜ್ – ದಾಂಪತ್ಯ ಜೀವನ – ಆಸ್ತಿಪಾಲು – ಪ್ರಯಾಣ, – ಉಪವಾಸ – ಸಾಲ – ಶಿಕ್ಷಣ ಎಲ್ಲದಕ್ಕೂ ನೀತಿ -ನಿಯಮಗಳಿದೆ. ಅದರ ಮೂಲಕವೇ ನಾವು ವ್ಯವಹರಿಸಿದರೆ ನಮ್ಮ ಎಲ್ಲಾ ಸಮಸ್ಯೆಗೆ ಪರಿಹಾರವಿದೆ. ಇಲ್ಲವಾದರೆ ಇಂದಿನ ಅನಿಸ್ಲಾಮಿಕ ಮದುವೆ ಕಾರಣಕ್ಕಾಗಿ ಉಂಟಾಗುವ ಆತ್ಮಹತ್ಯೆ -ವರದಕ್ಷಿಣೆ ಕಿರುಕುಲ – ದಾಂಪತ್ಯ ಬಿರುಕು – ಯಾಚನೆ- 30 ವರ್ಷ ಆದರೂ ಮದೆವೆ ಆಗದೆ ಇರುವ ಯುವತಿಯರು- ತಲಾಖ್ ಮುಂತಾದ ಸಮಸ್ಯೆಗಳನ್ನು ನಾವು ಎದುರಿಸಬೇಕಾದೀತು ಎಂದು ಕಲ್ಲೆಗ ಜಮಾಅತಿನ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಉಸ್ತಾದರು ಎಚ್ಚರಿಸಿದರು. ಅವರಿಂದು ಜುಮ್ಮಾ ಭಾಷಣದಲ್ಲಿ ಮಾತನಾಡುತ್ತಾ, ಇಸ್ಲಾನಿನ ಸಿಸ್ಟಂ ಮೂಲಕ ಮದುವೆ ಆಗಿರಿ, ಹಾಗೇ ದಾನ ಮತ್ತು ಝಕತ್ ನೀಡಿರಿ. ಆಗ, ಸಮೃದ್ದಿ ಉಂಟಾಗುತ್ತದೆ ಎಂದರು.
ಶ್ರೀಮಂತ, ತಂಞಲ್, ಆಲಿಮ್, ರಾಜಕೀಯ ನೆತಾರ, ಪತ್ರಕರ್ತ, ಮಹಾನ್ ದಾನಿ, ಬಡವ ಎಲ್ಲರಿಗೂ ಇಸ್ಲಾಮಿನ ವಿಧಿ – ನಿಯಮ ಒಂದೇ ಆಗಿದೆ. ಶ್ರೀಮಂತರ ಅನಾಚಾರವನ್ನು ಎದುರಿಸಲು ಆಲಿಮಿಗಳು ತಯಾರು ಆಗುವುದಿಲ್ಲ. ನಾವೇ ಅವರ ಒಡ್ಡೋಲಗಕ್ಕೆ ಹೋಗುತ್ತೇವೆ, ದುವಾ ಮಾಡುತ್ತೇವೆ. ಆಗ ಮಧ್ಯಮ ಮತ್ತು ಬಡ ವರ್ಗದವ ಅದನ್ನು ಅನುಸರಿಸುತ್ತಾನೆ. ಬಡವ ಅಕ್ರಮ ಮಾಡಿದರೆ ನನ್ನಂತಹ ಖತೀಬರು ಗಂಭೀರ ಬಾಷಣ ಮಾಡುತ್ತಾರೆ. ಅದು ಅಕ್ರಮ ಎಂದು ಹೇಳುತ್ತೇವೆ. ಹೀಗೆ ನಾವು ಇಸ್ಲಾಮಿನ ವಿಧಿ – ನಿಯಮವನ್ನು ನಾಶ ಮಾಡಿದೆವು ಎಂದ ಖತೀಬರು, ನಾಲ್ಕು ದಿನ ಮದುವೆ ಸಂಪೂರ್ಣ ಅನಾಚಾರ, ಅದರಲ್ಲಿ ಹತ್ತು ನಿಮಿಷ ನಿಖಾಹ್ ಮಾತ್ರ ಇಸ್ಲಾಂ. ಇಂತಹದು ನಮ್ಮ ಅವಿಶ್ವಾಸಕ್ಕೆ ನಿದರ್ಶನಗಳಾಗಿದೆ. ನಾವು ಅಲ್ಲಾಹನ ಭಯ ಮತ್ತು ಪ್ರೀತಿ ಇರುವವರಲ್ಲ ಎಂಬುವುದಕ್ಕೆ ಇದು ಸಾಕ್ಷಿಯಾಗಲಿದೆ ಎಂದು ಖತೀಬರು ಎಚ್ಚರಿಸಿದರು.
ಝಕಾತ್ ಕೊಡುವ ರೀತಿ ಕೊಡದಿದ್ದರೆ, ದಾನ ನೀಡುವ ರೀತಿ ನೀಡದೇ ಇದ್ದರೆ ಯಾಚನೆಯು ಹೆಚ್ಚಾಗುತ್ತದೆ. ಅನಂತರ ಅದು ಜನರ ರಕ್ತ ಹೀರುತ್ತದೆ. ಕೆಟ್ಟ ಸಂಪ್ರದಾಯಗಳನ್ನು ಬೆಳೆಸುತ್ತದೆ. ಸಮುದಾಯವನ್ನು ಅವಮಾನಪಡಿಸುತ್ತದೆ ಅಲ್ಲಾಹನು ಪ್ರಕೃತಿದತ್ತವಾಗಿ ಬದುಕುವ ಸಿಸ್ಟಂ ಮಾಡಿರುವಾಗ, ನಾವು ಅದಕ್ಕೆ ವಿರುದ್ದವಾದರೆ ನಮಗೆ ಅದು ವಿಪತ್ತು ಆಗಲಿದೆ. ನಾವು ಪರ್ಯಾಯ ಕ್ರಮಗಳನ್ನು ಹೆಚ್ಚು ನಂಬಿದ್ದೇವೆ. ಅದು ತಾತ್ಕಾಲಿಕ. ಆ ಮೂಲಕ ಅದು ಬೇರೆ ಬೇರೆ ಸಮಸ್ಯೆಯನ್ನು ನಮಗೆ ಎಳೆದು ತರುತ್ತದೆ. ನಮ್ಮ ಭವಿಷ್ಯದ ತಲೆಮಾರಿಗೆ ಅದೊಂದು ಮಾರಕ ಪಿಡುಗು ಆಗಬಹುದು. ಇಲ್ಲವೇ ನಾವೊಂದು ಯಾಚಿಸುವ – ಪೀಡಿಸಲ್ಪಡುವ ಸಮುದಾಯ ಆಗಲೂಬಹುದು ಎಂದ ಖತೀಬರು, ಪ್ರತಿಷ್ಠೆ – ವ್ಯಾಮೋಹ ಮತ್ತು ಪ್ರದರ್ಶನವು ನಮ್ಮನ್ನು ಅದಪತನಕ್ಕೀಡು ಮಾಡಿದೆ. ವಾಹನ ಖರೀದಿ – ವಸ್ತ್ರ ಖರೀದಿ – ಮನೆಯ ಇಂಟೀರಿಯಲ್ – ಮದುವೆಯ ದುಂದುವೆಚ್ಚ ಎಲ್ಲವನ್ನೂ ಮಾಡುವಾಗ ಬಡ್ಡಿಯ ಸಾಲ, ಅಥವಾ ಪೀಡಿಸುವ ಸಾಲವನ್ನು ಪಡೆಯುತ್ತೇವೆ. ಬಡ್ಡಿಗೆ ಪಡೆದ ಹಣ ಹರಾಂ, ಅದರ ಮೂಲಕ ಖರೀದಿಸಿದ ಎಲ್ಲವೂ ಹರಾಂ ಎಂದ ಖತೀಬರು ನಾವು ಇಸ್ಲಾಮಿನಿಂದ ಹೊರಗಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು.
ಸಮಗ್ರ ಬದುಕಿಗೆ ಇರುವ ಇಸ್ಲಾಮಿನ ವಿದಿ, ಮಾರ್ಗದರ್ಶನ , ಉಪದೇಶ ಹೆಚ್ಚಿನವರಿಗೆ ತಿಳಿದಿಲ್ಲ. ಮರಣದ ಮಯ್ಯತ್ ಸ್ನಾನ, ನಮಾಝ್, ದಫನ ಕಾರ್ಯ, ಮೂರನೇ ದುವಾ, ಎಲ್ಲವೂ ಇಸ್ಲಾಮಿಕ ಬೇಕು. ಆದರೆ ಆ ಮಯ್ಯತ್ತ್ ನ ವ್ಯಕ್ತಿ ಬದುಕಿದ್ದಾಗ ಯಾರೂ ಆತನಿಗೆ ಈ ಮಾರ್ಗದರ್ಶನ ಮಾಡಿಲ್ಲ, ಯಾರೂ ಮಾಡಲಿಕ್ಕೆ ಒತ್ತಾಯಿಸಿಲ್ಲ. ಬದುಕಿರುವಾಗ ಇಸ್ಲಾಮಿನ ವಿಧಿ ಕಟ್ಟು ನಿಟ್ಟು ಪಾಲಿಸಿದರೆ ಪರಲೋಕದಲ್ಲಿ ಸಂಕಷ್ಟವಿಲ್ಲ. ಮರಣಿಸಿದಾಗ ವಿದಿ ಸ್ವಲ್ಪ ಖಡಿಮೆಯಾದರೂ ಆಗಬಹುದು, ಬದುಕಿರುವಾಗ ಇಸ್ಲಾಮಿನ ವಿಧಿ ಖಡ್ಡಾಯವಾಗಿ ಪಾಲಿಸಬೇಕು ಎಂದ ಖತೀಬರು, ಅಲ್ಲಾಹನ ಮಾರ್ಗದತ್ತ ದಾವಿಸಿ ಹೋಗುವ, ಇಸ್ಲಾಮಿನ ವಿಧಿಗಳನ್ನು ನಾವು ಕಲಿಯುವ ನಮ್ಮ ಮಕ್ಕಳಿಗೆ ಕಲಿಸುವ. ಈಗ ಹೆಚ್ಚಿನ ಹೆತ್ತವರು, ಅದು ಮಕ್ಕಳ ದುಡ್ಡು, ಅವರ ಇಷ್ಟ, ಮಕ್ಕಳ ಕಾರುಬಾರು ಎಂದು ಇಸ್ಲಾಮಿನ ನೀತಿ ನಿಯಮ ದಿಕ್ಕರಿಸುವುದಕ್ಕೆ ಪ್ರೇರಣೆ ಕೊಡುತ್ತಿದ್ದಾರೆ. ಇದು ಮುಂದಿನ ತಲೆಮಾರಿಗೆ ಅನಿಸ್ಲಾಮಿಕ ಸಂಪ್ರದಾಯಕ್ಕೆ ನಾವು ಸಹಕರಿಸಿದಂತೆ. ಹಾಗಾಗಿ ನಾವು ಸತ್ಯ ಮತ್ತು ನಿಷ್ಠುರವಾಗಿ ಇಸ್ಲಾನ ಸಂದೇಶ ತಲುಪಿಸುವ. ಅದು ನಮ್ಮ ವಿರೋಧಿಗಳಿಗೆ ಕಹಿಯಾದರೂ ಸರಿ ಎಂದರು.
– ಸುನ್ನೀಟುಡೇ…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.