(www.vknews.com) : ಉಮ್ಮತ್ ಒನ್ ಈ ಹೆಸರು ಕೇಳುವಾಗ ಏನೋ ಒಂಥರಾ ಸಂಚಲನ ಉಂಟಾಗುತ್ತದೆ. ಆ ಹೆಸರಲ್ಲಿ ಅದ್ಭುತವಾದ ಶಕ್ತಿ ಇದೆ. ಐಕ್ಯತೆ ಇದೆ. ಭರವಸೆಯಿದೆ, ವಿಶ್ವಾಸವಿದೆ. ಸೌಹಾರ್ದತೆ ಇದೆ.
ಉಮ್ಮತ್ ಒನ್ ಇದು ಕೊಡಗಿನ ಮುಸ್ಲಿಮರ ಒಂದು ವಾಟ್ಸಪ್ ಗ್ರೂಪ್. ಹೆಸರೇ ಸೂಚಿಸುವಂತೆ ಮುಸ್ಲಿಂ ಉಮ್ಮತ್ತುಗಳನ್ನು ಒಗ್ಗೂಡಿಸುವ ಒಂದು ಗ್ರೂಪ್. ಅವರವರ ಆಶಯ ಆದರ್ಶಗಳನ್ನು ಪಾಲಿಸಿಕೊಂಡು ಸಮುದಾಯದ ಅಭಿವೃದ್ಧಿಗಾಗಿ ಒಂದಾದ ಮನಸ್ಸು ಉಮ್ಮತ್ ಒನ್. ಶಾಫೀ, ಹನಫೀ, ಬ್ಯಾರಿ, ಮಲಬಾರಿ, ಸುನ್ನಿ, ಸಲಫಿ,ಜಮಾತ್, ತಬ್ಲೀಗ್ ಏನೇ ಆಗಿದ್ದರೂ ಮುಸ್ಲಿಂ ಉಮ್ಮತ್ ಎಂಬ ವಿಶಾಲ ಪರಿಕಲ್ಪನೆಯಲ್ಲಿ ಎಲ್ಲರೂ ಒಗ್ಗೂಡಿದರು. ಧಾರ್ಮಿಕ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚಿಸದೆ ಕೇವಲ ಸಮುದಾಯದ ಸಬಲೀಕರಣಕ್ಕಾಗಿ ಮಾತ್ರ ಹುಟ್ಟಿಕೊಂಡಿದೆ ಈ ವಾಟ್ಸಪ್ ಗ್ರೂಪ್. ಕೊಡಗಿನ ನೂರ ಅರುವತ್ತು ರಷ್ಟು ಮೊಹಲ್ಲಾಗಳ ಅಧ್ಯಕ್ಷರು/ಕಾರ್ಯದರ್ಶಿ, ಪ್ರಮುಖ ಮುಸ್ಲಿಂ ಸಂಘ ಸಂಸ್ಥೆಗಳ ನಾಯಕರು, ಸಮಾಜ ಸೇವಕರು, ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಸಮುದಾಯ ಚಿಂತಕರು ಎಲ್ಲಾ ಈ ವಾಟ್ಸಪ್ ಗ್ರೂಪಿನ ಸದಸ್ಯರು. ಶಿಕ್ಷಣ, ಆರೋಗ್ಯ, ಸರಕಾರಿ ಉದ್ಯೋಗ ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ಮಾರ್ಗದರ್ಶನ, ತುರ್ತು ಸೇವೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮೊದಲಾದ ವಿಷಯಗಳನ್ನು ಕೇಂದ್ರೀಕರಿಸಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಮೊನ್ನೆ ನಾಪೊಕ್ಲು ಮತ್ತು ಕುಶಾಲನಗರ ಸಮೀಪದ ಹೊಸ್ಕೋಟೆಯಲ್ಲಿ ಕ್ಯಾರಿಯರ್ ಗೈಡೆನ್ಸ್ ಪ್ರೋಗ್ರಾಮ್ ಹಮ್ಮಿಕೊಂಡಿದ್ದರು. ಗ್ರೂಪಿನ ಸದಸ್ಯರ ಉತ್ಸಾಹ, ಸಮುದಾಯ ಕಾಳಜಿ, ಒಗ್ಗಟ್ಟು ಮತ್ತು ಸೇವಾ ಮನೋಭಾವ ಕಂಡು ನನಗೆ ಬಹಳ ಸಂತೋಷವೂ ಆಶ್ಚರ್ಯವೂ ಆಯಿತು. ಅವರವರ ಆಶಯ ಆದರ್ಶದಂತೆ ಬದುಕಿಕೊಂಡು ಒಂದೇ ಮನಸ್ಸಿನಿಂದ ನಾವೆಲ್ಲರೂ ಮುಸ್ಲಿಂ ಉಮ್ಮತ್ ಒಗ್ಗಟ್ಟಾಗಿ ಒಂದು ಶಕ್ತಿಯಾಗಿ ನಿಲ್ಲಬೇಕು. ಸಮುದಾಯದ ಸಬಲೀಕರಣಕ್ಕಾಗಿ ನಾವೆಲ್ಲಾ ಜೊತೆ ಸೇರಬೇಕು. ಒಗ್ಗೂಡಿ ನಿಂತಾಗ ನಾವು ಗೆಲ್ಲುತ್ತೇವೆ. ಅದೇ ನಾವು ಛಿದ್ರ ಛಿದ್ರ ರಾದಾಗ ಸೋಲುತ್ತೇವೆ . ಏನೇ ಬರಲಿ ಒಗ್ಗಟ್ಟಿರಲಿ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಉಮ್ಮತ್ ಒನ್ ಕೊಡಗು ಗ್ರೂಪಿಗೆ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು.
ಉಮ್ಮತ್ತ್ ಒನ್ ಈ ಪರಿಕಲ್ಪನೆ ಕೇವಲ ಕೊಡಗಿಗೆ ಮಾತ್ರ ಸೀಮಿತವಾಗಬಾರದು. ಜಾಗತಿಕ ಮುಸ್ಲಿಮರೆಲ್ಲರೂ ಉಮ್ಮತ್ ಒನ್ ಆಗಬೇಕು. ಭಾರತೀಯ ಮುಸ್ಲಿಮರೆಲ್ಲರೂ ಉಮ್ಮತ್ ಒನ್ ಆಗಬೇಕು. ಕರ್ನಾಟಕದ ಮುಸ್ಲಿಮರೆಲ್ಲರೂ ಉಮ್ಮತ್ ಒನ್ ಆಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರೆಲ್ಲರೂ ಉಮ್ಮತ್ ಒನ್ ಆಗಬೇಕು. ಆಶಯಗಳ ಭಿನ್ನತೆಯಿದ್ದರೂ ಕೂಡ ನಾವೆಲ್ಲರೂ ಮುಸ್ಲಿಮ್ ಉಮ್ಮತ್ ಎಂಬ ಪರಿಕಲ್ಪನೆಯಲ್ಲಿ ಸಮುದಾಯವನ್ನು ಮುನ್ನಡೆಸಬೇಕು. ದೇಶದ ಮುಖ್ಯವಾಹಿನಿಗೆ ನಾವು ಬರಬೇಕು. ಆಡಳಿತ ಯಂತ್ರದ ಭಾಗವಾಗಬೇಕು. ಗರಿಷ್ಠ ಸಂಖ್ಯೆಯಲ್ಲಿ ಜನಪ್ರತಿನಿಧಿಗಳು ಬರಬೇಕು. ಶಿಕ್ಷಣ ಸಂಸ್ಥೆಗಳು, ಯುನಿವರ್ಸಿಟಿಗಳು, ಸಂಶೋಧನಾ ಕೇಂದ್ರಗಳು, ತರಬೇತಿ ಕೇಂದ್ರಗಳು, ಸ್ವ ಉದ್ಯೋಗ ಕೇಂದ್ರಗಳು, ಕೌನ್ಸೆಲಿಂಗ್ ಸೆಂಟರ್ ಗಳು ಹೆಚ್ಚು ಹೆಚ್ಚು ಸ್ಥಾಪನೆಯಾಗಬೇಕು. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ತಜ್ಞರು, ಉದ್ಯಮಿಗಳು, professionals, ಬುದ್ಧಿಜೀವಿಗಳು, ಸಮಾಜ ಸೇವಕರು ಹೀಗೆ ನಮ್ಮ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು. ಆಂತರಿಕ ಕಚ್ಚಾಟ, ಪರಸ್ಪರ ಕಾಲೆಳೆಯುವುದು ನಿಲ್ಲಬೇಕು. ಭವ್ಯ ಭಾರತದ ನಿರ್ಮಾಣದಲ್ಲಿ ನಾವು ಎಲ್ಲರಿಗಿಂತಲೂ ಮುಂದೆ ನಿಲ್ಲುವಂತಾಗಬೇಕು. ಸರ್ಚ್ ಮಾಡುವವರಾಗದೆ ರಿಸರ್ಚ್ ಮಾಡುವವರು ನಾವಾಗಬೇಕು.
ಕೊಡಗಿನ ಉಮ್ಮತ್ ಒನ್ ನಮಗೆಲ್ಲರಿಗೂ ಸ್ಫೂರ್ತಿಯಾಗಲಿ ಮತ್ತು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿದ್ದೇನೆ.
Coming together is beginning Keeping together is progress Working together is success
✒️ ರಫೀಕ್ ಮಾಸ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.