ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ತಮಾಷೆ ಮಿತಿ ಮೀರಿದರೆ ಕೆಲವೊಮ್ಮೆ ಯಾವೆಲ್ಲಾ ಪರಿಣಾಮಗಳಾಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಪುತ್ತೂರು ಮೂಲದ ಯುವಕನೊಬ್ಬ ಅಬುಧಾಬಿಯಲ್ಲಿ 7 ಕೋಟಿ ರೂ ಲಾಟರಿ ವಿಜೇತನಾಗಿದ್ದಾನೆ ಎನ್ನುವ ಸಂದೇಶವೊಂದು ಫೆ.4ರಿಂದ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ವೈಲರ್ ಕೂಡಾ ಆಗಿತ್ತು. ಅಬುಧಾಬಿ ಡ್ಯೂಟಿ ಫ್ರೀ ಲಾಟರಿಯಲ್ಲಿ ಬರೆಪ್ಪಾಡಿ ಸಮೀಪದ ಕೂರತ್ ನಿವಾಸಿ ಅಬುಧಾಬಿಯಲ್ಲಿ ಉದ್ಯೋಗದಲ್ಲಿರುವ ಸಫ್ವಾನ್ ಎಂಬ ಯುವಕನಿಗೆ ರೂ. 7 ಕೋಟಿ ರೂ.ಗಳ ಲಾಟರಿ ಡ್ರಾ ಆಗಿದೆ ಎನ್ನುವ ಪೋರ್ಟಲ್ ನ್ಯೂಸ್ ಒಂದರ ಸ್ಕ್ರೀನ್ ಶಾಟ್ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಹಲವು ವಾಟ್ಸಾಪ್ ಗ್ರೂಪ್ಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯೂ ನಡೆದಿತ್ತು. ಹಲವರು ಸಫ್ವಾನ್ ಅವರಿಗೆ ಅಭಿನಂದನೆ ಸಲ್ಲಿಸಿ ಸಂದೇಶವನ್ನು ಹರಿಯಬಿಟ್ಟಿದ್ದರು. ಇದು ಸತ್ಯವೆಂದೇ ಬಹುತೇಕರು ನಂಬಿದ್ದರು. ಆದರೆ ಇದರ ನೈಜತೆ ಇದೀಗ ಬಯಲಾಗಿದೆ.
ಕೇರಳದ ವ್ಯಕ್ತಿಯೊಬ್ಬರಿಗೆ ಒಲಿದ ಲಾಟರಿ ಬಗ್ಗೆ ವೆಬ್ ತಾಣವೊಂದರಲ್ಲಿ ನ್ಯೂಸ್ ಬಂದಿತ್ತು. ಅಲ್ಲಿಗೆ ಸಫ್ವಾನ್ ಅವರ ಫೋಟೋವನ್ನು ಎಡಿಟ್ ಈ ರೀತಿ ತಿರುಚಿ ಸಂದೇಶವನ್ನು ಹರಿಯಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಆದರೆ ಈ ರೀತಿ ಎಡಿಟ್ ಮಾಡಿದವರು ಯಾರು ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಸಫ್ವಾನ್ ಬಳಗದಲ್ಲಿದ್ದ ಗೆಳೆಯರೇ ಅನ್ಯ ಉದ್ದೇಶಗಳಿಲ್ಲದೇ ಕೇವಲ ತಮಾಷೆಗಾಗಿ ಈ ರೀತಿ ಮಾಡಿರಬಹುದು ಎನ್ನುವ ಸಂಶಯ ಕೂಡಾ ಉಂಟಾಗಿದೆ.
ನನಗೆ ಲಾಟರಿ ಒಲಿದಿಲ್ಲ-ಸಫ್ವಾನ್ ಸ್ಪಷ್ಟನೆ : ಈ ಬಗ್ಗೆ `ವಿಶ್ವ ಕನ್ನಡಿಗ ನ್ಯೂಸ್’ ಜೊತೆ ಸ್ವತಃ ಸಫ್ವಾನ್ ಕೂರತ್ ಅವರು ಮಾತನಾಡಿ ನಾನು ಯಾವುದೇ ಲಾಟರಿ ವಿಜೇತನಾಗಿಲ್ಲ. ಎಲ್ಲವೂ ಸುಳ್ಳು ಸುದ್ದಿಗಳು. ನನ್ನ ಫೋಟೋ ಎಡಿಟ್ ಮಾಡಿ ಯಾರೋ ಮಾಡಿರುವ ಕೃತ್ಯ ಇದಾಗಿದ್ದು ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ನಾನು ಲಾಟರಿ ವಿಜೇತನಾಗಿದ್ದೇನೆ ಎನ್ನುವ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಬಳಿಕ ನೂರಾರು ಕರೆಗಳು, ಸಂದೇಶಗಳು ನನಗೆ ಬರುತ್ತಿದೆ. ವಾಸ್ತವದಲ್ಲಿ ನಾನು ಇದರಿಂದಾಗಿ ಗೊಂದಲ ಮತ್ತು ನೋವಿಗೊಳಗಾಗಿದ್ದೇನೆ. ತಮಾಷೆಗಾಗಿ ಯಾರೋ ಮಾಡಿರುವ ಈ ಪೋಸ್ಟ್ನಿಂದ ನನಗೆ ಬಹಳ ಕಿರಿಕಿರಿಯಾಗಿದೆ. ನನಗೆ ರೂ.೭ ಕೋಟಿ ಲಾಟರಿ ಬಂದಿದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಇದನ್ನು ಯಾರು ಕೂಡಾ ನಂಬಬಾರದು ಎಂದು ಸಫ್ವಾನ್ ಕೂರತ್ ಮನವಿ ಮಾಡಿದ್ದಾರೆ.
ತಮಾಷೆ ತಂದ ಫಜೀತಿ…! : ತಮಾಷೆಗಾಗಿ ಯಾರೋ ಮಾಡಿದ ಎಡಿಟ್ ಒಂದು ವ್ಯಾಪಕ ವೈರಲ್ ಆಗಿ ಸಫ್ವಾನ್ ಕೂರತ್ ಎಂಬವರು ಪೇಚಿಗೆ ಸಿಲುಕಿರುವುದು ವಿಪರ್ಯಾಸವಾಗಿದೆ. ಲಾಟರಿ ಬಂದಿದೆ ಎನ್ನುವ ಸಂದೇಶ ಹರಿದಾಡಿದ್ದೇ ತಡ ಇದುವರೆಗೂ ಸಂಪರ್ಕ ಇಲ್ಲದ ಅನೇಕರು ಸಫ್ವಾನ್ ಅವರನ್ನು ಸಂಪರ್ಕಿಸಿ ಸಾಲ ಕೇಳಿದ್ದರು ಎನ್ನುವುದು ಇನ್ನೊಂದು ವಿಶೇಷ. ಅನಿವಾಸಿ ಉದ್ಯೋಗಿಯಾಗಿರುವ ಸಫ್ವಾನ್ ಅವರಿಗೆ ರೂ.೭ ಕೋಟಿ ಒಲಿದಿದೆ ಎನ್ನುವ ವಿಚಾರ ಊರೆಲ್ಲಾ ಸುದ್ದಿಯಾಗಿದ್ದ ಹಿನ್ನೆಲೆಯಲ್ಲಿ ಸಫ್ವಾನ್ ಅವರ ಸಂಬಂಧಿಕರು, ಗೆಳೆಯರು ಅವರಿಗೆ ನಿರಂತರ ಸಂದೇಶಗಳನ್ನು ಕಳಿಸಿ ವಿಚಾರಿಸಿದ್ದರು. ಅಂತೂ ತಮಾಷೆಗಾಗಿ ಮಾಡಿದ ಸಂದೇಶವೊಂದು ಸಫ್ವಾನ್ ಅವರನ್ನು ಸದ್ಯದ ಮಟ್ಟಿಗೆ ಸಮಸ್ಯೆಗೆ ದೂಡಿರುವುದಂತೂ ಸುಳ್ಳಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.