ಯುಎಇ: (ವಿಶ್ವ ಕನ್ನಡಿಗ ನ್ಯೂಸ್)ಭಾರತದಲ್ಲಿ ಹುಟ್ಟಿ ಉದ್ಯೋಗ ಅರಸಿಕೊಂಡು ಕೋಟ್ಯಾಂತರ ಮಂದಿ ಸಾಗರ ದಾಟಿ ವಿವಿಧ ದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ತಾವು ಹುಟ್ಟೂರು ಬಿಟ್ಟು ತೆರಳಿದ್ದರೂ, ತನ್ನ ದೇಶಕ್ಕೆ, ರಾಜ್ಯಕ್ಕೆ ಏನಾದರೂ ಸಂಕಷ್ಟ ಎದುರಾದಾಗ ಮೊದಲು ನೆರವಿಗೆ ಧಾವಿಸುವುದೇ ಅನಿವಾಸಿಗಳು. ತಮ್ಮ ಸಂಪಾದನೆಯ ಒಂದಿಷ್ಟು ಭಾಗವನ್ನು ಹುಟ್ಟೂರಿನ ಏಳಿಗೆಗಾಗಿಯೇ ಮೀಸಲಿಡುವ ಅನಿವಾಸಿ ಭಾರತೀಯರು ದೇಶದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಅನಿವಾಸಿ ಕನ್ನಡಿಗರ ಸೇವೆಯ ಬಗ್ಗೆ ಮಾತನಾಡುವಾಗ ನಮಗೆ ಥಟ್ಟನೆ ನೆನಪಿಗೆ ಬರುವ ಹೆಸರೇ ಕೆಸಿಎಫ್!.
ಸಾಗರೋತ್ತರ ಭಾರತೀಯ ಕನ್ನಡಿಗರ ಏಳಿಗೆಗಾಗಿ, ಅಭಿವೃದ್ಧಿಗಾಗಿ, ಸಂಕಷ್ಟಕ್ಕೀಡಾದವರ ನೆರವಿಗಾಗಿ, ಶೋಷಿತರ ಧ್ವನಿಯಾಗಿ ಮತ್ತು ಸಾಮಾಜಿಕ ಬದ್ದತೆಗಾಗಿ ರೂಪುಗೊಂಡ ಸಂಘಟನೆಯೇ ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್. ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಸಮಾಜಮುಖಿಯಾಗಿ ಗುರುತಿಸಿಕೊಂಡಿರುವ ಕೆಸಿಎಫ್ ಇಂದು ಅನಿವಾಸಿ ಕನ್ನಡಿಗರ ಪಾಲಿನ ಆಶಾಕಿರಣವಾಗಿದೆ. ಸಮಸ್ಯೆ ಅನಿವಾಸಿಗಳದ್ದಾಗಿರಲಿ ಅಥವಾ ತಾಯ್ನಾಡಿನದ್ದಾಗಿರಲಿ ಅಲ್ಲಿ ಕೆಸಿಎಫ್ ತನ್ನ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿದೆ.
ಇದೀಗ ಕೆಸಿಎಫ್ ಮತ್ತೆ ಸುದ್ದಿಯಲ್ಲಿದೆ. ಹೌದು, ಈ ಬಾರಿ ಕೆಸಿಎಫ್ ಯುಎಇ ಸಮಿತಿ ಕೈಗೆತ್ತಿಕೊಂಡಿದ್ದು ಒಂದೊಳ್ಳೆಯ ವಿಶಿಷ್ಟ ಯೋಜನೆ. ನಿಮಗೊತ್ತಿರಬಹುದು, ಭಾರತದಲ್ಲಿ ಈಗ ವಿಪರೀತ ಚಳಿಯ ಸಮಯ, ಅದರಲ್ಲೂ ದೆಹಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ರಾಜಸ್ಥಾನ, ಪಂಜಾಬ್, ಗುಜರಾತ್ ಸೇರಿದಂತೆ ದೇಶದಾದ್ಯಂತ ಹಲವಾರು ರಾಜ್ಯಗಳು ಈ ಬಾರಿ ಮೈ ಕೋರೈಸುವ ಚಳಿಯಿಂದ ತತ್ತರಿಸಿವೆ. ಈ ಪ್ರದೇಶಗಳಲ್ಲಿ ರಾತ್ರಿಯ ತಾಪಮಾನವು ನಿಯಮಿತವಾಗ 3 ಸೆಲ್ಸಿಯಸ್ಗಿಂತ ಕಡಿಮೆಯಾಗುತ್ತಿದೆ, ಇದು ಸಾಮಾನ್ಯ ಕಾಲೋಚಿತ ಸರಾಸರಿಗಿಂತ 4-5 ಡಿಗ್ರಿ ಕಡಿಮೆಯಾಗಿದೆ.
ಈ ಅಸಾಮಾನ್ಯ ಹವಾಮಾನದಿಂದ ತೀವ್ರವಾಗಿ ಬಳಲುತ್ತಿರುವ ಅನೇಕ ಜನರನ್ನು ಗುರುತಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಯುಎಇ ಸಮಿತಿ ಬೆಚ್ಚನೆಯ ಕಂಬಳಿ ವಿತರಣಾ ಕಾರ್ಯವನ್ನು ಆರಂಭಿಸಿದೆ.
ಈಗಾಗಲೇ ದೇಶದ ಆಯಾ ಪ್ರದೇಶಗಳಲ್ಲಿ ಪ್ರತಿಷ್ಠಿತ ಮರ್ಕಝ್ ಸಂಸ್ಥೆಯ ನೂರಾನಿ ವಿದ್ವಾಂಸರ ಸಹಕಾರದೊಂದಿಗೆ ದೆಹಲಿಯ ತೈಬಾ ಹೆರಿಟೇಜ್ ಮೂಲಕ ಹಲವಾರು ಕಂಬಳಿಗಳನ್ನು ಯುಎಇ ಕೆಸಿಎಫ್ ವಿತರಿಸಿದೆ. ದೆಹಲಿಯಲ್ಲಿ ಶಾಫಿ ನೂರಾನಿ ಮತ್ತು ಅಡ್ವಕೇಟ್ ಸಿದ್ದೀಕ್, ಗುಜರಾತಿನಲ್ಲಿ ಆದಮ್ ನೂರಾನಿ ಮತ್ತು ಉಬೈದ್ ನೂರಾನಿ, ಹರ್ಯಾಣದಲ್ಲಿ ಮುಶ್ರಖ್ ರಬ್ಬಾನಿ, ಉತ್ತರ ಪ್ರದೇಶದಲ್ಲಿ ಜಲೀಲ್ ನಿಝಾಮಿ ಮತ್ತು ಖಾರಿ ಶಹೀರ್, ರಾಜಸ್ಥಾನದಲ್ಲಿ ಮುನೀಬ್ ನಈಮಿ, ವಹೀದ್ ನಈಮಿ ಮತ್ತು ವಾಹಿದ್ ಮುಈನಿ, ಜಮ್ಮು ಕಾಶ್ಮೀರದಲ್ಲಿ ಶೌಕತ್ ಬುಖಾರಿ ಹಾಗೂ ಶಬೀರ್ ಸರ್ ಮತ್ತು ಪಂಜಾಬಿನಲ್ಲಿ ಮುಫ್ತಿ ಮೌಲಾನ ನೂರಾನಿ ಶಾಹ್ ಇವರುಗಳ ನೇತೃತ್ವದಲ್ಲಿ ಕಂಬಳಿಗಳನ್ನು ವಿತರಿಸಲಾಗಿದೆ.
ಕೆಸಿಎಫ್ನ ಈ ಮಹತ್ಕಾರ್ಯವನ್ನು ಕಂಡ ದುಬೈಯ ಕೊಡುಗೈ ದಾನಿಯೊಬ್ಬರು ಐದು ಲಕ್ಷ ಮೊತ್ತದ ಕಂಬಳಿಗನ್ನು ನೀಡಲು ಮುಂದೆ ಬಂದಿದ್ದು ಯುಎಇ ಕೆಸಿಎಫ್ನ ಆತ್ಮಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನು ಯುಎಇ ಕೆಸಿಎಫ್ನ ಕನಸಿನ ಕೂಸಾದ ಬಹುನಿರೀಕ್ಷಿತ ‘ದಾರುಲ್ ಅಮಾನ್’ ವಸತಿ ನಿರ್ಮಾಣ ಯೋಜನೆಯ ಮುಂದುವರಿದ ಭಾಗವಾಗಿ ಉತ್ತರಾಖಂಡದ ಬೀದಿಬದಿಯಲ್ಲಿ ಮನೆಮಠವಿಲ್ಲದೆ ಅಲೆಮಾರಿ ಜೀವನ ನಡೆಸುತ್ತಿರುವ ಬಡ ನಿರ್ಗತಿಕರಿಗೆ ನೆಲೆ ಕಲ್ಪಿಸುವ ಸಲುವಾಗಿ ವಸತಿ ನಿರ್ಮಾಣ ಕಾರ್ಯವನ್ನೂ ಕೂಡ ಕೆಸಿಎಫ್ ಯುಎಇ ಕೈಗೆತ್ತಿಕೊಂಡಿದೆ. ಈಗಾಗಲೇ ವಸತಿ ಸಂಕೀರ್ಣದ ಶಿಲಾನ್ಯಾಸ ನೆರವೇರಿದ್ದು ಕೆಲಸ ಭರದಿಂದ ಸಾಗುತ್ತಿದೆ. ದಾರುಲ್ ಅಮಾನ್ ಯೋಜನೆಯ ಮೊದಲ ಮನೆಯನ್ನು ಉಪ್ಪಿನಂಗಡಿಯ ಪೆರ್ಣೆಯ ಅನಿಲ ದುರಂತದಲ್ಲಿ ಅನಾಥರಾದ ಮಕ್ಕಳಿಗೆ ನಿರ್ಮಿಸಿಕೊಟ್ಟಿದ್ದು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. ಹೀಗೆ ಹತ್ತು ಹಲವು ಯೋಜನೆಗಳೊಂದಿಗೆ ಅಬ್ದುಲ್ ಜಲೀಲ್ ನಿಝಾಮಿ ಕೊಡಗು ಸಾರಥ್ಯದ ಕೆಸಿಎಫ್ ಯುಎಇ ಸಮಿತಿ ಜೀವ ಕಾರುಣ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಬದುಕಿನಲ್ಲಿ ಸಾರ್ಥಕತೆ ಕಾಣಬೇಕಾದರೆ ಬಡವರ, ದೀನರ, ಅಶಕ್ತರ ಸೇವೆ ಮಾಡಬೇಕು, ಅವರ ಕಣ್ಣೀರೊರೆಸುವ ಕಾರ್ಯ ಮಾಡಿ ಅವರ ಮೊಗದಲ್ಲೂ ಸಂತಸ ಭರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ನಡುಗುವ ಚಳಿಯಲ್ಲಿ ದಿನದೂಡುವ ಮಂದಿ ಕಂಬಳಿ ಹೊದ್ದು ಬೆಚ್ಚನೆಯ ಅನುಭೂತಿ ಅನುಭವಿಸುವಾಗ, ಸೂರಿಲ್ಲದೆ ಅಲೆದಾಡುವ ಅಲೆಮಾರಿಗಳು ತಮ್ಮ ಕನಸಿನ ಮನೆಯಲ್ಲಿ ಸುಖನಿದ್ದೆಯನ್ನು ಸವಿಯುವಾಗ ಇದಕ್ಕಿಂತ ಮಿಗಿಲಾದ ಆತ್ಮ ಸಂತೃಪ್ತಿ ನಮಗಿನ್ನೇನು ಬೇಕಿದೆ ಹೇಳಿ? ‘ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸು’ ಎಂಬ ಮಾತಿನಂತೆ ಬಡವ ಬಲ್ಲಿದರ ಕಣ್ಣೀರೊರೆಸುವ ‘ಯುಎಇ-ಕೆಸಿಎಫ್’ ಕೈಗಳನ್ನು ನಾವು ನೀವು ಸೇರಿ ಬಲಿಷ್ಠಗೊಳಿಸೋಣ, ಸುಂದರ ನಾಳೆಗಳನ್ನು ಸೃಷ್ಟಿಸೋಣ.
~ ಶಾಕಿರ್ MSe.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.