ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಉಚ್ಛ ನ್ಯಾಯಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ: 9367/2020 ಗೆ ಸಂಬಂಧಿಸಿ ನೀಡಿರುವ ನಿರ್ದೇಶನದಂತೆ ಹಾಗೂ ಘನತ್ಯಾಜ್ಯ ನಿರ್ವಹಣೆ ಮತ್ತು ವ್ಯವಸ್ಥಾಪನೆ ನಿಯಮ 2016ರ ಅನುಷ್ಠಾನದ ಕುರಿತು ಈ ಹಿಂದೆ ನೀಡಿದ ಸೂಚನೆಯಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆಗಳಿಂದ, ಅಪಾರ್ಟ್ಮೆಂಟ್ಗಳಿಂದ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಲು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿರುತ್ತದೆ.
ದಿನನಿತ್ಯ ಕೋವಿಡ್-19 ರ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಮಹಾನಗರ ಪಾಲಿಕೆಯ ಸಂಸ್ಕರಣಾ ಘಟಕದಲ್ಲಿ ವಿಂಗಡಿಸುವ ಪ್ರಮಾಣವನ್ನು ಕಡಿಮೆ ಮಾಡಲು ನಗರದ ಎಲ್ಲಾ ಮನೆಗಳಿಗೆ, ಅಪಾರ್ಟ್ಮೆಂಟ್ಗಳಿಗೆ, ವಾಣಿಜ್ಯ ಸಂಕೀರ್ಣಗಳಿಗೆ, ಹೊಟೇಲ್ ಮತ್ತು ರೆಸ್ಟೋರೆಂಟ್ಗಳಿಗೆ ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನಾಗಿಸಿ ವಿಂಗಡಿಸಲು ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ.
ಒಣ ಕಸವನ್ನು ಪ್ರತಿ ಶುಕ್ರವಾರ ಮತ್ತು ಹಸಿ ಕಸವನ್ನು ಪ್ರತಿ ಶುಕ್ರವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಮಹಾನಗರ ಪಾಲಿಕೆಯ ತ್ಯಾಜ್ಯ ಸಂಗ್ರಹಣ ವಾಹನಕ್ಕೆ ನೀಡಲು ಸೂಚಿಸಿದೆ. ಈ ಸೂಚನೆಯನ್ನು ಉಲ್ಲಂಘಿಸಿದವರಿಗೆ ಕೆಎಂಸಿ ಅಧಿನಿಯಮ, 1976 ಹಾಗೂ ಮಹಾನಗರ ಪಾಲಿಕೆಯ ತ್ಯಾಜ್ಯ ನಿರ್ವಹಣೆಯ ಬೈಲಾಗಳ ರೀತ್ಯ ರೂ. 1.000 ದಿಂದ 25.000 ವರೆಗೆ ದಂಡ ವಿಧಿಸಲಾಗುವುದು.
ತಮ್ಮಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ಕಾಂಪೋಸ್ಟಿಂಗ್ ಘಟಕವನ್ನು ಅಳವಡಿಸಿಕೊಂಡಲ್ಲಿ 2021-22 ನೇ ಸಾಲಿನ ಆಸ್ತಿ ತೆರಿಗೆಯಲ್ಲಿನ ಘನತ್ಯಾಜ್ಯ ಕರದಲ್ಲಿ ಶೇ. 50 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದಿಂದ ಪಡೆದುಕೊಳ್ಳಬಹುದು ಎಂದು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.