ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ):– ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ , ವಿಧವಾ ವೇತನ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಬರುವಂತಹ ಧನ ಸಹಾಯವನ್ನು ಫಲಾನುಭವಿಗಳ ಆಧಾರ್ ಲಿಂಕ್ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆನ್ ಲೈನ್ ಮೂಲಕ ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ ಆರ್. ಸೆಲ್ವಮಣಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ . ಸ್ವಾಧಾರ . ‘ ಸಖಿ ‘ ಒನ್ ಸ್ಟಾಪ್ ಸೆಂಟರ್ , ಬಾಲಕಿಯರ ವಸತಿ ನಿಲಯ , ಕೌಟುಂಬಿಕ ದೌರ್ಜನ್ಯ ಕಾಯ್ದೆ ಯೋಜನೆಗಳ ಜಿಲ್ಲಾ ಮಟ್ಟದ 1 ನೇ ತ್ರೈಮಾಸಿಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ , ಸಖಿ ಕೇಂದ್ರದಲ್ಲಿ ದಿನದ 24 ಗಂಟೆಗಳು ಸಿಬ್ಬಂದಿಗಳೆಲ್ಲರು ಹಾಜರಿದ್ದು , ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಎಲ್ಲಾ ಅಗತ್ಯ ಸೇವೆಗಳನ್ನು ಒಂದೇ ಸೂರಿನಲ್ಲಿ ನೀಡುವಂತಾಗಬೇಕು. ನೊಂದ ಮಹಿಳೆಯು ಪ್ರಕರಣ ದಾಖಲಿಸುವಾಗ ಮತ್ತೊಮ್ಮೆ ಹಿಂಸೆ ಅಥವಾ ಮುಜುಗರ ಪಡುವಂತಹ ಪ್ರಸಂಗಳನ್ನು ತಡೆಗಟ್ಟಬೇಕು ಮತ್ತು ಯಾವುದೇ ಭೇದಭಾವವಿಲ್ಲದೆ ಉಚಿತವಾಗಿ ಸೌಲಭ್ಯಗಳನ್ನು ನೀಡಬೇಕು ಎಂದು ತಿಳಿಸಿದರು. ಸ್ವಾಧಾರ ಯೋಜನೆಯ ಮೂಲಕ ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಆಶ್ರಯ , ಆಹಾರ , ಬಟ್ಟೆ , ತರಬೇತಿ ಹಾಗೂ ಶಿಕ್ಷಣ ನೀಡುವುದರ ಮೂಲಕ ಆರ್ಥಿಕವಾಗಿ , ಸಾಮಾಜಿಕವಾಗಿ ಸಶಕ್ತರಾಗುವಂತೆ ಮಾಡಬೇಕು.
ಸ್ವಾಧಾರ ಗೃಹ ಕೇಂದ್ರದಲ್ಲಿ ಫಲಾನುಭವಿಗಳಿಗೆ ಊಟ , ಬಟ್ಟೆ ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಿ ತಾತ್ಕಾಲಿಕವಾಗಿ ವಾಸಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು . ರಾಷ್ಟ್ರೀಯ ಘೋಷಣ್ ಅಭಿಯಾನ ಯೋಜನೆಯ ಅಪೌಷ್ಟಿಕತೆ ಸಮಸ್ಯೆಯನ್ನು ಹೋಗಲಾಡಿಸುವ ಘನ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿದೆ . ಈ ಯೋಜನೆಯು ಕೇವಲ ಫಲಾನುಭವಿಗಳಿಗೆ ಮಾತ್ರ ಸೀಮಿತಗೊಳ್ಳದೆ , ಮಾಹಿತಿ , ಶಿಕ್ಷಣ , ಸಂವಹನ ಮೂಲಕ ಜನಾಂದೋಲನ ಹಾಗೂ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಪೌಷ್ಟಿಕತೆಯ ಮಹತ್ವದ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕೌಟುಂಬಿಕ ದೌರ್ಜನ್ಯ ಕಾಯ್ದೆ ಅನ್ವಯ ಕುಟುಂಬದೊಳಗೆ ಯಾವುದೇ ಬಗೆಯ ಹಿಂಸೆಗೊಳಗಾದ ಮಹಿಳೆಯರಿಗೆ ಸಂಬಂಧಿಸಿದಂತೆ , ಹೆಚ್ಚು ಪರಿಣಾಮಕಾರಿಯಾಗಿ ಸಂರಕ್ಷಣೆ ಒದಗಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯ ಕುಟುಂಬದ ಸಮಾಲೋಚನೆ ನಡೆಸಿ ಪ್ರಕರಣವನ್ನು ಬಗೆಹರಿಸಿ ಅಗತ್ಯವಿದ್ದಲ್ಲಿ ವಕೀಲರ ಸಹಯೋಗದೊಂದಿಗೆ ಉಚಿತ ಕಾನೂನು ನೆರವು ಒದಗಿಸಿ ಎಂದು ತಿಳಿಸಿದರು.
ಎಲ್ಲಾ ದೇವಾಲಯಗಳಲ್ಲಿ ಮದುವೆಯಾಗುವಂತಹ ವಧು ವರರ ಜನ್ಮ ದಿನಾಂಕವನ್ನು ಸೂಚಿಸಿದಂತಹ ಯಾವುದಾದರೂ ದಾಖಲೆಗಳನ್ನು ತಹಶೀಲ್ದಾರ್ ಅಥವಾ ಮುಜರಾಯಿ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ ಬಾಲ್ಯ ವಿವಾಹಗಳನ್ನು ತಡೆಯಬೇಕು. ಜಿಲ್ಲೆಯ ಗಡಿ ಭಾಗಗಳಲ್ಲಿ ನಡೆಯುವಂತಹ ಮದುವೆಗಳ ಬಗ್ಗೆ ಮಾಹಿತಿ ಕಳೆಯಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಂ.ಜಿ.ಪಾಲಿ ಅವರು ಮಾತನಾಡಿ , 18 ವರ್ಷದ ಒಳಗಿನ ಬಾಲಕಿಯರು , 8 ವರ್ಷದೊಳಗಿನ ಬಾಲಕರು ಅವರ ತಾಯಂದಿರ ಜೊತೆಯಲ್ಲಿ ಉಳಿದುಕೊಳ್ಳಬಹುದು. ಜಿಲ್ಲೆಯಲ್ಲಿ ಮಾಲೂರು ತಾಲ್ಲೂಕಿನಲ್ಲಿ ಪಿ.ಎಸ್.ಐ / ಆಶಾ ಭವನ ಸಂಸ್ಥೆಯಲ್ಲಿ ಸ್ವಾಧಾರ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಈ ಯೋಜನೆಯಡಿ 0-6 ವರ್ಷದ ಮಕ್ಕಳು , ಗರ್ಭಿಣಿಯರು , ಬಾಣಂತಿಯರು ಹಾಗೂ ಕಿಶೋರಿಯರ ಆರೋಗ್ಯ ಹಾಗೂ ಪೌಷ್ಠಿಕತೆಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ. ಪೋಷಣಾ ಅಭಿಯಾನ ಯೋಜನೆಯಡಿ ಪ್ರತಿ ಅಂಗನವಾಡಿ ಕೇಂದ್ರದಲ್ಲಿ 1 ನೇ ಮತ್ತು 3 ನೇ 3 ನೇ ಶುಕ್ರವಾರದಂದು ಸಮುದಾಯ ಆಧಾರಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅನ್ನಪ್ರಾಶನ ದಿವಸ ಕಾರ್ಯಕ್ರಮದ ಮೂಲಕ ಮಗುವಿಗೆ 6 ತಿಂಗಳವರೆಗೆ ಕೇವಲ ಎದೆಹಾಲನ್ನು ನೀಡಿದ ನಂತರ ಮೇಲು ಆಹಾರವನ್ನು ಪ್ರಾರಂಭಿಸುವ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷತೆಗಳೊಂದಿಗೆ ಅಂಗನವಾಡಿ ಸೇವೆಗಳ ಬಗ್ಗೆ ಜಾಗೃತಿ ನೀಡಲಾಗುತ್ತಿದೆ. ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯ ಮೂಲಕ ಮಕ್ಕಳಲ್ಲಿನ ಅಪೌಷ್ಟಿಕತೆ , ಕುಂಠಿತ ಬೆಳವಣಿಗೆ , ರಕ್ತಹೀನತೆ , ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆಯನ್ನು ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಜಗದೀಶ್ ಅವರು ಮಾತನಾಡಿ , ಬಾಣಂತಿಯರಿಗೆ ಲಸಿಕೆ ಕೊಟ್ಟರೆ ಎದೆಹಾಲು ಕುಡಿಸುವುದರಿಂದ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಮಗುವಿಗೂ ಸಹ ಕರೋನಾ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಗರ್ಭಿಣಿ ಸ್ತ್ರೀಯರಿಗೂ ಲಸಿಕೆ ಹಾಕುವುದರಿಂದ ಹುಟ್ಟುವ ಮಗುವಿಗೂ ಕರೋನಾ ಬರುವುದಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ , ಕೋಲಾರ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಣ ಅಧಿಕಾರಿಗಳಾದ ಬಾಬು , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣಮೂರ್ತಿ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಎ.ಸಿ.ರಾಜಣ್ಣ , ಸಖಿ ಒನ್ ಸ್ಟಾಪ್ ಸೆಂಟರ್ನ ಸದಸ್ಯರಾದ ಮಮತಾ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.