ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಎಲ್ & ಟಿ ವಿದ್ಯಾರ್ಥಿ ವೇತನದ ಮೂಲಕ ಮದ್ರಾಸ್ ಐಐಟಿಯಲ್ಲಿ ಎಂ.ಟೆಕ್ ಶಿಕ್ಷಣವನ್ನು ಪಡೆಯಲು ಅರ್ಹತೆ ಪಡೆದ ಮಂಗಳೂರಿನ ಪ್ರತಿಭಾವಂತ ವಿದ್ಯಾರ್ಥಿ ಶೇಖ್ ಮುಹಮ್ಮದ್ ಝುನೈನ್ ಅವರನ್ನು ಡಾ.ಎ ಪಿ ಜೆ ಅಬ್ದುಲ್ ಕಲಾಂ ಸೋಷಿಯಲ್ ಡೆವಲಪ್ ಮೆಂಟ್ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ದೇಶದ ಪ್ರತಿಷ್ಠಿತ ಉದ್ಯಮ ಸಂಸ್ಥೆ ಎಲ್ & ಟಿ ಯು ಪ್ರತಿಭಾನ್ವೇಷಣೆಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಐಐಟಿ ಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿ ಎಲ್ಲಾ ಖರ್ಚುವೆಚ್ಚಗಳನ್ನು ಭರಿಸುತ್ತಿದೆ. ದೇಶದ ಅತಿ ಬುದ್ದಿವಂತ ವಿದ್ಯಾರ್ಥಿಗಳು ಸ್ಪರ್ಧಿಸುವ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ಶೇಖ್ ಮುಹಮ್ಮದ್ ಝುನೈನ್ ,ಮದ್ರಾಸ್ ಐಐಟಿಯಲ್ಲಿ ಕನ್ ಸ್ಟ್ರಕ್ಷನ್ ಟೆಕ್ನಾಲಜಿ & ಮ್ಯಾನೇಜ್ ಮೆಂಟ್ ಎಂಬ ವಿಷಯದಲ್ಲಿ ಎಂ. ಟೆಕ್ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲೇ ಮಂಗಳೂರಿನ ರಥಬೀದಿಯಲ್ಲಿ ನವಭಾರತ್ ರಾತ್ರಿ ಶಾಲೆಯನ್ನು ತೆರೆದ ದಿವಂಗತ ಖಾಲಿದ್ ಮಾಸ್ಟರ್ ರವರ ಮೊಮ್ಮಗನಾದ ಇವರು, ಸಿವಿಲ್ ಇಂಜಿನಿಯರ್ ಝಾಕಿರ್ ಹುಸೇನ್ ಮತ್ತು ಲೇಖಕಿ ಝುಲೇಖಾ ಮುಮ್ತಾಝ್ ರವರ ಪುತ್ರ. ಪ್ರಸ್ತುತ ಇವರು ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಟನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾರೆ. ಶಾಲಾ ದಿನಗಳಲ್ಲೇ ಬಹಳಷ್ಟು ಪ್ರತಿಭಾವಂತರಾಗಿದ್ದ ಇವರು ಈ ಅಪೂರ್ವ ಅವಕಾಶವನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ (ಸ್ವಾಭಿಮಾನಿ ಬಣ) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ನ ಸಲಹೆಗಾರ ಸಿತಾರ್ ಅಬ್ದುಲ್ ಮಜೀದ್ ಹಾಜಿ, ಎಡ್ವಕೇಟ್ ಮತ್ತು ನೋಟರಿ ಶೇಖ್ ಇಸಾಕ್ ಕೋಡಿಂಬಾಳ, ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್, ಮುನೀಸ್ ಕುಕ್ಕುವಳ್ಳಿ, ಮೊಹಮ್ಮದ್ ಫಹದ್, ಆಸರೆ ವಿಮೆನ್ಸ್ ಫೌಂಡೇಶನ್ ನ ಉಪಾಧ್ಯಕ್ಷೆ ಆತಿಕಾ ರಫೀಕ್ ಸಮ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ನ ಅಧ್ಯಕ್ಷ ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರೆ, ಉಪಾಧ್ಯಕ್ಷ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಉಚ್ಚಿಲ, ಶೇಖ್ ಮೊಹಮ್ಮದ್ ಝುನೈನ್ ರವರಿಗೆ ಶುಭ ಹಾರೈಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.