(www.vknews.com) : ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಾವೇಶದಿಂದ ಹೋರಾಡಿದ ವೀರಕಲಿಗಳಾದ ಗಾಂಧಿ, ನೆಹರು, ನೇತಾಜಿ, ತಿಲಕ್, ಭಗತ್ ಸಿಂಗ್, ಸುಖ್ ದೇವ್ ,ರಾಜ್ ಗುರು ಮುಂತಾದ ಜನಪ್ರಿಯ ಸೇನಾನಿಗಳ ಕುರಿತು ನಾವು ತಿಳಿದಿದ್ದೇವೆ. ಇವರೊಂದಿಗೆ ಹೆಗಲಿಗೆ ಹೆಗಲುಕೊಟ್ಟು ದೇಶದ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿಯೂ ನೇಪಥ್ಯಕ್ಕೆ ಸರಿಸಲ್ಪಟ್ಟ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಅವರ ಕೊಡುಗೆಗಳನ್ನು ಕೂಡ ನಾವು ಇಂದು ಸ್ಮರಿಸಬೇಕಿದೆ.
ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಭಾರತವನ್ನು ಸುಮಾರು ಏಳು ನೂರು ವರ್ಷಗಳ ಕಾಲ ಮುಸಲ್ಮಾನ್ ದೊರೆಗಳು ಆಳಿದ್ದರು ಎಂಬುವುದು ತಿಳಿದು ಬರುತ್ತದೆ. ಆ ಸಮಯದಲ್ಲಿ ಭಾರತಕ್ಕೆ ವ್ಯಾಪಾರದ ಶೋಕಿನಲ್ಲಿ ಬಂದ ಬ್ರಿಟೀಷರಿಗೆ ತಮ್ಮ ನೆಲೆಗಳನ್ನು ಭದ್ರಗೊಳಿಸಬೇಕಾದರೆ ಮುಸ್ಲಿಂ ದೊರೆಗಳ ವಿರುದ್ಧ ಹೋರಾಡುವುದು ಅನಿವಾರ್ಯವಾಗಿತ್ತು. ಆದ್ದರಿಂದ ಬ್ರಿಟೀಷರ ಮೊದಲ ಎಲ್ಲಾ ದೊಡ್ಡ ಹೋರಾಟ ಹಾಗೂ ಯುದ್ಧಗಳು ಮುಸಲ್ಮಾನ್ ದೊರೆಗಳ ವಿರುದ್ಧವಾಗಿತ್ತು ಎಂಬುವುದು ಉಲ್ಲೇಖನಿಯವಾಗಿದೆ.
ಕ್ರಿ.ಶ. 1757ರಲ್ಲಿ ಆರಂಭವಾಗುವ ಬಂಗಾಲದ ದೊರೆ ಸಿರಾಜ್ ಉದ್ ದೌಲನ ವಿರುದ್ಧ ನಡೆಯುವ ಪ್ಲಾಸಿ ಕದನವು ನಂತರ ಹಲವು ಚಳುವಳಿಗಳಾಗಿ ಕವಲೊಡೆದು ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಮುನ್ನುಡಿಯನ್ನು ಬರೆಯುತ್ತದೆೆ. ಕ್ರಿ.ಶ. 1857ರಲ್ಲಿ ದೆಹಲಿ ಪ್ರಾಂತ್ಯದಲ್ಲಿ ಬ್ರಿಟೀಶರ ವಿರುದ್ಧ ಸಮರ ಸಾರಿದ ‘ಅಸ್ಗರಿ ಬೇಗಂ’ ಎಂಬ ಮಹಿಳೆ ವಿರಾವೇಶದಿಂದ ಹೋರಾಡಿದ್ದಲ್ಲದೇ ಅನೇಕ ಬ್ರಿಟೀಶ್ ಸೈನಿಕರನ್ನು ಕೊಂದುಹಾಕುವುದರ ಮೂಲಕ ಬ್ರಿಟೀಷರಿಗೆ ಸಿಂಹಸ್ವಪ್ನವಾಗುತ್ತಾರೆ. ಹೇಗಾದರೂ ಮಾಡಿ ಅಸ್ಗರಿ ಬೇಗಂ ಳನ್ನು ಮಣಿಸಬೇಕೆಂದು ನಿರ್ಧರಿಸಿದ ಬ್ರಿಟೀಷರು ಆಕೆಯನ್ನು ಸೆರೆಹಿಡಿದು ಜೀವಂತ ಸುಟ್ಟು ಹಾಕುವಲ್ಲಿ ಯಶಸ್ವಿಯಾಗುತ್ತಾರೆ. ಬ್ರಿಟೀಷರೊಂದಿಗಿನ ಆ ಯುದ್ಧದಲ್ಲಿ ಅಸ್ಗರಿ ಬೇಗಂರೊಂದಿಗೆ ಆಕೆಯ ಸೈನ್ಯದ ಸುಮಾರು 27,000 ಮುಸ್ಲಿಂ ಸೈನಿಕರು ಜೀವತ್ಯಾಗ ಮಾಡುತ್ತಾರೆ.
ಭಾರತಕ್ಕೆ ವ್ಯಾಪಾರಿಗಳ ಶೋಕಿನಲ್ಲಿ ಬಂದು ದೇಶದ ಮೇಲೆ ಪ್ರಭುತ್ವವನ್ನು ಸ್ಥಾಪಿಸುವ ಬ್ರಿಟೀಷರ ಕುತಂತ್ರವನ್ನು ಅರ್ಥೈಸಿ ಅವರೆದುರು ಹೋರಾಟದ ಕಿಚ್ಚನ್ನು ಹತ್ತಿಸಿದವರಲ್ಲಿ ಮೌಲಾನಾ ಶಾಹ್ ವಲಿಯುಲ್ಲಾಹಿ ಮುಹದ್ದಿನ್ ದೆಹ್ಲವಿ ಮೊದಲಿಗರಾಗಿದ್ದರು. ಇವರು ಬ್ರಿಟೀಷರ ಕುತಂತ್ರವನ್ನು ನಿಯಂತ್ರಿಸುವ ಸಲುವಾಗಿ ಮದ್ರಾಸಗಳನ್ನು ಬ್ರಿಟೀಶರ ವಿರುದ್ಧದ ಆಂದೋಲನಾ ಕೇಂದ್ರಗಳಾಗಿ ಪರಿವರ್ತಿಸಿ ಮುಸಲ್ಮಾನ್ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹೊತ್ತಿಸಿದರು.
ಭಾರತದ ಹಿಂದೂ ಹಾಗೂ ಮುಸಲ್ಮಾನರ ಐಕ್ಯತೆಯ ಪ್ರತೀಕವಾದ ಮಹಮ್ಮದಲಿ ಹಾಗೂ ಶೌಕತ್ ಅಲಿ ಕೂಡ ಆ ಕಾಲದ ಭಾರತ ಸ್ವಾತಂತ್ಯ್ಯದ ಪ್ರತಿಪಾದಕರಾಗಿದ್ದರು. ಬ್ರಿಟನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಬ್ರಿಟೀಷ್ ಪ್ರಧಾನಿಯೊಂದಿಗೆ ‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿ ಇಲ್ಲವೇ ನಮ್ಮ ದಫನ ಮಾಡಲು ಇಲ್ಲಿ ಜಾಗ ಕೊಡಿ. ಸ್ವತಂತ್ರವಲ್ಲದ ನನ್ನ ದೇಶದಲ್ಲಿ ಮಣ್ಣಾಗಲು ಕೂಡ ನಾನು ಬಯಸುವುದಿಲ್ಲ’ ಎಂದು ಗುಡುಗಿದವರು ಮಹಮ್ಮದಲಿ ಹಾಗೂ ಶೌಕತ್ ಅಲಿ.
ಮಾತ್ರವಲ್ಲದೇ ಗಾಂದೀಜಿಯವರು ಅಸಹಕಾರ ಚಳುವಳಿಗೆ ಕರೆ ನೀಡಿದಾಗ ಸಿವಿಲ್ ಸರ್ವೀಸ್ ಅಧಿಕಾರಿಯಾಗಿದ್ದ ನಿಸಾರ್ ಅಹ್ಮದ್ ಖಾನ್ ಎಂಬವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಗಾಂಧೀಜಿಯೊಂದಿಗೆ ಚಳುವಳಿಯಲ್ಲಿ ತೊಡಗಿಸಿಕೊಂಡ ಮೊದಲಿಗರಾಗಿದ್ದರು. ಇವರೊಂದಿಗೆ ಮಝ್ಹರುಲ್ ಹಕ್, ಡಾ. ಗುಲಾಮ್ ಇಮಾಮ್, ಶಾಹ್ ಗಫೂರ್, ಮೌಲಾನ ಅಬ್ದುಲ್ ಬಾರಿ, ರಹೀಂ ಬಕ್ಷ್ ಮುಂತಾದ ಅನೇಕರು ತಂತಮ್ಮ ಹುದ್ದೆಗಳಿಗೆ ರಾಜಿನಾಮೆ ನೀಡಿ ಅಸಹಕಾರ ಚಳುವಳಿಯ ಬೆನ್ನೆಲುಬಾಗಿ ನಿಂತರು. ಇದಲ್ಲದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬೇಕಾಗುವ ಹಣಕಾಸಿನ ನೆರವು ನೀಡುವ ಮೂಲಕ ಗಾಂಧೀಜಿಗೆ ಸಹಾಯಹಸ್ತವನ್ನು ಚಾಚಿದ ಅಂದಿನ ಬಾಂಬೈಯ ಉದ್ಯಮಿ ಹಾಗೂ ಕೋಟ್ಯಾಧಿಪತಿ ಉಮರ್ ಸುಭಾನಿಯವರನ್ನು ಕೂಡ ನಾವು ನೆನಪಿಸಲೇಬೇಕಾಗುತ್ತದೆ. ತನ್ನ ಬ್ಯಾಂಕ್ ಖಾತೆಯ ಚೆಕ್ ನ್ನು ಗಾಂಧೀಜಿಯವರ ಕೈಯಲ್ಲಿ ನೀಡುತ್ತಾ ‘ದೇಶದ ಸ್ವಾತಂತ್ರ್ರದ ಹೋರಾಟಕ್ಕಾಗಿ ನಿಮಗೆಷ್ಟು ಹಣದ ಅವಶ್ಯಕತೆಯಿದೆಯೋ ಅಷ್ಟು ಹಣವನ್ನು ಬರೆದುಕೊಳ್ಳಿ’ ಎಂದೇಳಿದ ಉಮರ್ ಸುಭಾನಿಯ ಕೊಡುಗೆಯೂ ಕೂಡ ಅನನ್ಯ. ಇವರೊಂದಿಗೆ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯನ್ನು ಕೊಟ್ಟ ಹಝ್ರತ್ ಮೊಹಾನಿ, ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಘೋಷಣೆಯ ರೂವಾರಿ ‘ಯೂಸುಫ್ ಮೆಹರ್ ಅಲಿ’, ಸೇರಿದಂತೆ ಸಾವಿರಾರು ಮುಸಲ್ಮಾನ್ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಇಂದು ನೆನಪಿಸಿಕೊಳ್ಳದಿದ್ದಲ್ಲಿ ನಮ್ಮ ಸ್ವಾಂತ್ರ್ಯೋತ್ಸವದ ಆಶಯವು ಪರಿಪೂರ್ಣವಾಗದು.
-ಎಸ್.ಎ.ರಹಿಮಾನ್ ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.