ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಲೂರು ತಾಲ್ಲೂಕು ಇವರುಗಳು ಸಂಯುಕ್ತ ಆಶ್ರಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ನೇತಾರ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಆದ ದಿವಂಗತ ಶ್ರೀ ಡಿ. ದೇವರಾಜು ಅರಸು ರವರ 106 ನೇ ಜನ್ಮದಿನದ ಆಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಸಮಾರಂಭದಲ್ಲಿ ಮಾಲೂರು ತಾಲ್ಲೂಕಿನ ಶಾಸಕರಾದ ಕೆ. ವೈ. ನಂಜೇಗೌಡ ಅವರು ಡಿ.ದೇವರಾಜ ಅರಸ್ ರವರ ಭಾವವಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಾ “ಹಿಂದುಳಿದ ವರ್ಗಗಳ ಏಳಿಗೆ, ಸ್ವಾಭಿಮಾನ ಬದುಕಿಗಾಗಿ ಬದ್ಧತೆಯಿಂದ ಕೆಲಸ ಮಾಡಬೇಕಾಗಿರುವುದು ಪ್ರಸ್ತುತ ಈ ದಿನಗಳಾಗಿವೆ. ಅರಸುರವರ ಕ್ರಾಂತಿಕಾರಿ ಭೂಸುಧಾರಣೆ ನಮಗೆ ಆದರ್ಶ. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಇದನ್ನು ಅಕ್ಷರಶಃ ಪಾಲಿಸಿದವರು ದೇವರಾಜ ಅರಸು. ಅರಸುರವರ ಹೆಜ್ಜೆ ಗುರುತುಗಳು ನಮಗೆ ಇಂದಿಗೂ ಆದರ್ಶ, ದೇವರಾಜ ಅರಸು ಶೋಷಿತ ಸಮುದಾಯಕ್ಕೆ ರಾಜಕೀಯ ಆಸರೆ ಒದಗಿಸಿದ ಮಹಾನ್ ನಾಯಕ’ ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಭರದಲ್ಲಿ ಇತರ ಸಮುದಾಯಗಳ ಮೇಲೆ ಸವಾರಿ ಮಾಡದ ರಾಜಕೀಯ ಸೂಕ್ಷ್ಮ ಪ್ರಜ್ಞೆ ಅರಸು ಅವರಲ್ಲಿ ನಾವು ಕಂಡಿದ್ದೇವೆ. ಸಾಮಾಜಿಕ, ಆರ್ಥಿಕ ಸುಧಾರಣೆಗಳ ಹರಿಕಾರ ಅರಸು ಸದಾ ಸ್ಮರಣೀಯರು” ಎಂದರು.
ಮಾಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಮೂರ್ತಿ ರವರು ಮಾತನಾಡಿ ” ತಮಗೆ ದಕ್ಕಿದ ರಾಜಕೀಯ ಪರಮಾಧಿಕಾರವನ್ನು ತಳಸಮುದಾಯದ ಅಭಿವೃದ್ಧಿಗೆ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ ಅರಸು ಕಾರ್ಯ ವೈಖರಿ ಅನುಕರಣೀಯ, ದೇವರಾಜ ಅರಸು ಅವರು ಹಿಂದುಳಿದ ವರ್ಗಗಳು, ದಲಿತರು, ಅಶಕ್ತರು ಮತ್ತು ತುಳಿತಕ್ಕೊಳಪಟ್ಟ ಸಮಾಜಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿದರು. ಉಳುವವರಿಗೆ ಭೂಮಿ ಕಾನೂನು ಜಾರಿಗೆ ತಂದು ನೊಂದವರ ಪಾಲಿನ ದೇವರಾಗಿ ಉಳಿದರು” ಎಂದರು.
ಸ್ಕೌಟ್ಸ್ ಅಂಡ್ ಗೈಟ್ಸ್ ವತಿಯಿಂದ ಎಲ್ಲಾರಿಗೂ ಸದ್ಭಾವನಾ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ಜೈ ಭುವನೇಶ್ವರಿ ಕನ್ನಡ ಸಂಘದ ಹಿರಿಯ ಮುಖಂಡರಾದ ಅಂಜನಿ ಹನುಮಂತಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ವಿ.ಲೋಕೇಶ್, ಟೌನ್ ಸೆಕ್ರೆಟರಿ ಮುನೇಶ್.ಸಿ.ವಿ, ಪುರಸನಹಳ್ಳಿ ವಿಜಯ್, ತಾಲ್ಲೂಕು ಮುಜರಾಯಿ ಇಲಾಖೆಯ ಹರಿಪ್ರಸಾದ್, ಕಂದಾಯ ನಿರೀಕ್ಷಕ ಲೋಕೇಶ್, BCM ಅಧಿಕಾರಿ ಶ್ರೀಮತಿ ಸುಮೀತ್ರಾ, ಹಿರಿಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.