(www.vknews.com) : ಜ್ಞಾನ ಎನ್ನುವುದು ಕೇವಲ ಗ್ರಂಥಗಳಿಂದ ಮಾತ್ರ ದೊರಕುವುದಲ್ಲ. ಅನುಭವಗಳಿಂದ ಕಲಿಯುವ ಪಾಠವೇ ಅತ್ಯಂತ ಶ್ರೇಷ್ಟ ಜ್ಞಾನವಾಗಿದೆ. ಒಂದೇ ಹುತ್ತದಿಂದ ಒಬ್ಬ ಸತ್ಯ ವಿಶ್ವಾಸಿ ಎರಡು ಸಲ ಕಚ್ವಿಸಿ ಕೊಳ್ಳಲಾರ ಎಂಬ ನೆಬಿ (ಸ) ವಚನ ಇದೇ ತತ್ವವನ್ನು ಸಾರುತ್ತದೆ ಎಂದು ಮುಲ್ಕಿ ಶಾಫಿ ಜುಮಾ ಮಸ್ಜಿದ್ ಖತೀಬ್ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಹೇಳಿದ್ದಾರೆ.
ಜಗತ್ತಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆಗಳಿಗೆ ನಾವು ಬುದ್ದಿವಂತಿಕೆಯಿಂದ ಪ್ರತಿಕ್ರಿಯಿಸ ಬೇಕಾಗಿದೆ. ಉದ್ವೇಗ ,ಉದ್ರೇಕ , ಹತಾಶಾ ಮನೋಭಾವದ ದಾಸರಾಗದೇ ಪ್ರಬುದ್ದತೆ,ಪರಿಪಕ್ವತೆ ಯನ್ನು ಯಾವ ಸಂಧರ್ಭದಲ್ಲೂ ಕೂಡಾ ಕೈ ಬಿಡ ಬಾರದು ಎಂದು ಸೂಚಿಸಿದ ಅವರು ಜಗತ್ತಿನ ಬೇರೆ ಬೇರೆ ಶಕ್ತಿಗಳು ನಮ್ಮನ್ನು ಮೂರ್ಖರನ್ನಾಗಿಸಲು ಅವಿರತಃ ಶ್ರಮಿಸುತ್ತಿರುವಾಗ ಅದಕ್ಕೆ ನಾವು ಬಲಿಯಾಗದೇ ದೀರ್ಘ ದೃಷ್ಟಿ ಮತ್ತು ವಿವೇಕ ಚಿತ್ತದೊಂದಿಗೆ ಎಲ್ಲರೊಂದಿಗೂ ವ್ಯವಹರಿಸ ಬೇಕಾಗುತ್ತದೆ ಎಂದರು.
ಇಬ್ಬರು ಹುಡುಗರು ಮೀನು ಮಾರುತ್ತಿದ್ದರು.. ಗ್ರಾಹಕನೊಬ್ಬ ಮೀನು ಖರೀದಿಸಲು ಬೆಲೆ ವಿಚಾರಿಸಿದ. ಒಬ್ಬಾತ ಕೆಜಿ ಗೆ ನೂರು ಹೇಳಿದರೆ ಇನ್ನೊಬ್ಬ ಐನೂರು ಹೇಳಿದ. ಇಬ್ಬರದ್ದು ಒಂದೇ ತರದ ಮೀನಾಗಿತ್ತು. ಅದ್ಯಾಕೆ ಇದಕ್ಕೆ ಹೆಚ್ಚು ಬೆಲೆ ಎಂದು ಕೇಳಿದಾಗ ಈ ಮೀನು ತಿಂದರೆ ಬುದ್ದಿ ಜಾಸ್ತಿಯಾಗುತ್ತದೆ ಎಂದ. ಒಂದು ಕೈ ನೋಡೋಣ ಎಂದಿಟ್ಟು ಕೆ ಜಿ ಗೆ ಐನೂರು ಕೊಟ್ಟು ಖರೀದಿಸಿದ. ಐದಾರು ದಿನ ಮೀನು ತಿಂದರೂ ಬುದ್ದಿ ಜಾಸ್ತಿ ಆದದ್ದೇ ಇಲ್ಲ. ಆಗ ಹುಡುಗನ ಬಳಿ ಬಂದು ಹಣ ವಾಪಾಸು ಕೊಡುವಂತೆ ಒತ್ತಾಯಿಸುತ್ತಾ ನನಗೆ ಬುದ್ದಿ ಜಾಸ್ತಿಯಾಗಿಲ್ಲ , ನಾನು ನಿನ್ನ ಬಳಿ ಮೂರ್ಖನಾದೆ ಎಂದ. ಅದಕ್ಕೆ ಹುಡುಗ ಏನೂ ಆಗದವನಂತೆ ನಗು ನಗುತ್ತಲೇ, ನೋಡಿ ನಿಮಗೇ ನೀವು ಮೂರ್ಖರೆಂದು ಗೊತ್ತಾದದ್ದೇ ಈ ಮೀನು ತಿಂದ ಬಳಿಕ. ಈ ತನಕ ನೀವು ಅದನ್ನು ಗ್ರಹಿಸಿರಲಿಲ್ಲ. ಇದೇ ನಿಮ್ಮ ಬುದ್ದಿ ಹೆಚ್ಚಾದದ್ದಕ್ಕೆ ಸಾಕ್ಷಿ ಎಂದ. ಉತ್ತರ ಕೇಳಿದ ಮೂರ್ಖ ಮರು ಮಾತಾಡಲಿಲ್ಲ. ಇಂದು ಜಗತ್ತಿನ ಬಂಡವಾಳ ಶಾಹಿಗಳು,ಸ್ವಾರ್ಥ ರಾಜಕಾರಣಿಗಳು ತಮ್ಮ ಪ್ರಾಡಕ್ಟನ್ನು ಏನೇನೋ ಆಮಿಷ ಒಡ್ಡಿ ಜನರಿಗೆ ಉಣ ಬಡಿಸುತ್ತಾರೆ. ಜನರು ಮೂರ್ಖರಾಗುತ್ತಾರೆ ಎಂದ ಖತೀಬರು ಅಫ್ಘಾನಿಸ್ತಾನದ ಬೆಳವಣಿಗೆಯನ್ನು ಉಲ್ಲೇಖಿಸಿದರು. ಅಲ್ಲಿ ಸ್ವರ್ಗ ಸೃಷ್ಟಿಸುತ್ತೇವೆ ಎಂದು ಹೇಳಿದ ಅಮೇರಿಕಾವು ಕೊನೆಗೂ ಜನರನ್ನು ನಡು ನೀರಲ್ಲಿ ಕೈ ಬಿಟ್ಟು ತಾವೇ ಉಗ್ರರೆಂದು ಜನರಿಗೆ ನಂಬಿಸಿದ ತಾಲಿಬಾನಿಗಳ ಕೈಗೆ ಅಧಿಕಾರ ಹಸ್ತಾಂತರಿಸಿ ಕಾಲ್ಕಿತ್ತದ್ದು ಐನೂರಕ್ಕೆ ಮೀನು ಮಾರಿದವನ ಉದಾಹರಣೆಯಂತಾಗಿದೆ ಎಂದು ವ್ಯಂಗ್ಯವಾಡಿದರು.
ಮುಂದುವರೆದು ಮಾತನಾಡಿದ ಅವರು ಸಾಮಾಜಿಕ ತಾಣದಲ್ಲಿ ಯಾವುದೇ ಕಾರಣಕ್ಕೂ ತಾಲಿಬಾನ್ ಬಗ್ಗೆ ಅನಗತ್ಯ ಕಮೆಂಟ್ಸ್ ಗಳು ಹಾಕದಿರಲು ಸಲಹೆ ನೀಡಿದರಲ್ಲದೇ ಇದರಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ಲಾಭವಿಲ್ಲ ಎಂದರು. ಕಳೆದ ಅವಧಿಯಲ್ಲಿ ಇದೇ ತಾಲಿಬಾನಿಗಳು ಇಸ್ಲಾಮಿನ ವರ್ಚಸ್ಸಿಗೆ ದಕ್ಕೆ ಬರುವಂತೆ ವರ್ತಿಸಿದ್ದು ಜಗತ್ತು ನೋಡಿದೆ. ಈಗ ಅವರು ಬದಲಾಗಿದ್ದಾರೊ ಎಂಬದನ್ನು ಕಾಲವೇ ಹೇಳ ಬೇಕು. ಬದಲಾದ ಸನ್ನಿವೇಶದಲ್ಲಿ ನಮ್ಮ ವಿಚಾರಗಳು ವಾಸ್ತವಿಕತೆಗೆ ಹೊಂದಾಣಿಕೆಯಾಗಿರ ಬೇಕಾಗುತ್ತದೆ. ಇಸ್ಲಾಂ ಧರ್ಮ ಕೂಡಾ ಇದಕ್ಕೆ ಪೂರಕವಾಗಿದೆ. ಇಮಾಂ ಶಾಫಿ( ರ) ತಾನು ಬಗ್ದಾದ್ ನಲ್ಲಿರುವ ವೇಳೆ ಗ್ರಂಥಗಳ ಸಂಶೋಧನೆಯ ಆಧಾರದಲ್ಲಿ ಹೊರಡಿಸಿದ ಹಲವು ಫತ್ವಾಗಳನ್ನು ಮದೀನಾಗೆ ಬಂದಾಗ ವಾಸ್ತವಿಕತೆಯ ಆಧಾರದಲ್ಲಿ ಬದಲಾಯಿಸಿದ್ದಾರೆ ಎಂದ ಖತೀಬರು ಧರ್ಮ ಇರುವುದು ಮನುಷ್ಯನ ಅಭಿವೃದ್ದಿ ಮತ್ತು ಒಳಿತಿಗಾಗಿಯೇ ವಿನಃ ಅದು ಜನರನ್ನು ಅವನತಿಗೆ ತಳ್ಳುವ ಒಂದು ಸಂಹಿತೆಯಲ್ಲ ಎಂದು ಅವರು ಪ್ರತಿಪಾದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.