(www.vknews.in) : ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಸ್ಥಾಪಕರ ದಿನಾಚರಣೆ ಸೋಮವಾರ, ಫೆಬ್ರವರಿ 14 ರಂದು ಪಾಂಡೇಶ್ವರದ ಶ್ರೀನಿವಾಸ್ ಕಾಲೇಜಿನ ಅವರಣದಲ್ಲಿ ಜರುಗಿತು.
ಎ ಶಾಮ ರಾವ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಾಧಿಪತಿಗಳಾದ ಡಾ. ಸಿಎ ಎ ರಾಘವೇಂದ್ರ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ನವ ಮಂಗಳೂರು ಬಂದರಿನ ಅಧ್ಯಕ್ಷರಾದ ಡಾ. ವೆಂಕಟ ರಮಣ ಅಕ್ಕರಾಜು ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹೆತ್ತವರು ಸಂತೋಷಪಡಬೇಕಾದರೆ ಅವರ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು, ಹಾಗೂ ಅವರ ಮುಂದಿನ ತಲೆಮಾರಿನವರು ಆ ಯಶಸ್ಸನ್ನು ಮುಂದುವರೆಸಿಕೊಂಡು ಹೋಗಬೇಕು. ಇಂಡಸ್ಟ್ರಿ ಮತ್ತು ಇನ್ಸ್ಟಿಟ್ಯೂಷನ್ ಇದರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಶ್ರೀನಿವಾಸ್ ವಿಶ್ವವಿದ್ಯಾಲಯವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಮಕ್ಕಳಲ್ಲಿ ರಾಷ್ಟ್ರೀಯತೆಯನ್ನು ರೂಪಿಸುವಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಮಹತ್ತರವಾದುದು. ಸಂಪಾದಿಸಿದ ಆದಾಯದಲ್ಲಿ ಸ್ವಲ್ಪ ಅಂಶವನ್ನು ಸಮಾಜದ ಸತ್ಕಾರ್ಯಕ್ಕೆ ವಿನಿಯೋಗಿಸಬೇಕು. ಜ್ಞಾನ, ಸ್ರಜನಶೀಲತೆ ಮತ್ತು ಧೈರ್ಯ, ಈ ಮೂರು ಗುಣಗಳು ವ್ಯಕ್ತಿಯನ್ನು ಜಗತ್ತಿನ ಪ್ರಬುದ್ಧ ನಾಗರಿಕನಾಗಿ ರೂಪುಗೊಳಿಸುತ್ತವೆ. ಪ್ರತೀಯೋರ್ವ ಭಾರತೀಯರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಸಮಾಜಕ್ಕೆ ಮತ್ತು ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.
ಸಂಸ್ಥಾಪಕರ 113ನೇ ಜಯಂತಿಯ ಗೌರವ ಸಲ್ಲಿಸಿದ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲ್ ಕುಮಾರ್ ಮಾತನಾಡಿ, ಡಾ. ಸಿಎ ಎ ರಾಘವೇಂದ್ರ ರಾವ್ ರವರು 1988 ರಲ್ಲಿ ಏಳು ವಿದ್ಯಾರ್ಥಿಗಳಿಂದ ಪ್ರಾರಂಭಿಸಿದ ಶ್ರೀನಿವಾಸ್ ಸಮೂಹ ಶೈಕ್ಷಣಿಕ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಸುಮಾರು ಹನ್ನೆರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಶೈಕ್ಷಣಿಕ ಅಭ್ಯಾಸವನ್ನು ಮಾಡುತ್ತಿದ್ದಾರೆ. ನಾಲ್ಕು ಸಾವಿರ ಸಿಬಂದಿಗಳು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಸ್ವಾಗತ ಭಾಷಣವನ್ನು ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ ಎ ಶ್ರೀನಿವಾಸ್ ರಾವ್ ಮಾತನಾಡಿ, ಶ್ರೀನಿವಾಸ್ ವಿಶ್ವವಿದ್ಯಾಲಯವು ಬೆಳೆದು ಬಂದ ಹಾದಿಯ ಯಶೋಗಾಥೆಯನ್ನು ಹಾಗೂ ವಿಶ್ವವಿದ್ಯಾಲಯದ ಸಾಧನೆಯನ್ನು ತಿಳಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಡಾ. ಸಿಎ ಎ ರಾಘವೇಂದ್ರ ರಾವ್ ಮಾತನಾಡಿ, ಜಾಗ್ತೇ ರಹೋ ಭಾರತ್, ಉಡ್ತೇ ರಹೋ ಭಾರತ್ ಎಂಬ ಸ್ಪಷ್ಟ ನಿಲುವಿನಿಂದ ನಾವೆಲ್ಲರೂ ದೇಶಕ್ಕಾಗಿ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು. ದಾನದಲ್ಲಿ ಶ್ರೇಷ್ಠವಾದದ್ದು ವಿದ್ಯಾ ದಾನ. ಶ್ರೀನಿವಾಸ್ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವನ್ನು ಖಾತ್ರಿಗೊಳಿಸುವ ಉದ್ದೇಶದಿಂದ ಜ್ಞಾನಾರ್ಜನೆಯ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುತ್ತಿದ್ದೇವೆ. ಆ ದಿಶೆಯಲ್ಲಿ, ಮುಕ್ಕದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ಸಿನಲ್ಲಿ, ಕೌಶಲಾಭಿವೃದ್ಧಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಸಹ ಕುಲಾಧಿಪತಿಗಳಾದ ಡಾ. ಎ ಶ್ರೀನಿವಾಸ್ ರಾವ್, ಶ್ರೀನಿವಾಸ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಶ್ರೀಮತಿ ಎ ವಿಜಯಲಕ್ಷ್ಮಿ ಆರ್ ರಾವ್, ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಪ್ರೊ. ಶ್ರೀಮತಿ ಎ ಮಿತ್ರಾ ಎಸ್ ರಾವ್, ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಪಿ ಎಸ್ ಐತಾಳ್, ಡಾ. ಶ್ರೀಮತಿ ಸುಷ್ಮಾ ಕೇಸರಿ ಮತ್ತು ಕುಮಾರಿ ಮೇಘನಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ರಾಮಕೃಷ್ಣ ಶಬರಾಯರವರು ಪ್ರಶಸ್ತಿ ಪುರಸ್ಕೃತರ ವಿವರ ತಿಳಿಸಿದರು. ಡಾ. ರಾಜಶೇಖರ್ ರವರು ಪಿಹೆಚ್.ಡಿ ಹಾಗೂ ಚಿನ್ನದ ಪದಕ ಪಡೆದವರ ವಿವರವನ್ನು ಸಭೆಗೆ ತಿಳಿಸಿದರು.
ಡಾ. ಸೋನಿಯಾ ಅಜಯ್ ರವರು ಮುಖ್ಯ ಅತಿಥಿ ಡಾ ವೆಂಕಟ ರಮಣ ಅಕ್ಕರಾಜು ರವರನ್ನು ಸಭೆಗೆ ಪರಿಚಯಿಸಿದರು. ಡಾ. ಅಜಯ್ ಕುಮಾರ್ ರವರು ವಂದಿಸಿದರು. ಡಾ. ಅಂಬಿಕಾ ಮಲ್ಯ ಮತ್ತು ಪ್ರೊ ರೋಹನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀನಿವಾಸ ಕಾಲೇಜ್ ಆಫ್ ಏವಿಯೇಷನ್ ವಿದ್ಯಾರ್ಥಿ ಶ್ರೀ ಅನಿರುದ್ಧ್ ರವರು ವೇದಘೋಷದ ಮೂಲಕ ಪ್ರಾರ್ಥಿಸಿದರು.
ವಿದ್ಯಾರ್ಥಿನಿ ಕುಮಾರಿ ಸಾಕ್ಷಿ ಮತ್ತು ತಂಡದವರು ಭರತನಾಟ್ಯದ ಮೂಲಕ ಮುಖ್ಯ ಅತಿಥಿಗಳನ್ನು ಮತ್ತು ಅಭ್ಯಾಗತರನ್ನು ಸ್ವಾಗತಿಸಿದರು.
ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ. ಶ್ರೀನಿವಾಸ್ ಮಯ್ಯ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ:
ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢ ಶಾಲಾ ವಿಭಾಗ ಹಾಗೂ ಪದವಿಪೂರ್ವ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಬಂಟ್ವಾಳ ತಾಲೂಕಿನ ದಡ್ಡಲ್ ಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ಶ್ರೀ ರಮಾನಂದ ಹಾಗೂ ಕುಂದಾಪುರದ ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಸರೋಜಾ ಎಂ ರವರಿಗೆ 2021-22 ಸಾಲಿನ ಎ. ಶಾಮ ರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಾಮಾಜಿಕ ಸೇವೆಯಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸಿದ ಕುಳಾಯಿಯ ಕಾವೇರಿ ಆಂಬುಲೆನ್ಸ್ ಮಹಿಳಾ ಚಾಲಕರಾದ ಸಿ ಎಸ್ ರಾಧಿಕಾ ಹಾಗೂ ತನ್ನ ಸ್ಥೈರ್ಯ ಮತ್ತು ಸಾಹಸದಿಂದ ಉತ್ತಮ ಸೇವೆ ಸಲ್ಲಿಸಿದ ಮಂಗಳೂರು ಪೊಲೀಸ್ ವಿಭಾಗದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಶ್ರೀ ವರುಣ್ ಆಳ್ವ ರವರನ್ನು ಎ ಶಾಮ ರಾವ್ ಸ್ಮಾರಕ ಸಾಮಾಜಿಕ ಸೇವಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಶೋಧನಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧಕರಾದ ಡಾ. ಸಂಧ್ಯಾ ಶೆಣೈ ಹಾಗೂ ಅಂತರರಾಷ್ಟ್ರೀಯ ಮಟ್ಟದ ಚಿತ್ರಕಲಾ ವಿಭಾಗದಲ್ಲಿ ಉತ್ತಮ ಸಾಧನೆಯನ್ನು ತೋರಿದ, ಶ್ರೀನಿವಾಸ್ ವಿಶ್ವವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿ, ಶ್ರೀ ಚಾರ್ಲ್ಸ್ ಕೆ ಸಿ ಯವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ, ಹನ್ನೆರಡು ಪಿ.ಹೆಚ್.ಡಿ. ಪದವೀಧರರನ್ನು ಮತ್ತು ಚಿನ್ನದ ಪದಕ ಪಡೆದ ಎಂಟು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.