(www.vknews.in): ಧಾರವಾಡದ ಶಿಗ್ಗಾಂವ್ ಹತ್ತಿರ ಒಂದು ಹಳ್ಳಿಯಲ್ಲಿ ಮದುವೆ ಸಮಾರಂಭಕ್ಕೆ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಬೆಂಗಳೂರಿನ ವಾತಾವರಣವೇ ಬೇರೆ, ಅಲ್ಲಿಯ ವಾತಾವರಣವೇ ಬೇರೆ. ವಿಪರೀತ ಶಖೆ. ಬೆಂಗಳೂರನ್ನು ಜನ ಏಕೆ ಇಷ್ಟ ಪಡುತ್ತಾರೆ ಎಂದು ಅರ್ಥವಾಗತೊಡಗಿತು. ಅಲ್ಲಿ ಎತ್ತಾ ಕಣ್ಣು ಹಾಯಿಸಿದರು ಕಪ್ಪು ಮಣ್ಣಿನ ಭೂಮಿ. ಹತ್ತಿ ಮತ್ತು ಜೋಳ ಮುಖ್ಯ ಬೆಳೆ. ಧಗಧಗ ಬಿಸಿಲು, ಎಲ್ಲಿ ಕುಳಿತುಕೊಂಡರೂ ಸಮಾಧಾನವಿಲ್ಲ. ಸುಮಾರು ೧೧.೩೦ ಗಂಟೆಗೆ ನಿಕಾಹ್ ಸಮಾರಂಭ ಪ್ರಾರಂಭವಾಯಿತು. ಮಸೀದಿಯಿಂದ ನಿಕಾಹ್ ನಾಮ ತೆಗೆದುಕೊಂಡು ಮೌಲಾನ ಬಂದರು. ನಿಕಾಹ್ ಪ್ರಮಾಣ ಪತ್ರದಲ್ಲಿ ಇಂಥವರ ಸುಪುತ್ರ, ಇಂಥವರ ಸುಪುತ್ರಿಯೊಂದಿಗೆ, ಇಂಥವರ ಸಾಕ್ಷಿಗಳ ಎದುರು ಒಮ್ಮನಸ್ಸಿನಿಂದ ಶರಿಯತ್ ಪ್ರಕಾರ ದಂಪತಿಗಳಾಗಲು ಒಪ್ಪಿಕೊಂಡಿದ್ದಾರೆ ಎಂದು ಬರೆಯಲಾಯಿತು. ಸಾಮಾನ್ಯವಾಗಿ ಮುಲ್ಲಾಗಳು ನಿಕಾಹ್ ಪ್ರಮಾಣ ಪತ್ರಿಕೆಯನ್ನು ಉರ್ದು ಭಾಷೆಯಲ್ಲಿ ಬರೆಯುವುದನ್ನು ಕಂಡಿದ್ದೇನೆ.
ಆದರೆ ಆ ಮೌಲಾನ ಅಂದ ಚಂದವಾಗಿ ಇಂಗ್ಲಿಷ್ ನಲ್ಲಿ ಬರೆಯ ತೊಡಗಿದರು. ನಾನು ಆಶ್ಚರ್ಯ ಚಕಿತನಾದೆ. ಸಂತೋಷವೂ ಆಯಿತು. ನಾನು ಅವರೊಂದಿಗೆ ಪರಿಚಯ ಮಾಡಿಕೊಂಡು ಹೇಳಿದೆ – ನಿಮ್ಮ ಇಂಗ್ಲಿಷ್ ಬರವಣಿಗೆ ಬಹಳ ಅಂದವಾಗಿದೆ. ಅವರು ಮುಗುಳ್ನಗೆ ಬೀರಿದರು. ಮಸೀದಿ ಸಮಿತಿಯವರು ನಿಕಾಹ್ ಪ್ರಮಾಣ ಪತ್ರಿಕೆಯನ್ನು ಕಂಪ್ಯೂಟರೀಕರಣ ಮಾಡಿದರೆ ಒಳಿತು, ಯಾವಾಗ ಬೇಕಾದರೂ, ಪ್ರಪಂಚದ ಯಾವ ಮೂಲೆಯಿಂದ ಬೇಕಾದರೂ ಪ್ರಿಂಟನ್ನು ತೆಗೆದುಕೊಳ್ಳಬಹುದು ಎಂದಾಗ, ಹೌದು, ಎಲ್ಲ ಮಸೀದಿ ಸಮಿತಿಗಳು ಸೇರಿ, ಚರ್ಚಿಸಿ, ಅಗತ್ಯವಾದ ಸಾಫ್ಟ್ ವೇರ್ ರಚಿಸಿಕೊಂಡರೆ ಎಲ್ಲರಿಗೂ ಅನುಕೂಲವಾಗುತ್ತದೆ, ವಧುವರರ ಆಧಾರ್ ಕಾರ್ಡು ಮತ್ತು ಸಂಬಂಧಪಟ್ಟ ಮಸೀದಿಯಿಂದ ವಧುವರರ NOC ಸಹ ಕಂಪ್ಯೂಟರೀಕರಣ ಮಾಡಿದರೆ ಒಳಿತು ಎಂದರು. ನಿಕಾಹ್ ಮುಗಿಯಿತು. ಹೆಣ್ಣಿನ ಕಡೆಯವರೊಬ್ಬರು ಮೈಕನ್ನು ಹಿಡಿದು ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸಸ್ಯಾಹಾರಿ ಊಟ ತಯಾರಿದೆ. ದಯಮಾಡಿ ಎಲ್ಲರು ಸವಿದು ಹೋಗಬೇಕು ಎಂದು ವಿನಮ್ರತೆಯಿಂದ ಘೋಷಣೆ ಮಾಡಿದರು.
ಮಾಂಸಾಹಾರಿ ಊಟದ ವ್ಯವಸ್ಥೆ ವಧುವಿನ ಮನೆಯ ಮುಂಭಾಗದಲ್ಲಿ ಏರ್ಪಡಿಸಲಾಗಿತ್ತು. ಆಗಲೇ ೧ ಗಂಟೆ ಬಾರಿಸಿತ್ತು. ಮದುವೆಯ ಮೃಷ್ಠಾನ್ನ ಭೋಜನ ಸವಿಯಲು ಜನರ ದಂಡು ಪ್ರಾರಂಭವಾಯಿತು. ನಾನು ಮುಲ್ಲಾ ಜೊತೆ ಮಾತು ಮುಂದುವರೆಸುತ್ತಾ, ಈ ಹಳ್ಳಿಯಲ್ಲಿ ಎಷ್ಟು ಮನೆಗಳಿವೆ ಎಂದು ಕೇಳಿದೆ. ಸುಮಾರು ೨ ಸಾವಿರ ಮನೆಗಳಿರಬಹುದು, ಶೇಕಡ ೩೦ ರಷ್ಟು ಮುಸಲ್ಮಾನರು ಇದ್ದಾರೆ ಎಂದರು. ಮಾಧ್ಯಮಗಳಲ್ಲಿ ದಿನನಿತ್ಯ ನಾವು ಅಹಿತಕರ ಘಟನೆಗಳನ್ನು ನೋಡುತ್ತಿದ್ದೇವೆ, ಇಲ್ಲಿಯೂ ಹಿಂದೂ-ಮುಸ್ಲಿಂ ಟೆನ್ಶನ್ನು ಇದೆಯೇ ? ಎಂದು ಕೇಳಿದಾಗ, ಹಾಗೇನಿಲ್ಲ ಇಲ್ಲಿ, ದೃಶ್ಯ ನಿಮ್ಮ ಕಣ್ಮುಂದಿದೆ, ಮದುವೆಗೆ ಯಾರೆಲ್ಲಾ ಬಂದಿದ್ದಾರೆ ನೋಡಿ …! ಅವರ ಮಾತುಗಳಲ್ಲಿ ಸತ್ಯವಿತ್ತು. ಊರಿನ ಹಿಂದುಮುಸಲ್ಮಾನರೆಲ್ಲರೂ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲಿ ಕಿಂಚಿತ್ತೂ ನನಗೆ ನಾ ಬೇರೆ ನೀ ಬೇರೆ ಅನ್ನಿಸಲೇ ಇಲ್ಲ. ಮದುವೆ ಮಂಟಪದಿಂದಲೇ ಅತ್ತಇತ್ತ ಕಣ್ಣು ಹಾಯಿಸಿದೆ. ಅಲ್ಲಿ ಉಡಿಗೆತೊಡಿಗೆಗಳಿಗೆ ಬೆಲೆ ಇಲ್ಲ ಎನಿಸಿತು. ಮನುಷ್ಯರಿಗೆ ಬೆಲೆ.
ನಮ್ಮ ಕಡೆ ಮದುವೆ ಎಂದರೆ ಸ್ಟೇಟಸ್ ಚಿಹ್ನೆ. ನಮ್ಮೆ ಒಳಗಿನ ಅಹಂ ಆಚೆ ಬಂದು ನಾಟ್ಯವಾಡುತ್ತಿರುತ್ತದೆ. ಒಮ್ಮೆ ಸಸ್ಯಾಹಾರಿ ಔತಣಕೂಟ ನೋಡೋಣವೆಂದು ಹೊರಟೆ, ಸುವ್ಯವಸ್ಥಿತವಾಗಿ ಎಲ್ಲವು ನಡೆಯುತ್ತಿತ್ತು. ಅಲ್ಲಿ ಮತ್ತೆ ನನ್ನೊಳಗಿನ ಪತ್ರಕರ್ತ ಒಬ್ಬರನ್ನು ಪರಿಚಯಿಸಿಕೊಂಡು ಪ್ರಶ್ನೆ ಮಾಡಲು ಪ್ರಾರಂಭಿಸಿದ. ಇಲ್ಲಿ ಹಿಂದೂಮುಸ್ಲಿಂ ಎಲ್ಲರು ಅನ್ಯೋನ್ಯವಾಗಿದ್ದಾರಾ? ಪರಿಚಿತನಾಗಿದ್ದ ಅಪರಿಚಿತ ವ್ಯಕ್ತಿಯ ಬಾಯಿ ಯಿಂದ ಬಂದ ಮಾತುಗಳು ಹೀಗಿತ್ತು – ನಾನೊಬ್ಬ ಪಕ್ಕಾ ಹಿಂದೂ. ಯಾರು ದ್ವೇಷದ ರಾಜಕೀಯ ಮಾಡಲು ಪ್ರಯತ್ನಿಸುತ್ತಾರೋ ಅವರಿಗೆ ಸರಿಯಾಗಿ ಬುದ್ದಿ ಕಲಿಸಬೇಕು. ನಮ್ಮ ಹಳ್ಳಿಯಲ್ಲಿ ಅಂತಹ ವಿಷಯಗಳಿಗೆ ಆಸ್ಪದವೇ ಇಲ್ಲ. ಬನ್ನಿ ನಮ್ಮ ಕಡೆಯ ಜೋಳದ ರೊಟ್ಟಿ ತಿಂದು ಹೋಗಿ ಎಂದರು. ಅವರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟೆ.
ನಾವು ಹೋಗಿದ್ದ ಹಳ್ಳಿಯಿಂದ ಸಂತ ಶಿಶುನಾಳ ಶರೀಫ ರ ಸಮಾಧಿ ಸುಮಾರು ಏಳೆಂಟು ಮೈಲಿ ದೂರವಷ್ಟೇ. ನೋಡೋವ ಆಸೆ ಇತ್ತು ಆದರೆ ಸಮಯದ ಅಭಾವದಿಂದ ಹೋಗಲು ಆಗಲಿಲ್ಲ.ವರನ ಜೊತೆ ಕುಳಿತು ಮದುವೆ ಊಟ ಮುಗಿಸಿ ಆಯಿತು. ಸಾಯಂಕಾಲ ಬೆಂಗಳೂರಿನತ್ತ ಹೊರಡುವ ಸಿದ್ಧತೆ. ಹಳ್ಳಿಯ ವಾತಾವರಣ ಬೇರೆ, ವೇಷಭೂಷಣ ಬೇರೆ, ತಿಂಡಿತಿನಿಸು ಬೇರೆ, ಭಾಷಾಶೈಲಿ ಬೇರೆ, ರೀತಿ ರಿವಾಜು ಬೇರೆ, ಬದುಕು ಕಟ್ಟಿಕೊಂಡಿರುವ ಶೈಲಿ ಬೇರೆ, ಆದರೆ ಒಂದು ಮಾತು ಮಾತ್ರ ಸತ್ಯ. ಜನರ ಮನಸ್ಸು ಅಪರಂಜಿ. ಶಿಶುನಾಳ ಶರೀಫರ ಸಾಮರಸ್ಯದ ಸುವಾಸನೆ ಇನ್ನೂ ಬೀರುತ್ತಲೇ ಇದೆ. ಇದೇ ಸಂಸ್ಕೃತಿ ಇಲ್ಲಿಯ ಜನರಲ್ಲಿ ಮುಂದುವರೆಯಲಪ್ಪಾ ಎಂದು ಮನದಲ್ಲೇ ಬೇಡುತ್ತಾ ಅಲ್ಲಿಂದ ಬೆಂಗಳೂರಿನತ್ತ ಹೊರಟೆ.
✍️ ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.