(www.vknews.in) : ಶಾಲೆಗಳು ಪ್ರಾರಂಭವಾಗಿ ೨-೩ ವಾರಗಳು ಕಳೆದಿವೆ. ಕೆಲವು ಶಾಲೆಗಳು ಫೀಸ್ ದರಗಳಲ್ಲಿ ಹೆಚ್ಚಳ ಮಾಡಿವೆ. ಕರೋನ ಕಾಲಘಟ್ಟದಲ್ಲಿ ಅದೆಷ್ಟೋ ಪೋಷಕರು ಕೆಲಸ ಕೆಳೆದುಕೊಂಡರು. ಅವರು ಫೀಸ್ ಕಟ್ಟಲಾಗದೆ ಆನ್ ಲೈನ್ ಕ್ಲಾಸುಗಳ ಸೌಕರ್ಯವನ್ನು ಸಹ ಪಡೆದುಕೊಳ್ಳಲಿಲ್ಲ. ಅವರ ಮಕ್ಕಳ ೧-೨ ವರ್ಷಗಳು ಹಾಗೆಯೇ ಉರುಳಿ ಹೋದವು. ನನ್ನ ಪರಿಚಯರಸ್ಥರೊಬ್ಬರು ಫೀಸ್ ಕಟ್ಟಲಾಗದೆ, ತನ್ನ ಮಕ್ಕಳನ್ನು ಬೇರೆ ಶಾಲೆಗೆ ಅಂದರೆ ಕಡಿಮೆ ಫೀಸ್ ಇರುವ ಶಾಲೆಗೆ ಸೇರಿಸಲು ನಿರ್ಧರಿಸಿದರು. ಅವರ ಶಾಲೆಗಳ ಹುಡುಕಾಟದಲ್ಲಿ ನಾನು ಸಹ ಭಾಗಿಯಾಗಿದ್ದೆ. ೩-೪ ಶಾಲೆಗಳಿಗೆ ಹೋಗಿ ವಿಚಾರಿಸಿದ ನಂತರ ಸ್ವಲ್ಪ ಕಡಿಮೆ ಫೀಸ್ ಇರುವ ಶಾಲೆ ಸಿಕ್ಕಿತು. ಆದರೆ ಅಲ್ಲೂ ಡೊನೇಷನ್ ಕಟ್ಟಬೇಕಾಯಿತು. ಬೇರೆ ವಿಧಿ ಇರಲಿಲ್ಲ, ಸಾಲ ಮಾಡಿ ಮಕ್ಕಳನ್ನು ಶಾಲೆಗೆ ಭರ್ತಿ ಮಾಡಿಸಲಾಯಿತು. ನಿಮ್ಮ ಮಕ್ಕಳು ಸರಿಯಾಗಿ ಓದಲಿಲ್ಲವಾದಲ್ಲಿ ಮಕ್ಕಳನ್ನು ಬೇಷರತ್ತು ಶಾಲೆಯಿಂದ ತೆಗೆದುಹಾಕಲಾಗುವುದು ಎಂದು ಪತ್ರ ಬರೆಸಿಕೊಂಡು ಸಹಿ ಮಾಡಿಸಿಕೊಂಡರು. ಅದಕ್ಕೂ ಒಪ್ಪಿಕೊಂಡು ಸಹಿ ಹಾಕಲೇ ಬೇಕಾದ ಅನಿವಾರ್ಯತೆ ಬಂತು.
ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಳ್ಳುವುದು ಸಹಜ. ಪೋಷಕರ ಕನಸುಗಳು ಸಾಕಾರಗೊಳ್ಳಲು ವಿದ್ಯೆ ಒಂದು ಮಾರ್ಗ. ಮಕ್ಕಳಿಗೆ ಒಳ್ಳೆಯ ಶಾಲೆಯಲ್ಲಿ ಓದಿಸಿದರೆ ಕನಸುಗಳು ನನಸಾಗಬಹುದು ಎಂಬ ಭರವಸೆ. ಅದಕ್ಕೆ ಪೋಷಕರು ತನ್ನ ಜೀವನದ ಸಂಪಾದನೆಯ ಬಹುಪಾಲು ಶಾಲಾಕಾಲೇಜುಗಳಿಗೆ ಕೊಡುವುದು. ನಾನು ಅತೀ ಶ್ರೀಮಂತರ ಬಗ್ಗೆ ಮಾತನಾಡುತ್ತಿಲ್ಲ. ಮಧ್ಯಮವರ್ಗದವರ ಆಸೆ ಆಕಾಂಕ್ಷೆಗಳ ಬಗ್ಗೆ ಹೇಳುತ್ತಿದ್ದೇನೆ. ಇಷ್ಟೆಲ್ಲಾ ಕಷ್ಟ ಪಡಬೇಕಾದ ಅವಶ್ಯಕತೆ ಏನು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಹುದಲ್ಲ, ಈಗ RTE ಸೌಲಭ್ಯ ಸಹ ಉಂಟು ಎಂದು ನೀವು ಹೇಳಬಹುದು. ನಿಜ. ಸರ್ಕಾರಿ ಶಾಲೆಗಳಿಗೆ ಸೇರಿಸಬಹುದು ಆದರೆ ಜನರ ಮನಸ್ಸುಗಳಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ನಂಬಿಕೆ ಇಲ್ಲ. ಅದು ಒಂದು ರೀತಿಯಲ್ಲಿ ಸತ್ಯವೂ ಹೌದು.
ಏಕೆಂದರೆ ಶಿಕ್ಷಕರ ಜ್ಞಾನದ ಗುಣಮಟ್ಟ ಕಾಲಕ್ಕೆ ತಕ್ಕಂತೆ ವೃದ್ಧಿ ಪಡಿಸಿಕೊಳ್ಳಲಾಗುತ್ತಿಲ್ಲ. ಹೊಸ ಪೀಳಿಗೆಯ ಶಿಕ್ಷಕರು ಬಂದರೆ ಏನಾದರು ಬದಲಾವಣೆ ಆಗಬಹುದೇನೋ…! ಇದರರ್ಥ ಹಿರಿಯ ಶಿಕ್ಷಕರಿಗೆ ಯುವ ಪೀಳಿಗೆಗೆ ಪಾಠ ಮಾಡಲು ಬರುತ್ತಿಲ್ಲ ಎಂದರ್ಥವಲ್ಲ. ಸರ್ಕಾರಿ ಶಿಕ್ಷಕರಲ್ಲಿ ಬಹಳ ಉತ್ತಮ ಶಿಕ್ಷಕರೂ ಸಹ ಇದ್ದಾರೆ. ಆದರೆ ಅವರ ಸಂಖ್ಯೆ ಬಹಳ ಕಡಿಮೆ. ಒಂದಷ್ಟು ಕನ್ನಡ ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣವನ್ನು ನೀಡುತ್ತಿವೆ. ಆದರೆ ಸರ್ಕಾರಿ ಉರ್ದು ಶಾಲೆಗಳ ಶಿಕ್ಷಣದ ಗತಿ ಕೇಳಲೇ ಬೇಡಿ. ನನ್ನ ಸ್ನೇಹಿತರು ಉರ್ದು ಶಾಲೆಗಳನ್ನು ದತ್ತು ತೆಗೆದುಕೊಂಡು, ಅದರ ಉನ್ನತಿಗಾಗಿ ಬಹಳ ಕಷ್ಟಪಟ್ಟರು. ಆದರೆ ಶಿಕ್ಷಕರ ಮನಸ್ಥಿಯನ್ನು ಬದಲಾಯಿಸಲು ಸಾಧ್ಯವೇ ಆಗಲಿಲ್ಲ. ಬಹುಶಃ ಕೆಲವರನ್ನು ಬಿಟ್ಟರೆ ಸರ್ಕಾರಿ ಸಂಬಳವನ್ನು ಪಡೆಯಲು ಮಾತ್ರ ನೌಕರಿಗೆ ಭರ್ತಿಯಾಗಿದ್ದಾರೇನೋ ಅನಿಸುತ್ತದೆ. ಮಕ್ಕಳ ಉನ್ನತಿಗಾಗಿ ಶ್ರಮಿಸುವ ಹುಮ್ಮಸ್ಸೇ ಕಾಣಲಾಗಲಿಲ್ಲ. ಚೆನ್ನಾಗಿ ಡ್ರೆಸ್ಅಪ್ ಆಗಿ ಬರುತ್ತಾರೆ, ವಾಟ್ಸ್ ಆಪ್ ಯೂನಿವರ್ಸಿಟಿಯಲ್ಲಿ ಮುಳುಗಿರುತ್ತಾರೆ. ಮಕ್ಕಳ ಮನಸ್ಸು ಖಾಲಿ ಹಾಳೆ ಇದ್ದಂತೆ. ಆ ಎಳೆ ಮನಸ್ಸುಗಳನ್ನು ಹೇಗೆ ಬೇಕಾದರೂ ಪರಿವರ್ತನೆಗೆ ಒಳಪಡಿಸಬಹುದು. ಸರ್ಕಾರಿ ಶಾಲೆಗಳಲ್ಲಿ ಓದಿ ಬಂದ ಕೆಲ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ಅವರ ಸಂಖ್ಯೆ ಬಹಳ ವಿರಳ. ಈಗ ಕಾಲ ಬದಲಾಗಿದೆ. ಇಲ್ಲಿ ನೋಡಿದರೂ ಸ್ಪರ್ಧೆ. ನಮ್ಮ ಮನಸ್ಸುಗಳಲ್ಲಿ ಇಂಗ್ಲಿಷ್ ಭೂತ ಸಹ ತಾಂಡವಾಡುತ್ತಿದೆ.
ಸ್ವದೇಶದಲ್ಲಿ, ಪರದೇಶಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಬೇಕಾದರೆ ಇಂದಿನ ಕಾಲದಲ್ಲಿ ಇಂಗ್ಲಿಷ್ ಭಾಷೆ ಅತ್ಯಗತ್ಯ. ಏನೇನೋ ಕನಸುಗಳನ್ನು ಕಟ್ಟಿಕೊಂಡಿರುವ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಕಡೆಗೆ ವಾಲುವುದು ಸಹಜ. ಈಗಾಗಲೇ ಎರಡು ಭಾರತಗಳು ಸೃಷ್ಟಿಯಾಗಿವೆ. ಒಂದು ಶ್ರೀಮಂತರ ಇಂಗ್ಲಿಷ್ ಭಾರತ. ಮತ್ತೊಂದು ಬಡವರ ಹಳ್ಳಿ ಭಾರತ. ಈ ಕಂದಕವನ್ನು ತುಂಬುವುದು ಹೇಗೆ? ಸರ್ಕಾರಗಳು ಸಮಯದ ಬೇಡಿಕೆಗಳನ್ನು ಅರಿತು, ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಆಂಧ್ರ ಸರ್ಕಾರ ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಗೆ ಪ್ರೋತ್ಸಾಹ ನೀಡಿದೆ. ಮುಂದಿನ ದಿನಗಳಲ್ಲಿ ಅದರ ಫಲಿತಾಂಶ ಕಾಣಲಿದೆ. ಇಡೀ ದೇಶದಲ್ಲಿ ಈ ರೀತಿಯ ಬದಲಾವಣೆಗಳು ಕಂಡು ಬಂದರೆ ಕಾನ್ವೆಂಗಳ ಹಾವಳಿ, ಅದರ ಬಗ್ಗೆ ಇರುವ ಮೋಹ ಕಡಿಮೆ ಆಗಬಹುದೇನೋ…! ಇಡೀ ದೇಶದಲ್ಲಿ ಒಂದೇ ಸಮನಾದ ಪಠ್ಯಕ್ರಮ, ಒಂದೇ ಕಲಿಕೆಯ ಭಾಷೆ ಇದ್ದರೆ, ಯಾರಲ್ಲಿ ಪ್ರತಿಭೆ ಇದೆಯೋ ಅವರು ಬೆಳೆಯುತ್ತಾರೆ. ಹಳ್ಳಿ ಮಕ್ಕಳಿಗೆ ನನಗೆ ಇಂಗ್ಲಿಷ್ ಬರಲ್ಲ ಎಂಬ ಕೀಳರಿಮೆ ನಿಧಾನವಾಗಿ ಸತ್ತುಹೋಗುತ್ತದೆ. ಹಳ್ಳಿ ಮಕ್ಕಳಲ್ಲಿ ಅಪಾರವಾದ ಪ್ರತಿಭೆ ಇದೆ. ಆದರೆ ನಾನಾ ಕಾರಣಗಳಿಂದ ಅವರು ಒಳ್ಳೆಯ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂಗ್ಲಿಷ್ ಭಾಷೆಯೂ ಅದಕ್ಕೆ ಒಂದು ಕಾರಣ. ಉನ್ನತ ದರ್ಜೆಯಲ್ಲಿ ಪಾಸಾದ ಒಬ್ಬ ಹಳ್ಳಿ ಹುಡುಗ, ಕೊರ್ಪೊರೇಟ್ ಕಂಪನಿಗಳ ಸಂದರ್ಶನದಲ್ಲಿ ಸೋತುಹೋಗುತ್ತಾನೆ. ಮುಜುಗರಕ್ಕೆ ಒಳಗಾಗುತ್ತಾನೆ.
ಇದು ಇಂದಿನ ವಾಸ್ತವ. ಸರ್ಕಾರಗಳು ಮನಸ್ಸು ಮಾಡಿದರೆ ಎಂತಹ ಬದಲಾವಣೆಗಳನ್ನು ಬೇಕಾದರೂ ಮಾಡಬಹುದು. ಆದರೆ ಅವರಿಗೆ ರಾಜಕೀಯವೇ ಮುಖ್ಯ. ಅವರ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುತ್ತಾರೆಯೇ…? ದೇಶದ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಾಗಿದೆ. ಮಾತೃಭಾಷೆ ಮರೆಯಬಾರದು, ಆದರೆ ನಮ್ಮ ಬೆಳವಣಿಗೆಗೆ ಬೇಕಾದ ಭಾಷೆ ಬಿಡಬಾರದು. ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ. ದೇಶ ಅಭಿವೃದ್ಧಿಗೊಳ್ಳಲು ಶಾಲಾಕಾಲೇಜುಗಳ ಶಿಕ್ಷಣದ ಗುಣಮಟ್ಟ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ವಿಷಯದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ನಾವು ತೀರಾ ಹಿಂದಿದ್ದೇವೆ. ಇದರ ಬಗ್ಗೆಯೂ ಚಿಂತನೆಗಳು ನಡೆಯ ಬೇಕಾಗಿದೆ. ಇಲ್ಲವಾದಲ್ಲಿ ಶ್ರೀಮಂತರ ಭಾರತ ಮತ್ತು ಬಡವರ ಭಾರತದ ನಡುವಿನ ಅಂತರ ಸಾಧ್ಯವಾದಷ್ಟು ಅಳಿಸಲು ಸಾಧ್ಯವಾಗುವುದಿಲ್ಲ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.