(ವಿಶ್ವ ಕನ್ನಡಿಗ ನ್ಯೂಸ್) : ಆತ ರೌಡಿ ಶೀಟರ್ ಅಲ್ಲ, ಸಮಾಜಕ್ಕಾಗಲಿ, ಅನ್ಯ ಧರ್ಮ-ಧರ್ಮೀಯರಿಗಾಗಲಿ ಆತನಿಂದ ಯಾವುದೇ ತೊಂದರೆಯೂ ಆಗಿಲ್ಲ. ತಂದೆಯಿಲ್ಲದ, ಅಜ್ಜನ ಮನೆಯಲ್ಲಿದ್ದು ಕೂಲಿಕೆಲಸ ಮಾಡುತ್ತಾ ತಾಯಿಗೆ ಆಸರೆಯಾಗಿದ್ದ ಮೃದು ಸ್ವಭಾವದ 19 ರ ಹರೆಯದ ಯುವಕ. ಬದುಕಿನ್ನೂ ಬಹಳವಿತ್ತು.. ಆದರೆ,ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಬಲಿಯಾಗಿ ಹರೆಯದಲ್ಲೇ ಇಹ ಲೋಕವನ್ನು ತ್ಯಜಿಸಬೇಕಾಯಿತು.
ಪರಿಚಿತರೊಂದಿಗೆ ನಡೆದ ಕ್ಷುಲ್ಲಕ ಜಗಳಕ್ಕೆ ,ರಾಜಿಯ ಪ್ರಸ್ತಾಪಿಸಿ, ವಂಚನೆಯಿಂದ ಒಬ್ಬ ಹುಡುಗನ ಮೇಲೆ 8 ಮಂದಿ ದುಷ್ಟರು ಎರಗಿ ಕ್ರೂರತೆಯನ್ನು ಮೆರೆದರು. ಅವರಲ್ಲಿದ್ದದ್ದು ಎರಡು ಬಗೆಯ ಅಮಲು. ಒಂದು, ಮಾದಕ ದ್ರವ್ಯಗಳ ದಾಸ್ಯತೆ. ಅವುಗಳ ಚಟಕೆ ಬಲಿಯಾದ ಯುವ ಜನಾಂಗಕ್ಕೆ ತಾವೇನು ಮಾಡುತ್ತಿದ್ದೇವೆ ಎಂಬ ಎಚ್ಚರವಿರುವುದಿಲ್ಲ.
ಇನ್ನೊಂದು ಅದಕ್ಕಿಂತ ಮಾರಕವಾದ #ಧರ್ಮಾಂಧತೆ. ತಮ್ಮ ಧರ್ಮವೇನೆಂದು ಸರಿಯಾಗಿ ಅರಿಯದವರಿಗೆ ಇನ್ನೊಂದು ಧರ್ಮೀಯರ ಹೆಸರು ಕೇಳಿದರೇ ಉರಿದು ಬೀಳುತ್ತಾರೆ. ಅಲ್ಲಿ ತಪ್ಪುಗಳೇ ಬೇಡ. ಸಣ್ಣ ವಿಚಾರಗಳು, ಅನ್ಯರ ವ್ಯಾಪಾರ, ಬಟ್ಟೆ ಬರೆ, ವೇಷ ಭೂಷಣ, ಧಾರ್ಮಿಕತೆಯೂ ಸಾಕು. ಹಿಂದೆ ಮುಂದೆ ನೋಡದೆ ಪ್ರಾಣಹತ್ಯೆಗೂ ಹೇಸಲಾರರು. ಅವರಿಗೆ ಧರ್ಮರಕ್ಷಕರೆಂಬ ಪಟ್ಟ. ರಾಜಕಾರಣಿ-ನಾಯಕರುಗಳ ಬೆಂಬಲ, ಸರಕಾರದ ಕರುಣೆ.. ಒಟ್ಟು , ಸಮಾಜದ ಸ್ವಸ್ಥತೆಗೆ ಕಂಟಕ, ದೇಶದ ಅಭಿವೃದ್ಧಿಗೆ ಹಿನ್ನಡೆ.
ಅವರ ಈ ದಾರ್ಷ್ಟ್ಯತೆಗೆ ಕಾರಣಕರ್ತರು ಅವರಲ್ಲಿ ಆ ವಿಷ ಬೀಜವನ್ನು ಬಿತ್ತಿದ #ಸೋ ಕಾಲ್ಡ್ ದೇಶಪ್ರೇಮಿಗಳು, ರಾಷ್ಟ್ರೀಯವಾದಿಗಳು, ಸಂಘಟನೆಗಳು, ಸ್ವಾರ್ಥ ರಾಜಕಾರಣಿಗಳು, ಮೌನವಾಗಿರುವ ವಿದ್ಯಾವಂತರು……!!
ಧರ್ಮಾಂಧತೆಗೆ ಇನ್ನೂ ಬಾಳಿ ಬದುಕಬೇಕಾದ ಯುವಕನೊಬ್ಬ ಅನ್ಯಾಯವಾಗಿ ಬಲಿಯಾದ. ಹಂತಕರು ಜೈಲುಸೇರಿದರು. ಅವರ ರಕ್ಷಣೆಗೆ ತೆರೆಮರೆಯಲ್ಲಿ ಸಾಕಷ್ಟು ಕೈಗಳು ಶ್ರಮಿಸಬಹುದು. ಆದರೆ, ಅವರನ್ನೂ ಬಿಡದ ಶಾಶ್ವತ ಸಾವು ಅವರನ್ನು ಹೇಗೆ ಎರಗಬಹುದು ಎಂಬುದನ್ನು ಯೋಚಿಸಬೇಕು. “ಸಾವಿಗೆ ಯಾವುದೇ ಜಾಮೀನು, ರಕ್ಷಣೆ ದೊರೆಯದು. ಅಲ್ಲಿ ಎಲ್ಲರೂ ಏಕಾಂಗಿ”.
ಕೊಲೆಗೈಯ್ಯಲ್ಪಟ್ಟ ಮಸೂದ್ ಗೆ ಹುತಾತ್ಮನ ಪಟ್ಟ.. ಕೊಲೆಗೈದವರು ಎಂದೆಂದೂ ದುಷ್ಕರ್ಮಿಗಳು, ಕಿಡಿಗೇಡಿಗಳು, ಸಮಾಜ ಘಾತಕರು, ಕೊಲೆಗಡುಕರೇ… (ಹಣ- ಜನ,ರಾಜಕೀಯ ಬಲವಿದ್ದರೆ ಈ ದೇಶದಲ್ಲಿ ನಾಯಕರಾಗಲೂ ಬಹುದು. ಅಸಂಭವಲ್ಲ.. ಇಂದಿನ ವ್ಯವಸ್ಥೆಯಲ್ಲಿ.)
ಅಲ್ಲಾಹು ಆ ಸಹೋದರನಿಗೆ ಜನ್ನತ್ ನೀಡಲಿ(ಆಮೀನ್)
– ಹೈದರ್ ಆಲಿ ಐವತ್ತೊಕ್ಲು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.