(ವಿಶ್ವ ಕನ್ನಡಿಗ ನ್ಯೂಸ್) : ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ನಾಸರ್ ಮಅದನಿ ಸೇರಿದಂತೆ ಆರೋಪಿಗಳ ವಿರುದ್ಧ ಹೊಸ ಪುರಾವೆಗಳಿವೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಹೇಳಿದೆ. ಪ್ರಕರಣದ ಎಲ್ಲಾ 21 ಆರೋಪಿಗಳ ವಿರುದ್ಧ ಹೊಸ ಸಾಕ್ಷ್ಯಾಧಾರಗಳಿವೆ. ಇದನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡುವಂತೆಯೂ ಸರ್ಕಾರ ಕೇಳಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಅಂತಿಮ ವಾದದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಫೋನ್ ದಾಖಲೆಗಳು ಸೇರಿದಂತೆ ಸಾಕ್ಷ್ಯವನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಸರ್ಕಾರ ಮನವಿ ಮಾಡಿದೆ. ಇದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರೂ ಬೇಡಿಕೆ ತಿರಸ್ಕರಿಸಲಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ನ್ಯಾಯಾಲಯದಲ್ಲಿ ಬೇಡಿಕೆಯನ್ನು ಎತ್ತಿದರು. ಮಅದನಿ ಸೇರಿದಂತೆ ಆರೋಪಿಗಳಿಗೆ ನೊಟೀಸ್ ಕಳುಹಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠವು ಬೇಡಿಕೆಯನ್ನು ಅಂಗೀಕರಿಸಿತು. ಹೊಸ ಸಾಕ್ಷ್ಯವನ್ನು ಪರಿಗಣಿಸುವ ಬಗ್ಗೆ ಎರಡು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣೆ ಮುಗಿದಿರುವ ಪ್ರಕರಣದಲ್ಲಿ ಹೊಸ ಸಾಕ್ಷ್ಯಗಳ ಪರಿಗಣನೆಗೆ ಅವಕಾಶ ನೀಡುವಂತಿಲ್ಲ ಎಂಬುದು ಪ್ರತಿವಾದಿಗಳ ವಾದ. ಸಾಕ್ಷ್ಯಾಧಾರಗಳಿದ್ದರೆ ಅದನ್ನು ಚಾರ್ಜ್ ಶೀಟ್ ಪರಿಗಣನೆಯ ಹಂತದಲ್ಲಿಯೇ ಸಲ್ಲಿಸಬೇಕಿತ್ತು. ಇದು ಅಂತ್ಯವಿಲ್ಲದ ವಿಚಾರಣೆಗೆ ಕಾರಣವಾಗುತ್ತದೆ ಎಂದು ಆರೋಪಿಗಳ ಪರ ವಕೀಲರು ವಾದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.