ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಮೃತ ಮಹೋತ್ಸವ ವಿಶೇಷ
(ವಿಶ್ವ ಕನ್ನಡಿಗ ನ್ಯೂಸ್) : ಸರಕಾರ ಈ ಪ್ರತಿಷ್ಠಾನಗಳನ್ನು ಎಷ್ಟು ನಿರ್ಲಕ್ಷ್ಯ ಮಾಡಿದೆಯೋ ಅದಕ್ಕಿಂತಲೂ ಹೆಚ್ಚು ಅದಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡುವಾಗ ಬೇಜವಾಬ್ದಾರಿ ತೋರಿದೆ. ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ಮೃತ ಪಟ್ಟು ಅರ್ಧ ವರ್ಷವಷ್ಟೇ ಕಳೆದಿದೆ. ಅವರನ್ನು ಚಿಕ್ಕಮಗಳೂರಿನ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರನ್ನಾಗಿ ಮಾಡಿದೆ ! ಕಾಟಾಚಾರಕ್ಕೆ ಕೆಲಸ ಮಾಡೋದು ಮಾತ್ರವಲ್ಲ, ಇದು ಪೂರ್ಣಚಂದ್ರ ತೇಜಸ್ವಿಯವರಿಗೆ ಅವರ ಪತ್ನಿಯವರಿಗೆ ಮಾಡಿದ ಅವಮಾನ ಕೂಡ..
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ನಾನಾ ಪ್ರತಿಷ್ಠಾನಗಳಿವೆ, ಅದಕ್ಕೆ ಸರಿಯಾಗಿ ಅನುದಾನವೂ ಇರುವುದಿಲ್ಲ. ಚುನಾವಣೆಗೆ ಮುನ್ನ ಇವುಗಳನ್ನು ನಾಮಕೇವಾಸ್ತೆ ಭರ್ತಿ ಮಾಡಿ ಸರಕಾರಿ ಹುದ್ದೆಗಳು ಎಂಬ ಹೆಸರಿನಡಿ ಕೆಲವು ಸಾಹಿತಿಗಳ, ಇನ್ನು ಕೆಲವು ಕಾರ್ಯಕರ್ತರ ಭಿನ್ನಮತ ಉಪಶಮನಕ್ಕೆ ಬಳಕೆಯಾಗುತ್ತದೆ.
ಚಕ್ರವರ್ತಿ ಸೂಲಿಬೆಯವರನ್ನು ಹಾವೇರಿ ರಾಜಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅವರು ಅದನ್ನು ಗೌರವಯುತವಾಗಿ ನಿರಕಾರಿಸಿದ್ದಾರೆ. ಇದರ ಬೆನ್ನಿಗೆ ನರೇಂದ್ರ ರೈ ದೇರ್ಲ ಅವರು ಕೂಡಾ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಯನ್ನು ನಯವಾಗಿ ನಿರಾಕರಿಸಿದ್ದಾರೆ. ಜತೆಗೆ ಯಾವುದೇ ಪ್ರತಿಷ್ಠಾನ/ ಹುದ್ದೆಗಳಿಗೆ ಆಯ್ಕೆ ಮಾಡುವಾಗ ಸಂಬಂಧಿತರನ್ನು ಸಂಪರ್ಕಿಸುವುದು ಅಗತ್ಯ ಎಂದು ಹೇಳಿದ್ದಾರೆ. ಅವರು ಹೇಳಿದ್ದು ನೂರಕ್ಕೆ ನೂರು ನಿಜ, ಆಯ್ಕೆಯಾಗುವ ವ್ಯಕ್ತಿಗಳು ಬದುಕಿದ್ದಾರೋ ಇಲ್ಲವೋ ಕನಿಷ್ಠ ಮಾಹಿತಿಯಾದರೂ ಸರಕಾರಕ್ಕೆ ಸಿಗುತ್ತದೆ.
ಚಕ್ರವರ್ತಿ ಗುಡುಗಿದ್ದೇ ಕಾರಣವಾಯ್ತಾ?: ಚಕ್ರವರ್ತಿ ಸೂಲೆಬೆಲೆಯಂತಹ ಸಮರ್ಥರಿಗೆ ಪ್ರತಿಷ್ಠಾನಗಳ ಅಧ್ಯಕ್ಷ ಸ್ಥಾನ(ಅನುದಾನವೇ ಇಲ್ಲದ) ನೀಡಿ ಸರಕಾರ ಏನು ಸಾಧಿಸಲು ಹೊರಟಿದೆ, ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೇ ಹೇಳಬೇಕು. ಇತ್ತೀಚಿಗೆ ಕಾರ್ಯಕರ್ತರ ಆಕ್ರೋಶ ಸ್ಪೋಟಿಸಿದಾಗ ಸೂಲಿಬೆಲೆ ಅವರು ಕಾರ್ಯಕರ್ತರ ಧ್ವನಿಯಾಗಿ ಗುಡುಗಿದ್ದರು, ಸರಣಿ ಟ್ವೀಟ್, ಲೇಖನ ಮಾಡಿದ್ದರು. ಇದು ಭಿನ್ನಮತದ ಸ್ವರವೋ ಎಂಬ ಶಂಕೆ ಸರಕಾರಕ್ಕೆ ಮೂಡಿತ್ತು. ಬಹುಷಃ ಅದನ್ನು ಶಮನ ಮಾಡಲು ಅಥವಾ ಸರಕಾರದ ಭಾಗವಾಗಲು ಈ ಹುದ್ದೆ ನೀಡಿದ್ದಿರಬೇಕು.
ಆದರೆ ಚಕ್ರವರ್ತಿ ಅವರು ಇದನ್ನು ಗೌರವಯುತವಾಗಿಯೇ ನಿರಾಕರಿಸಿ ಟ್ವೀಟ್ (ಹೇಳಿಕೆ) ಮಾಡಿದ್ದಾರೆ. ನಿರಂತರ ಸೇವಾ ಕಾರ್ಯಬಾಹುಳ್ಯದ ನಡುವೆ ಪ್ರತಿಷ್ಠಾನದ ಕೆಲಸ ಮಾಡಲು ಸಾಧ್ಯವಾಗದು ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಅದೂ ಚಕ್ರವರ್ತಿಯರು ನಿಗಮ ಮಂಡಳಿಯ ಅಧ್ಯಕ್ಷಗಿರಿಯನ್ನು ಕೊಟ್ಟರೂ ಖಂಡಿತಾ ಸ್ವೀಕರಿಸುವವರಲ್ಲ. ಅವರರೇನಿದ್ದರೂ ವಿಧಾನಪರಿಷತ್ ಅಥವಾ ರಾಜ್ಯಸಭೆಗೆ ಅರ್ಹರು ಎನ್ನುವುದು ಅವರ ಬೆಂಬಲಿಗರ ಅಂಬೋಣ, ಪ್ರಸಕ್ತ ಸ್ಥಿತಿಯಲ್ಲಿ ನೋಡಿದಾಗ ಹಿಂದುತ್ವದ ವಿಭಾಗದಲ್ಲಿ ಚಕ್ರವರ್ತಿ ಸೂಲಿಬೆಲೆ ಅಗ್ರಸ್ಥಾನದಲ್ಲಿ ಬರುತ್ತಾರೆ.
ವಿಶೇಷ ಎಂದರೆ ಅನೇಕ ಅಕಾಡೆಮಿಗಳಲ್ಲಿ ಈಗಾಗಲೇ ಎಡಪಂಥೀಯರ ಸೇರ್ಪಡೆ ಮಾಡಿರುವ ಸರಕಾರ, ಪ್ರತಿಷ್ಠಾನದಲ್ಲೂ ಮೋದಿ ವಿರೋಧಿಗಳ, ಎಡಪಂಥೀಯರ ಸೇರ್ಪಡೆ ಮಾಡುವ ಮೂಲಕ ರಾಜಧರ್ಮ ಪಾಲಿಸಿದೆ. ಸಾಹಿತ್ಯ ವಲಯದಲ್ಲೂ ಅಪರೇಶನ್ ಕಮಲಕ್ಕೆ ಮುಂದಾಗಿರುವುದೋ ಅಥವಾ ಕಣ್ತಪ್ಪಿನಿಂದ ಆಗಿರುವುದೋ ಎನ್ನುವ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
#ಇಂಧನ ಮತ್ತು #ನಿರ್ಧನ ಇಲಾಖೆ : ಆರ್ಥಿಕ, ಇಂಧನದಂತಹ ಫಲವತ್ತಾದ ಖಾತೆಗಳ ಎದುರು ಯಾವುದೇ ಅಮದನಿ ಇಲ್ಲದ ಈ ಇಲಾಖೆ ದುರಸ್ತಿಯಾಗದೆ ಹಾಳು ನಾರುತ್ತಿದೆ. ಈ ಇಲಾಖೆಗೆ ಧಣಿಯಾಗಿ ಬರುವ ಸಚಿವರು ಯಾವತ್ತೂ ಕಲಾವಿದರ, ಸಂಸ್ಕೃತಿಯ ದನಿಯಾಗಿದ್ದಂತೂ ಇಲ್ಲ. ಈ ಬಾರಿ ಧನ ಸಹಾಯದ ಸಂದರ್ಭ ನಿಜವಾದ ಕಲಾವಿದರಿಗೆ ಕೊಡುವುದಾಗಿ ಘೋಷಣೆ ಮಾಡಿ ಕಲಾವಿದರಲ್ಲಿ ಖುಷಿ ಮೂಡಿಸಿದ್ದು ಮಾತ್ರ. ಆದರೆ ಕಾರ್ಯಗತವಾಗಿದ್ದು ಅಷ್ಟಕಷ್ಟೇ.
ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಸುನಿಲ್ ಕಣ್ಣು !: ಕಾಟಾಚಾರಕ್ಕೆ ಕೆಲಸ ಮಾಡಿದರೆ ಈ ರೀತಿಯೇ ಆಗಲಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಕೆಲಸ ಮಾಡಿಸುವುದರಲ್ಲಿ ಸಮರ್ಥರೇ. ಹೆಚ್ಚಿದ ಕಾರ್ಯಬಾಹುಳ್ಯ, ಕರಾವಳಿಯಲ್ಲಿ ನಡೆದ ಕೊಲೆ ಪ್ರಕರಣಗಳು ಬಹುಷಃ ಇಲಾಖೆಯ ಕಡೆ ಗಮನ ಸ್ವಲ್ಪ ಕಡಿಮೆಯಾಗಿರಬೇಕು. ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಬಹುತೇಕ ನಾಯಕರು ಬೆದರಿದರೂ ಸುನಿಲ್ ಕುಮಾರ್ ಅದನ್ನು ತೋರಿಸಿರಲಿಲ್ಲ ಎನ್ನುವುದು ಗಮನೀಯ.
ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ತಾನು ಸಿದ್ಧ ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಸರಕಾರದಿಂದ ಹೊರಬಂದು ಸಮರ್ಥವಾಗಿ ತಾನು ಪಕ್ಷದ ಕೆಲಸ ನಿಭಾಯಿಸುತ್ತೇನೆ ಎಂದು ಘೋಷಿಸಿಕೊಂಡಿದ್ದಾರೆ.
– ಜಿತೇಂದ್ರ ಕುಂದೇಶ್ವರ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.