ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಭಾನುವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯ ರಾಜಧಾನಿಯ ಹಲವೆಡೆ ಪ್ರವಾಹವೇ ಉಂಟಾಗಿ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತಿದೆ. ಧಾರಾಕಾರ ಮಳೆಗೆ ಬೆಸ್ಕಾಂ ನಿರ್ಲಕ್ಷ್ಯದಿಂದಾದಿ ವಿದ್ಯುತ್ ತಗುಲಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ.
ನಿನ್ನೆ ರಾತ್ರಿ ವಿದ್ಯುತ್ ಕಂಬ ತಗುಲಿ ಶಾಕ್ ಹೊಡೆದು 23 ವರ್ಷದ ಬಿ ಕಾಂ ಪದವೀಧರೆ ಮೃತಪಟ್ಟಿದ್ದಾರೆ. ಯುವತಿಯನ್ನು ವೈಟ್ ಫೀಲ್ಡ್ ನ ಸಿದ್ದಾಪುರ ನಿವಾಸಿ ಅಖಿಲಾ ಎಂದು ಗುರುತಿಸಲಾಗಿದ್ದು, ಈಕೆ ಖಾಸಗಿ ಶಾಲೆಯೊಂದರಲ್ಲಿ ಆಡಳಿತ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಅಖಿಲಾ ನಿನ್ನೆ ರಾತ್ರಿ 9.30ರ ಸುಮಾರಿಗೆ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ನೀರು ತುಂಬಿದ ರಸ್ತೆಯಲ್ಲಿ ಸ್ಕೂಟಿಯಲ್ಲಿ ಹೋಗುತ್ತಿರಬೇಕಾದರೆ ಜಾರಿ ಬಿದ್ದ ವೇಳೆ ರಕ್ಷಣೆಗೆಂದು ಅಖಿಲಾ ವಿದ್ಯುತ್ ಕಂಬವನ್ನು ಹಿಡಿದಿದ್ದಾರೆ. ಆಗ ವಿದ್ಯುತ್ ಪ್ರವಹಿಸಿದೆ. ಪ್ರಜ್ಞಾಹೀನಳಾಗಿ ಬಿದ್ದ ಅಖಿಲಾರನ್ನು ಸ್ಥಳದಲ್ಲಿದ್ದವರು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ.
ತಮ್ಮ ಮಗಳ ಸಾವಿಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ, ವಿದ್ಯುತ್ ಕಂಬದ ಬಾಕ್ಸ್ ವೈರ್ ನ್ನು ಮುಚ್ಚದೆ ತೆರೆದಿಟ್ಟಿದ್ದೇ ಈ ದುರ್ಘಟನೆಗೆ ಕಾರಣ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ವೈಟ್ ಫೀಲ್ಡ್ ವಿಭಾಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.