(www.vknews.in): ಬೆಳಕನ್ನು ಸ್ಪಟಿಕದಿಂದ ಹಾಯಿಸಿದರೆ ಏಳು ಬಣ್ಣಗಳು ಕಾಣುತ್ತವೆ. ಇದನ್ನು ಪ್ರಾಥಮಿಕ ಶಾಲೆಯಲ್ಲಿಯೇ ವಿಜ್ಞಾನ ವಿಭಾಗದ ಮೇಷ್ಟ್ರು ತೋರಿಸಿಕೊಟ್ಟಿದ್ದಾರೆ. ಆಕಾಶ ನೀಲಿ ಮತ್ತು ಎಲೆಗಳು ಹಸಿರಾಗಿ ಕಾಣಲು ಕಾರಣಗಳೇನು ಎಂದು ಸಹ ವಿವರಿಸಿದ್ದಾರೆ. ನಾವು ಆಕಾಶದ ಕೆಳಗೆ ಅಂದರೆ ಭೂಮಿಯ ಮೇಲೆ ವಾಸವಾಗಿದ್ದೇವೆ. ಅಂದರೆ ಬಣ್ಣಗಳ ನಡುವೆ ಜೀವನ ಸಾಗಿಸುತ್ತಿದ್ದೇವೆ. ನಾಯಿಗಳ ಕಣ್ಣುಗಳಿಗೆ ಕೇವಲ ಕಪ್ಪು ಬಿಳುಪು ಕಾಣುವ ಹಾಗೆ ನಮ್ಮ ಕಣ್ಣುಗಳಿದ್ದಿದ್ದರೆ ಏನು ಗತಿ ? ಬಹುಶಃ ಪ್ರಪಂಚದ ಯಾವುದೇ ವಸ್ತುವಿನ ಬಗ್ಗೆ ಆಕರ್ಷಣೆಯೇ ಇಲ್ಲದಂತಾಗುತ್ತಿತ್ತೇನೋ …!
ಅಂದರೆ ನಮ್ಮ ಮನಸ್ಸಿಗೂ ಬಣ್ಣಗಳಿಗೂ ಸಂಬಂಧ ಇದೆ ಎಂದಾಯಿತು. ಸಂಬಂಧ ಇದ್ದ ಮೇಲೆ ಅದರ ಪ್ರಭಾವ ನಮ್ಮ ಆಂತರಿಕ ಮತ್ತು ಬಾಹ್ಯ ವಿಷಯಗಳ ಬಗ್ಗೆ ಬೀಳದೆ ಇರದು. ನಮಗೆ ತಿಳಿದೊ ತಿಳಿಯದೆಯೋ ಬಣ್ಣಗಳ ಪ್ರಭಾವ ನಮ್ಮ ದೈನಂದಿನ ಜೀವನದಲ್ಲಿ ಎಷ್ಟೊಂದು ಆಳವಾಗಿ ಬೇರೂರಿದೆ ಎಂದರೆ ಅದನ್ನು ಊಹಿಸಲೂ ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಬಣ್ಣಗಳದ್ದೇ ದರಬಾರು. ಜನರು ಯಾವ ಬಣ್ಣ ಇಷ್ಟ ಪಡುತ್ತಾರೆ, ಏಕೆ ಇಷ್ಟಪಡುತ್ತಾರೆ ಮತ್ತು ಅದರ ಪ್ರಭಾವ ಏನು ಎಂದು ಆಳವಾಗಿ ಪರೀಕ್ಷಿಸುವ ವಿಜ್ಞಾನವೇ “ಬಣ್ಣಗಳ ಮನಃಶಾಸ್ತ್ರ”.
ಉದಾಹರಣೆಗೆ ಗಂಡಸರಿಗೆ ಯಾವ ಬಣ್ಣ ಇಷ್ಟ, ಹೆಂಗಸರಿಗೆ ಯಾವ ಬಣ್ಣ ಇಷ್ಟ ಮತ್ತು ಮಕ್ಕಳಿಗೆ ಯಾವ ಬಣ್ಣ ಇಷ್ಟ ಎಂಬುದನ್ನು ಕಲೆ ಹಾಕಲಾಗುತ್ತದೆ. ದಿನನಿತ್ಯ ಖರೀದಿಸುವ ಎಲ್ಲಾ ಸಾಮಾನುಸರಂಜಾಮುಗಳಲ್ಲಿ ಶೇ ೬೨ ರಷ್ಟು ನಮಗೆ ಇಷ್ಟವಾಗುವ ಬಣ್ಣಗಳನ್ನು ಬಳಸಿರುತ್ತಾರೆ. ಉದಾಹರಣೆಗೆ ಬಿಸ್ಕತ್ತು ಪ್ಯಾಕೇಟಿಗೆ ಯಾವ ಬಣ್ಣ ಇರಬೇಕು, ಮಕ್ಕಳ ಆಟದ ಸಾಮಾನು ಯಾವ ಬಣ್ಣದ್ದಾಗಿರಬೇಕು, ಗಂಡಸರು ಯಾವ ಬಣ್ಣದ ಅಂಗಿಯನ್ನು ಇಷ್ಟ ಪಡುತ್ತಾರೆ ಇತ್ಯಾದಿ. ಟಿವಿ ಮುಂದೆ ಕುಳಿತು ಬರುವ ಎಲ್ಲಾ ಜಾಹಿರಾತುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಯಾವ ಪ್ರಾಡಕ್ಟುಗಳಿಗೆ ಯಾವ ಬಣ್ಣವನ್ನು ಬಳಸಿದ್ದಾರೆ ಎಂಬುದನ್ನು ಗಮನಿಸಿ ನೋಡಿ, ಅದು ಅವರ ಇಷ್ಟದ ಬಣ್ಣಗಳಲ್ಲ, ಗ್ರಾಹಕರ ಇಷ್ಟದ ಬಣ್ಣಗಳು. ಬಣ್ಣಗಳಲ್ಲಿ ಸೆಳೆತ ಇರುತ್ತದೆ. ಅದರ ಸದುಪಯೋಗ ಮತ್ತು ದುರುಪಯೋಗ ಅವರವರಿಗೆ ಬಿಟ್ಟಿದ್ದು.
ನೀವು ಸಿನಿಮಾಗಳಲ್ಲಿ ನೋಡಿರಬಹುದು ಮುಖ್ಯನಟಿಗೆ ಕೆಂಪು ಬಣ್ಣದ ತೆಳು ಸೀರೆ ಉಡಿಸಿ, ಮಳೆಯಲ್ಲಿ ನೃತ್ಯ ಮಾಡಿಸಿ, ಪಡ್ಡೆ ಹುಡುಗರನ್ನು ಆಕರ್ಷಣೆಗೆ ಒಳಪಡಿಸಿ, ಅವರು ಆ ಹಾಡನ್ನು ಅಥವಾ ಸಿನಿಮಾವನ್ನು ನೋಡಲು ಸ್ನೇಹಿತರನ್ನು ಪ್ರೇರೇಪಿಸುವಂತೆ ಮಾಡಲು ನಿರ್ದೇಶಕ ಒದ್ದಾಡುತ್ತಿರುತ್ತಾನೆ. ಇಲ್ಲಿ ಪ್ರಶ್ನೆ ಕೆಂಪು ಬಣ್ಣವೇ ಏಕೆ ? ಏಕೆಂದರೆ ಕೆಂಪು ಬಣ್ಣ ಶಕ್ತಿಯ ಮತ್ತು ಜೀವಂತಿಕೆಯ ಸಂಕೇತ. ಬಿಳಿಯ ಬಟ್ಟೆಗಳನ್ನು ಹಾಕಿಕೊಂಡಿರುವ ನೂರು ಜನರ ನಡುವೆ ಕೆಂಪು ಗುಲಾಬಿಯ ಗುಚ್ಛವನ್ನು ತೆಗೆದುಕೊಂಡು ಹೋಗಿ ನೋಡಿ. ಆ ೧೦೦ ಜನರ ಮಧ್ಯೆ ಎಲ್ಲರ ಕಣ್ಣಿಗೆ ಕುಕ್ಕುವುದು ನೀವೇ. ರೆಡ್ ಸಿಗ್ನಲ್ ನೋಡಿದಾಕ್ಷಣ ಸವಾರಿ ನಿಲ್ಲಿಸುತ್ತೀರಿ ಏಕೆ? ಕೆಂಪು ಎಚ್ಚರಿಕೆಯ ಗಂಟೆಯಲ್ಲ. ಆದರೆ ನಿಮ್ಮ ಮನಸ್ಸನ್ನು ಬೇಗ ಎಚ್ಚರಿಸುತ್ತದೆ.
ಯಾವುದೇ ಅಪಾಯಕಾರಿ ಸ್ಥಳ ಇದ್ದರೆ ಅಲ್ಲಿ ಕೆಂಪು ಚಿಹ್ನೆ ಅಥವಾ ಕೆಂಪು ಬಣ್ಣದಲ್ಲಿ ಬರೆದಿರುತ್ತಾರೆ. ಕೆಂಪು ಎಂದರೆ “ಅಪಾಯ” ಎಂದು ನಾವು ಪ್ರಚಲಿತ ಮಾಡಿಬಿಟ್ಟಿದ್ದೇವೆ ಅಷ್ಟೆ. ಕೆಂಪು ಮಸಾಲೆಯ ಚಿಲ್ಲಿ ಚಿಕನ್ ನೋಡಿದರೆಯೇ ಬಾಯಿಯಲ್ಲಿ ನೀರು ಸೋರುತ್ತದೆ. ಕೆಂಪು ಅಪಾಯದ ಬಣ್ಣ ಅಲ್ಲ. ಅದು ಆಕರ್ಷಣೆಯ ಬಣ್ಣ. ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಎಲ್ಲಾ ಬಣ್ಣಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾನೆ. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವಾಗ ರಕ್ತವನ್ನು ನೋಡೇ ನೋಡುತ್ತಾರೆ. ಆದರೆ ಅವರು ಹಸಿರು ಬಟ್ಟೆಗಳನ್ನು ಧರಿಸಿರುತ್ತಾರೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಅವರು ಹಸಿರು ಬಣ್ಣದ ಬಟ್ಟೆಗಳನ್ನು ಬಳಸಬಹುದು. ಪ್ರಕೃತಿಯೂ ಹಸಿರು ಅಲ್ಲವೇ. ಹಸಿರು ಉದ್ಯಾನವನಗಳನ್ನು, ಪ್ರಕೃತಿಯ ನೋಟವನ್ನು ಯಾರು ತಾನೇ ಇಷ್ಟಪಡಲ್ಲ !
ಆಪರೇಷನ್ ಥಿಯೇಟರ್ನಲ್ಲೂ ನಾನು ಪ್ರಕೃತಿ ಜೊತೆ ಇದ್ದೇನೆ ಎಂದು ಭಾವಿಸಲು ಬಹುಶಃ ಹಸಿರು ಬಟ್ಟೆಗಳನ್ನು ಅಥವಾ ಆಕಾಶದಂತೆ ನೀಲಿ ಬಟ್ಟೆಗಳನ್ನು ಧರಿಸುತ್ತಾರೆ. ಕೆಂಪು ರಕ್ತ ಹಸಿರು ಬಟ್ಟೆ ಆಹಾ ಎಂತಹಾ ಜೋಡಿ ! ಪ್ರಕೃತಿಯ ವಿಸ್ಮಯ ನೋಡಿ ಗಿಣಿ ಹಸಿರು ಅದರ ಕೊಕ್ಕು ಕೆಂಪು. ದೇವರು ಈ ಪ್ರಪಂಚವನ್ನು ತುಂಬಾ ಮನಸ್ಪೂರಕವಾಗಿ ಮಾಡಿರಬೇಕು, ಮನುಷ್ಯನಿಗೆ ಏನಿಷ್ಟ ಎಂಬುದರ ಬಗ್ಗೆ ತುಂಬಾ ಯೋಚಿಸಿರಬೇಕಲ್ಲಾ…! ಕಪ್ಪು ಬಣ್ಣ ಶೋಕದ ಸಂಕೇತ ಅಲ್ಲ.
ಹಾಗಿದ್ದಿದ್ದರೆ ಯಾರೂ ಬಿಳಿ ಕೂದಲಿಗೆ ಕಪ್ಪು ಬಣ್ಣ ಬಳೆಯುತ್ತಿರಲಿಲ್ಲ. ಬೇರೆಬೇರೆ ದೇಶಗಳಲ್ಲಿ ಬಣ್ಣದ ಪ್ರಭಾವ ಮತ್ತು ಪರಿಕಲ್ಪನೆ ಬೇರೆಬೇರೆಯಾಗಿದೆ. ಯಾರಾದರೂ ತೀರಿಹೋದರೆ ಕಪ್ಪು ಅಥವಾ ಬಿಳಿ ಬಟ್ಟೆಗಳನ್ನು ಉಟ್ಟು ಹೋಗುವುದು ಶ್ರೀಮಂತರಲ್ಲಿ ವಾಡಿಕೆಯಾಗಿಹೋಗಿದೆ. ಕಪ್ಪು ಬಣ್ಣ ಗಾಂಭೀರ್ಯದ ಸಂಕೇತ. ಚಂಚಲತೆಗೆ ವಿರುದ್ಧವಾದ ಬಣ್ಣ. ಮಕ್ಕಳಿಗೆ ದೃಷ್ಟಿ ಆಗಬಾರದು ಎಂದು ಕಪ್ಪು ಕಾಡಿಗೆಯ ಚುಕ್ಕೆ ಇಡುತ್ತಾರೆ. ಅಂದರೆ ಕಪ್ಪು ಬಣ್ಣಕ್ಕೆ ಏನೋ ಶಕ್ತಿ ಇದೆ ಎಂದರ್ಥ. “ನೀನು ಬ್ಲಾಕ್ ಸೂಟ್ ಹಾಕ್ಕೊ, ಸಕ್ಕತ್ತಾಗಿ ಕಾಣ್ತೀಯ”. ಕೆಲವರು ಕಪ್ಪು ಅಪಶಕುನ ಎನ್ನುತ್ತಾರೆ. ಅವರವರ ದೃಷ್ಟಿಕೋನ. ಕೆಲವರು ರೌಡಿಗಳ ಹಾಗೆ ಗಾಂಭೀರ್ಯದಿಂದ ಕಪ್ಪು ಕಾರಿನಲ್ಲಿ ಬಂದಿಳಿದರೆ, ಕೆಲವರು ಕಪ್ಪು ಬಣ್ಣದ ಕಾರುಗಳಲ್ಲಿ ಶಖೆ ಹೆಚ್ಚು, ಕೆಂಪು ಬಣ್ಣದ ಕಾರುಗಳಲ್ಲಿ ಆಕ್ಸಿಡೆಂಟುಗಳು ಹೆಚ್ಚು, ನನಗೆ ಬಿಳಿ ಬಣ್ಣದ ಕಾರೇ ಇಷ್ಟ ಎನ್ನುತ್ತಾರೆ. ಕೆಲವರಿಗೆ ಹಳದಿ ಬಣ್ಣದ ಕಾರು ಇಷ್ಟ. ಆದರೆ ಜನರು ಟೀಕೆ ಮಾಡದೆ ಬಿಡುತ್ತಾರೆಯೇ. ಇವನಿಗೆ ಯಾವ ಬಣ್ಣವೂ ಸಿಗಲಿಲ್ಲವೇ, ಬೇದಿ ಬಣ್ಣದ ಕಾರು ತೆಗೆದುಕೊಂಡಿದ್ದಾನಲ್ಲ ಆಸಾಮಿ ಎನ್ನುತ್ತಾರೆ.
ಯುರೋಪಿಯನ್ ದೇಶಗಳಲ್ಲಿ ಹಳದಿ ಬಣ್ಣವನ್ನು ಪ್ರೀತಿಸಿದರೆ, ನಮ್ಮ ದೇಶದಲ್ಲಿ ಹಳದಿ ಬಣ್ಣವನ್ನು ಒರಟು ಜನರ ಬಣ್ಣ ಎಂದು ಬಿಂಬಿಸುತ್ತಾರೆ. ಹಳದಿ ಬಣ್ಣ ಇಷ್ಟ ಪಡುವವರು ಹೆಚ್ಚು ಅನಾರೋದ್ಯದಿಂದ ಬಳಲುತ್ತಿರುತ್ತಾರೆ ಎಂದು ಸಹ ಹೇಳಲಾಗುತ್ತದೆ. ಆಧ್ಯಾತ್ಮಿಕತೆಯಲ್ಲಿ ಹಳದಿ ಬಣ್ಣ ನಿಮ್ಮ ಒಳಗೆ ಕುಳಿತಿರುವ “ನಾನು”ವಿನ ಬಣ್ಣ ಎಂದು ಹೇಳಲಾಗುತ್ತದೆ. “ನಾನು” ಮಗುವಿದ್ದಹಾಗೆ. ಒಂದು ಕಾಲದಲ್ಲಿ ಬೌದ್ಧರ ನೆಚ್ಚಿನ ಬಣ್ಣ ಹಳದಿಯಾಗಿತ್ತು. ವಾರಿಸಿ ಪರಂಪರೆಯ ಸೂಫಿಗಳು ಹಳದಿ ಬಣ್ಣದ ಬಟ್ಟೆಗಳನ್ನು ಬಹಳವಾಗಿ ಬಳಸುತ್ತಾರೆ. ಬಸಂತ್ ಬಹಾರ್ ಎಂಬ ಹಳದಿ ಹೂಗಳ ಹಬ್ಬ ಪ್ರತಿವರ್ಷ ದೆಹಲಿಯ ಹಜ್ರತ್ ನಿಜಾಮುದ್ದೀನ್ ದರ್ಗಾದಲ್ಲಿ ನಡೆಯುತ್ತದೆ.
ದಕ್ಷಿಣ ಭಾರತದಲ್ಲೂ ಸಹ ಹಳದಿ ಬಣ್ಣವನ್ನು ಹೆಚ್ಚಾಗಿ ಬಳಸಲಾಗುತ್ತದೆ. ತಮಿಳರು ಮತ್ತು ಕನ್ನಡಿಗರು ಹಳದಿ ಬಣ್ಣವನ್ನು ತಮ್ಮ ಬಾವುಟಗಳಲ್ಲಿ ಬಳಸುತ್ತಾರೆ. ಶಾಲಾಕಾಲೇಜು ಬಸ್ಸುಗಳು, ಬಾಡಿಗೆ ಕಾರುಗಳು, ಸೈನ್ ಬೋರ್ಡುಗಳು ಹಳದಿ ಬಣ್ಣದಲ್ಲಿ ಕಾಣಸಿಗುತ್ತವೆ. ಅಂದರೆ ಹಳದಿ ಬಣ್ಣ ಜನರ ಕಣ್ಣುಗಳಿಗೆ ಒಂದು ಸಂದೇಶ ರವಾನೆ ಮಾಡುತ್ತದೆ. “ನಾನು” ಇಲ್ಲಿದ್ದೇನೆ. ಹಳದಿ ಬಣ್ಣ ನೋಡಿದಾಕ್ಷಣ ಇದು ಶಾಲೆಯ ಬಸ್ಸು ಎಂದು ಹೇಳಬಹುದು.
ಬಿಳಿ ಬಣ್ಣ ಎಲ್ಲರು ಕಂಡಂತೆ ಕಣ್ಣಿಗೆ ತಂಪು ಮತ್ತು ಶಾಂತಿಯನ್ನು ನೀಡುತ್ತದೆ. ಪ್ರಪಂಚದಲ್ಲಿದ್ದುಕೊಂಡು ಪ್ರಪಂಚವನ್ನು ಮನಸ್ಸಿಗೆ ಅಂಟಿಸಿಕೊಳ್ಳದವರು ಬಿಳಿ ಬಣ್ಣ ಇಷ್ಟ ಪಡುತ್ತಾರೆ. ನೀರುಕೋಳಿ ನೀರಿನಲ್ಲಿದ್ದರೂ, ಹೊರ ಬಂದಾಗ ನೀರನ್ನು ಅಂಟಿಸಿಕೊಂಡಿರುವುದಿಲ್ಲವಲ್ಲ ಹಾಗಿರಬೇಕು ಮನುಜನ ಮನಃಸ್ಥಿತಿ. ಪ್ರಪಂಚ ನಶ್ವರ, ಸಾವು ಖಚಿತ, ಒಂದು ದಿನ ಎಲ್ಲವನ್ನು ಬಿಟ್ಟು ಹೋಗಬೇಕು. ಆದುದರಿಂದ ಲೌಕಿಕ ಅತಿಯಾಸೆಗಳಿಂದ ಮನಸ್ಸನ್ನು “ಶುದ್ಧ”ವಾಗಿಟ್ಟುಕೊಳ್ಳಬೇಕು ಎಂಬುದರ ಸಂಕೇತವೇ ಬಿಳಿ ಬಣ್ಣ. ಆದರೆ ಕೆಲ ರಾಜಕೀಯ ವ್ಯಕ್ತಿಗಳು ಬಿಳಿ ಬಟ್ಟೆ ತೊಟ್ಟು ಕಪ್ಪು ಕೆಲಸಗಳನ್ನು ಮಾಡುತ್ತಾರಲ್ಲ ಅವರ ಮೇಲೆ ಬಿಳಿ ಬಣ್ಣದ ಪ್ರಭಾವ ಬೀಳುವುದಿಲ್ಲವೇ ? ನಾನು ಸಹ ಉತ್ತರವನ್ನು ಹುಡುಕುತ್ತಿದ್ದೇನೆ.
ಋಷಿಮುನಿಗಳು, ಸಾಧುಸಂತರು ಮತ್ತು ಸೂಫಿಗಳು ಕೇಸರಿ, ಹಸಿರು ಮತ್ತು ಬಿಳಿ ಬಣ್ಣಗಳನ್ನು ಧರಿಸುತ್ತಾರಲ್ಲ, ಆ ಬಣ್ಣಗಳ ಸಂಕೇತ ಏನು ? ಅಡಿಷಡ್ವರ್ಗಗಳನ್ನು ಗೆಲ್ಲಲು, ಗೆದ್ದವರು ಆ ಬಣ್ಣಗಳನ್ನು ಉಪಯೋಗಿಸಿ ಆಧ್ಯಾತ್ಮಿಕ ಸಾಧನೆಗಳನ್ನು ಮಾಡುತ್ತಿದ್ದರು. ಈಗ ಆ ಬಣ್ಣಗಳು ಎಷ್ಟು ದುರುಪಯೋಗ ಆಗುತ್ತಿವೆ ಎಂದರೆ ಅದನ್ನು ಹೇಳಲೂ ಸಹ ನಾಚಿಕೆಯಾಗುತ್ತದೆ. ಕಾಮ, ಕ್ರೋಧ, ಲೋಭ, ಮದ, ಮೋಹ, ಮಾತ್ಸರ್ಯ ಎಲ್ಲಾ ಕಡೆ ತಾಂಡವಾಡುತ್ತಿದೆ.
ಮನುಷ್ಯನ ವ್ಯಕ್ತಿತ್ವ ತಿಳಿದುಕೊಳ್ಳಬೇಕಾದರೆ ಆತನ ಇಷ್ಟದ ಬಣ್ಣ ತಿಳಿದುಕೊಳ್ಳಿ. ಸ್ವಲ್ಪ ಮಟ್ಟಿಗಾದರೂ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸಹಾಯವಾಗಬಲ್ಲದು. ಅದೆಲ್ಲಾ ಸರಿ ಕ್ರೈಸ್ತ ಧರ್ಮದ ನನ್ ಗಳು ಅಂದರೆ ಸನ್ಯಾಸಿನಿಯರು ಏಕೆ ಬೂದಿ ಬಣ್ಣದ ಬಟ್ಟೆಗಳನ್ನು ಧರಿಸಿರುತ್ತಾರೆ ? ಸದ್ಯಕ್ಕೆ ಸಾಕು, ಮುಂದಿನ ದಿನಗಳಲ್ಲಿ ಮಾತಾಡೋಣ…
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.