www.vknews.in) : ಯಾವ ರಂಗಕ್ಕೇ ಇಳಿಯಲಿ, ಆ ರಂಗದಲ್ಲಿ ತನ್ನದೇ ಆದ ಶೈಲಿ, ಛಲ, ಸತತ ಪ್ರಯತ್ನದ ಮೂಲಕ ಆ ರಂಗದಲ್ಲಿ ಯಶ: ಸಾಧಿಸುವ ಛಲಗಾರ ಡಿ. ಐ. ಅಬೂಬಕರ್ ಕೈರಂಗಳ ಅವರ ಹೆಸರು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪ್ರಸಿದ್ಧ.
ಕರ್ನಾಟಕದ ಮುಸ್ಲಿಮರಿಗೆ ಕನ್ನಡ ಸಾಹಿತ್ಯ ಓದುವ ರುಚಿ ಹತ್ತಿಸಿದ ಕೀರ್ತಿ ಅಲ್ ಅನ್ಸಾರ್ ವಾರ ಪತ್ರಿಕೆಯದ್ದು. ಈ ಪತ್ರಿಕೆಗೆ ಭಂಡವಾಳ, ಬರಹಗಳ ಸಂಪನ್ಮೂಲ ವ್ಯಕ್ತಿಗಳು ಬೇರೆ ಇದ್ದಿರಬಹುದು, ಆದರೆ ಪತ್ರಿಕೆಯನ್ನು ರಾಜ್ಯದ ಮೂಲೆಮೂಲೆಗೂ ತಲುಪುವಂತೆ ಮಾಡಿದುದರಲ್ಲಿ ಹಾಗೂ ಅದಕ್ಕೆ ಜಾಹೀರಾತು ಮೂಲಕ ಆರ್ಥಿಕ ಆಸರೆ ಒದಗಿಸುವಲ್ಲಿ ಡಿ. ಐ. ಅವರ ಪ್ರಯತ್ನ, ಛಲ, ದುಡಿಮೆ ಬಹಳ ಮುಖ್ಯವಾಗಿತ್ತು.
ತನ್ನ ವಿನಯ, ನಯಗಾರಿಕೆ, ಸಹೃದಯತೆ, ಒಡನಾಟದ ಮಾಧುರ್ಯದಿಂದ ಎಂತಹವರನ್ನೂ ಆಪ್ತರನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯ ಅವರಿಗಿದೆ. ಕನ್ನಡ ಧಾರ್ಮಿಕ ಸಾಹಿತ್ಯ ರಂಗದಲ್ಲಿ ಆರಂಭಿಸಿ ಸಾರಸ್ವತ ಸಾಹಿತ್ಯ ರಂಗದಲ್ಲೂ ತನ್ನ ಛಾಪು ಮೂಡಿಸಿದ್ದ ಇವರು ರಾಜ್ಯದ ಹೆಸರಾಂತ ಕವಿ, ಸಾಹಿತಿ, ಮೇಧಾವಿಗಳ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಅದೆಷ್ಟೊ ಉದಯೋನ್ಮುಖ ಸಾಹಿತಿಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ.
ಅಲ್ ಮುನೀರ್ ಎಂಬ ಪತ್ರಿಕೆಯಿಂದ ಆರಂಭಿಸಿ ಮುಂದೆ ಅಲ್ ಅನ್ಸಾರ್, ಮೊಯಿಲಾಂಜಿ, ಮದರಂಗಿ ಮುಂತಾದ ಜನಪ್ರಿಯ ಪತ್ರಿಕೆಗಳಿಗೂ ಹಲವಾರು ಪುಸ್ತಕಗಳಿಗೂ ಪ್ರಕಾಶಕರಾಗಿ, ಬೆನ್ನೆಲುಬಾಗಿ ಸುಮಾರು ಇಪ್ಪತ್ತೊಂಬತ್ತು ವರ್ಷಗಳ ಕಾಲ ತನ್ನ ಜೀವನದ ಅಮೂಲ್ಯ ಸಮಯಗಳನ್ನು ಸಾಹಿತ್ಯ ಮತ್ತು ಜನಸೇವೆಗಾಗಿ ಕಳೆದು ಇತ್ತೀಚೆಗೆ ಉದ್ಯಮ ರಂಗದಲ್ಲಿ ಸೇವಾ ನಿರತರಾಗಿದ್ದಾರೆ.
ಅಬೂಬಕರ್ ಕೈರಂಗಳ ಅವರು ಮೇಲುಸ್ತುವಾರಿ ವಹಿಸಿಕೊಂಡಿರುವ ತಲಪಾಡಿಯಲ್ಲಿರುವ ಕುಡಿಯುವ ಶುದ್ಧಜಲದ ಆಕ್ಸಿಬ್ಲೂ ಕಂಪೆನಿ ಇದೀಗ ಜನಪ್ರಿಯತೆ ವಿಸ್ತರಿಸುತ್ತಾ ಹೋಗುತ್ತಿದೆ. ಡಿ. ಐ. ಅವರು ಈ ಕಂಪೆನಿಯ ಜನರಲ್ ಮ್ಯಾನೇಜರಾಗಿ ದುಡಿಯುತ್ತಿದ್ದಾರೆ.
ಅಲ್ಲಾಹನ ದೀನಿಗಾಗಿ ಧಾರ್ಮಿಕ ಅಕ್ಷರ, ಸೇವಾ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ದುಡಿದುದಕ್ಕೆ ಅಲ್ಲಾಹು ಕೊಡುತ್ತಿರುವ ಭೌತಿಕ ಸತ್ಪಲ ಎಂಬಂತೆ ಇದೀಗ ಡಿ. ಐ. ಅಬೂಬಕರ್ ಕೈರಂಗಳ ಅವರು ಜೀವನ ಮಟ್ಟದಲ್ಲೂ ಅನುಕೂಲಕರ ಸ್ಥಿತಿಯಲ್ಲಿದ್ದಾರೆ. ಮಂಜನಾಡಿ ಸಮೀಪದ ಕಲ್ಕಟ್ಟ ಎಂಬಲ್ಲಿ ರಸ್ತೆ ಬದಿಯಲ್ಲೇ ಎಲ್ಲಾ ಆಧುನಿಕ ಸೌಲಭ್ಯಗಳಿರುವ ಭವ್ಯ ಮನೆಯಿದೆ. ಎಲ್ಲಾ ದೃಷ್ಟಿಯಿಂದಲೂ ನಿಶ್ಚಿಂತೆಯ ಬದುಕು.
ಕುಟುಂಬ ಸಂಬಂಧಗಳ ಬೆಸುಗೆಗೆ ಬಹಳ ಪ್ರಾಧಾನ್ಯ ಕೊಡುತ್ತಿರುವ ಡಿ. ಐ. ಕೈರಂಗಳ ಅವರು ಕುಟುಂಬಗಳ ಸಮ್ಮಿಲನದ ಕಾರ್ಯದಲ್ಲೂ ಯಶಸ್ವಿಯಾಗಿದ್ದಾರೆ. ಅವರ ಈಗಿನ ಅನುಕೂಲಕರ ಸ್ಥಿತಿಗೆ ಇದೂ ಒಂದು ಕಾರಣವಾಗಿರಬಹುದು. ಕುಟುಂಬ ಸಂಬಂಧ ಕೂಡಿಸುವವರಿಗೆ ಬರಕತ್ ಇರುತ್ತದೆ ಎಂದು ತಾನೇ ಮುತ್ತು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಸತ್ವನುಡಿ.
ಆದರೆ ಬಾಲ್ಯದಿಂದಲೇ ಮೈಗೂಡಿಸಿಕೊಂಡು ರಕ್ತಗತವಾಗಿರುವ ಅವರ ಸಾಹಿತ್ಯ ಸೊಗಡು ಅವರನ್ನು ಬಿಟ್ಟಗಲುವುದಿಲ್ಲ. ಉದ್ಯಮ ರಂಗದ ಬ್ಯುಸಿಯ ನಡುವೆಯೂ ಅವರ ಸಾಹಿತ್ಯಿಕ ತುಡಿತ ಮಿಡಿಯುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಅವರ ಅತ್ಯುತ್ತಮ ಬರಹಗಳು ಆಗಾಗ ಕಾಣಿಸಿಕೊಳ್ಳುತ್ತಲಿವೆ. ಅವರ ಬರಹಗಳಲ್ಲಿ ಸಾಮಾಜಿಕ ಕಳಕಳಿ, ದೀನರ ಮೇಲಿನ ಎಂಪಥಿ ಎದ್ದು ಕಾಣುತ್ತವೆ.
ಹತ್ತು ವರ್ಷಗಳ ಕಾಲ ಇವರು ಬಹಳ ಯಶಸ್ವಿಯಾಗಿ ಮುನ್ನಡೆಸಿದ್ದ ಮದರಂಗಿ ಮಾಸ ಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ಮನದಾಳ ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. ಪ್ರತಿ ತಿಂಗಳು ಜನರು ಅದನ್ನು ಓದಲಿಕ್ಕೆಂದೇ ಕಾಯುತ್ತಿದ್ದರು. ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮುಂತಾದ ಬದುಕಿನ ವಿವಿಧ ರಂಗಗಳನ್ನು ತಾನು ಕಾಣುತ್ತಿರುವ ಅನುಭವಗಳ ಆಧಾರದಲ್ಲಿ ಬರೆಯುತ್ತಿದ್ದ ಆ ಬರಹಗಳಲ್ಲಿ ಮಾರ್ಗದರ್ಶನವಿತ್ತು, ಉತ್ತಮ ಸಾಧನೆಗಳಿಗೆ ಅಭಿನಂದನೆ, ಪ್ರೋತ್ಸಾಹಗಳಿತ್ತು, ತಪ್ಪುಗಳಿಗೆ ಹೂವಿನಿಂದ ಹೊಡೆದ ರೀತಿಯ ನವಿರಾದ ವಿಮರ್ಶೆಯಿತ್ತು, ಎಲ್ಲಾ ರಂಗದಲ್ಲೂ ಒಂದು ಸ್ಪಷ್ಟ ಧೋರಣೆಯಿತ್ತು. ಕನ್ನಡ ನಾಡಿನ ಜನತೆ ಆ ಬರಹವನ್ನು ಎದೆಗಾನಿಸಿ ಕೊಳ್ಳಲು ಕಾರಣ ಆ ಬರಹಗಳ ಇಂತಹ ಗುಣಗಳಾಗಿದ್ದವು. ಅಷ್ಟೇ ನವಿರಾದ ಭಾಷೆ ಕೂಡಾ.
ಸುಮಾರು ಇನ್ನೂರರಷ್ಟಿರುವ ಆ ಮನದಾಳ ಬರಹವನ್ನು ಒಟ್ಟಾಗಿಸಿ ಪುಸ್ತಕ ರೂಪದಲ್ಲಿ ಹೊರತರಬೇಕೆಂಬುದು ತುಂಬಾ ಜನರ ಬೇಡಿಕೆ. ಮಾನ್ಯ ಡಿ. ಐ. ಅವರು ಈ ಕೆಲಸವನ್ನು ಆದಷ್ಟು ಬೇಗ ಮಾಡಬೇಕೆಂದು ಕೇಳಿಕೊಳ್ಳುತ್ತಾ ಆ ಸುಯೋಗ ತಮಗೆ ಒದಗಿ ಬರಲಿ ಎಂದು ಆತ್ಮಾರ್ಥವಾಗಿ ಪ್ರಾರ್ಥಿಸುತ್ತಿದ್ದೇನೆ.
ಮಾನ್ಯ ಡಿ. ಐ. ಯವರು ಇದೀಗ ಜನಪ್ರಿಯ ಆಕ್ಸಿಬ್ಲೂ ಕಂಪೆನಿಯ ಮೇಲುಸ್ತುವಾರಿಯಲ್ಲಿ ಬಿರುಸಿನ ಚಟುವಟಿಕೆಯಲ್ಲಿದ್ದರೂ ಕವಿ, ಸಾಹಿತಿಗಳೊಡನೆ ಒಡನಾಟ, ಪ್ರತಿಭಾವಂತರೊಡನೆ ಸಾಂಗತ್ಯ ಹಾಗೂ ಕನ್ನಡ ನಾಡುನುಡಿ, ಸಂಸ್ಕೃತಿಗಳಿಗೆ ಸಂಬಂಧ ಪಟ್ಟ ಕಾರ್ಯಗಳಲ್ಲಿ ಅವರ ಒಡನಾಟ ಇದ್ದೇ ಇರುತ್ತದೆ.
ಡಿ. ಐ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ಶುಭ ಮುಂಜಾನೆ ಎಂಬ ಶೀರ್ಷಿಕೆಯಲ್ಲಿ ಕೊಡುತ್ತಾ ಬರುತ್ತಿರುವ ದಿನಕೊಂದು ನೀತಿ ಮಾತು ಇಂದಿನ ದಿನಕ್ಕೆ ನೂರರ ಗಡಿ ಮುಟ್ಟುತ್ತದೆ. ಮನುಷ್ಯನ ಬಾಳಿಗೆ ದಾರಿದೀಪವಾಗಬಲ್ಲಂತಹ ಅಮೋಘ ನುಡಿಗಳಿವು.
ಉದ್ಯಮದ ಓಡಾಟದ ನಡುವೆಯೂ ಇಂತಹದ್ದಕ್ಕೆಲ್ಲ ಸಮಯ ಹೊಂದಿಸಿಕೊಳ್ಳುತ್ತಿರುವುದು ಅವರ ಸಾಹಿತ್ಯ, ಸಾಮಾಜಿಕ ರಂಗದ ಮೇಲಿನ ಎಂದೂ ಬತ್ತದ ತುಡಿತಕ್ಕೆ ಸಾಕ್ಷಿ. ಅಲ್ಲಾಹನು ಅವರಿಗೆ ಆರೋಗ್ಯ ಪೂರ್ಣ ದೀರ್ಘಾಯುಷ್ಯ ಕರುಣಿಸಲಿ, ಅವರಿಗೂ ಕುಟುಂಬಕ್ಕೂ ಇಹಪರ ಸುಖ ಸೌಭಾಗ್ಯಗಳನ್ನು ದಯಪಾಲಿಸಲಿ, ಅವರ ಸಾಹಿತ್ಯ, ಸಾಮಾಜಿಕ ಸೇವೆಯ ಸವಿಯನ್ನು ಇನ್ನೆಷ್ಟೋ ಕಾಲದ ವರೆಗೆ ಸವಿಯುವ ಸೌಭಾಗ್ಯವನ್ನು ಸಮಾಜಕ್ಕೆ ಸರ್ವ ಶಕ್ತನು ಸನ್ಮಾನಿಸಲೆಂದು ಸರ್ವೇಶ್ವರನಲ್ಲಿ ಸವಿನಯ ಪ್ರಾರ್ಥಿಸುತ್ತಾ ನೂರರ ಗಡಿ ಮುಟ್ಟಿದ ಅವರ ” ಶುಭ ಮುಂಜಾನೆ” ಗೆ ಸುಮಧುರ ಶುಭಾಶಯಗಳು.
– ರಫೀಖ್ ಅಮ್ಜದಿ, ಮಾವಿನ ಕಟ್ಟೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.