ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಅಗತ್ಯತೆಗಿಂತ ಹೆಚ್ಚಾಗಿ ಬಡಿಸಿಕೊಂಡ ಆಹಾರ ಪದಾರ್ಥ , ಉಪಯೋಗಿಸದ ಹಣ್ಣು ಮತ್ತು ತರಕಾರಿ ಹಾಗೂ ಉಪಯೋಗಕ್ಕಿಂತ ಹೆಚ್ಚುವರಿಯಾದ ಆಹಾರ ಧಾನ್ಯಗಳನ್ನು ವ್ಯರ್ಥ ಮಾಡುವುದು ಹಸಿದುಕೊಂಡಿರುವ ಮತ್ತೊಬ್ಬರ ಊಟ ಕಸಿದಂತೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಐಸಿಎಆರ್ – ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ , ಬಾಗಲಕೋಟೆ , ಭಾರತೀಯ ಕೃಷಿ ಅನುಸಂಧಾನ ಪರಿಷತ್ತು , ನವದೆಹಲಿ , ಐಸಿಎಆರ್ – ಕೃಷಿ ವಿಜ್ಞಾನ ಕೇಂದ್ರ , ಕೋಲಾರ ಇವರ ಸಹಯೋಗದಲ್ಲಿ ರೈತರ ವಸತಿ ನಿಲಯ ಹಾಗೂ ಟೊಮ್ಯಾಟೊ ಸಂಸ್ಕರಣಾ ಘಟಕದ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಂದು ವರ್ಷದ ಹಿಂದೆ ಜಿಲ್ಲಾ ಪ್ರವಾಸ ಮಾಡಿ ಈ ಆವರಣದಲ್ಲಿ ಆಡಳಿತ ಕಛೇರಿ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ರೈತರ ಮನವಿ ಮೇರೆಗೆ ಇಲ್ಲಿನ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ಪ್ರದೇಶದಲ್ಲಿ ಒಂದು ಟೊಮ್ಯಾಟೊ ಸಂಸ್ಕರಣಾ ಘಟಕದ ಅಗತ್ಯವಿದ್ದು , ಘಟಕದ ಸ್ಥಾಪನೆಗೆ ಅಗತ್ಯವಿರುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿತ್ತು.
ಇಂದು ಸರಿಯಾಗಿ ಒಂದು ವರ್ಷದ ನಂತರ ಸದರಿ ಘಟಕಕ್ಕೆ ಅಡಿಗಲ್ಲು ಹಾಕುವ ಸೌಭಾಗ್ಯ ನನ್ನಾದಗಿದೆ. ಜಿಲ್ಲೆಯಲ್ಲಿ ಕೇವಲ ಮಳೆ ಆಧಾರಿತ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬಹಳ ಕಷ್ಟಪಟ್ಟು ನೀರನ್ನು ಹೊಂಚಿಕೊಂಡು ಮಾವು ಮತ್ತು ಟೊಮ್ಯಾಟೊವನ್ನು ಅತಿ ಹೆಚ್ಚು ಬೆಳೆಯುವ ಜಿಲ್ಲೆ ಇದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದಿನ ಒಂದಕ್ಕೆ 4 ಟನ್ಗಳ ಟೊಮ್ಯಾಟೊವನ್ನು ಸಂಸ್ಕರಿಸುವ ಸಂಸ್ಕರಣಾ ಘಟಕವನ್ನು ಅಂದಾಜು 4 ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಇಂದು ಅಡಿಗಲ್ಲು ಹಾಕಲಾಗಿದೆ . ಆದರೆ ಇದು ಕೇವಲ ಆರಂಭ ಮಾತ್ರ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡಲು ಬದ್ದವಾಗಿದ್ದು , ಜಿಲ್ಲಾಡಳಿತ ಈ ಕಾರ್ಯವನ್ನು ಶೀಘ್ರದಲ್ಲಿ ಮುಗಿಸಿ ಲೋಕಾರ್ಪಣೆ ಮಾಡಲು ಉತ್ಸುಕವಾಗಿದೆ ಎಂದು ಹೇಳಿದರು.
ಟೊಮ್ಯಾಟೊ ಮತ್ತು ಮಾವು ಬೆಳೆಗಳನ್ನು ಅತಿ ಹೆಚ್ಚು ಬೆಳೆಯುವ ಪ್ರದೇಶ ಇದಾಗಿದ್ದು , ದಿನ ಒಂದಕ್ಕೆ 4 ಟನ್ಗಳ ಟೊಮ್ಯಾಟೊ ಸಂಸ್ಕರಣೆ ಕೇವಲ ಶೇ .10 ರಷ್ಟು ಉತ್ಪಾದನೆಯನ್ನು ಮಾತ್ರ ಬಳಸಿಕೊ೦ಡಂತಾಗುತ್ತದೆ. ಆದರಿಂದ ಟೊಮ್ಯಾಟೊ ಮತ್ತು ಮಾವು ಬೆಳೆಯುವ ಅತಿ ಹೆಚ್ಚು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿಯೂ ಸಹ ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದರೆ ಆಹಾರ ಪದಾರ್ಥಗಳು ವ್ಯರ್ಥವಾಗು ವುದನ್ನು ತಡೆಗಟ್ಟಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ , ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಯೋಜನೆಯಡಿ 26 ಆಹಾರ ಸಂಸ್ಕರಣಾ ಘಟಕಗಳಿಗೆ ಮ೦ಜೂರಾತಿ ನೀಡಲಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಡ್ರಾಗನ್ ಹಣ್ಣು ಮತ್ತು ಸೀಬೆ ಹಣ್ಣುಗಳಂತಹ ಅಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಯಶಸ್ಸನ್ನು ಸಾಧಿಸಲಾಗಿದೆ ಎಂದು ತಿಳಿಸಿದರು.
ಕೋಲಾರ ನಗರದ ಹೊರವಲಯದಲ್ಲಿ 18 ಎಕರೆಗಳ ವಿಸ್ತೀರ್ಣದಲ್ಲಿರುವ ಎ.ಪಿ.ಎಂ.ಸಿ ಮಾರುಕಟ್ಟೆಯು ಟೊಮ್ಯಾಟೊ ವಹಿವಾಟಿಗೆ ಕಡಿಮೆಯಾಗಿದ್ದು ಟೊಮ್ಯಾಟೊ ಬೆಳೆಯುವ ರೈತರ ಹಿತಾಸಕ್ತಿಯಿಂದ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ 37 ಎಕರೆಗಳ ವಿಸ್ತೀರ್ಣದಲ್ಲಿ ಹೊಸ ಎ.ಪಿ.ಎಂ.ಸಿ ಮಾರುಕಟ್ಟೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರು ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಪಿ.ಹೆಚ್.ಪೂಜಾರ ಮಾತನಾಡಿ , ಎಲ್ಲಾ ವಿ.ವಿ.ಗಳಿಗೆ ನೀಡುವಂತೆ ತೋಟಗಾರಿಕೆ ಸಂಶೋಧನೆಗಳಿಗೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನವನ್ನು ನೀಡಿದರೆ ತೋಟಗಾರಿಕೆ ಬೆಳೆಗಳ ಅಭಿವೃದ್ಧಿ , ಹೊಸ ಹೊಸ ವೈಜ್ಞಾನಿಕ ಅವಿಷ್ಕರಣೆ , ಬಿತ್ತನೆ ಬೀಜಗಳ ಮೇಲಿನ ಸಂಶೋಧನೆ ಮುಂತಾದ ಅಭಿವೃದ್ಧಿ ಪರ ಕಾರ್ಯಗಳಿಗೆ ಅನುದಾನ ಕೊರತೆ ಉಂಟಾಗದು ಎಂದು ತಿಳಿಸಿದರು.
ಐ.ಸಿ.ಎ.ಆರ್ – ಕೃಷಿ ತಂತ್ರಜ್ಞಾನ ಅನ್ವಯಿತ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ | ವಿ.ವೆಂಕಟಸುಬ್ರಮಣಿಯನ್ ಮಾತನಾಡಿ ತೋಟ ಗಾರಿಕೆ ಆಧಾರದ ಬೆಳೆಗಳನ್ನು ಬೆಳೆಯಲು ಕೇಂದ್ರ ಸರ್ಕಾರವು ಸದಾ ಪ್ರೋತ್ಸಾಹ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ , ಈ ಜಿಲ್ಲೆಗೆ ನಾನು ಶಾಸಕನಾದ ಸಂದರ್ಭದಲ್ಲಿ ಸ್ತುತ ಕಾರ್ಯಕ್ರಮ ನಡೆಯುತ್ತಿರುವ ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಮಾಡಿ ಸ್ಥಳೀಯ ಜನತೆಗೆ ಹಾಗೂ ರೈತರ ಮಕ್ಕಳಿಗೆ ಕೃಷಿ ಸಂಬಂಧಿತ ಸಂಶೋಧನೆಗಳನ್ನು ಮಾಡಲು ಅನುಕೂಲವಾದ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಯತ್ನಿಸಿದ್ದಾಗಿ ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ , ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜು , ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ || ಕೆ.ಎಂ.ಇಂದಿರೇಶ , ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ || ಎಸ್.ಐ.ಅಥಣಿ , ಐಸಿಎಆರ್ – ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಕೆ.ತುಳಸಿರಾಮ್ , ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ || ಹೆಚ್.ಎಸ್.ಶಿವ ರಾಮು , ನಿವೃತ್ತ ಅಧಿಕಾರಿ ಮಾಚೇಗೌಡ , ಕೃಷಿ ಇಲಾಖೆಯ ಉಪನಿರ್ದೇಶಕಿ ಪಂಕಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.