ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಹಲವು ದಶಕಗಳ ಇತಿಹಾಸವುಳ್ಳ ಕೆ.ಜಿ.ಎಫ್ ಸಾರ್ವಜನಿಕ ಆಸ್ಪತ್ರೆಗೆ ಶೀಘ್ರದಲ್ಲಿ ಕ್ಯಾಫಲ್ಯಾಬ್ ಒದಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ// ಕೆ.ಸುಧಾಕರ್ ಅವರು ಭರವಸೆ ನೀಡಿದರು.
ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರಿಂಗ್ ಘಟಕದ ಸಹಯೋಗದಲ್ಲಿ ಕೆ.ಜಿ.ಎಫ್ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ತುರ್ತು ಚಿಕಿತ್ಸಾ ಘಟಕ ಹಾಗೂ ಒಳರೋಗಿಗಳ ವಿಭಾಗದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 1951 ರ ಆಗಸ್ಟ್ 11 ರಂದು ಮೈಸೂರಿನ ಮಹಾರಾಜಾ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಸ್ಥಾಪಿಸಿದ ಕೆಜಿಎಫ್ ನಗರದ ಸಿವಿಲ್ ಆಸ್ಪತ್ರೆಯನ್ನು ಇಂದು 138 ಹಾಸಿಗೆಗಳ ಸಕಲ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದೆ. ಇದರಲ್ಲಿ 24 ಹಾಸಿಗೆಗಳು ಐ.ಸಿ.ಯು ಘಟಕದಲ್ಲಿ ಸ್ಥಾಪಿಸಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹಾಗೂ ರೋಗಿಯ ಉಪಚಾರಕರಿಗೆ ಆರೋಗ್ಯಕರ ಆಹಾರ ನೀಡುವ ಉದ್ದೇಶದಿಂದ ವಿಶಾಲವಾದ ಅಡುಗೆ ಕೋಣೆ , ಒಳರೋಗಿಗಳ ಜೆಡೀಟ್ , ಹೊದಿಕೆ ಮುಂತಾದ ಪರಿಕರಗಳನ್ನು ಒಗೆಯಲು ಲಾಂಡ್ರಿ ವಿಭಾಗಗಳನ್ನು ಸಹ ಇಂದು ಉದ್ಘಾಟನೆ ಮಾಡಲಾಗಿದೆ ಎಂದು ಹೇಳಿದರು.
ಈಗಾಗಲೇ ತಾಲ್ಲೂಕಿಗೆ ಬಿ.ಪಿ.ಹೆಚ್ ಲ್ಯಾಬೋರೆಟರಿ , ಐಸೋಲೇಷನ್ ವಾರ್ಡ್,19 ಐ.ಸಿ.ಯು ಘಟಕಗಳು,6ಕೆ.ಎಲ್ ಆಕ್ಸಿಜನ್ ಪ್ಲಾಂಟ್ ಹಾಗೂ ನೂತನ ಯೋಜನೆಯಾದ ನಮ್ಮ ಕ್ಲಿನಿಕ್ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ನಮ್ಮ ಕ್ಲಿನಿಕ್ಗಳಲ್ಲಿ ಉಚಿತವಾಗಿ 12 ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಆಯುಷ್ಮತಿ ಕ್ಲಿನಿಕ್ಗಳನ್ನು ತೆರೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಈ ಭಾಗದ ಜನರು ಶ್ರಮಜೀವಿಗಳು ಅವರ ಆರೋಗ್ಯದ ಕಾಳಜಿ ಮಾಡಬೇಕಾದದ್ದು , ಅಧಿಕಾರದಲ್ಲಿರುವ ಎಲ್ಲಾ ಸರ್ಕಾರಗಳ ಕರ್ತವ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವನ್ನು ಕೆ.ಜಿ.ಎಫ್ ಭಾಗದ ಜನರ ಅಭಿವೃದ್ಧಿಗಾಗಿ ಹಾಗೂ ಇಲ್ಲಿನ ಕಾರ್ಮಿಕರಿಗಾಗಿ ಕೈಗಾರಿಕೆಗಳನನ್ನು ಸ್ಥಾಪಿಸಲು ಬಿ.ಜಿ.ಎಂ.ಎಲ್ ನಿಂದ ವಾಪಸ್ ಪಡೆದಿರುವ 970 ಎಕರೆ ವಿಸ್ತೀರ್ಣದ ಭೂಮಿಯನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಈ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಇಲ್ಲಿಗೆ ವೈದ್ಯಕೀಯ ಕಾಲೇಜಿನ ಅಗತ್ಯವಿದ್ದು , ಕೇಂದ್ರ ಸರ್ಕಾರದಿಂದ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದರು.
ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ// ರೂಪಕಲಾ ಎಂ.ಶಶಿಧರ್ ಮಾತನಾಡಿ ಕ್ಷೇತ್ರದ ಜನತೆಯ ಬಹುದಿನಗಳ ಬೇಡಿಕೆ ಇಂದು ಪೂರೈಸಿದೆ. ಆಸ್ಪತ್ರೆಯಲ್ಲಿ ಸುಸಜ್ಜಿತ ಕಟ್ಟಡ ಇಂದು ನಿರ್ಮಾಣವಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಈ ಭಾಗದ ಜನತೆ ಇಲ್ಲಿನ ಚಿನ್ನದ ಗಣಿಗಾರಿಕೆಯನ್ನು 2001 ರಲ್ಲಿ ಮುಚ್ಚಿದ ನಂತರ ಅದೇ ಕಸುಬಾಗಿದ್ದ , ಜನರು ಪ್ರಸ್ತುತ ಬೇರೆ ಬೇರೆ ಜಿಲ್ಲೆಗಳಲ್ಲಿ ಉದ್ಯೋಗಕ್ಕಾಗಿ ವಲಸೆ ಹೋಗಿರುತ್ತಾರೆ. ಅವರುಗಳನ್ನು ಪುನಃ ಕೆ.ಜಿ.ಎಫ್ಗೆ ಕರೆತರುವ ಉದ್ದೇಶದಿಂದ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಸುಪರ್ದಿನಲ್ಲಿರುವ 970 ಎಕರೆಗಳ ಜಾಗವನ್ನು ಪ್ರಸ್ತುತ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.
ಸದರಿ ಜಮೀನಿನಲ್ಲಿ ಮೆಡಿಕಲ್ ಕಾಲೇಜು , ನರ್ಸಿಂಗ್ ಕಾಲೇಜು ಅಥವಾ ಯಾವುದೇ ಆರೋಗ್ಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಮಂಜೂರು ಮಾಡಿಸಿಕೊಡಲು ಸಚಿವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೆ.ಜಿ.ಎಫ್ ನಗರಸಭೆಯ ಅಧ್ಯಕ್ಷ ವಲ್ಲಲ್ ಮುನಿಸ್ವಾಮಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ// ಇಂದುಮತಿ.ಎಂ . ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ// ಧರಣೀದೇವಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ// ಜಗದೀಶ್ , ಕೆ.ಜಿ.ಎಫ್ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ// ಸುರೇಶ್ ಕುಮಾರ್ , ಆರ್.ಸಿ.ಹೆಚ್ ಅಧಿಕಾರಿ ಡಾ// ವಿಜಯಕುಮಾರಿ , ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ , ಮಾಜಿ ಸಚಿವ ವರ್ತೂರ್ ಪ್ರಕಾಶ್, ಡಾ// ಜಿಲ್ಲಾ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್ , ಕೆ.ಜಿ.ಎಫ್ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ , ಗ್ರಾಮ ಪಂಚಾಯತಿ ಅಧ್ಯಕ್ಷರುಗಳು , ಉಪಾಧ್ಯಕ್ಷರುಗಳು ಹಾಗೂ ಸದಸ್ಯರುಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.