ಇದು ಕತೆಯಲ್ಲ,ಅನುಭವದ ಅಮೃತ ಸಿಂಚನ ಓದಿ ಮುಗಿಯುವಾಗ ಮೂಡುವುದು ಮೈ ಮನದೊಳಗೆ ರೋಮಾಂಚನ ಮುಹಿಮ್ಮಾತ್ ನ ಒಡನಾಟದಲ್ಲಿ ಎಂದೂ ಮರೆಯಲಾಗದ ಸಣ್ಣದೊಂದು ಕಥನ ಆಪತ್ಬಾಂಧವರಾಗಿ ಬಂದು ಕೈ ಹಿಡಿದ ತಾಹಿರ್ ತಂಙಳ್ ಎಂಬ ದಿವ್ಯ ಚೇತನ
(ವಿಶ್ವ ಕನ್ನಡಿಗ ನ್ಯೂಸ್) : 2019 ಫೆಬ್ರುವರಿ, ನಾಲ್ಕು ವರುಷಗಳ ಹಿಂದೆ….. ಮುಹಿಮ್ಮಾತ್ ನಿಂದ ಎರಡು ದಿನಗಳ ರಜೆಯಲ್ಲಿ ಮನೆಗೆ ಬಂದಿದ್ದ ಮಕ್ಕಳನ್ನು ಮಗ್ರಿಬ್ ಗೆ ಮುಂಚಿತವಾಗಿಯೇ ಅಲ್ಲಿಗೆ ತಲುಪಿಸಬೇಕಿತ್ತು. ಕಾರಣಾಂತರಗಳಿಂದ ಮನೆಯಿಂದ ಹೊರಡುವಾಗಲೇ ಸಮಯ ಮಗ್ರಿಬ್ ಹತ್ತಿರವಾಗಿತ್ತು. ಊರಲ್ಲಿಯೇ ಮಗ್ರಿಬ್ ನಮಾಝ್ ನಿರ್ವಹಿಸಿ ಸನ್ಮಿತ್ರ,ನೆರೆ ಮನೆಯ ರಶೀದ್ ಬೊಳ್ಳಾಡಿಯವರ ಓಮ್ನಿ ಕಾರಿನಲ್ಲಿ ಹೊರಟೆವು. ಮುಹಿಮ್ಮಾತ್ ಗೆ ತಲುಪುವಾಗ ಇಶಾ ಬಾಂಗ್ ಮೊಳಗಿತ್ತು.
ಮಕ್ಕಳನ್ನು ಮುಹಿಮ್ಮಾತ್ ಕ್ಯಾಂಪಸ್ ನ ಒಳಗೆ ಅವರವರು ಕಲಿಯುವ ವಿಭಾಗಗಳಿಗೆ ಬಿಟ್ಟು ಅಲ್ಲಿನ ರಿಜಿಸ್ಟರ್ ನಲ್ಲಿ ಸಹಿ ಕೊಟ್ಟು, ಹೊರ ಬಂದು ಅಲ್ಲಿಯೇ ಇಶಾ ನಮಾಜ್ ನಿರ್ವಹಿಸಿ, ತಂಙಳ್ ಉಸ್ತಾದರ ಝಿಯಾರತ್ ಮಾಡಿ ಹೊರಡೋಣವೆಂದು ಕಾರಿನಲ್ಲಿ ಕುಳಿತಾಗ ಕಾರ್ ಸ್ಟಾರ್ಟ್ ಆಗುತ್ತಿಲ್ಲ. ಎಷ್ಟು ಪ್ರಯತ್ನ ಪಟ್ಟರೂ ಇಲ್ಲ, ಸ್ಟಾರ್ಟ್ ಆಗುವುದೇ ಇಲ್ಲ, ಜರ್ಕ್ ಹಾಕಲಾಯಿತು, ಇಲ್ಲ ಜರ್ಕ್ ವರ್ಕ್ ಆಗುವುದೇ ಇಲ್ಲ, ತುಂಬಾ ಹೊತ್ತು ಕ್ಯಾಂಪಸ್ ನ ಒಳಗೆ ಅತ್ತಿತ್ತ ಹತ್ತಿ ಇಳಿಯುತ್ತಿದ್ದ ನಮ್ಮಿಬ್ಬರನ್ನು ಕಂಡು ಅಲ್ಲಿನ ಉಸ್ತಾದರುಗಳು ಬಂದರು. ಮತ್ತೊಮ್ಮೆ ಮಗದೊಮ್ಮೆ ಪ್ರಯತ್ನ ಪಡಲಾಯಿತು, ಅಲ್ ಹಂದು ಲಿಲ್ಲಾಹ್ ಸ್ಟಾರ್ಟ್ ಆಯಿತು. ಕೂಡಲೇ ಬಂದ್ ಆಯಿತು, ಮತ್ತೊಮ್ಮೆ ಸ್ಟಾರ್ಟ್ ಆಯಿತು, ಹೆಜ್ಜೆ ಚಲಿಸುವಷ್ಟರಲ್ಲಿ ಮತ್ತೆ ಬಂದ್ ಆಯಿತು.
ರಶೀದ್ ಹೇಳಿದ, ಹೇ ಬಷೀರ್, ಈಲಿ ಪೋಯಂಗ್ ಪೊರೆಕ್ಕ್ ಎತ್ತಲ…! ಈ ರಾತ್ರಿ ಹೊತ್ತಿನಲ್ಲಿ ಅರ್ಧ ದಾರಿಯಲ್ಲಿ ಇದು ಕೈ ಕೊಟ್ಟರೆ ಏನು ಮಾಡುವುದು….!! ಆಗ ಅಲ್ಲಿದ್ದ ಉಸ್ತಾದರುಗಳು ಹೇಳಿದರು, ಹೆದರಬೇಡಿ ನೀವು ಮತ್ತೊಮ್ಮೆ ತಂಙಳ್ ಉಸ್ತಾದರ ಝಿಯಾರತ್ ಮಾಡಿ ಸುರಕ್ಷಿತವಾಗಿ ಮನೆಗೆ ಮುಟ್ಟುವಂತೆ ಅವರ ಹಲ್ರತ್ ನಲ್ಲಿ ಅಲ್ಲಾಹುವಿನಲ್ಲಿ ಬೇಡಿ ಕೊಂಡು ಹೊರಡಿರಿ, ಮನೆಗೆ ಮುಟ್ಟುತ್ತೀರಿ… ಇಂಶಾ ಅಲ್ಲಾಹ್
ಮತ್ತೊಮ್ಮೆ ಝಿಯಾರತ್ ಮಾಡಿದೆವು. ಅಲ್ಲಾಹುವೇ, ಅಸ್ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ಉಸ್ತಾದರು ಕಟ್ಟಿ ಬೆಳೆಸಿದ ಈ ಪುಣ್ಯ ಸಂಸ್ಥೆಯಲ್ಲಿ ವಿದ್ಯಾರ್ಜನೆಗೆಯ್ಯುತ್ತಿರುವ ನಮ್ಮ ಮಕ್ಕಳು ಎರಡು ದಿನಗಳ ರಜೆ ನಿಮಿತ್ತ ಮನೆಗೆ ಬಂದಿದ್ದು ಅವರನ್ನು ವಾಪಸ್ ಕರೆದುಕೊಂಡು ಬಂದು ಇಲ್ಲಿ ಬಿಟ್ಟು ಹೋಗುತ್ತಿದ್ದೇವೆ. ರಾತ್ರಿ ಹತ್ತು ಗಂಟೆ ಕಳೆದಿದೆ. ಹೋಗುವ ದಾರಿ ಮಧ್ಯೆ ದಟ್ಟ ಕಾಡು ಕೂಡಾ ಇದೆ. ಹೋಗುವ ವಾಹನದ ಕಂಡೀಷನ್ ಕೂಡಾ ಅಷ್ಟು ಚೆನ್ನಾಗಿಲ್ಲ. ತಂಙಳ್ ಉಸ್ತಾದ್ ರವರ ಬರ್ಕತ್ ನಿಂದ ನಮ್ಮನ್ನು ನಮ್ಮ ಮನೆಗೆ ಮುಟ್ಟಿಸು ರಬ್ಬೇ…
ನಲುವತ್ತೈದು ಮೈಲುಗಳು ದೂರದ ಪ್ರಯಾಣ… ಪುಣ್ಯ ಸ್ಥಳದಲ್ಲಿ ಅಂಗಲಾಚಿತು ನಮ್ಮಿಬ್ಬರ ನೊಂದ ಮನ…. ತವಕ್ಕಲ್ತು ಅಲಲ್ಲಾಹ್ ಕಾರ್ ಸ್ಟಾರ್ಟ್ ಆಯಿತು ಹೊರಟೇ ಬಿಟ್ಟೆವು…. ಹತ್ತದಿನೈದು ಮೈಲುಗಳಷ್ಟೇ ಚಲಿಸಿದ್ದೆವು ವಿಶಾಲ ಮಾರ್ಗದ ಮದ್ಯದಲ್ಲಿ ಹಠಾತ್ ಆಗಿ ಕಾರ್ ನಿಂತುಬಿಟ್ಟಿತು….!!!
ಕೈಯಲ್ಲಿ ತಳ್ಳಿ ಬದಿಗೆ ಸರಿಸಿ ಸುತ್ತಲೂ ನೋಡುವಾಗ ಅಲ್ಪ ದೂರದಲ್ಲಿ ಒಂದು ಮಸೀದಿ ಗೋಚರಿಸಿತು. ಕಾರನ್ನು ರಸ್ತೆ ಬದಿಯಲ್ಲಿ ಇಟ್ಟು ಮಸೀದಿಯಲ್ಲಿ ಮಲಗಿ ಬೆಳಗ್ಗೆ ಎದ್ದು ಹೋಗುವುದು ಬಿಟ್ಟರೆ ಬೇರೆ ಯಾವುದೇ ಮಾರ್ಗ ಕಾಣುತ್ತಿಲ್ಲ. ಕಾರನ್ನು ತಳ್ಳುತ್ತಾ ತಳ್ಳುತ್ತಾ ಮಸೀದಿಯ ಸನಿಹಕ್ಕೆ ತಲುಪಿಸಿದೆವು. ಮಸೀದಿಗೆ ಹೋಗಿ ನೋಡುವಾಗ ಬೀಗ ಹಾಕಲಾಗಿತ್ತು ಹೊರಗಿನ ವೆರಾಂಡದಲ್ಲಿ ಮಲಗುವುದೊಂದೇ ಗತಿ. ಇದೇ ನಿರ್ಧಾರವನ್ನು ಅಂತಿಮಗೊಳಿಸಲಾಯಿತು.
ಮುಹಿಮ್ಮಾತ್ ನಲ್ಲಿ ಊಟ ಮಾಡಿ ಹೋಗಿ ಅಂತ ಅಲ್ಲಿನ ಉಸ್ತಾದರುಗಳು ಅಷ್ಟು ವಿನಂತಿ ಮಾಡಿದ್ದರೂ, ಬೇಡ ಕಾರ್ ಸ್ಟಾರ್ಟ್ ಆದರೆ ಸಾಕು, ಮನೆಯಲ್ಲಿಯೇ ಹೋಗಿ ಊಟ ಮಾಡುವ ಅಂತ ತೀರ್ಮಾನಿಸಿದ್ದರಿಂದ ಹೊಟ್ಟೆ ಹಸಿವನ್ನು ತಡೆಯಲು ಅಸಾಧ್ಯವಾಯಿತು. ಹೋಟೆಲ್ ಇರಬಹುದೇ ಅಂತ ಹುಡುಕುತ್ತಾ ಮಾರ್ಗದಲ್ಲಿ ನಡೆದೆವು. ಒಂದೆರಡು ಹೋಟೆಲ್ ಆಗಲೇ ಬಂದ್ ಆಗಿತ್ತು. ನಡೆಯುತ್ತಾ ನಡೆಯುತ್ತಾ ಒಂದು ಹೋಟೆಲ್ ಸಿಕ್ಕಿತು, ಬಂದ್ ಮಾಡಿ ಮನೆಗೆ ಹೋಗಲು ಸಜ್ಜಾಗಿದ್ದರು. ಶಟರ್ ಹಾಕುವುದೊಂದೇ ಬಾಕಿ ಇತ್ತು. ನಮ್ಮ ಪರಿಸ್ಥಿತಿ ಕಂಡು ಹೋಟೆಲ್ ನ ಕಾಕ ಹೇಳಿದರು. ಇಲ್ಲಿ ಕೂತು ನಾಸ್ತಾ ಮಾಡಲು ಟೈಮ್ ಇಲ್ಲ ನಾವು ಹೊರಟಿದ್ದೇವೆ. ಬೇಕಿದ್ದರೆ ಪಾರ್ಸೆಲ್ ಕೊಡುತ್ತೇವೆ…
ಬದುಕಿದೆಯಾ ಬಡ ಜೀವ ಅಂತ ತೊಟ್ಟೆಯಲ್ಲಿ ಕಟ್ಟಿ ಕೊಟ್ಟ ಚಪಾತಿ ಗಸಿಯನ್ನು ಕೈಯಲ್ಲಿ ನೇತಾಡಿಸಿಕೊಂಡು ವಿಶಾಲ ಡಾಂಬರು ರಸ್ತೆಯಲ್ಲಿ ದಾರಿ ಕಾಣುವಷ್ಟೇ ಬೆಳಕು ನೀಡುತ್ತಿದ್ದ ದಾರಿ ದೀಪದಡಿಯಲ್ಲಿ ತಡ ರಾತ್ರಿ ಹನ್ನೆರಡುವರೆ ಗಂಟೆ ಕಳೆದಿರುವ ಹೊತ್ತಲ್ಲಿ ಮಸೀದಿ ಕಡೆ ಹೆಜ್ಜೆ ಹಾಕುತ್ತಿರಲು…. ಈಕಡೆಯಿಂದ ಕಾರ್ ಒಂದು ಸಾಗಿ ಹೋಯಿತು ಏ ಪನಿಕ್ಕೋಯಿಟ್ಲೇ…. ಕಾರಿನಲ್ಲಿದ್ದವರು ನಮ್ಮನ್ನು ಕಂಡು ಜೋರಾಗಿ ಕರೆದರು ಹೌದು ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಏ ಪನಿಕ್ಕೋಯಿಟ್ಲೇ ಟ್ರೋಲ್ ವೈರಲ್ ಆಗಿದ್ದ ಕಾಲವದು… ಸಿಕ್ಕ ಸಿಕ್ಕವರಲ್ಲಿ ಏ ಪನಿಕ್ಕೋಯಿಟ್ಲೇ ಅಂತ ಹಾಸ್ಯವಾಗಿ ಕೇಳುವುದು ಸರ್ವೇ ಸಾಮಾನ್ಯ ಆಗಿತ್ತು
ಇವರ ಈ ಕೇಕೆ ಕೇಳಿ ಕೋಪ ನಗು ಎರಡೂ ಬಂತು. ಬೆಕ್ಕಿಗೆ ಆಟ… ಇಲಿಗೆ ಪ್ರಾಣ ಸಂಕಟ ನಾವು ಹೆಜ್ಜೆಯ ವೇಗ ಹೆಚ್ಚಿಸಿದೆವು. ನಾವು ಇನ್ನೇನು ಮಸೀದಿಯ ಹತ್ತಿರ ತಲುಪುವಷ್ಟರಲ್ಲಿ ಆಕಡೆಯಿಂದ ಕಾರ್ ಒಂದು ಬಂದು ನಮ್ಮ ಹತ್ತಿರ ನಿಲ್ಲಿಸಿತು. ಹೇ ಬಷೀರ್ ಅಣ್ಣ ಎಂದೆ ಈ ಪಾದರೆ ಜಾವು ಈ ನಾಟ್ ಲಿ, ಈ ಮಾರ್ಗತ್ ಲಿ ನಡಕ್ಕ್ ನೆ…
ಪುತ್ತೂರಿನ ಖ್ಯಾತ ಇಂಜಿನಿಯರ್ ಕಮ್ ಬಿಲ್ಡರ್ ಗಳಾದ ಪುತ್ತೂರು ನಗರ ಸಭಾ ಸದಸ್ಯ ಸನ್ಮಿತ್ರ ಇಂಜಿನಿಯರ್ ರಿಯಾಝ್ ವಳತ್ತಡ್ಕ, ಸನ್ಮಿತ್ರ ಇಂಜಿನಿಯರ್ ಶಮೀರ್ ಬಯಂಬಾಡಿ, ಉದ್ಯಮಿ ಖಲಂದರ್ ಪರ್ಲಡ್ಕ, ಸಿನಾನ್ ಪರ್ಲಡ್ಕ ಹಾಗೂ ಇನ್ನೊಂದಿಬ್ಬರು ಸಹೋದರರು ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಪುತ್ತೂರಿಗೆ ಹಿಂತಿರುಗುತ್ತಿದ್ದರು. ಕಾರಿನಲ್ಲಿ ಹೋಗುತ್ತಿದ್ದವರು ನಮ್ಮನ್ನು ಕಂಡು ಕಾರ್ ತಿರುಗಿಸಿ ಬಂದಿದ್ದರು
ಕಾರ್ ಬಾಕಿ ಆದ ವಿಷಯವನ್ನೆಲ್ಲಾ ವಿವರಿಸಲಾಯಿತು, ಕಾರ್ ಮೆಕ್ಯಾನಿಕ್ ಕೂಡಾ ಆಗಿದ್ದ ಖಲಂದರ್ ಆ ಕಾರಿನಿಂದ ಇಳಿದು ಈ ಕಾರ್ ನ ಡ್ರೈವಿಂಗ್ ಸೀಟ್ ನಲ್ಲಿ ಕುಳಿತರು ಕಾರನ್ನು ಅತ್ತ ಕಡೆ ಅರ್ಧ ಕಿಲೋ ಮೀಟರ್ ಇತ್ತ ಕಡೆ ಅರ್ಧ ಕಿಲೋಮೀಟರ್ ದೂಡಲಾಯಿತು ಆಯಾಸಗೊಂದು ಹೈರಾಣು ಆದರೂ ಪರವಾಗಿಲ್ಲ, ಕಾರ್ ಸ್ಟಾರ್ಟ್ ಮಾಡಿ ಮನೆಗೆ ಮುಟ್ಟುವುದು ಅತೀ ಅನಿವಾರ್ಯವಾಗಿತ್ತು
ಓಮ್ನಿ ಕಾರ್ ಸ್ಟಾರ್ಟ್ ಆಯಿತು ಡ್ರೈವಿಂಗ್ ಸೀಟ್ ನಲ್ಲಿ ಖಲಂದರ್ ಬಾಯ್ ಜತೆಗೆ ನಾನು, ರಶೀದ್ ಇಂಜಿನಿಯರುಗಳು ಬಂದ ಕಾರ್ ನಮ್ಮ ಹಿಂಬದಿಯಿಂದ ನಮ್ಮನ್ನು ಹಿಂಬಾಲಿಸುತ್ತಿತ್ತು.. ಸಾಗುತ್ತಾ ಸಾಗುತ್ತಾ ಪೆರ್ಲ ಪಾಣಾಜೆ ದಾರಿಯ ಕಾಟುಕುಕ್ಕೆ ಸಮೀಪದ ದಟ್ಟ ಕಾನನದ ಮದ್ಯೆ ಕಾರ್ ಮತ್ತೆ ನಿಂತು ಬಿಟ್ಟಿತು….!!!!
ಮತ್ತೆ ತಳ್ಳಾಟ, ಜರ್ಕಾಟ, ಪರದಾಟ, ಸಂಕಟ… ಇಂಜಿನಿಯರುಗಳ ಕಾರ್ ನಲ್ಲಿ ಸೀಟ್ ಫುಲ್ ಜನ ಇದ್ದು ಇನ್ನಿಬ್ಬರು ಕೂರಲು ಅಸಾಧ್ಯ. ಅರ್ಧ ದಾರಿಯಲ್ಲಿ ನಮ್ಮನ್ನು ಬಿಟ್ಟು ಅವರು ಹೋಗುವುದಾದರು ಹೇಗೆ. ಪಾಪ ಅವರು ಆ ರೀತಿ ಅಂದು ಕೊಳ್ಳದಿದ್ದರೂ ಈ ತಡ ರಾತ್ರಿ ಇದು ಅವರಿಗೊಂದು ದಾರಿ ಮಧ್ಯೆ ಕಾಟ….!
ಮಾನವೀಯತೆ ಮನದೊಳಗೆ ತುಂಬಿ ತುಳುಕುತ್ತಿರುವ ಮನುಷ್ಯ ಸ್ನೇಹಿ ಮನೋಭಾವದ ರಿಯಾಝ್ ಮತ್ತು ಶಮೀರ್ ಹೇಳಿದರು. ಈ ಕಾರನ್ನು ಇಲ್ಲೇ ಇಟ್ಟು ಹೋಗೋಣ ಇವರಿಬ್ಬರೂ ನಮ್ಮ ಕಾರ್ ನಲ್ಲಿಯೇ ಬರಲಿ, ನಾವಿಬ್ಬರು ಕಾರ್ ನ ಹಿಂಬದಿ ಡಿಕ್ಕಿಯಲ್ಲಿ ಕುಳಿತುಕೊಳ್ಳೋಣ. ಬಷೀರ್ಚ ಮತ್ತು ರಶೀದ್ ಚ್ಚ ಸೀಟ್ ನಲ್ಲಿ ಕುಳಿತುಕೊಳ್ಳಲಿ… ಈ ರೀತಿ ಹೇಳಿದರು ಮಾತ್ರವಲ್ಲ ಡಿಕ್ಕಿಯಲ್ಲಿ ಕೂರಲು ಅಣಿಯಾದರು.
ಇಂಜಿನಿಯರುಗಳೇ ನೀವು ಇಷ್ಟು ಹೇಳಿದ್ದೀರಾಲ್ಲ್ವಾ ಇದೇ ಸಾಕು ನಿಜಕ್ಕೂ ಇದು ನಿಮ್ಮ ವಿಶೇಷ ಗುಣ ಎಂದೂ ತೀರಿಸಲಾಗದು ನಿಮ್ಮ ಋಣ
ನೀವು ನಿಮ್ಮ ಕಾರಿನಲ್ಲಿ ನಿಮ್ಮ ಸೀಟ್ ನಲ್ಲಿಯೇ ಕುಳಿತುಕೊಳ್ಳಿ, ನಾವು ಡಿಕ್ಕಿಯಲ್ಲಿ ಕೂರುತ್ತೇವೆ, ನಾವು ಹೇಳಿದ್ದು ಮಾತ್ರವಲ್ಲ, ಡಿಕ್ಕಿಯಲ್ಲಿ ನಾನು ರಶೀದ್ ಇಬ್ಬರೂ ಎದುರು ಬದುರು ಮುಖಾಮುಖಿಯಾಗಿ ಕುಳಿತುಕೊಂಡೆವು, ನಾವು ಹೋದ ಕಾರ್ ಅಲ್ಲೇ ನಿಂತಿತು.. ಇಂಜಿನಿಯರರ ಕಾರ್ ಹೊರಟಿತು…
ಬರೋ ದಾರಿ ಮಧ್ಯೆ, ನಾವು ನಮ್ಮ ತಲೆ ಬಿಸಿಯಲ್ಲಿ ನಾಸ್ತಾ ಪಾರ್ಸೆಲ್ ಹಿಡಿದು ಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಯಾರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಏ ಪನಿಕ್ಕೋಯಿಟ್ಲೇ ಎಂದು ಕೂಗಿದ ಘಟನೆಯನ್ನು ನಾನು ಅವರಿಗೆ ಹೇಳಿದೆ… ಮಾತು ನಿಂತು ಒಂದು ಕ್ಷಣ ಎಲ್ಲರೂ ಮೌನವಾದರು. ನಂತರ ಪರಸ್ಪರ ಮುಖ ನೋಡಿ ನಗಲಿಕ್ಕೆ ಪ್ರಾರಂಭಿಸಿದರು…
ಗುಟ್ಟು ರಟ್ಟಾಯಿತು, ಆ ಕೂಗಿದರು ಇವರೇ ಆಗಿದ್ದರು. ಅವರ ವಾಹನ ಸಾಗಿ ಅಲ್ಪ ದೂರ ಸಾಗಿದಾಗ ಆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗಳು ನಾವು ಅಂತ ಗೊತ್ತಾಗಿ ಕಾರ್ ತಿರುಗಿಸಿ ವಾಪಾಸ್ ನಮ್ಮ ಬಳಿ ಬಂದಿದ್ದರು… ಈ ವಿಚಾರ ಪತ್ರಕರ್ತ ಕುಂಬ್ರ ಸಿದ್ದೀಕ್ ರವರಿಗೂ ಗೊತ್ತಾಯಿತು ಮರು ದಿವಸ ಪೇಪರ್ ನಲ್ಲೂ ನ್ಯೂಸ್ ಬಂತು ಪೇಪರ್ ನ್ಯೂಸ್ ಹೆಡ್ಡಿಂಗ್ ಆಪತ್ಬಾಂಧವನಾದ ಪನಿಕ್ಕೋಯಿಟ್ಲೇ ಎಂದಾಗಿತ್ತು
ಆದರೆ, ನಮ್ಮ ಮನ ಅಂದು ಹೇಳಿತು ಇಂದೂ ಹೇಳುತ್ತಿದೆ ಎಂದೂ ಹೇಳುತ್ತದೆ ಆಪತ್ಭಾಂಧವನಾದದ್ದು ಪನಿಕ್ಕೋಯಿಟ್ಲೇ ಅಲ್ಲ, ಅದು ಸಾಕ್ಷಾತ್ ಅಸ್ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ಅವರೇ ಆಗಿದ್ದರು…
ಆ ರಾತ್ರಿಯಲ್ಲಿ ಆ ದಾರಿಯಲ್ಲಿ ಇವರು ಬಂದದ್ದು ಒಂದು ಆಕಸ್ಮಿಕವಾಗಿದ್ದರೂ ನಿಜಕ್ಕೂ ಅದೊಂದು ಅದ್ಭುತವೇ ಆಗಿತ್ತು… ರಿಯಾಝ್, ಶಮೀರ್ ಮತ್ತು ತಂಡ ನಮ್ಮನ್ನು ಮನೆ ತನಕ ಕಾರಿನಲ್ಲಿ ಡ್ರಾಪ್ ಕೊಟ್ಟರು ದನ್ಯೋಸ್ಮಿ ಬ್ರದರ್ಸ್ ದನ್ಯೋಸ್ಮಿ….. ಎರಡು ಗಂಟೆ ರಾತ್ರಿ ನಾವು ನಮ್ಮ ಊರಾದ ಶೇಕಮಲೆಗೆ ತಲುಪಿದೆವು… ಸುರಕ್ಷಿತವಾಗಿ ಮನೆ ಸೇರಿದೆವು…. ನಾವು ತಂಙಳ್ ರವರ ಸನ್ನಿಧಾನದಲ್ಲಿ ಪ್ರಾರ್ಥಿಸಿದ್ದೂ ಅದೇ ಆಗಿತ್ತು ನಮ್ಮನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸು ರಬ್ಬೇ….
ಮರೆಯಲಸಾಧ್ಯ ಈ ಮುಹಿಮ್ಮಾತ್ ಪ್ರಯಾಣವನ್ನು… ತಾಹಿರುಲ್ ಅಹ್ದಲ್ ತಂಙಳ್ ಕೈ ಹಿಡಿದ ಅದ್ಭುತ ಘಟನೆಯನ್ನು… ಜೀವನದ ದಿನಗಳು ಮುಂದುವರಿಯುತ್ತಿರಲು….
ಅದೇ ವರ್ಷ ಸೆಪ್ಟೆಂಬರ್ ತಿಂಗಳು ಸಾವಿರಾರು ವಿದ್ಯಾರ್ಥಿಗಳ ಸುಂದರ ಭವಿಷ್ಯವನ್ನು ಬರೆಯುತ್ತಾ ವಿದ್ಯಾ ಸಂಪನ್ನರನ್ನಾಗಿಸಿ ಅವರನ್ನು ಸಮಾಜಕ್ಕೆ ಸಮರ್ಪಿಸುತ್ತಿರುವ ಅತ್ಯುನ್ನತ ಮತ ಲೌಕಿಕ ವಿದ್ಯಾ ಸಮುಚ್ಚಯವಾದ ಮುಹಿಮ್ಮಾತ್ ನಲ್ಲಿ ಕಲಿಯುತ್ತಿರುವ ನನ್ನ ಮಗಳು ಮತ್ತು ಮಗನನ್ನು ಭೇಟಿಯಾಗಿ ಬರಲೆಂದು ತೆರಳಿದ್ದೆ….
ಎಂದಿನಂತೆ ಮುಹಿಮ್ಮಾತ್ ನ ಶಿಲ್ಪಿ ಅಸ್ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ರವರ ಮಖ್ಬರದ ಬಳಿಗೆ ಹೋಗಿಝಿಯಾರತ್ ಮಾಡಿ, ಮನದಾಳದಲ್ಲಿ ಸುಪ್ತವಾಗಿದ್ದ ಸರ್ವ ಸಂತೋಷ ಸಂತುಷ್ಟ ದುಃಖ ದುಮ್ಮಾನಗಳನ್ನು ಅವರ ಸನ್ನಿಧಿಯಲ್ಲಿ ಯಾವುದೇ ಮುಚ್ಚು ಮರೆ ಇಲ್ಲದೇ ತೆರೆದು ಇಡುವುದು ವಾಡಿಕೆ.
ಆ ದಿನ ಕೂಡಾ ಮನ ಬಿಚ್ಚಿ ಎಲ್ಲಾ ವಿಚಾರಗಳನ್ನು ವಿವರವಾಗಿ ಮಂಡಿಸಿದೆ ಜತೆಯಲ್ಲಿ ಮನದೊಳಗೆ ಆಸೆಯೊಂದು ಮೂಡಿ ಬಂತು. ರಬ್ಬೇ ಇನ್ನೊಂದು ಗಂಡು ಮಗು ಹುಟ್ಟಿದರೆ ತಾಹಿರುಲ್ ಅಹ್ದಲ್ ತಂಙಳ್ ರವರ ಹೆಸರನ್ನೇ ಆ ಮಗುವಿಗೆ ನಾಮಕರಣ ಮಾಡುವೆ… ತಂಙಳ್ ರವರ ಹೆಸರನ್ನು ನಮ್ಮ ಕುಟುಂಬವು ಸದಾ ಸಮಯ ಉಚ್ಚರಿಸುತ್ತಾ ಸ್ಮರಿಸುವಂತೆ ಅವಕಾಶ ಕಲ್ಪಿಸು ರಬ್ಬೇ…
ಸುಬುಹಾನಲ್ಲಾಹ್… ಅದೇ ತಿಂಗಳು ನನ್ನ ಪತ್ನಿ ಗರ್ಭಿಣಿಯಾದಳು ಸಣ್ಣ ಪುಟ್ಟ ಮಕ್ಕಳು ಇರುವಾಗ ನನ್ನವಳಿಗೆ ಈ ಗರ್ಭಧಾರಣೆಯ ಅವಧಿಯು ತುಸು ತ್ರಾಸದಾಯಕ ವಾದರೂ ಮನದೊಳಗೆ ಅಚ್ಚರಿಯ ಅಚ್ಚು ಮೂಡಿಸಿದ್ದ ಆ ನಿಯ್ಯತ್ ಸದಾ ಸಮಯ ಸಂತೋಷವನ್ನೇ ಧಾರೆ ಎರೆಯುತ್ತಿತ್ತು
2020 ಜೂನ್ 20 ರ ಸುಪ್ರಭಾತದಲ್ಲಿ ನಮಗೆ ಮತ್ತೊಂದು ಮಗು ಜನ್ಮ ತಾಳಿತು… ಗಂಡು ಮಗು… ಯಥಾ ನೀಯತ್ ತಥಾ ಬರ್ಕತ್… ಅಲ್ ಹಂದು ಲಿಲ್ಲಾಹ್… ಸರ್ವ ಸ್ತುತಿಗಳೂ ಜಗದೊಡೆಯನಾದ ಅಲ್ಲಾಹು ಸುಬುಹಾನ ವುತಆಲನಿಗೆ ಮೀಸಲು… ನಮ್ಮ ಕುಟುಂಬದ ಭವಿಷ್ಯದ ಕುಡಿಗಳಲ್ಲೊಂದಾದ ಆ ಮಗುವಿಗೆ ಅಹ್ಮದ್ ತಾಹಿರ್ ಎಂದು ಆ ಕ್ಷಣವೇ ನಾಮಕರಣ ಮಾಡಲಾಯಿತು…
|| ತಾಹಿರುಲ್ ಅಹ್ದಲ್ ತಂಙಳೇ… ಓರ್ಮಗಳ್ಕಾಯೀ ನಿಂಙಳೇ… ಅಹ್ಮದ್ ತಾಹಿರ್ ಞಂಙಳೇ… ತನಲ್ ಏಗೂ ಪೊನ್ನು ತಂಙಳೇ…|| ಈ ನಾಲ್ಕು ಗೆರೆಗಳು ಆ ಕ್ಷಣದಲ್ಲಿಯೇ ಮನದಾಳದಲ್ಲಿ ಮಾಯದ ಪಡಿಯಚ್ಚುವಿನಂತೆ ಮೂಡಿ ಬಂತು…..
ಮುಹಿಮ್ಮಾತ್ ನೊಂದಿಗಿನ ಆತ್ಮೀಯ ಸಂಬಂಧ ಇಂದು ನಿನ್ನೆಯದಲ್ಲ ಕಳೆದ ಹದಿನಾರು ವರ್ಷಗಳಿಂದಲೂ ಮೈ ಮನ ಸೆಳೆಯುತ್ತಿರುವ ಒಂದು ಧಾರ್ಮಿಕ ಶ್ರದ್ದಾ ಕೇಂದ್ರವಾಗಿದೆ ಈ ಮುಹಿಮ್ಮಾತ್… ನಮ್ಮ ಕುಟುಂಬ ಸಂಬಂಧಿಕರ ಮನೆ ಅಲ್ಲೇ ಸ್ವಲ್ಪ ದೂರದಲ್ಲಿ ಇರುವುದರಿಂದ ಆ ಮನೆಗೆ ಭೇಟಿ ನೀಡಿದಾಗಲೆಲ್ಲಾ ಮುಹಿಮ್ಮಾತ್ ಸಂದರ್ಶಿಸುತ್ತಿದ್ದೆವು ಅಲ್ಲಿ ಕಲಿಯುತ್ತಿರುವ ಸಾವಿರಾರು ಮಕ್ಕಳನ್ನು ಕಂಡು ಮನ ತುಂಬಿ ಬರುತ್ತಿತ್ತು ಆವಾಗಳೆಲ್ಲಾ ನಮ್ಮ ಪ್ರಾರ್ಥನೆ ಇದೇ ಆಗಿತ್ತು ಅಲ್ಲಾಹುವೇ ನಮ್ಮ ಮಕ್ಕಳಿಗೂ ಇಲ್ಲಿ ಇಲ್ಮ್ ಕಲಿಯುವ ಅವಕಾಶ ಒದಗಿಸಿ ಕೊಡು ರಬ್ಬೇ…
ಅಲ್ಲಾಹುವಿನ ಅಪಾರವಾದ ತೌಫೀಕ್ ನಿಂದ ನನ್ನ ಹಿರಿಯ ಮಗಳು ಆ ಪಾವನ ಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಜನೆ ಗೈದಿದ್ದು ಹಿರಿಯ ಮಗ ಈಗಲೂ ಅಲ್ಲಿ ಕಲಿಯುತ್ತಿದ್ದಾನೆ…
ಸಾವಿರಾರು ಮಕ್ಕಳಿಗೆ ಉಚಿತ ಊಟ, ವಸತಿ,ಹಾಗೂ ಗುಣಮಟ್ಟದ ಶಿಕ್ಷಣ ಧಾರೆ ಎರೆಯುವುದರ ಜತೆಗೆ ಸುಸಂಸ್ಕೃತ ಜೀವನ ಕ್ರಮವನ್ನೂ ಕಲಿಸಿ ಕೊಡುವ ಅಭಯ ಕೇಂದ್ರವಾಗಿದೆ ಈ ಪುಣ್ಯ ಮುಹಿಮ್ಮಾತ್…
ಈ ಶಿಕ್ಷಣ ಸಮುಚ್ಚಯಕ್ಕೆ ಒಮ್ಮೆ ಭೇಟಿ ನೀಡಿ, ತಾಹಿರ್ ತಂಙಳ್ ರವರ ಮಖ್ಬರದ ಬಳಿ ಅಲ್ಪ ಸಮಯ ಕೂತು ನಮ್ಮ ಮನ ಬಿಚ್ಚಿ ಪ್ರಾರ್ಥಿಸಿ ಹೊರ ಬಂದಾಗ, ಜೀವನದ ಜಂಜಾಟದಲ್ಲಿ ಈಜಾಡುತ್ತಿರುವ ಮನಸ್ಸು ತನ್ನಿಂತಾನೇ ನಿರಾಳವಾಗಿ ಬಿಡುತ್ತದೆ…. ದಿನ ನಿತ್ಯ ನೂರಾರು ಮಂದಿ ಶ್ರದ್ದಾಳುಗಳು ಭೇಟಿ ನೀಡಿ ತಮ್ಮ ಮನದಿಂಗಿತವನ್ನು ಮನ ಬಿಚ್ಚಿ ಹೇಳಿ ಪರಿಹಾರವನ್ನು ಕಂಡು ಕೊಳ್ಳುತ್ತಿರುವ ಒಂದು ಸಾಂತ್ವನ ಕೇಂದ್ರವಾಗಿದೆ ಈ ಪುಣ್ಯ ಮುಹಿಮ್ಮಾತ್…
ಅಹ್ಲ್ ಬೈತ್ ಕುಟುಂಬದ ಅದ್ಭುತ ಜ್ಞಾನ ತೇಜಸ್ಸುಅಸ್ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ರವರ ಹದಿನೇಳನೇ ಉರೂಸ್ ಮುಬಾರಕ್ ನ ಸಮಾರೋಪ ಸಮಾರಂಭ ಇಂದು ನಡೆಯಲಿದೆ. ಮುಹಿಮ್ಮಾತ್ ಕುಟುಂಬ ಸಂಭ್ರಮ ಸಡಗರದಲ್ಲಿ ತೇಲಾಡುತ್ತಿದೆ… ಈ ಸಂತೋಷದಲ್ಲಿ ನಾವೆಲ್ಲರೂ ಪಾಲುದಾರರಾಗೋಣ… ನಾಳೆ ಸ್ವರ್ಗ ಲೋಕದಲ್ಲಿ ತಾಹಿರ್ ತಂಙಳ್ ರವರ ಪವಿತ್ರ ವದನವನ್ನು ಕಣ್ತುಂಬ ಕಾಣೋಣ… ಅಲ್ಲಾಹು ಅನುಗ್ರಹಿಸಲಿ..ಆಮೀನ್
✍️ ಎಸ್ ಪಿ ಬಶೀರ್ ಶೇಕಮಲೆ,ಕುಂಬ್ರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.