(www.vknews.in) ; ವಿಶ್ವದಲ್ಲಿಯೆ ಅತ್ಯಂತ ಉತ್ತಮ ಸಂಸ್ಕೃತಿಯಿಂದ ಕೂಡಿದ ದೇಶ ಭಾರತ ಎಂಬುವುದು ನಮಗೆ ಹೆಮ್ಮೆಯ ವಿಷಯ. ನಮಗೆ ನಮ್ಮ ದೇಶದ ಇತಿಹಾಸದ ಉದ್ದಕ್ಕೂ ಇದ್ದ ಸಂಸ್ಕೃತಿಯನ್ನು ಫರಿಚಯಿಸಿರುವುದು ಸಾಹಿತಿಗಳೇ ಹೊರತು ಬೇರೆಯಾರೂ ಅಲ್ಲ. ಇತಿಹಾಸ ತಜ್ಙರಲ್ಲಿ ಹೆಚ್ಚಿನವರು ಸಾಹಿತಿಗಳೇ ಆಗಿದ್ದಾರೆ.
ಅದೆಷ್ಟೋ ಸಾಹಿತಿಗಳನ್ನು ಪಡೆದ ಹೆಮ್ಮೆ ನಮ್ಮ ಕರುನಾಡಿಗೆ ಇದೆ. ಕುವೆಂಪು, ದಾ.ರಾ ಬೇಂದ್ರೆ, ಕುಮಾರವ್ಯಾಸ, ಕಯ್ಯಾರ ಕಿಞ್ಞಣ್ಣ ರೈ, ಗಿರೀಶ್ ಕಾರ್ನಾಡ್ ಅಲ್ಲದೆ ಅನೇಕ ಹೆಸರಾಂತ ಜಗತ್ಪ್ರಸಿದ್ಧ ಸಾಹಿತಿಗಳು ನಮ್ಮ ರಾಜ್ಯದ ಸಾಹಿತ್ಯ ಸಂಪತ್ತುಗಳಾಗಿದ್ದಾರೆ. ಎಲ್ಲಾ ಕಲಿಕೆಗಳಿಗೂ ಒಂದೊಂದು ಸಂಸ್ಥೆಗಳಿರುತ್ತೆ. ಆದರೆ ಸಾಹಿತ್ಯ ಎಂಬುವುದು ಅವರದ್ದೇ ಅಂತರಾಳದಲ್ಲಿ ಬರುವ ಒಂದು ಕಲೆ. ಅದರಲ್ಲಿ ವರ್ಣ ಭೇದವಿಲ್ಲ, ತಾರತಮ್ಯವಿಲ್ಲ. ಸಾಹಿತಿಗಳಿಗೆ ಅವರದ್ದೇ ಆದಂತಹ ದೃಷ್ಟಿಕೋನಗಳಿರುತ್ತವೆ. ಕೆಲವೊಂದು ಸಾಹಿತಿಗಳೆನಿಸಿಕೊಂಡವರು ಕೆಲವು ವಿಷಯಗಳಲ್ಲಿ ಜನರಲ್ಲಿ ಗೊಂದಲಗಳನ್ನು ಉಂಟು ಮಾಡಿದ್ದಂತೂ ಸುಳ್ಳಲ್ಲ.
ರಾಜ್ಯ ಕಂಡ ಸಾಹಿತಿಗಳಲ್ಲಿ ಒಬ್ಬ ವಿಭಿನ್ನ ಶೈಲಿಯ ಸಾಹಿತಿ ಡಿಐ ಅಬೂಬಕ್ಕರ್ ಕೈರಂಗಳ. ಇವರು ಕಾಯಾರ್ ಎಂಬ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದರು. ಇವರ ನಿವಾಸ ಕೈರಂಗಳದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಎದುರಿನಲ್ಲಾಗಿತ್ತು. ಇವರ ತಂದೆ ಡಿಐ ಇಸ್ಮಾಯಿಲ್ ರವರು ವ್ಯಾಪಾರಸ್ಥರಾಗಿದ್ದರು, ಸಂಪ್ರದಾಯಸ್ಥರಾಗಿದ್ದರು, ಮಾತ್ರವಲ್ಲದೆ ಎಲ್ಲರೊಂದಿಗೆ ಬಹಳ ಅನ್ಯೋನ್ಯತೆಯಿಂದ ಇದ್ದರು. ಹಿರಿಯ ಮಗನಾದ ಅಬೂಬಕ್ಕರ್ನನ್ನು ಕಲಿಸಿ ಸಮಾಜಕ್ಕೆ ಒಬ್ಬ ಮಾದರಿಯೋಗ್ಯನನ್ನು ಕೊಡಬೇಕೆಂದು ಕನಸು ಕಂಡಿದ್ದರು. ತಂದೆಯವರ ಕನಸನ್ನು ಮಗ ಅವರ ನಿರೀಕ್ಷೆಗಿಂತಲೂ ಹೆಚ್ಚಾಗಿ ನೆರವೇರಿಸಿದ್ದು ಅದರ ಸಂಪೂರ್ಣ ಸಂತಸವನ್ನು ಅವರ ತಂದೆಯವರು ಪಡೆದು ಹೆಮ್ಮೆಯಿಂದ ಬೀಗುತ್ತಿದ್ದಾರೆ. ಆದರೆ ಗುರಿ ತಲುಪಲು ತಂದೆ ಕಂಡ ದಾರಿ ಮತ್ತು ಮಗ ಹೋದ ದಾರಿಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಮೊದಮೊದಲು ಮಗನ ಹಾದಿಯು ಅವರ ಸ್ವಲ್ವ ಮುಜುಗರವನ್ನುಂಟು ಮಾಡುತ್ತಿತ್ತು.
ಡಿಐ ಯವರು ಚಿಕ್ಕಂದಿನಲ್ಲೇ ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡಿದ್ದರು. ಶಾಲೆಯಲ್ಲಿ ಭಾಷಣ ಸ್ಪರ್ಧೆ, ಛದ್ಮವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾನು ಭಾಗವಹಿಸುವುದು ಮಾತ್ರವಲ್ಲದೆ ಸಹಪಾಠಿಗಳಿಗೂ ಅವರೇ ಕಲಿಸಿಕೊಡುತ್ತಿದ್ದರು. ತುಳುನಾಡಿನ ಅತ್ಯಂತ ಜನಪ್ರಿಯ ಕಲೆಯಾಗಿದ್ದ ಯಕ್ಷಗಾನ, ಮತ್ತು ನಾಟಕವನ್ನು ನೋಡುವುದು ಇವರಿಗೆ ತುಂಬಾ ಖುಷಿ. ಅವತ್ತಿನ ತರಂಗ, ಇನ್ನಿತರ ಪಾಕ್ಷಿಕಗಳಲ್ಲಿ ಡಿಐ ಯವರ ಲೇಖನ, ಕವನ, ಚುಟುಕು ಮುಂತಾದ ಬರಹಗಳು ಬರುತ್ತಿದ್ದವು. ನಾಟಕಗಳಮ್ನ ನೋಡುವುದರೊಂದಿಗೆ ತಾನೇ ಕೆಲವು ನಾಟಕಗಳನ್ಮು ಬರೆದಿದ್ದಾರೆ. ಏಳನೆಯ ತರಗತಿಯಲ್ಲಿ ಇರುವಾಗ ಅವರು ಎರಡು ತುಳು ನಾಟಕಗಳನ್ನು ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಅಮ್ಮೆರ್ ಅಡ್ಡ ಬನ್ನಗ (ತಂದೆಯವರು ಅಡ್ಡ ಬಂದಾಗ) ಒಮ್ಮೆ ಕೈರಂಗಳ ಶಾಲೆಯಲ್ಲಿ ದಶಮಾನ ಉತ್ಸವದ ಸಲುವಾಗಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅವಕಾಶವನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ಡಿಐ ಯವರು ಎರಡು ತುಳು ನಾಟಕಗಳನ್ನು ಬರೆದರು. ಏರೆಗ್ ಮದಿಮೆ(ಯಾರಿಗೆ ಮದುವೆ) ಮತ್ತು ದಾಯೆಗ್ ಮದಿಮೆ( ಯಾಕಾಗಿ ಮದುವೆ) ಎಂಬ ಹೆಸರಿನಲ್ಲಾಗಿತ್ತು ನಾಟಕ. ಒಂದು ತಿಂಗಳ ಮುಂಚೆಯೇ ಪಾತ್ರಕ್ಕೆ ಸೂಕ್ತವಾದ ಕಲಾವಿದರನ್ನು ಆಯ್ಕೆಮಾಡಿ ಶಾಲೆಯ ಹಿಂಬದಿಯ ಮರದಡಿಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಮಕ್ಕಳೆಲ್ಲರಿಗೂ ಬಹಳ ಖುಷಿ, ಯಾವಾಗ ಆದಿನ ಬರುತ್ತದೆ ಎಂದು ಕಾಯುತ್ತಿರುವ ಮಕ್ಕಳು.
ಶಾಲೆಯಲ್ಲಿ ಮಕ್ಕಳ ದಿನಾಚರಣೆ, ಸ್ವಾತಂತ್ರ್ಯ ಉತ್ಸವ, ಇನ್ನಿತರ ಯಾವುದೇ ಕಾರ್ಯಕ್ರಮ ಇದ್ದರೆ ಅಲ್ಲಿ ಮಹಮ್ಮದ್ ಎಂಬ ಹೆಸರಿನ ಮೂಲತ ತಮಿಳುನಾಡಿನ ವ್ಯಕ್ತಿ ಐಸ್ಕ್ಯಾಂಡಿ ಮಾರುತ್ತಿದ್ದರು. ಐಸ್ಕ್ಯಾಂಡಿ ಸವಿಯಲು ಆಸೆ ಇದ್ದು ಹಣವಿಲ್ಲದೆ ದೂರದಲ್ಲಿ ನಿಲ್ಲುತ್ತಿದ್ದ ಮಕ್ಕಳನ್ನು ಗುರುತಿಸಿ ಅವರಿಗೆ ಐಸ್ಕ್ಯಾಂಡಿ ಕೊಟ್ಟು ಮಕ್ಕಳ ಖುಷಿಯಲ್ಲಿ ಸಂತಸ ಕಾಣುತ್ತದ್ದವರಾಗಿದ್ದರು ಮಹಮ್ಮದ್.
ಶಾಲೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಡಿಐ ಯವರ ನಾಟಕ ಇದೆ ಅಂತ ಅದ್ಯಾಗೋ ಮಹಮ್ಮದ್ ರವರ ಕಿವಿಗೆ ಬೀಳಲು ಕೂಡಲೇ ಅವರ ವತಿಯಿಂದ ಪೋಸ್ಟರ್ ಮತ್ತು ಆಮಂತ್ರಣ ಪತ್ರಿಕೆಯನ್ನು ಹಂಚತೊಡಗಿದರು. ಇದು ಡಿಐಯವರ ತಂದೆಯವರಿಗೆ ಸುದ್ದಿ ಮುಟ್ಟಿತು. ಕೂಡಲೆ ಅವರು ಶಾಲಾ ಪ್ರಾದ್ಯಾಪಕರ ಕೊಠಡಿಗೆ ತೆರಳಿ, ನೋಡಿ ಸರ್ ಮಕ್ಕಳು ನಾಟಕ ಮಾಡುತ್ತಿದ್ದಾರೆ ಅಂತ ನಾನು ತಿಳಿದೆ, ತಾವು ತಪ್ಪು ಭಾವಿಸಬೇಡಿ, ನಾಟಕ,ಕುಣಿತ ಇದೆಲ್ಲ ನಮ್ಮದರಲ್ಲಿ ಇಲ್ಲ, ಮಗನಾದರೆ ಅಬ್ಯಾಸ ಅಂತ ಮನೆ ಸೇರುವಾಗ ರಾತ್ರಿಯಾಗುತ್ತೆ, ಮಗ ದಾರಿ ತಪ್ಪತ್ತಾನೋ ಎಂಬ ಚಿಂತೆಯೂ ನನ್ನು ಕಾಡುತ್ತಿದೆ, ಮಾತ್ರವಲ್ಲದೆ ಮಕ್ಕಳಿಗೂ ಇದರಿಂದ ಅವರ ಕಲಿಕೆಗೆ ತೊಂದರೆಯಾಗುತ್ತೆ ಆದುದರಿಂದ ದಯವಿಟ್ಟು ತಾವು ನಾಟಕವನ್ನು ತಡೆಯಬೇಕು ಎಂದು ವಿನಂತಿಸಿದರು.
ನೋಡಿ ಇಸ್ಮಾಯಿಲ್ ರವರೆ ಶಾಲೆ ಅಂದರೆ ಆಟ, ಪಾಠ ಇದ್ದರೆನೇ ಅದು ಗುರುಕುಲ ವಾಗೋದು, ಇಲ್ಲದಿಧರೆ ಅದಕ್ಕೊಂದು ಅರ್ಥನೇ ಬರೋದಿಲ್ಲ, ಪಾಪ ಮಕ್ಕಳು ಖುಷಿಯಿಂದ ಒಂದು ತಿಂಗಳಿನಿಂದ ಕಷ್ಟಪಟ್ಟು ಅಭ್ಯಾಸ ನಿರತರಾಗಿದ್ದಾರೆ. ಇನ್ನು ಕೇವಲ ಒಂದು ವಾರವಷ್ಟೇ ಬಾಕಿ ಇದೆ. ನಾಟಕದ ಪೋಸ್ಟರ್ಗಳು ಬೇರೆ ರಾರಾಜಿಸುತ್ತಿದೆ. ಮಕ್ಕಳ ದುಖವನ್ನು ಸಹ ನಾನು ಸಹಿಸಲಾರೆ ಏನು ಮಾಡಲಿ. ನೀವಾದರೆ ನನ್ನ ಆತ್ಮೀಯರು ಈ ನಾಟಕದಿಂದ ನಿಮಗೆ ತೊಂದರೆ ಆಗುವುದಾದರೆ ನಾನು ನಿಲ್ಲಿಸುತ್ತೇನೆ ಅಂತ ಹೇಳಿ ಅವರನ್ನು ಕಳಿಸಿಕೊಟ್ಟರು, ಮತ್ತು ನಾಟಕ ನಿಲ್ಲಿಸಲು ಮಕ್ಕಳಿಗೆ ಆಜ್ಞೆ ಹೊರಡಿಸಿದರು. ಇಡೀ ಶಾಲೆಯಲ್ಲೇ ನೀರವ ಮೌನ, ಕಲಾವಿದರ ದುಖದ ನಾಲೆ ಹೊಡೆದು ಕಣ್ಣಲ್ಲಿ ಹರಿಯುತ್ತಿತ್ತು. ಡಿಐ ಯವರಿಗೆ ಬೇಸರವಿತ್ತು ಆದರೆ ಛಲವೂ ಇತ್ತು.
ಒಟ್ಟಿನಲ್ಲಿ ನಾಟಕ ವಿಲ್ಲದ ದಶಮಾನೋತ್ಸವ ಮಕ್ಕಳಿಗೆ ನಿರಾಸೆ ಆದರೂ ಐಸ್ಕ್ಯಾಂಡಿಯ ರುಚಿ ನೆನಸುವಾಗ ಈಗಲೂ ಬಾಯಲ್ಲಿ ನೀರೂರಿ ಬರುತ್ತದೆ. ನಂತರದ ವಾರ ನರಿಂಗಾನ ಮಲರಾಯ ದೈವಸ್ಥಾನದ ನೇಮೋತ್ಸವದ ಸಲುವಾಗಿ ನಡೆಯುವ ಕಾರ್ಯಕ್ರಮದಲ್ಲಿ ನಾವು ಎರಡು ನಾಟಕಗಳನ್ನು ಮಾಡಯತ್ತೇವೆ ಅಂತ ಡಿಐ ಯವರು ಅಲ್ಲಿನ ಆಡಳಿತ ಸಮಿತಿಯವರಲ್ಲಿ ಮನವಿ ಮಾಡಿದರು. ಇದಕ್ಕೊಪ್ಪಿದ ಆಡಳಿತ ಮಂಡಳಿಯು ಒಂದು ನಾಟಕಕ್ಕೆ ಮಾತ್ರ ಅವಕಾಶ ಮಾಡಿ ಕೊಟ್ಟರು.
ಡಿಐ ಯವರಿಗೆ ಎಲ್ಲಿಲ್ಲದ ಖುಷಿ, ಆದರೆ ಒಂದು ಸಮಸ್ಯೆಯೂ ಇತ್ತು. ಎರಡು ನಾಟಕದಲ್ಲಿ ಯಾವುದನ್ನು ಆಯ್ಕೆ ಮಾಡಲಿ? ಒಂದನ್ನು ಆಯ್ಕೆ ಮಾಡಿದರೆ ಮತ್ತೊಂದು ನಾಟಕದ ಕಲಾವಿದರಿಗೆ ಬೇಸರವಾಗಬಹುದು ಏನು ಮಾಡೋದು. ಕೂಡಲೇ ತನ್ನ ಸಾಹಿತ್ಯ ಬುದ್ದಿಯಿಂದ ಒಂದು ಉಪಾಯ ಕಂಡು ಹಿಡಿದರು. ಶಾಲೆಯಲ್ಲಿ ನಡೆಯಬೇಕಿದ್ದ ನಾಟಕ ತಂದೆಯವರ ಕಾರಣದಿಂದ ನಿಂತು ಹೋಯಿತು. ಎಲ್ಲ ಕಲಾವಿದರಿಗೆ ಅವಕಾಶ ಸಿಗಬೇಕು, ಎಲ್ಲವನ್ನೂ ಮನಗಂಡಂತಹ ಡಿಐ ಯವರು ಎರಡು ನಾಟಕಗಳನ್ನು ಜೋಡಿಸಿ ಕಥೆಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿ ನಾಟಕದ ಹೆಸರನ್ನು ಅಮ್ಮೆರ್ ಅಡ್ಡ ಬನ್ನಗ ಅಂತ ಬದಲಾಯಿಸಿದರು.
ನಾಟಕದಲ್ಲೂ ಕ್ಲೈಮಾಕ್ಸಿನಲ್ಲಿ ಮದುವೆಗೆ ಹೆಣ್ಣಿನ ತಂದೆ ಅಡ್ಡಬರುವ ಸಂಭವೂ ಇತ್ತು. ಒಟ್ಟಿನಲ್ಲಿ ನಾಟಕ ಯಶ ಕಂಡಿತು ಮಾತ್ರವಲ್ಲದೆ ನಾಟಕದ ಹೆಸರು ಈಗಲೂ ಮರೆಯದಂತಾಯಿತು.
ಭೀ಼ಷ್ಮ ಭೀಷ್ಮ ಭೀಷ್ಮ ಒಮ್ಮೆ ಡಿಐ ಯವರ ಮನೆಯಲ್ಲಿ ಈದ್ ಮಿಲಾದ್ ಸಲುವಾಗಿ ದಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಅವತ್ತೇ ಮೇಲಿನ ದರ್ಮಕ್ಕಿ ಎಂಬಲ್ಲಿ ತೋಡುಗುಳಿ ಟಿ ಶ್ಯಾಂ ಭಟ್ ರವರು ಭೀಷ್ಮ ಭೀಷ್ಮ ಭೀಷ್ಮ ಎಂಬ ಯಕ್ಷಗಾನವನ್ನು ಬಯಲಾಟದ ರೂಪದಲ್ಲಿ ಆಯೋಜಿಸಿದ್ದರು. ಇತ್ತ ರಾತ್ರಿ ಡಿಐ ಯವರ ಮನೆಯಲ್ಲಿ ಮೀಲಾದ್ ಪಾರಾಯಣ, ಆಲಾಪನೆ ನಡೆಸುತ್ತಿತ್ತು.ನೆರೆ ಹೊರೆಯವರು, ಕುಟುಂಬಸ್ಥರ ಸಹಿತ ತುಂಬಾ ಜನ ಸೇರಿದ್ದರು. ಆದರೆ ಡಿಐ ಯವರನ್ನು ಅಲ್ಲಿ ಕಾಣಲು ಸಾದ್ಯವಾಗಲಿಲ್ಲ. ಅವರ ತಂದೆಯವರ ಮನದಲ್ಲಿ ಬೇಸರ ಇದ್ದರೂ ಹೊರಗಡೆ ತೋರಿಸಲಿಲ್ಲ. ಡಿಐ ಯವರು ಯಕ್ಷಗಾನ ನೋಡಿ ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಮನೆ ಕಡೆ ನಡೆಯ ತೊಡಗಿದರು.
ಮನದಲ್ಲಿ ಭಯ, ತಂದೆಯವರ ಕಣ್ಣೆದುರು ಬಿದ್ದರೆ ಬೆತ್ತದ ರುಚಿ ಗ್ಯಾರಂಟಿ. ಮೆಲ್ಲನೆ ಧೈರ್ಯ ಮಾಡಿಕೊಂಡು ಮನೆಯ ಬಾಗಿಲ ಬಳಿ ನಿಂತು ಕಿಟಕಿಯ ಮೂಲಕ ಒಳಗೆ ಇಣುಕಿ ನೋಡಿದರು. ಒಳಗಡೆ ಎಲ್ಲರೂ ಬೆಳಗಿನ ನಮಾಝ್ನಲ್ಲಿ ನಿರತರಾಗಿರುವುದನ್ನು ಕಂಡು ಅಲ್ಲಿಯೇ ಕುಳಿತು ನಿದ್ದೆಗೆ ಜಾರಿದರು. ಸ್ವಲ್ಪ ಹೊತ್ತು ಕಳೆಯಲು ಯಾರೋ ಎಳೆದ ಹಾಗೇ ಅನುಭವ. ಕಣ್ಣು ಬಿಡಿಸಿ ನೋಡುವಾಗ ಹತ್ತಿರದ ಬೋರ್ ವೆಲ್ ಹತ್ತಿರ ಮಲಗಿದ್ದರು. ಪಕ್ಕದಲ್ಲಿ ಮೂರು ಕೊಡ ನೀರು ಇತ್ತು. ಡಿಐ ಯವರನ್ನು ಎತ್ತಿ ಅಲ್ಲಿಯೇ ಕುಳ್ಳಿರಿಸಿದ ಅವರ ತಂದೆಯವರು ಒಂದೊಂದೇ ಕೊಡ ನೀರನ್ನು ಒಮ್ಮೆಲೆ ಮಗನ ತಲೆಯ ಮೇಲೆ ಸುರಿಸತೊಡಗಿದರು. ಪ್ರತಿಯೊಂದು ಕೊಡ ಸುರಿಯುವಾಗಲೂ ಭೀಷ್ಮ ಭೀಷ್ಮ ಭೀಷ್ಮ ಅಂತ ಹೇಳಿ ಮನೆಗೆ ಎತ್ತಿಕೊಂಡು ಹೋದ ಸಂಭವ ಈಗಲೂ ಮರೆಯಲಾಗದು.
ಆದರೆ ಡಿಐ ಯವರು ಯಕ್ಷಗಾನ, ನಾಟಕ ಗಳಲ್ಲಿ ಹುಡುಕಿದ್ದು ಸಾಹಿತ್ಯವನ್ನಾಗಿತ್ತು. ಶಾಲೆಯ ಹಿಂಬದಿಯ ಬಂಡೆಯಲ್ಲಿ ಒಬ್ಬನೇ ಕುಳಿತು ಪ್ರಕೃತಿಯ ಸೊಬಗನ್ನು ಸವಿಯುವುದರೊಂದಿಗೆ, ಕೋಳಿಗಳು ಅದರ ಆಹಾರವನ್ನು ಕುಟುಕಿ ತಿನ್ನುವ ಹಾಗೆ ಪ್ರಕೃತಿಯಲ್ಲಿ ಸಿಗುವ ಆಹ್ಲಾದವನ್ನು ಸಾಹಿತ್ಯದ ಲೇಖನಿಯಲ್ಲಿ ಹೊರ ತರುತ್ತಿದ್ದರು. ಬಾಲ್ಯದ ಅವರ ಘಟನೆಗಳನ್ನು ಹೇಳ ಹೋದರೆ ತಿಂಗಳುಗಳೇ ಬೇಕಾದಿತು. ಪ್ರತಿಯೊಂದು ದಿನವೂ ಅವರ ಜೀವನದಲ್ಲಿ ಸಾಹಿತ್ಯಕ್ಕೆ ಸಂಭಂದಿಸಿದ ಯಾವುದಾದರೊಂದು ಘಟನೆ ನಡೆಯುತ್ತಲೇ ಇತ್ತು. ಬಾಲ್ಯ ಕಳೆದ ನಂತರ ಅವರ ಸಾಹಿತ್ಯವೇಗ ಅಚ್ಚರಿಯ ರೂಪದಲ್ಲಿತ್ತು. ಧಾರ್ಮಿಕವಾಗಿ ಗಾಢವಾಗಿ ಅಧ್ಯಯನ ಮಾಡತೊಡಗಿದರು. ಇತರ ಧರ್ಮಗಳ ಒಳ ಆಶಯವನ್ನೂ ತಿಳಿಯುವ ಪ್ರಯತ್ನ ಮಾಡಿದರು.
ಒಬ್ಬ ಸಾಹಿತಿಯಾಗಲು ಏನೆಲ್ಲ ಅರಿತಿರಬೇಕೋ ಅದನ್ನೆಲ್ಲಾ ಸಲೀಸಾಗಿ ಅಧ್ಯಯನ ಮಾಡತೊಡಗಿದರು. ನಂತರದ ಅವರ ಬೆಳವಣಿಗೆ ಅವರ ತಂದೆಯವರ ಕನಸು ನನಸಾಗಿರಿಸುವುದರಲ್ಲಿ ಆಗಿತ್ತು. ತಂದೆಯವರು ಅದನ್ನು ಅನುಭವಿಸತೊಡಗಿದರು.
ಅಲ್ ಮುನೀರ್ ಪತ್ರಿಕೆಯಲ್ಲಿ ಒಂದು ವರ್ಷ, ನಂತರ ಅಲ್ ಅನ್ಸಾರ್,ಮೊಯ್ಲಾಂಜಿ ಪತ್ರಿಕೆಯಲ್ಲಿ ಹದಿನೇಳು ವರ್ಷ,ಮತ್ತು ಸ್ವಂತವಾಗಿ ಮದರಂಗಿ ಎಂಬ ಮಾಸಿಕ ಪತ್ರಿಕೆಗೆ ಇದೀಗ ಹತ್ತು ವರ್ಷ ತುಂಬಿದೆ. ಸಾಹಿತ್ಯದೊಂದಿಗೆ ಬಿಟ್ಟಿರಲಾರದ ನಂಟಿನಿಂದ ದೇಶದಾದ್ಯಂತ ಮಾತ್ರವಲ್ಲದೆ ವಿದೇಶ ರಾಷ್ಟ್ರ ಗಳಿಗೂ ಅಲ್ ಅನ್ಸಾರ್,ಮೊಯ್ಲಾಂಜಿ, ಮದರಂಗಿ ಪತ್ರಿಕೆಗಳನ್ನು ತಲುಪಿಸಿ ಓದುಗರಲ್ಲಿ ಧಾರ್ಮಿಕ, ಸಾಮಾಜಿಕ, ಕಳಕಳಿಯೊಂದಿಗೆ ಹೊಸ ಸಾಹಿತ್ಯಾಭಿರುಚಿಯನ್ನೂ ಮೂಡಿಸಿದ ಹೃದಯವಂತ ವ್ಯಕ್ತಿಯಾಗಿದ್ದಾರೆ ಡಿ.ಐ.ಅಬೂಬಕರ್ ಕೈರಂಗಳರವರು. ಅವರ ಪ್ರೇರಣೆ ಹಾಗೂ ಪ್ರೋತ್ಸಾಹದಿಂದ ಕೈರಂಗಳದಲ್ಲಿ ಹಲವಾರು ಸಾಹಿತ್ಯ ಪ್ರತಿಭೆಗಳು ಬೆಳೆಯಲು ಕಾರಣವಾಗಿದೆ. ಒಬ್ಬ ಸಾಹಿತಿಗೆ ದೇಶ ಏನು ಕೊಟ್ಟಿದೆ ಎಂಬುವುದಕ್ಕಿಂತ ಸಾಹಿತಿ ದೇಶಕ್ಕೆ ಏನು ಕೊಡಬಲ್ಲ ಎಂಬುವುದು ಡಿಐ ಯವರ ಸಾಹಿತ್ಯ ಆಶಯ.
ಬಾಲ್ಯದ ಯಶಸ್ಸಿನಲ್ಲಿ ಹಲವಾರು ಪ್ರಶಸ್ತಿಗಳು ಬಂದರೆ. ನಂತರದ ಅವರ ಸಾಹಿತ್ಯ ಕೃಷಿಯಲ್ಲಿ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದೆ. ಕರ್ನಾಟಕ ರಾಜ್ಯ ಗುರುಕುಲ ಕಲಾ ಪ್ರತಿಷ್ಠಾನವು ಡಿಐ ಅಬೂಬಕ್ಕರ್ ರವರಿಗೆ ಗುರುಕುಲ ಜ್ಞಾನ ಸಿಂಧು ಮತ್ತು ಗುರುಕುಲ ಸೇವಾರತ್ನ ಎಂಬ ರಾಜ್ಯ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದೆ. ಕಥಾಬಿಂದು ಮಂಗಳೂರು ದ.ಕ ಜಿಲ್ಲೆಯು ಡಿ ಐ ಯವರನ್ನು ಚೈತನ್ಯ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅದೇರೀತಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಹಲವಾರು ಸಾಹಿತ್ಯ ಅಕಾಡೆಮಿಗಳು ಡಿಐಯವರನ್ನು ಸನ್ಮಾನಿಸಿ, ಅವರ ಸಾಹಿತ್ಯ ಪಾಂಡಿತ್ಯವನ್ನು ಕೊಂಡಾಡಿಕೊಂಡಿದ್ದಾರೆ.
ಇತ್ತೀಚೆಗೆ ನಾನು ಸ್ವಲ್ಪ ಮಟ್ಟಿಗೆ ಬರೆಯಲು, ನನ್ನನ್ನು ಸಾಹಿತ್ಯಕ್ಕೆ ಎಳೆದು ತಂದವರು ಬೆಳಗಾವಿಯ ಸಾಹಿತಿ ಶಮಾ ಜಮದಾರ್ ಎಂಬವರು. ಆದರೆ ನಂತರ ನಾನು ಬರೆಯುವುದು ನಿಲ್ಲಿಸಿದನ್ನು ಗಮನಿಸಿ ಮನಸ್ಥೈರ್ಯ ತುಂಬಿ ಮತ್ತೆ ಬರೆಯಲು ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಡಿ ಐ ಅಬೂಬಕ್ಕರ್ ರವರಾಗಿದ್ದಾರೆ. ಜಗದೊಡೆಯನು ಡಿ ಐ ಎಂಬ ಗುರುಗಳಿಗೆ ಒಳಿತನ್ನೇ ಕರುಣಿಸಲಿ.
✒️ ಇಕ್ಬಾಲ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.