(̄www.vknews.in) : ಮೂರುವರೆ ದಶಕಗಳಿಂದ ಉಡುಪಿಯ ”ಪೆಟ್” ಕ್ಷೇತ್ರದಲ್ಲಿ ಹೆಸರು ಮಾಡಿದ್ದ ರಾಜ್ಕುಮಾರ್ ಉಸಿರು ನಿಲ್ಲಿಸಿದ್ದಾರೆ..
ಮದುವೆ, ಉಪನಯನ, ಬೊಜ್ಜ, ಶ್ರಾದ್ಧ ಹೀಗೆ ಶುಭ ಸಮಾರಂಭ ಮತ್ತು ಅಪರ ಕ್ರಿಯೆಗಳ ಸಂದರ್ಭ ಕಾರ್ಯಕ್ರಮಗಳಲ್ಲಿ ಊಟ -ತಿಂಡಿ ಬಡಿಸುವ ಸುಸಜ್ಜಿತ ಯುವಕರ ತಂಡಗಳು ಉಡುಪಿಯಲ್ಲಿ ಹಲವು ಇದ್ದವು. ಅದರಲ್ಲಿ ರಾಜ ಕೂಡಾ ಒಬ್ರು. ತನ್ನ 56ನೇ ವಯಸ್ಸಲ್ಲಿ ಹೃದಯಾಘಾತದಿಂದ ನಿಧನರಾದರು. ಮೊನ್ನೆ ಭಂಡಾರಕೇರಿ ಮಠದಲ್ಲಿ ವೈಕುಂಠ ಸಮಾರಾಧನೆಯೂ ನಡೆಯಿತು. ಅಲ್ಲಿ ರಾಜ ಕಟ್ಟಿದ್ದ ಬಡಿಸುವ ತಂಡವೇ ಊಟೋಪಚಾರ ಬಡಿಸುವ ಕೆಲಸ ಉಚಿತವಾಗಿ ಮಾಡಿತು ! ಅಲ್ಲಿಗೆ ರಾಜಕುಮಾರನ ಕೊನೆಯ ಪೆಟ್ಟ್ ಕೊನೆಗೊಂಡಿತು.
ಉಡುಪಿ ರಥಬೀದಿ ವಲಯದಲ್ಲಿ ಪೆಟ್ ಅಂದರೆ ಮದುವೆ, ತಿಥಿ, ಬ್ರಹ್ಮಕಲಶ ಇತ್ಯಾದಿ ಕಾರ್ಯಕ್ರಮಗಳಲ್ಲಿ ಬಡಿಸುವ ಕೆಲಸ. ಈಗ ಮಧ್ಯಾಹ್ನ ಹೊತ್ತಿಗೆ ಬಡಿಸಲು 600-800 ರೂ. ವರೆಗೆ ಪ್ರತಿಯೊಬ್ಬರಿಗೆ ನೀಡಲಾಗುತ್ತದೆ.
1990 ವೇಳೆ ಉಡುಪಿಯಲ್ಲಿ ಭಾಸ್ಕರ, ರಾಜ, ರಮೇಶ ಮೂವರ ತಂಡ ಮುಂಚೂಣಿಯಲ್ಲಿತ್ತು. ಆಗಹೊಟ್ಟೆ ತುಂಬಾ ಊಟ ಸಿಗುವುದೇ ವಿಶೇಷ. ಅಂಥಾದ್ರಲ್ಲಿ ಉಡುಪಿಗೆ ಪರವೂರುಗಳಿಂದ ಕಲಿಯಲು ಹುಡುಗರು ಬರುತ್ತಿದ್ದರು. ಮಠದಲ್ಲಿ ಉಚಿತ ವಾಸ್ತವ್ಯ, ಉಚಿತ ಭೋಜನ, ಕಾಲೇಜು ಶಿಕ್ಷಣ. ವಿದ್ಯಾರ್ಥಿಗಳು ಕೈ ಖರ್ಚಿಗೆ, ಕೆಲವೊಮ್ಮೆ ಫೀಸ್ ಹಣ ಒಟ್ಟುಗೂಡಿಸಲು ಬಡಿಸಲು ಹೋಗುತ್ತಿದ್ದರು. ಸಂಸ್ಕೃತ ಪಾಠಶಾಲೆಯ ಯುವಕರಿಗೆ ಮಧ್ಯಾಹ್ನ ಹೆಚ್ಚಿನ ಹೊತ್ತು ಬಿಡುವು ಬೆಳಗ್ಗೆ 8.30ರಿಂದ ಮಧ್ಯಾಹ್ನ 11 ಗಂಟೆವರೆಗೆ ತರಗತಿ, ಮಧ್ಯಾಹ್ನ 1.30ರಿಂದ 4 ಗಂಟೆ ವರೆಗೆ ತರಗತಿ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೆಟ್ ನಲ್ಲಿ ಭಾಗವಹಿಸುತ್ತಿದ್ದರು. ನಿಜ ಹೇಳಬೇಕೆಂದರೆ ಈ ಯುವಕರು ನಿಜವಾದ ಪೆಟ್ (ಹೊಡೆದಾಟ) ಮಾಡುವುದರಲ್ಲಿ ಬಹಳ ಹಿಂದೆ !
ಇಂಥ ಹುಡುಗರನ್ನು ಹಾಕಿಕೊಂಡು ಪೆಟ್ ಬ್ಯುಸಿನೆಸ್ ನಡೆಯುತ್ತಿತ್ತು. ಆಗ ಬಡಿಸುವವರಿಗೆ ತಲಾ 20 ರೂ. ಅದರಲ್ಲಿ ತಲೆಗೆ ಇಷ್ಟು ಲೆಕ್ಕದಲ್ಲಿ ತಂಡದ ಲೀಡರ್ ಮುರಿದುಕೊಳ್ಳುತ್ತಿದ್ದರು. ರಾಜನ ತಂಡದಲ್ಲಿ ಆಗ ಸರಿ ಸುಮಾರು 100 ಮಂದಿ ಬಡಿಸುವವರಿದ್ದರು. ಪಲಿಮಾರು ಮಠದ ಬಳಿ ಅಡುಗೆಯವರು ಸೇರಿದರೆ, ಪೇಜಾವರ ಮಠ ಪರಿಸರದಲ್ಲಿ ಬಡಿಸುವವರು ಒಟ್ಟು ಸೇರುತ್ತಿದ್ದರು. ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಆಗ 10% ಎಂಬ ವ್ಯವಸ್ಥೆಯೂ ಚಾಲ್ತಿಯಲ್ಲಿತ್ತು. ಬಡಿಸುವುದರಿಂದ ಹಿಡಿದು ಎಲ್ಲ ವ್ಯವಸ್ಥೆ ಮಾಡಿಕೊಟ್ಟರೆ ಒಟ್ಟು ಬಿಲ್ ನ ಶೇ.10 ಮೊತ್ತವನ್ನು ಹೆಚ್ಚುವರಿಯಾಗಿ ಕೆಲಸ ವಹಿಸಿಕೊಂಡವರಿಗೆ ನೀಡಬೇಕಾಗುತ್ತಿತ್ತು.
ಅಲ್ಲಿ ಅನೇಕ ಹುಡುಗರಿದ್ದರು. ಆ ದಾರಿಯಲ್ಲಿ ಹೋಗುವಾಗ ಅನೇಕ ಬಾರಿ ರಾಹುಲ್ ದ್ರಾವಿಡ್, ತೆಂಡುಲ್ಕರ್ ಅದ್ಭುತ ಬ್ಯಾಟಿಂಗ್ ವೈಭವಗಳ ರೋಚಕ ಕ್ರಿಕೆಟ್ ಇಲ್ಲಿ ನೋಡುತ್ತಿದ್ದೆವು. ಪಾಠಶಾಲೆ ವಿದ್ಯಾರ್ಥಿಯಾಗಿದ್ದಾಗ ನಾನು ಒಂದೆರಡು ವರ್ಷ ರಥಬೀದಿಯ ಪೆಟ್ ತಂಡದಲ್ಲಿ ಹೋಗುತ್ತಿದ್ದೆ. ಹೊಸಬರು ಮತ್ತು ಅನನುಭವಿಗಳು ಆದ್ದರಿಂದ ಬ್ರಹ್ಮಕಲಶ, ಸಿಕ್ಕಾಪಟ್ಟೆ ಸೀಸನ್ ಇದ್ದ ಸಂದರ್ಭದಲ್ಲಿ ನಮಗೆ ಬುಲಾವ್ ಬರುತ್ತಿತ್ತು. ಈ ಹಣದಿಂದ ನಮಗೆ ಮಠದಲ್ಲಿ ಊಟಕ್ಕೆ ರಜೆ ಇದ್ದ ದಿನಗಳಲ್ಲಿ (ಏಕಾದಶಿ- ದ್ವಾದದಶಿ) ಮತ್ತು ಬೆಳಗ್ಗೆ ತಿಂಡಿ ತಿನ್ನಲು ನೆರವಾಗುತ್ತಿತ್ತು. ಈ ವಿದ್ಯೆ ನನಗೆ ಇತ್ತೀಚೆಗೆ ಕರೋನಾ ಸಂಕಷ್ಟ ಕಾಲದಲ್ಲಿ ಮತ್ತೆ ನೆರವಾಗಿತ್ತು. ಹೀಗಾಗಿ ಇದನ್ನು ಸಂಪೂರ್ಣ ಬಿಟ್ಟಿಲ್ಲ. ಈಗಲೂ ಅಪರೂಪಕ್ಕೊಮ್ಮೆ ಹೋಗುತ್ತಿರುತ್ತೇನೆ.
ಆದರೆ ಇತ್ತೀಚೆಗೆ ಮಹಾನಗರಗಳಲ್ಲಿ ಓಲಗದಿಂದ ಹಿಡಿದು ಹೂವಿನವರೆಗೆ ಒಬ್ಬನೇ ಉಸ್ತುವಾರಿ ಇವೆಂಟ್ ಮ್ಯಾನೇಜರ್ ಸಂಸ್ಕೃತಿ ಹುಟ್ಟಿಕೊಂಡ ಮೇಲೆ ಪೆಟ್ ತಂಡಗಳ ಮೇಲೆ ದುಷ್ಪರಿಣಾಮ ಬೀರಿತು. ಮತ್ತೆ ಇತ್ತೀಚೆಗೆ ಹೆತ್ತವರು ಶಿಕ್ಷಣಕ್ಕಾಗಿ ಲಕ್ಷಗಟ್ಟಲೆ ಸುರಿಯಲು ಸಿದ್ಧರಿರುವುದರಿಂದ ಹಾಗೂ ಹಿಂದಿಗಿಂತ ಹೆಚ್ಚು ಅನುಕೂಲಸ್ಥರು ಇರುವುದರಿಂದ ಉಡುಪಿ ರಥಬೀದಿ ಪರಿಸರದಲ್ಲಿ ವಿದ್ಯಾರ್ಥಿಗಳು ಪೆಟ್ ಗೆ ಸಿಗೋದು ಕಡಿಮೆಯಾಗಿದೆ. ಕೊರತೆ ನೀಗಿಸಲು ಮಹಿಳೆಯರಿಗೂ ಬಡಿಸುವ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಲ್ಲೆಡೆ ಹಿಂದಿಗಿಂತ ನೂರು ಪಟ್ಟು ಹೆಚ್ಚು ಸಮಾರಂಭಗಳು ನಡೆದರೂ ರಾಜನ ಪೆಟ್ ಬ್ಯುಸಿನೆಸ್ ಇತ್ತೀಚಿನ 5 ವರ್ಷಗಳಲ್ಲಿ ಅರ್ಧಕರ್ಧ ಕುಸಿದಿತ್ತು. ಕಳೆದ ವರ್ಷ ಹೃದಯಾಘಾತವೂ ಆಗಿ ಸ್ಟಂಟ್ ಅಳವಡಿಸಲಾಗಿತ್ತು. ಬಳಿಕ ಬಹುತೇಕ ಕುಗ್ಗಿಹೋಗಿದ್ದರು.
ಅಂದು ನೋಡಲು ಸುಂದರ, ಬಿರುಸಾದ ಸ್ವರ, ಫಳ ಫಳ ಹೊಳೆಯುವ ಬಂಗಾರದ ಚೈನ್… ನಮಗೆಲ್ಲರಿಗೂ ಆ ರಾಜ ನಿಜವಾಗಿಯೂ ರಾಜನಂತೆಯೇ ಆಗ ಕಾಣುತ್ತಿದ್ದರು. ನಮ್ಮ ರಾಜನನ್ನು ಕಳೆದುಕೊಂಡೆವು ! ಎಲ್ಲೇ ಇರಿ, ರಾಜನಂತೆ ಇರಿ.
–ಜಿತೇಂದ್ರ ಕುಂದೇಶ್ವರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.