ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಕೆ.ಜಿ.ಗೆ ನೂರಿಪ್ಪತ್ತರ ತನಕ ಬೆಲೆ ಏರಿದ್ದರಿಂದ ಈಗ ಟೊಮೆಟೊದ್ದೇ ದೊಡ್ಡ ಸುದ್ಧಿ. ಈ ಸಂದರ್ಭದಲ್ಲಿ ನನ್ನ ನಾಡು ಕೈರಂಗಳದ ಹಿಂದಿನ ಕಾಲದ ಇತಿಹಾಸ ನೆನಪಾಯಿತು.
ನನ್ನ ಬಾಲ್ಯದ ಹಾಗೂ ಊರವರಿಂದ ತಿಳಿದು ಬಂದ ನೆನಪು ನನ್ನ ಮನದಾಳದಲ್ಲಿ ಮಿಂಚಿದವು. ಇದಕ್ಕೂ ಟೊಮೆಟೋಗೂ ಏನು ಸಂಬಂಧ ಅಂತೀರಾ?
ಸಂಬಂಧ ಇದೆ. ನನ್ನೂರು ಕೈರಂಗಳಕ್ಕೆ ಮೊತ್ತ ಮೊದಲು ಟೊಮೆಟೋ ತಂದವರು ನನ್ನ ಅಪ್ಪ ಕೈರಂಗಳ ಡಿ. ಎಚ್. ಇಸ್ಮಾಯಿಲ್ ರವರು. ಕೈರಂಗಳದ ಪ್ರಧಾನ ಅಂಗಡಿ ವ್ಯಾಪಾರಿಯಾಗಿದ್ದ ಅವರು ಮಂಗಳೂರಿಂದ ಮೊಟ್ಟಮೊದಲ ಬಾರಿಗೆ ತನ್ನ ಅಂಗಡಿಗೆ ಟೊಮೆಟೋವನ್ನು ತಂದು ಮಾರಾಟ ಮಾಡಿದ್ದರು. ಆ ಕಾಲದಲ್ಲಿ ಆಸುಪಾಸಿನಲ್ಲೆಲ್ಲ ಇದೊಂದು ಸುದ್ಧಿಯಾಗಿತ್ತು.
ಹೊಸ ವಸ್ತುವನ್ನು ನೋಡಲೆಂದೇ ಅನೇಕರು ಬಂದಿದ್ದರಂತೆ. ಮುಟ್ಟಿನೋಡಿ, ಎತ್ತಿ ನೋಡಿ ಇದನ್ನು ಹೇಗೆ ಸಾರು ಮಾಡುವುದು, ಬರೀ ತಿನ್ನಬಹುದಾ ಎಂದೆಲ್ಲ ಚರ್ಚೆಯೇ ಚರ್ಚೆಯಂತೆ. ಪ್ರಾಮಾಣಿಕ ವ್ಯಾಪಾರಿಯಾಗಿ , ನಾಡಿನ ಜನರೊಡನೆ ಸ್ಪಂದನದ ಧಾರಾಳ ಅನುಭವಿಯಾಗಿ, ನಾಡಿನ ನರನಾಡಿಗಳ ನಾಡಿಮಿಡಿತಗಳನ್ನೆಲ್ಲ ಅರಿತು ಮಾಗಿ ಪಕ್ವಗೊಂಡಿರುವ ನನ್ನ ಅಪ್ಪ ಇದೀನ ನನ್ನ ಮನೆಯಲ್ಲಿ ಬೆಳಕಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅಲ್ಲಾಹನು ನನ್ನ ಅಪ್ಪನಿಗೆ ದೀರ್ಘಕಾಲದ ಆಯುಷ್ಯವನ್ನು ನೀಡಿ ಅನುಗ್ರಹಿಸಿದ್ದಾನೆ. ಅಲ್ ಹಮ್ದುಲಿಲ್ಲಾಹ್. ಅಲ್ಲಾಹನನ್ನು ಸ್ತುತಿಸುತ್ತಾ ಇನ್ನೂ ತುಂಬಾ ಕಾಲ ಈ ಅನುಗ್ರಹವನ್ನು ಮುಂದುವರಿಸಲಿ ಎಂದು ಅಲ್ಲಾಹನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ನನ್ನ ತಂದೆಯವರು ನನಗೆ ಶಾಂತಿ ನಿಕೇತನ. ಬ್ಯುಸಿನೆಸ್ ನ ಜಂಜಡದಲ್ಲಿ ಹಣ್ಣು ನೀರಾಗಿ ಬಳಲಿದ ಮನ- ದೇಹದೊಂದಿಗೆ ಮನೆ ಸೇರುವಾಗ ನನ್ನ ಬರವನ್ನೇ ಕಾದು ಕೂರುವ ಅಪ್ಪನನ್ನು ಕಂಡ ಕೂಡಲೇ ಎಲ್ಲಾ ಆಯಾಸಗಳು ಮಾಯವಾಗುತ್ತವೆ. ಅಪ್ಪನ ಮಾತುಗಳು ಮನದ ದಾವಾಗ್ನಿಯನ್ನು ಅಳಿಸುವ ಅಮೃತ ಸಿಂಚನವಾಗುತ್ತವೆ.
ತಂದೆಯರು ಎಲ್ಲರಿಗೂ ಹೀಗೇನೆ. ಎಲ್ಲರೊಡನೆ ಪ್ರೀತಿ, ಮಮತೆ, ವಿಶ್ವಾಸ. ಒಂದು ಕೂಟದಲ್ಲಿ ಅಪ್ಪನವರು ಇದ್ದಾರೆಂದರೆ ಅಲ್ಲೊಂದು ಮಾಧುರ್ಯ. ದಶಕಗಳ ಕಾಲ ವ್ಯಾಪಾರ ನಡೆಸಿದ್ದ ಅಪ್ಪನ ಬಗ್ಗೆ ಕೈರಂಗಳದಲ್ಲೂ ಇದೀಗ ಕಲ್ಕಟ್ಟದಲ್ಲೂ ಎಲ್ಲರಿಗೂ ಸದಭಿಪ್ರಾಯ, ಗೌರವಾದರ. ಅಪ್ಪ ಅದೆಷ್ಟು ಮಾಗಿದ ಮನುಷ್ಯ ಎಂಬುದಕ್ಕೆ ಟೊಮೆಟೊ ಬಗ್ಗೆ ಅವರ ವಿವರಣೆಯಿಂದಲೇ ತಿಳಿಯುತ್ತದೆ. ನಾನು ಮೊತ್ತ ಮೊದಲು ಕೈರಂಗಳಕ್ಕೆ ಟೊಮ್ಯಾಟೊ ತಂದುದು 1960 ರಲ್ಲಿ ಅನ್ನುತ್ತಾರೆ. ಅಂದರೆ ಬರೋಬ್ಬರಿ 63 ವರ್ಷಗಳ ಹಿಂದೆ. ಆಗ ಹತ್ತು ಸೇರು ಟೊಮ್ಯಾಟೊಗೆ ಮಂಗಳೂರಿನಲ್ಲಿ ಅರುವತ್ತು ಪೈಸೆ ಬೆಲೆಯಾಗಿತ್ತಂತೆ. ಅಂದರೆ ಒಂದು ಸೇರಿಗೆ ಆರು ಪೈಸೆ. ತಂದೆಯವರು ಅದನ್ನು ಸೇರಿಗೆ ಎರಡಾಣೆಯಂತೆ ಮಾರಾಟ ಮಾಡುತ್ತಿದ್ದರಂತೆ. ( ಒಂದು ಆಣೆ= ಆರು ನಯಾಪೈಸೆ) ಅಂದರೆ ಅರುವತ್ತು ಪೈಸೆಯ ಹತ್ತು ಸೇರು ಟೊಮೆಟೊ ಮಾರಿ ಮುಗಿಸಿದರೆ ಅರುವತ್ತು ಪೈಸೆ ಲಾಭ ಬರುತ್ತಿತ್ತು. ಮಂಗಳೂರಿಂದ ತರುವ ಖರ್ಚು, ಹೊರೆಯಾಳಿನ ಕೂಲಿ, ಕೊಳೆತು ಉಂಟಾಗುವ ನಷ್ಟ ಎಲ್ಲಾ ಗಮನಿಸಿದರೆ ಸುಮಾರು ಮುವತ್ತು ಪೈಸೆ ಉಳಿಯುತ್ತಿರಬಹುದು!
ತಂದೆಯವರು ಅಂಗಡಿ ಸಾಮಾನುಗಳನ್ನು ಮಂಗಳೂರಿಂದ ಕಂಬಳ ಪದವು ವರೆಗೆ ಎತ್ತಿನ ಗಾಡಿಯಲ್ಲಿ ತಂದಿಳಿಸಿ ಅಲ್ಲಿಂದ ಹೊರೆಯಾಳು ಮೂಲಕ ಕೈರಂಗಳಕ್ಕೆ ಹೊರಿಸಿ ತರುತ್ತಿದ್ದರಂತೆ.
ಕಂಬಳ ಪದವಿನಿಂದ ಕಾಲ್ನಡೆಯಾಗಿ ಬರುವಾಗ ಸುಮಾರು ನಾಲ್ಕೈದು ಕಿ.ಮೀ ನಡೆಯಬೇಕಾಗುತ್ತದೆ. ಅಲ್ಲದೆ ತೋಡುಗುಳಿ ಎಂಬಲ್ಲಿ ಪ್ರಪಾತದ ತರದ ತಗ್ಗಿನ ಜಾಗಕ್ಕೆ ಇಳಿದು ಮತ್ತೆ ಕೈರಂಗಳ ಪದವಿಗೆ ಹತ್ತಬೇಕು. ತಲೆಹೊರೆಯಾಗಿ ಸಾಮಾನುಗಳನ್ನು ಹೊತ್ತು ತರುತ್ತಿದ್ದ ಕೂಲಿಯಾಳುಗಳ ಅಂದಿನ ಶ್ರಮವನ್ನು ನೆನೆಸುವಾಗ ಮೈ ಜುಮ್ಮೆನ್ನುತ್ತದೆ.
ಕಂಬಳಪದವಿನಿಂದ ಕೈರಂಗಳಕ್ಕೆ ಒಂದು ಹೊರೆ ತಲುಪಿಸಿದರೆ ಸಂಬಳ ಬರೋಬ್ಬರಿ ಒಂದು ರೂಪಾಯಿಯಾಗಿತ್ತಂತೆ ! ಕೆಲವೊಮ್ಮೆ ನನ್ನ ಪಿತಾಜಿಯವರ ಮುಖವನ್ನು ನೋಡುತ್ತಿರುವಾಗ ಎಷ್ಟೆಲ್ಲ ಬದುಕಿನ ಅನುಭವಗಳನ್ನು ಕಂಡು ಮಾಗಿದ ಮುಖವಿದು ಎಂದೆನಿಸುತ್ತದೆ. ಕೈರಂಗಳದಲ್ಲಿ ಅಂದು ಬೇರೆ ಎರಡು ಅಂಗಡಿಗಳಿದ್ದರೂ ತಂದೆಯವರ ಅಂಗಡಿ ಪೇಮಸ್ಸಾಗಿತ್ತು. ತಂದೆಯವರ ಪ್ರಾಮಾಣಿಕತೆ, ಸತ್ಯ ನಿಷ್ಠೆಯ ಜೊತೆಗೆ ಜನರೊಡನೆ ಮಧುರ ಒಡನಾಟವೂ ಅದಕ್ಕೆ ಕಾರಣವಾಗಿತ್ತು. ವ್ಯಾಪಾರಕ್ಕೆ ಇಟ್ಟ ವಸ್ತುವನ್ನು ಯಾರೂ ಉಚಿತವಾಗಿ ಕೊಡುವುದಿಲ್ಲ. ಆದರೆ ಅಪ್ಪನ ಅಂಗಡಿಯಿಂದ ಅಪ್ಪ ಕಿತ್ತಳೆ ಹಣ್ಣು ಮುಂತಾದ್ದನ್ನು ಉಚಿತವಾಗಿ ಕೊಡುತ್ತಿದ್ದರು. ಐ. ಎ. ಎಸ್ ಅಧಿಕಾರಿ ಶ್ರೀ ಶಾಮ್ ಭಟ್, ದ.ಕ. ಜಿ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಮಮತಾ ಗಟ್ಟಿ, ದುಬಾಯ್ ನಲ್ಲಿ ಇದೀಗ ಯಶಸ್ವೀ ಉದ್ಯಮಿಯಾಗಿರುವ ಇಂಜಿನಿಯರ್ ರಝಾಖ್ ಹಾಜಿ ಮುಂತಾದವರೂ ಬಾಲ್ಯದಲ್ಲಿ ನನ್ನಪ್ಪನ ಕೈಯಿಂದ ಉಚಿತ ಕಿತ್ತಳೆ ಹಣ್ಣು ತಿಂದುದನ್ನು ನೆನಪಿಸುತ್ತಿದ್ದಾರೆ. ಟೊಮ್ಯಾಟೊ ಬೆಲೆಯ ವಿಷಯದಿಂದ ಹೊಳೆದ ವಿಚಾರ ಕೈರಂಗಳ ಇತಿಹಾಸದ ತುಣುಕು ಮತ್ತು ನನ್ನ ಪಿತಾಜಿಯವರ ಬಗೆಗಿನ ಮಿಣುಕು ನೋಟದತ್ತ ವಿಷಯ ಹೊರಳಿತು. ಟೊಮ್ಯಾಟೊ ಬಂದ ಆರಂಭ ಕಾಲದಲ್ಲಿ ಟೊಮ್ಯಾಟೊ ಹಾಕಿದ ಸಾರಿಗೆ ವಿಶೇಷ ಗೌರವ ಇತ್ತು. ಒಂದು ಮನೆ ಅಥವಾ ಸಮಾರಂಭದಲ್ಲಿ ಊಟ ಮಾಡಿ ಬಂದವರು ಅಲ್ಲಿ ಊಟಕ್ಕೆ ಟೊಮ್ಯಾಟೊ ಸಾರು ಇತ್ತು ಎಂದು ವಿಶೇಷವಾಗಿ ಹೇಳುತ್ತಿದ್ದರಂತೆ.
ನೀನ್ಯಾಕೆ ನಮ್ಮ ಮನೆಗೆ ಆಗಾಗ ಬರ್ತಾ ಇದೀಯ! ಇಲ್ಲಿ ಟೊಮ್ಯಾಟೊ ಹಾಕಿದ ಸಾರು ಸಿಗುತ್ತದೆ ಎಂದಾ ಎಂದು ಒಂದು ಬಂಧು ಮನೆಯವರು ತಮಾಷೆಯಾಗಿ ನನ್ನಲ್ಲಿ ಬಾಲ್ಯದಲ್ಲಿ ಕೇಳಿದ್ದರು ಎಂದು ಮರ್ಹೂಮ್ ಬೇಕಲ್ ಉಸ್ತಾದರು ( ರ) ನೆನಪಿಸುತ್ತಿದ್ದರೆಂದು ಅವರ ಪುತ್ರ ಸಾಲಿಹ್ ಹೇಳುತ್ತಿದ್ದಾರೆ.
ವಿಶೇಷವೆಂದರೆ ಅಂದು ಟೊಮ್ಯಾಟೊ ವನ್ನು ಬೇರೆ ವಸ್ತುಗಳ ಸಾರಿಗೆ ಹಾಕುವುದು ಮಾತ್ರವಲ್ಲ, ಟೊಮ್ಯಾಟೊ ವನ್ನೇ ಸಾರು ಮಾಡಲಾಗುತ್ತಿದ್ದುದು. ಟೊಮ್ಯಾಟೊ ವನ್ನು ತರಕಾರಿಯಂತೆ ಹೆಚ್ಚಿ ಅದರದೇ ಸಾರು ಮಾಡಲಾಗುತ್ತಿತ್ತು. ಊಟ ಆಯ್ತಾ, ಏನು ಪಲ್ಯ ಎಂದು ಕೇಳಿದಾಗ ” ಟೊಮ್ಯಾಟೊ ಪಲ್ಯ ” ಎಂಬ ಉತ್ತರ ಕೂಡಾ ಬರುತ್ತಿತ್ತಂತೆ. ಈಗಿನ ಮಕ್ಕಳಿಗೆಂದು ಮಾತ್ರವಲ್ಲ, ಸುಮಾರು ನಲ್ವತ್ತರ ಹರೆಯದವರಿಗೂ ಕೂಡಾ ಗೊತ್ತಿಲ್ಲದ ಈ ಟೊಮೆಟೋ ಚರಿತ್ರೆ ವಿಚಿತ್ರವಾಗಿದ್ದರೂ ಸತ್ಯ.
✍️ ಡಿ.ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.